ಸುದ್ದಿಗಳು

ಭೂಮಿ ಆಯ್ತು…… ಇನ್ನು ಮುಂದೆ ಸಮುದ್ರದಾಳದಲ್ಲಿ ಶುರುವಾಗುತ್ತಂತೆ ಗಣಿಗಾರಿಕೆ…!

Share

ಗಣಿಗಾರಿಕೆ ಉದ್ಯಮವು ಪ್ರಮುಖ ಆರ್ಥಿಕ ಚಟುವಟಿಕೆಯಾಗಿದೆ. ಉಪಯುಕ್ತ ಖನಿಜಗಳು ಅಥವಾ ಅದಿರುಗಳು, ಲೋಹಗಳು, ಕಲ್ಲಿದ್ದಲ ಭೂಪದರದಿಂದ ಹೊರತೆಗೆದು ಶಕ್ತಿ ಸಾಧನಗಳಾಗಿ ಬಳಸಲಾಗುತ್ತಿದೆ. ಇಂತಹ ಅತ್ಯಮೂಲ್ಯ ಸಂಪನ್ಮೂಲಗಳು ಬರಿದಾಗುತ್ತಿವೆ. ಇದೇ ಹೊತ್ತಿನಲ್ಲಿ ಭೂಮಿ ಆಳದಲ್ಲಿ ಹುದುಗಿರುವ ಸಂಪನ್ಮೂಲಕ್ಕೆ ನೂರಾರು ಪಟ್ಟು ಬೇಡಿಕೆಯೂ ಹೆಚ್ಚುತ್ತಿದೆ. ಅಗತ್ಯ ಬೇಡಿಕೆಯನ್ನು ಪೂರೈಸಲು ಏನು ಮಾಡಬೇಕೆಂಬ ಬಗ್ಗೆ ವೈಜ್ಞಾನಿಕ ವಲಯದಲ್ಲಿ ಗಂಭೀರ ಚರ್ಚೆ ನಡೆಯುತ್ತಿದ್ದಾಗ, ಹೊಸ ಯೋಜನೆಯೊಂದು ರೂಪುಗೊಂಡಿತು. ಅದೇ “ಸಮುದ್ರದಾಳದ ಗಣಿಗಾರಿಕೆ”. ಅರೆ! ಭೂಪ್ರದೇಶದ ಆಳದಲ್ಲಿ ಇರುವ ಕಬ್ಬಿಣ, ಚಿನ್ನ, ಬೆಳ್ಳಿ, ಕಲ್ಲಿದ್ದಲು ಹೊರತೆಗೆಯಲು ಗಣಿಗಾರಿಕೆ ನಡೆಸುತ್ತಿದ್ದ ಬಗ್ಗೆ ಕೇಳಿದ್ದೇವೆ. ಆದ್ರೆ, “ಸಮುದ್ರದಾಳದ ಗಣಿಗಾರಿಕೆ” (Deep Sea Mining) ಅಂದ್ರೇನು ಎಂಬ ಪ್ರಶ್ನೆ ಅನೇಕರಲ್ಲಿ ಮೂಡದೇ ಇರದು.

ಆಳದ ಪೆಸಿಫಿಕ್ ಮಹಾಸಾಗರದಲ್ಲಿ ಗಣಿಗಾರಿಕೆ ನಡೆಸುವ ಕ್ರಮ ಇದೀಗ ಕೊನೆಯ ನಿರ್ಧಾರದ ಹಂತದಲ್ಲಿದೆ. ಆದರೆ ಈ ಗಣಿಗಾರಿಕೆಯ ನಿಯಮಗಳು ಜಾರಿಯಾಗುವುದಕ್ಕೂ ಮೊದಲೇ ಜಗತ್ತಿನಾದ್ಯಂತ ಇದರ ಬಗ್ಗೆ ಪರ-ವಿರೋಧದ ಧ್ವನಿ ಕೇಳಿಬರುತ್ತಿದೆ. ಆಳ ಸಮುದ್ರದಲ್ಲಿ ಗಣಿಗಾರಿಕೆ ಎಂದರೇನು? ಈ ಪರಿಕಲ್ಪನೆ ಏಕೆ ಮತ್ತು ಹೇಗೆ ಹುಟ್ಟುಕೊಂಡಿತು? ಸಮುದ್ರದಾಳದಲ್ಲಿ ಏನು ಸಿಗುತ್ತೆ? ಅಲ್ಲಿ ಯಾಕೆ ಗಣಿಗಾರಿಕೆ ಮಾಡಬೇಕು? ಇದರಿಂದ ಲಾಭವೇನು? ಈ ಗಣಿಗಾರಿಕೆಯಿಂದ ಸಂಕಷ್ಟ ಎದುರಾಗುತ್ತಾ ಎಂಬ ಅನೇಕ ಪ್ರಶ್ನೆಗಳು ಮೂಡುತ್ತವೆ. ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

ಇಂಟರ್ನ್ಯಾಷನಲ್ ಸೀಬೆಡ್ ಅಥಾರಿಟಿ (ISA) ಇದೇ ಜುಲೈನಲ್ಲಿ ಕೈಗಾರಿಕೆಗಾಗಿ ಆಳ ಸಮುದ್ರದಲ್ಲಿ ಗಣಿಗಾರಿಕೆ ನಡೆಸಲು ಅರ್ಜಿಗಳನ್ನು ಸ್ವೀಕರಿಸಲು ಪ್ರಾರಂಭಿಸಲಿದೆ. ಆದರೆ ಇದು ಪರಿಸರ ವ್ಯವಸ್ಥೆಗೆ ಹಾನಿಯಾಗುತ್ತದೆ, ಸಮುದ್ರ ಜೀವಿಗಳಿಗೆ ಮಾರಕವಾಗಿದೆ ಎಂದು ಈ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಲಾಗುತ್ತಿದೆ.

ಸಮುದ್ರದಾಳದಲ್ಲಿ ಗಣಿಗಾರಿಕೆ ಪರಿಕಲ್ಪನೆ ಹುಟ್ಟಿದ್ಹೇಗೆ? : ಕಾಲ್ಪನಿಕ ವಿಜ್ಞಾನ ಕಥೆಗಾರ ಜೂಲ್ಸ್ ವೆರ್ನ್ ಒಂದು ಪುಸ್ತಕ ಬರೆದಿದ್ದಾನೆ. ‘20,000 ಲೀಗ್ಸ್ ಅಂಡರ್ ದಿ ಸೀ’ ಪುಸ್ತಕದ ಹೆಸರು. ಅದರಲ್ಲಿ ಸಮುದ್ರದಾಳದ ಗಣಿಗಾರಿಕೆ ಬಗ್ಗೆ ಒಂದು ಉಲ್ಲೇಖವಿದೆ. ಸಮುದ್ರದ ಆಳದಲ್ಲಿ, ಸತು, ಕಬ್ಬಿಣ, ಬೆಳ್ಳಿ ಮತ್ತು ಚಿನ್ನದ ಅದಿರು ಎಥೇಚ್ಛವಾಗಿದೆ. ಸಮುದ್ರದಾಳದಲ್ಲಿ ಗಣಿಗಾರಿಕೆ ನಡೆಸುವುದು ತುಂಬಾ ಸುಲಭ ಎಂದು ಪುಸ್ತಕದಲ್ಲಿ ಬರೆದಿದ್ದಾರೆ. ಈ ಪರಿಕಲ್ಪನೆ ಆಧರಿಸಿ ಸಮುದ್ರದಾಳದಲ್ಲಿ ಗಣಿಗಾರಿಕೆ ನಡೆಸುವ ಬಗ್ಗೆ ಚರ್ಚೆಯೊಂದು ಹುಟ್ಟುಕೊಂಡಿದೆ.

ಮನುಷ್ಯನ ಗಣಿಗಾರಿಕೆ ಸಮುದ್ರದಾಳಕ್ಕೆ ವಿಸ್ತರಿಸಿದ್ದೇಕೆ?: ಶಕ್ತಿ ಪರಿವರ್ತನೆಯ ಲೋಹಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಬ್ಯಾಟರಿಗಳಲ್ಲಿ ಬಳಸಲಾಗುವ ತಾಮ್ರ ಅಥವಾ ನಿಕ್ಕಲ್, ಎಲೆಕ್ಟ್ರಿಕ್ ಕಾರುಗಳಿಗೆ ಕೋಬಾಲ್ಟ್ ಅಥವಾ ಉಕ್ಕಿನ ಉತ್ಪಾದನೆಗೆ ಮ್ಯಾಂಗನೀಸ್ (ಒಚಿಟಿgಚಿಟಿese) ಹೀಗೆ ಅಪರೂಪದ ಖನಿಜಗಳು ಮತ್ತು ಲೋಹಗಳಿಗೆ ಭಾರೀ ಬೇಡಿಕೆ ಇದೆ. ಆದರೆ ಈ ಸಂಪನ್ಮೂಲ ಜಾಗತಿಕವಾಗಿ ಕಡಿಮೆಯಾಗುತ್ತಿದೆ. ಮುಂದಿನ 3 ವರ್ಷಗಳಲ್ಲಿ ಪ್ರಪಂಚದಾದ್ಯಂತ 2 ಪಟ್ಟು ಹೆಚ್ಚು ಲೀಥಿಯಂ ಹಾಗೂ ಕೋಬಾಲಲ್ಟ್‌ಗೆ ಶೇ.70 ರಷ್ಟು ಬೇಡಿಕೆ ಹೆಚ್ಚಾಗಲಿದೆ. ಈ ಕಚ್ಚಾ ವಸ್ತುಗಳ ಯೋಜಿತ ಉತ್ಪಾದನೆಯ ಪ್ರಮಾಣ ಅಧಿಕವಾಗಿದ್ದು, ಕೆಲವು ದೇಶಗಳು ಹಾಗೂ ಕಂಪನಿಗಳು ಆಳ ಸಮುದ್ರದಲ್ಲಿ ಈ ಸಂಪನ್ಮೂಲಗಳ ಗಣಿಗಾರಿಕೆ ಮಾಡಲು ಯೋಜಿಸಿವೆ.

ಸಮುದ್ರದಾಳದಲ್ಲಿದೆ ಬೆಲೆಬಾಳೋ ಮ್ಯಾಂಗನೀಸ್ ಗಡ್ಡೆಗಳು! : ಮ್ಯಾಂಗನೀಸ್ ಎಂದು ಕರೆಯಲಾಗುವ ದುಬಾರಿ ಪಾಲಿಮೆಟಾಲಿಕ್ ಗಡ್ಡೆಗಳು ಸಮುದ್ರದಾಳದಲ್ಲಿ ಹೇರಳವಾಗಿ ದೊರೆಯುತ್ತದೆ. ಈ ಗಡ್ಡೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನಿಕಲ್, ತಾಮ್ರ, ಮ್ಯಾಂಗನೀಸ್ ಸೇರಿದಂತೆ ಇತರ ಬೆಲೆಬಾಳುವ ಲೋಹಗಳು ಇರುತ್ತವೆ. ಮ್ಯಾಂಗನೀಸ್ ಗಡ್ಡೆಗಳನ್ನು ಜಗತ್ತಿನ ಯಾವ ಪ್ರದೇಶದಲ್ಲಿಯೂ ಗಣಿಗಾರಿಕೆ ಮಾಡಲಾಗುತ್ತಿಲ್ಲ. ಇದು ಸಮುದ್ರ ತಳದಲ್ಲಿಯೇ ಹೆಚ್ಚಾಗಿ ಇರುವುದರಿಂದ ಸಮುದ್ರ ಗಣಿಗಾರಿಕೆ ನಡೆಸುವಲ್ಲಿ ಹೆಚ್ಚಿನ ಆಸಕ್ತಿ ತೋರಿಸಲಾಗುತ್ತಿದೆ. ಇವುಗಳನ್ನು ಕಲ್ಲಿನ ಪದರಗಳನ್ನು ಒಡೆಯದೇ ಅಥವಾ ಸಮುದ್ರದ ಪದರಗಳನ್ನು ಸವೆಸದೇ ಸುಲಭವಾಗಿ ಹೊರತೆಗೆಯಬಹುದು ಎನ್ನಲಾಗುತ್ತಿದೆ.

ಸಮುದ್ರದಾಳದ ಗಣಿಗಾರಿಕೆಯಿಂದ ಎದುರಾಗುತ್ತಾ ಅಪಾಯ? : ಸಮುದ್ರದಿಂದ ಅಮೂಲ್ಯ ಲೋಹಗಳನ್ನು ಹೀರಿಕೊಳ್ಳುವಂತಹ ಸಾಧನಗಳ ಸಹಾಯದಿಂದ ಗಣಿಗಾರಿಕೆ ಮಾಡಬಹುದು. ಈ ರೀತಿಯ ಕ್ರಮ ಅತ್ಯಂತ ಸರಳವಾಗಿಯೂ ಇದೆ. ಆದರೆ ಇದರಿಂದ ಜಲಚರಗಳಿಗೆ ಅಪಾಯವಾಗುವ ಆತಂಕವನ್ನು ಪರಿಸರವಾದಿಗಳು ವ್ಯಕ್ತಪಡಿಸಿದ್ದಾರೆ. ಸಮುದ್ರದಾಳದಲ್ಲಿ ಕೆಸರು ಹಾಗೂ ಗಡ್ಡೆಗಳಲ್ಲಿ ವಾಸಿಸುವ ಜೀವಿಗಳು ಹಾಗೂ ಬ್ಯಾಕ್ಟೀರಿಯಾಗಳು ಕೂಡಾ ಈ ಸಾಧನಗಳಲ್ಲಿ ಹೀರಲ್ಪಡುತ್ತವೆ ಎಂಬ ಆತಂಕವನ್ನು ಅವರು ಹೊರಹಾಕಿದ್ದಾರೆ.

ಇಂತಹ ಸೂಕ್ಷ್ಮ ಜೀವಿಗಳಿಗೆ ಬದುಕಲು ಮ್ಯಾಂಗನೀಸ್ ಅಗತ್ಯ. ಇವುಗಳು ಉತ್ಪತ್ತಿಯಾಗಲು ಸಾವಿರಾರು ವರ್ಷಗಳೇ ಬೇಕು. ಈ ಗಡ್ಡೆಗಳ ಪುನರುತ್ಪಾದನೆ ಅಸಾಧ್ಯವಾಗಿದೆ. ಏಕೆಂದರೆ ಇಂತಹ ಗಂಟುಗಳು ಕೆಲವು ಮಿಲಿಮೀಟರ್‌ಗಳಷ್ಟು ಬೆಳೆಯಲು ಲಕ್ಷಾಂತರ ವರ್ಷಗಳನ್ನೇ ತೆಗೆದುಕೊಳ್ಳುತ್ತವೆ ಎಂದು ಅಂದಾಜಿಸಲಾಗಿದೆ.

ಗಣಿಗಾರಿಕೆಯಿಂದ ಉತ್ತಮ ಪರಿಸರ ಸಮತೋಲನ ಸಾಧ್ಯವೇ? : ಮೆಟಲ್ಸ್ ಕಂಪನಿ ಸಮುದ್ರದಾಳದಿಂದ ಈ ಗಡ್ಡೆಗಳನ್ನು ಗಣಿಗಾರಿಕೆ ಮಾಡುವ ಗುರಿಯನ್ನು ಹೊಂದಿದೆ. ಆಳದ ಸಮುದ್ರದಲ್ಲಿ ಗಣಿಗಾರಿಕೆ ಮಾಡುವುದರಿಂದ ಪರಿಸರಕ್ಕೆ ಹಾನಿಯಾಗುವ ಸಂಭವ ಕಡಿಮೆ. ಇದು ಶೇ.80 ರಷ್ಟು ಹಸಿರುಮನೆ ಅನಿಲ ಹೊರಸೂಸುತ್ತದೆ ಎಂದು ವಾದಿಸಿದೆ.

ಆಳ ಸಮುದ್ರದ ಗಣಿಗಾರಿಕೆ ಕಾಡುಗಳು ಮತ್ತು ಮಣ್ಣಿನ ಮೇಲೆ ಪರಿಣಾಮ ಬೀರುವುದಿಲ್ಲ. ಇದರಿಂದ ಜನರು ಸ್ಥಳಾಂತರವಾಗುವ ಸನ್ನಿವೇಶಗಳು ನಿರ್ಮಾಣವಾಗುವುದಿಲ್ಲ. ಇದಕ್ಕೆ ಶುದ್ಧ ನೀರಿನ ಅವಶ್ಯಕತೆಯೂ ಕಡಿಮೆಯಾಗಿದ್ದು, ಕಡಿಮೆ ಪ್ರಮಾಣದಲ್ಲಿ ವಿಷ ಬಿಡುಗಡೆ ಮಾಡುತ್ತದೆ. ಮಾತ್ರವಲ್ಲದೇ ಪ್ರಪಂಚದಲ್ಲೇ ಹೆಚ್ಚು ಕೋಬಾಲ್ಟ್ ಗಣಿಗಾರಿಕೆ ಮಾಡುವ ಕಾಂಗೋದಲ್ಲಿ ಮಕ್ಕಳು ಸೇರಿದಂತೆ ಜನರನ್ನು ಶೋಷಣೆಗೊಳಪಡಿಸುವುದನ್ನು ತಪ್ಪಿಸುತ್ತದೆ ಎಂದು ಮೆಟಲ್ಸ್ ಕಂಪನಿ ತಿಳಿಸಿದೆ.

ಆಳ ಸಮುದ್ರದಲ್ಲಿ ಯಾವಾಗಿಂದ ಶುರುವಾಗುತ್ತೆ ಗಣಿಗಾರಿಕೆ? : ಆಳವಾದ ಸಮುದ್ರದಲ್ಲಿ ಗಣಿಗಾರಿಕೆ ನಡೆಸುವಂತಹ ಕ್ರಮವನ್ನು ಇಂಟರ್ನ್ಯಾಷನಲ್ ಸೀಬೆಡ್ ಅಥಾರಿಟಿ ನಿಯಂತ್ರಿಸುತ್ತದೆ. ಇದನ್ನು ಸಮುದ್ರದ ಕಾನೂನು ಭಾಗವಾಗಿ ವಿಶ್ವಸಂಸ್ಥೆ ಸಮಾವೇಶದ ಅಡಿಯಲ್ಲಿ ಸ್ಥಾಪಿಸಲಾಗಿದೆ. ಇದು ವಿಶ್ವಾದ್ಯಂತ ಇದುವರೆಗೆ 31 ಪರಿಶೋಧನಾ ಗುತ್ತಿಗೆಗಳನ್ನು ನೀಡಿದೆ. ಆದರೆ ವಾಣಿಜ್ಯ ಗಣಿಗಾರಿಕೆ ಚಟುವಟಿಕೆಗಳಿಗೆ ಅನುಮತಿ ನೀಡಿಲ್ಲ.

ಇದೀಗ ಸಮುದ್ರ ಗಣಿಗಾರಿಕೆಯ ಹೊಸ ನಿಯಮಗಳ ಜಾರಿಯಿಂದ ಕೆಲ ಕಂಪನಿಗಳಿಗೆ ಅನ್ವೇಷಣೆಗೆ ಅವಕಾಶ ಒದಗುತ್ತಿದೆ. ಜಮೈಕಾ ಮೂಲದ ಪ್ರಾಧಿಕಾರವು ಆಳ ಸಮುದ್ರದ ಗಣಿಗಾರಿಕೆ ಸಾಧ್ಯವೇ? ಹೇಗೆ ಮತ್ತು ಎಲ್ಲಿ ಸಾಧ್ಯ ಎಂಬ ವಿಷಯಗಳನ್ನು ಕೂಲಂಕಷವಾಗಿ ತಿಳಿದುಕೊಳ್ಳುವಲ್ಲಿ ಕಾರ್ಯನಿರ್ವಹಿಸುತ್ತಿದೆ. ಇತ್ತೀಚೆಗೆ ಅಂತಾರಾಷ್ಟ್ರೀಯ ಸಮುದ್ರ ತಳ ಪ್ರಾಧಿಕಾರದ 167 ಸದಸ್ಯ ರಾಷ್ಟ್ರಗಳು ಜಾಗತಿಕ ಗಣಿಗಾರಿಕೆ ಸಂಹಿತೆಗಾಗಿ 10 ವರ್ಷಗಳ ಮಾತುಕತೆಗಳನ್ನು ಮುಂದುವರಿಸಿವೆ. ಜುಲೈ ವೇಳೆಗೆ ಕೈಗಾರಿಕೆಗಾಗಿ ಆಳ ಸಮುದ್ರದಲ್ಲಿ ಗಣಿಗಾರಿಕೆ ನಡೆಸಲು ಅರ್ಜಿಗಳನ್ನು ಸ್ವೀಕರಿಸಲು ಪ್ರಾರಂಭಿಸುವ ಸಾಧ್ಯತೆಯಿದೆ. ಆದರೆ ಕೆಲ ದ್ವೀಪ ರಾಷ್ಟ್ರಗಳು ಆಳ ಸಮುದ್ರ ಗಣಿಗಾರಿಕೆ ಮೇಲೆ ನಿಷೇಧಕ್ಕೆ ಕರೆ ನೀಡಿವೆ.

ಪರಿಸರವಾದಿಗಳ ವಿರೋಧವೇಕೆ? : ಮಾನವನ ಸಂಪತ್ತಿನ ದಾಹಕ್ಕೆ ಮಿತಿಯಿಲ್ಲ. ಭೂಮಿಯನ್ನು ಅಗೆದು ಭೂಗರ್ಭದಲ್ಲಿರುವ ಸಂಪನ್ಮೂಲವನ್ನು ಹೊರತೆಗೆದು ಸ್ವೇಚ್ಛಾಚಾರದ ಜೀವನ ನಡೆಸುತ್ತಿದೆ ಮನುಕುಲ. ಗಣಿಗಾರಿಕೆಯಿಂದ ಭೂಮಿ, ಪರಿಸರ, ಜೀವವೈವಿಧ್ಯ ಅಪಾಯಕ್ಕೆ ಸಿಲುಕಿದೆ. ಭೂಮಿಯಿಂದ ಎಷ್ಟೇ ಅಗೆದು ತೆಗೆದು ಸ್ವಾಹ ಮಾಡಿದರೂ ಮನುಷ್ಯನ ದಾಹ ಮಾತ್ರ ಇನ್ನೂ ನೀಗಿಲ್ಲ. ಭವಿಷ್ಯ ಮತ್ತಷ್ಟು ಭೀಕರತೆಯನ್ನು ಪ್ರತಿಬಿಂಬಿಸುತ್ತಿದೆ. ಪರಿಸರ ಕಾಳಜಿ, ಜೀವವೈವಿಧ್ಯದ ಹಿತದೃಷ್ಟಿಯಿಂದ ಗಣಿಗಾರಿಕೆಗೆ ಸಾಕಷ್ಟು ಕಠಿಣ ನಿಯಮಗಳನ್ನು ರೂಪಿಸಿದ್ದರೂ ಅಕ್ರಮ ಗಣಿಗಾರಿಕೆಗಳಿಗೇನು ಕಮ್ಮಿಯಿಲ್ಲ. ಇದಕ್ಕೆ ಆಡಳಿತ ವ್ಯವಸ್ಥೆಯೇ ಕುಮ್ಮಕ್ಕು ನೀಡುತ್ತಿರುವುದು ಶೋಚನೀಯ ಸಂಗತಿ.

ಭೂಮಿ ಗಣಿಗಾರಿಕೆ ಬಗ್ಗೆ ಚಿಂತೆಯ ಮಧ್ಯೆಯೇ ಮತ್ತೊಂದು ಗಣಿಗಾರಿಕೆ ಬಗ್ಗೆ ಚರ್ಚೆಯೊಂದು ಹುಟ್ಟುಕೊಂಡಿದ್ದು ಪರಿಸರವಾದಿಗಳಲ್ಲಿ ಆತಂಕ ಮೂಡಿಸಿದೆ. ಇಲ್ಲಿವರೆಗೆ ಭೂಪ್ರದೇಶದ ಮೇಲೆ ಗಣಿಗಾರಿಕೆ, ಅಕ್ರಮ ಗಣಿಗಾರಿಕೆ ನಡೆಯುತ್ತಿತ್ತು. ಈಗ ಅದನ್ನು ಸಮುದ್ರದಾಳಕ್ಕೆ ವಿಸ್ತರಿಸಲಾಗಿದೆ ಎಂದು ಪರಿಸರವಾದಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಹವಾಮಾನ ವರದಿ | ಕರಾವಳಿ, ಮಲೆನಾಡು ಭಾಗಗಳಲ್ಲಿ ಬೇಸಿಗೆ ಮಳೆಯು ಮುಂದುವರಿಯುವ ಲಕ್ಷಣ |

ರಾಜ್ಯದ ದಕ್ಷಿಣ ಕರಾವಳಿ, ಮಲೆನಾಡು ಭಾಗಗಳಲ್ಲಿ ಬೇಸಿಗೆ ಮಳೆಯು ಮುಂದುವರಿಯುವ ಲಕ್ಷಣಗಳಿವೆ. ಉತ್ತರ…

17 hours ago

ಅಂತರಂಗ | ಸ್ವಾರ್ಥರಹಿತ ಬೇಡಿಕೆಗಳಿಗೆ ರಾಜಕೀಯದಲ್ಲಿ ಮಾನ್ಯತೆಯಿಲ್ಲ…!

ರಾಜಕೀಯ ಎನ್ನುವುದು ಕೃಷಿ ಹಾಗೂ ಅಡಿಕೆ ಬೆಳೆಗಾರರ ವಿಚಾರದಲ್ಲಿ ಕೂಡಾ ಹೇಗೆ ಇರುತ್ತದೆ,…

21 hours ago

ಬದುಕು ಪುರಾಣ | ಎಲ್ಲರೊಳಗೂ ‘ಕುಂಭಕರ್ಣ’ನಿದ್ದಾನೆ!

ಮನುಷ್ಯನಿಗೆ ಆಹಾರ, ನಿದ್ರೆಗಳು ಸಹಜ. ವಯೋವೃದ್ಧರಿಗೆ ಬೋಜನದ ನಂತರದ ನಿದ್ರೆಯಿಂದ ಮೈಮನಗಳಿಗೆ ಸ್ಫೂರ್ತಿ.…

21 hours ago

ದಾವಣಗೆರೆ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ | ಬಾಡಿಗೆ ಆಧಾರದಲ್ಲಿ ಖಾಸಗಿ ಕೊಳವೆಬಾವಿ

ದಾವಣಗೆರೆ ಜಿಲ್ಲೆಯ 6 ತಾಲೂಕುಗಳಲ್ಲಿ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಬಹುದಾದ 197…

21 hours ago

ಯಾದಗಿರಿ ಜಿಲ್ಲೆಗೆ ತಾಪಮಾನ ಎಚ್ಚರಿಕೆ | ಮುಂದಿನ ಮೂರು ತಿಂಗಳಿನಲ್ಲಿ ಗರಿಷ್ಠ 45 ಡಿಗ್ರಿ ತಾಪಮಾನ ದಾಖಲಾಗುವ ಸಾಧ್ಯತೆ

ಯಾದಗಿರಿ ಜಿಲ್ಲೆಯಲ್ಲಿ ಮುಂದಿನ ಮೂರು ತಿಂಗಳಿನಲ್ಲಿ ಗರಿಷ್ಠ 45 ಡಿಗ್ರಿ ಸೆಲ್ಸಿಯಸ್ ತಾಪಮಾನ…

21 hours ago

ಏಪ್ರಿಲ್ 30 ರವರೆಗೆ ಜೋಗ ಜಲಪಾತಕ್ಕೆ ಪ್ರವಾಸಿಗರಿಗೆ ಪ್ರವೇಶ ನಿರ್ಬಂಧ

ವಿಶ್ವವಿಖ್ಯಾತ ಜೋಗ ಜಲಪಾತ ಪ್ರದೇಶದ ವ್ಯಾಪ್ತಿಯಲ್ಲಿ ಪ್ರವಾಸಿಗರಿಗೆ ಮೂಲಸೌಲಭ್ಯ ಒದಗಿಸಲು ಸಮಗ್ರ ಅಭಿವೃದ್ಧಿ…

21 hours ago