ಅನುಕ್ರಮ

ಭಗವದ್ಗೀತೆ ಬಿಡಿ, ಬೇರೆ ಏನಾದ್ರೂ ಸ್ತೋತ್ರ ಬರ್ತದಾ..?

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಕಾಶ್ಮೀರದ ಪಹಲ್ಗಾಮ್‍ನಲ್ಲಿ ಹಿಂದೂ ಪ್ರವಾಸಿಗರನ್ನು ಗುರಿಯಾಗಿರಿಸಿಕೊಂಡು ನಡೆದ ಅಮಾನುಷ ಹತ್ಯಾಕಾಂಡವು ಭಾರತದ ಸಾಮಾಜಿಕ ಧಾರ್ಮಿಕ (Socio-religious) ಇತಿಹಾಸದಲ್ಲಿ ಒಂದು ರಕ್ತಸಿಕ್ತ ಪುಟವಾಗಿ ಉಳಿಯಲಿದೆ. ಹಿಂದೂ ಗಂಡಸರನ್ನು ಅವರ ಹೆಂಡತಿ ಮಕ್ಕಳ ಎದುರೇ ದೈಹಿಕವಾಗಿ ಮಾತ್ರವಲ್ಲ, ಧಾರ್ಮಿಕವಾಗಿ ಗುರುತಿಸಿ ಪಾಕ್ ಪೋಷಿತ ಮುಸ್ಲಿಂ ಭಯೋತ್ಪಾದಕರು ಕೊಂದರು. ಧಾರ್ಮಿಕವಾಗಿ ಗುರುತಿಸಲು “ಕಲೀಮಾ ಬರ್ತದಾ? ಬರುವುದಿದ್ದರೆ ಹೇಳು” ಎಂದು ವಿಚಾರಿಸಿ ಹೇಳಲಾಗದವರನ್ನು ಕೊಂದರು. “ಕಲೀಮಾ ಬೇಡ, ಭಗವದ್ಗೀತೆಯನ್ನಾದರೂ ಹೇಳು, ಬಿಟ್ಟುಬಿಡುತ್ತೇವೆ” ಎಂದಿದ್ದರೆ ತಮ್ಮನ್ನು ಬದುಕಿಸಿಕೊಳ್ಳಲು ಎಷ್ಟು ಮಂದಿಗೆ ಸಾಧ್ಯವಿತ್ತು? ಈ ಪ್ರಶ್ನೆಯನ್ನು ಈಗ ದುಃಖಾರ್ತರಲ್ಲಿ ಕೇಳುವುದು ಸರಿಯಲ್ಲ. ಆದರೂ ವಿಸ್ತಾರವಾದ ಸಮಾಜದಲ್ಲಿ “ಭಗವದ್ಗೀತೆ ಇರಲಿ, ಬೇರೆ ಯಾವುದಾದರೂ ಸ್ತೋತ್ರ ಸರಿಯಾಗಿ ಬರ್ತದಾ” ಅಂತ ಕೇಳಿ ಹಿಂದೂಗಳನ್ನು ಸಶಕ್ತಗೊಳಿಸಬೇಕಾದ ಅಗತ್ಯವಿದೆ. ಏಕೆಂದರೆ ಬಹುತೇಕ ಸುಶಿಕ್ಷಿತ ಹಿಂದೂಗಳ ಮನೆಗಳಲ್ಲಿ ಬೆಳಗ್ಗೆ ಸಂಜೆ ಸ್ತೋತ್ರ ಪಠನ ಎಂಬುದು ಮರೆಯಾಗಿದೆ.
ಸ್ವರ್ಗಲೋಕದ ದೇವರುಗಳು, ಭೂಮಿಯ ದೈವಗಳು, ಜಾತಿಗಳು, ಉಪಜಾತಿಗಳು, ಸ್ಥಳ ದೈವಗಳು, ಗ್ರಾಮ, ಮಾಗಣೆ ದೇವರು, ದ್ವೈತ, ಅದ್ವೈತ, ಬೌದ್ಧ, ಜೈನ ಮುಂತಾದ ಪಂಥಗಳು ಮಡಿ, ಮೈಲಿಗೆ, ಅಸ್ಪೃಶ್ಯತೆ ಮುಂತಾಗಿ ಅನೇಕ ಒಡಕುಗಳಿರುವ ಹಿಂದೂ ಸಮಾಜದಲ್ಲಿ “ದೇವರಿಗೆ ಅಡ್ಡ ಬಿದ್ದರೆ ಅಷ್ಟೇ ಸಾಕು” ಎಂಬ ಸರಳ ಭಕ್ತಿಗೆ ಹಿಂದುಗಳು ಸೀಮಿತಗೊಂಡಿರುವ ಪರಿಸ್ಥಿತಿ ಇದೆ. ಇಷ್ಟು ಮಾಡಲು ಸ್ತೋತ್ರಗಳ ಅಗತ್ಯವಿಲ್ಲ. ಇಂದು ತಾಂತ್ರಿಕತೆಯು ಒದಗಿಸಿರುವ ಸೌಲಭ್ಯಗಳ ಜಾಲದಲ್ಲಿ ಆಧ್ಯಾತ್ಮಿಕತೆಯ ಸ್ಪರ್ಶವೂ ಜಡವಾಗಿದೆ. ಅಂದರೆ ದೇವರಿಗೆ ನಮಸ್ಕರಿಸದೆ, ಸ್ತೋತ್ರಗಳನ್ನು ಹೇಳದೆ, ಹೊಟ್ಟೆ ಬಟ್ಟೆಗೆ ಯಥೇಚ್ಛವಾಗಿ ಸಿಗುತ್ತದೆ. ಪ್ರವಾಸಿಗರಂತೆ ದೇವಸ್ಥಾನಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದಲ್ಲಿಗೆ ಭಕ್ತಿಯ ಒಂದು ಎಳೆಯನ್ನು ಜೀವಂತವಾಗಿಟ್ಟುಕೊಂಡಂತಾಗುತ್ತದೆ. ಆದರೆ ಅದು ಧಾರ್ಮಿಕತೆಯ ಶಕ್ತಿಯನ್ನು ನೀಡಲಾರದು.

Advertisement
Advertisement

ನಾನು ಕಂಡಂತೆ ಹಿಂದೂ ಧರ್ಮೀಯರು ಅತಿ ವಿಭಾಜಕ ದೃಷ್ಟಿಯುಳ್ಳವರಲ್ಲ. ಅವರು ಶಿವರಾತ್ರಿಯನ್ನೂ, ನವರಾತ್ರಿಯನ್ನೂ, ಕೃಷ್ಣಾಷ್ಟಮಿಯನ್ನೂ, ಗಣೇಶೋತ್ಸವವನ್ನೂ, ರಾಮನನ್ನೂ, ಹನುಮನನ್ನೂ, ಅಯ್ಯಪ್ಪ ದೀಪೋತ್ಸವವನ್ನೂ ಸಮಾನ ಭಕ್ತಿಯಿಂದ ಆಚರಿಸುತ್ತಾರೆ. ಒಂದೇ ಪ್ರಯಾಣದಲ್ಲಿ ಶಾರದಾಂಬೆಯ ಶೃಂಗೇರಿ, ಕೃಷ್ಣನ ಉಡುಪಿ, ಮಂಜುನಾಥನ ಧರ್ಮಸ್ಥಳ, ಷಣ್ಮುಖ ದೇವರ ಸುಬ್ರಹ್ಮಣ್ಯ, ಮಡಿಕೇರಿಯ ಓಂಕಾರೇಶ್ವರ, ಸೌತಡ್ಕದ ಗಣಪತಿ ದೇವಾಲಯಗಳಿಗೂ ಭೇಟಿ ನೀಡುತ್ತಾರೆ. ಇಲ್ಲೆಲ್ಲ ಇರುವ ದೇವರುಗಳು ವಿವಿಧ ಶಕ್ತಿ ಸಾಮಥ್ರ್ಯ ಉಳ್ಳವರು ಹಾಗೂ ಅವರೆಲ್ಲರ ಅನುಗ್ರಹವನ್ನು ಇಂದು ಭಕ್ತರು ಬೇಡುತ್ತಾರೆ. ಸಾಂಪ್ರದಾಯಿಕವಾಗಿ ಪರಿಶಿಷ್ಟ ಜಾತಿಯವರೇ ಭೂತವೇಷಧಾರಿಗಳಾಗಿದ್ದರೂ, ಬ್ರಾಹ್ಮಣ, ಶೆಟ್ಟಿ, ಗೌಡ ಮುಂತಾದ ಭೂಮಾಲಕ ಜಾತಿಯವರೆಲ್ಲರೂ ದೈವಗಳ ಅಭಯಕ್ಕಾಗಿ ಬೇಡುವಂತೆ ಭೂತದೆದುರು ಕೈಮುಗಿದು ನಿಲ್ಲುವಲ್ಲಿ ಮುಜುಗರ ಪಡುವುದಿಲ್ಲ. ಈ ಜಗತ್ತಿನ ಒಂದೊಂದು ವಸ್ತುವಿನಲ್ಲಿಯೂ ತತ್ವದಲ್ಲಿಯೂ ದೈವತ್ವವನ್ನು ಕಾಣುವ ವಿಶಾಲ ಬುದ್ಧಿಯ ಸಂಸ್ಕಾರವು ಮಕ್ಕಳಿಗೆ ಬಾಲ್ಯದಲ್ಲಿ ಸಿಗುತ್ತದೆ. ಹಾಗಾಗಿ ಯಾವುದೇ ದೈವದ ಪರಿಕಲ್ಪನೆಯನ್ನು ಖಂಡಿಸುವ, ವಿರೋಧಿಸುವ ಹಾಗೂ ಹೀಗಳೆಯುವ ಮನಸ್ಸು ಬಹುದೇವತಾರಾಧಕರ ಸ್ವಭಾವದಲ್ಲಿಯೇ ಇರುವುದಿಲ್ಲ. ಹೀಗಾಗಿಯೇ ಭಾರತದಲ್ಲಿ ವಿದೇಶಿ ನೆಲಗಳಿಂದ ಬಂದ ಧರ್ಮ ದೇವರುಗಳಿಗೆ ಪ್ರಶ್ನಿಸದೆ ನೆಲೆಯೊದಗಿಸಲಾಗಿದೆ. ಮುಸ್ಲಿಮ್ ಮತ್ತು ಕ್ರಿಶ್ಚಿಯನ್ ಧರ್ಮಾನುಯಾಯಿಗಳಿಗೆ ಹಿಂದೂ ಧರ್ಮವನ್ನು ಪಾಲಿಸಬೇಕೆಂಬ ಒತ್ತಡ ಹೇರದೆ, ಅವರನ್ನು ಧರ್ಮ ದ್ರೋಹಿಗಳೆಂದು ಕರೆಯದೆ, ಅವರವರ ಆರಾಧನಾ ಕೇಂದ್ರಗಳನ್ನು ಕಟ್ಟಿಕೊಂಡು ಪ್ರತ್ಯೇಕವಾಗಿ ಪೂಜೆ ಮತ್ತು ಪ್ರಾರ್ಥನೆಗಳನ್ನು ನಡೆಸಲು ಆಶ್ರಯ ನೀಡಲಾಗಿದೆ. ಅಂದರೆ ಹಿಂದೂ ಧರ್ಮೀಯರ ‘ದೇವಾಕಾಶವು’ ಅನಂತವಾದದ್ದೆಂದೇ ಹೇಳಬಹುದು.

“ದ ರೂರಲ್‌ ಮಿರರ್.ಕಾಂ” ವ್ಯಾಟ್ಸಪ್‌ ಚಾನೆಲ್‌ ಫಾಲೋ ಮಾಡಲು ಇಲ್ಲಿ ಕ್ಲಿಕ್‌ ಮಾಡಿರಿ…

ಗ್ರಾಮೀಣ ವಲಯದಲ್ಲಿ ಮುಸ್ಲಿಮರಿಗೆ ಮಸೀದಿಗಳನ್ನು ಕಟ್ಟಲು ಹಾಗೂ ಕ್ರಿಶ್ಚಿಯನ್ನರಿಗೆ ಚರ್ಚುಗಳನ್ನು ನಿರ್ಮಿಸಲು ಅವಕಾಶವನ್ನು ಕೊಟ್ಟದ್ದಷ್ಟೇ ಅಲ್ಲದೆ ಅವರು ನಂಬಿದ ದೈವ ಶಕ್ತಿಗಳ ಪ್ರಭಾವದಲ್ಲಿಯೂ ಸ್ಥಳೀಯರು ನಂಬಿಕೆಯನ್ನು ತೋರಿದರು. ಹಾಗಾಗಿ ಕೆಲವು ಮಸೀದಿಗಳಿಗೆ ಹಾಗೂ ಚರ್ಚುಗಳಿಗೆ ಹಿಂದೂ ಭಕ್ತರು ಇದ್ದಾರೆಂಬ ಉದಾಹರಣೆಗಳು ಸಿಗುತ್ತವೆ. ಅಂತೆ ಹಿಂದೂ ದೇವತೆಗಳನ್ನು ನಂಬುವ ಮುಸ್ಲಿಂ ಹಾಗೂ ಕ್ರಿಶ್ಚಿಯನ್ನರು ಇದ್ದಾರೆ. ಇಂತಹ ಧಾರ್ಮಿಕ ಸೌಹಾರ್ದದ ಉದಾಹರಣೆಗಳು ವ್ಯಾಪಕವಾಗಿ ಇರುತ್ತಿದ್ದರೆ, ಇಂದು ನಾವು ಕಾಣುವ ಮತೀಯ ಕಲಹಗಳಿಗೆ ಅವಕಾಶ ಇರುತ್ತಿರಲಿಲ್ಲ. ಆದರೆ ಮುಸ್ಲಿಂ ದೊರೆಗಳ ಆಡಳಿತ ಹಾಗೂ ಕ್ರಿಶ್ಚಿಯನ್ನರ ವಸಾಹತು ಸಾಮ್ರಾಜ್ಯದ ವಿಸ್ತರಣೆಯು ಆಳರಸರ ಮತ್ತು ಪ್ರಜೆಗಳ ಧರ್ಮಗಳ ತುಲನೆಗೆ ಅವಕಾಶ ನೀಡಿತು. ಅಧಿಕಾರದಲ್ಲಿದ್ದವರ ಧರ್ಮ ಮತ್ತು ಮಂದಿರಗಳು ಶ್ರೇಷ್ಠವೆನ್ನಿಸಿದುವು. ಅವರ ಧರ್ಮಾನುಯಾಯಿಗಳಿಗೆ ವಿಶೇಷ ಅನುಕೂಲಗಳ ಹಾಗೂ ಅನುದಾನಗಳ ಕೊಡುಗೆಗಳು ಮತಾಂತರದ ಆಮಿಷಗಳಾಗಿ ಪರಿವರ್ತಿತವಾದವು. ಇದು ಹಿಂದೂ ಧರ್ಮದ ಬಹು ದೇವತಾರಾಧನೆಯನ್ನು ಲೇವಡಿ ಮಾಡಲು ಪರಧರ್ಮೀಯರಿಗೆ ಉತ್ತೇಜನ ನೀಡಿತು. ಹೀಗೆ ವೈಚಾರಿಕವಾಗಿ ಹಿಂದೂ ಧರ್ಮದ ತಾತ್ವಿಕ ನೆಲೆಗಳನ್ನು ತಿರಸ್ಕರಿಸುವ ವಿದ್ಯಮಾನ ವ್ಯಾಪಕವಾಯಿತು.

ಹಿಂದೂ ಧರ್ಮದ ವಿಶೇಷತೆ ಎಂದರೆ ಅದು ಸ್ವ ವಿಮರ್ಶೆಯ (self -criticism) ಸ್ವಾತಂತ್ರ್ಯ ಹೊಂದಿದೆ. ಅಸ್ಪೃಶ್ಯತೆ, ಮೂಢನಂಬಿಕೆ, ಕಂದಾಚಾರಗಳು, ಶೋಷಣೆ ಮುಂತಾದವುಗಳ ವಿರುದ್ಧ ಟೀಕೆಗಳು ಮತ್ತು ಸಾಮಾಜಿಕ ಸುಧಾರಣೆಗಳು ಹಿಂದೂ ಧರ್ಮದೊಳಗಿಂದಲೇ ಆಗುತ್ತವೆ. ಉದಾಹರಣೆಗೆ ಬೌದ್ಧ ಧರ್ಮ, ಜೈನ ಧರ್ಮ, ವೀರಶೈವ ಧರ್ಮ, ಆರ್ಯ ಸಮಾಜ, ಬ್ರಹ್ಮ ಸಮಾಜದಂತಹ ಚಟುವಟಿಕೆಗಳು ಹಿಂದೂ ಧರ್ಮದೊಳಗಿಂದಲೇ ಹುಟ್ಟಿವೆ. ದೇವರ ಸಾಕಾರ ಮತ್ತು ನಿರಾಕಾರ ಕಲ್ಪನೆಗಳು ಹಾಗೂ ಅವುಗಳ ಔಚಿತ್ಯಗಳ ಚರ್ಚೆಯು ಬೌದ್ಧಿಕ ಎತ್ತರದಲ್ಲಿ ಜರಗಿವೆ. ಭಕ್ತನು ದೇವರೊಂದಿಗಿನ ತನ್ನ ಸಂಬಂಧವನ್ನು ನೇರವಾಗಿ ಸರಳವಾದ ಭಜನೆಯ ಭಕ್ತಿ ಮಾರ್ಗದ ಮೂಲಕ ರೂಢಿಸಿಕೊಳ್ಳಬಹುದು. ಶುದ್ಧ ಭಜಕನಿಗೆ ದೇವಾಲಯವೂ ಮೂರ್ತಿಯೂ ಬೇಕಾಗಿಲ್ಲ. ದೇವರಲ್ಲಿ ಮಾತಾಡುವ ಮತ್ತು ದೇವರನ್ನೇ ಪ್ರಶ್ನಿಸುವ ಭಜನೆಗಳು ನಮ್ಮಲ್ಲಿವೆ. “ನೀನ್ಯಾಕೋ ನಿನ್ನ ಹಂಗ್ಯಾಕೋ ನಿನ್ನ ನಾಮದ ಬಲ ಒಂದಿದ್ದರೆ ಸಾಕು” ಎಂದು ಹೇಳಬಲ್ಲ ಧೈರ್ಯ ಭಕ್ತನಿಗೆ ಇದೆ. ಅಂತೂ ಮಾನವನಿಗಿಂತ ಹಿರಿದಾದ ಒಂದು ಶಕ್ತಿ ಇದೆ ಎಂಬ ಪ್ರಜ್ಞೆಯೇ ಹಿಂದೂ ಧರ್ಮದ ಗುರಿಯಾಗಿದೆ. ಹಾಗಾಗಿಯೇ ಪರ್ವತಗಳು, ನದಿಗಳು, ಮರಗಳು, ಕಲ್ಲುಗಳು, ಮೂರ್ತಿಗಳು ನಮಗೆ ದೇವರ ಪ್ರತೀಕವಾಗಿವೆ.

Advertisement

ದೈವತ್ವದ ಕುರಿತಾಗಿ ಹಿಂದುಗಳು ನಡೆಸುವ ಚಿಂತನೆ ಮತ್ತು ಚರ್ಚೆಗಳಲ್ಲಿ ವಿಮರ್ಶೆ ಇದೆಯೇ ಹೊರತು ಲೇವಡಿ ಇಲ್ಲ. ಹಾಗಾಗಿ ಶಾಲೆಗಳಲ್ಲಿ ಹಿಂದೂ ಶಿಕ್ಷಕರು ಮುಸ್ಲಿಂ ಮತ್ತು ಕ್ರಿಶ್ಚಿಯನ್ ದೇವರನ್ನು ನಿಂದಿಸಿಲ್ಲ. ಏಕೆಂದರೆ ಅವರಿಗೆ ಮತಾಂತರದ ದೃಷ್ಟಿಯೇ ಇಲ್ಲ. ಆದರೆ ಕ್ರಿಶ್ಚಿಯನ್ ಶಾಲೆಗಳಲ್ಲಿ ಶಿಕ್ಷಕಿಯರು ಹಿಂದೂ ದೇವತೆಗಳನ್ನು ಲೇವಡಿ ಮಾಡಿದರು. ಹೆಂಡತಿ ಬಿಟ್ಟವನು ರಾಮ, ಹೆಣ್ಣು ಬಾಕ ಕೃಷ್ಣ , ಭಸ್ಮಲೇಪಿತ ಶಿವ, ನಿಮ್ಮದು ಆನೆ ಸೊಂಡಿಲಿನ ದೇವರು, ಮಂಗ ದೇವರು ಹೀಗೆ ಲೇವಡಿ ಮಾಡುತ್ತಾ ಹಿಂದೂ ಮಕ್ಕಳಲ್ಲಿ ತಮ್ಮ ಧರ್ಮದ ಬಗ್ಗೆ ಅಪನಂಬಿಕೆ ಮತ್ತು ಅಪಮಾನ ಬೆಳೆಸಿದರು. ಪರಿಣಾಮವಾಗಿ ಹಿಂದೂ ಮಕ್ಕಳಿಗೆ ಕೈಗೆ ಬಳೆ ಧರಿಸುವುದು, ಹೂ ಮುಡಿಯುವುದು, ಮೈಮುಚ್ಚುವ ಡ್ರೆಸ್ ಧರಿಸುವುದು ಇತ್ಯಾದಿಗಳು ಗೊಡ್ಡು ಸಂಪ್ರದಾಯಗಳಾದವು. ಪೂಜೆ, ಗಾಯತ್ರಿ ಜಪ, ಜನಿವಾರ ಮುಂತಾದವನ್ನು ಹುಡುಗರು ದೂರವಿಟ್ಟರು. ಹೀಗೆ ಮನೆಗಳಲ್ಲಿ ಧಾರ್ಮಿಕ ಆಚರಣೆ ಮತ್ತು ನಂಬಿಕೆಗಳು ಲುಪ್ತಗೊಂಡುವು. ಪ್ರಸ್ತುತ ಹಿಂದೂಗಳ ಮಕ್ಕಳಿಗೆ ದೇವಸ್ಥಾನಗಳು, ಸ್ವಾಮಿಗಳು, ಜಾತ್ರೆ ರಥೋತ್ಸವ ಇತ್ಯಾದಿಗಳು ಗೊತ್ತಿವೆಯೇ ಹೊರತು ಅವುಗಳ ಮಹತ್ವ ತಿಳಿದಿಲ್ಲ. ತಮ್ಮ ಧಾರ್ಮಿಕ ನಂಬಿಕೆಯನ್ನು ಬಲಗೊಳಿಸುವ ಆಧ್ಯಾತ್ಮಿಕ ಪ್ರತಿಪಾದನೆಗಳು ಗೊತ್ತಿಲ್ಲ. ಸದ್ಯ ಮತಾತೀತತೆಯ (secularism) ನೀತಿಯ ಅಡಿಯಲ್ಲಿ ಇವನ್ನು ಶಿಕ್ಷಣದಿಂದ ಹೊರಗಿಡಲಾಗಿದೆ. ಹಾಗಾಗಿ ದೇವರನಾಮಗಳು, ಸ್ತೋತ್ರಗಳು, ಮಂತ್ರಗಳು ಬದುಕಿನ ಸಿಲೆಬಸ್ ನಲ್ಲಿ ಇಲ್ಲ. ಇನ್ನು ಭಗವದ್ಗೀತೆ ಎಲ್ಲಿಂದ ಬರಬೇಕು?

ಇಂಗ್ಲಿಷ್ ಮೀಡಿಯಂನಲ್ಲಿ ಆಧುನಿಕ ಶಿಕ್ಷಣ, ಬಾಯಿಪಾಠದ ಕಲಿಕೆಯ ಒತ್ತಡ, ಪರೀಕ್ಷೆ ಮತ್ತು ಅಂಕಗಳಿಕೆಯ ಒತ್ತಡದಲ್ಲಿ ಹಿಂದೂ ಕುಟುಂಬಗಳಲ್ಲಿ ಧಾರ್ಮಿಕ ಶಿಕ್ಷಣ ಅಪ್ರಸ್ತುತವೆನ್ನಿಸಿದೆ. ಹಾಗೆಂದು ಯಾರಿಗೂ ಪೂರ್ತಿಯಾಗಿ ಭಗವದ್ಗೀತೆ ತಿಳಿದಿರಬೇಕಾಗಿಲ್ಲ. ಅದರ ಶ್ಲೋಕಗಳ ಸಂಖ್ಯೆಯನ್ನು ನೋಡಿಯೇ ಕೆಲವರು ಭಗವದ್ಗೀತೆಯನ್ನು ಬದಿಗಿಡುತ್ತಾರೆ. ಆದರೆ ಅದರಲ್ಲಿ ಚರ್ಚಿತವಾದ ಜೀವನದ ಉದ್ದೇಶ, ಕರ್ಮಸಿದ್ಧಾಂತ, ಆತ್ಮನಿರ್ಭರತೆಯ ಅವಶ್ಯಕತೆ, ಜನ್ಮಾಂತರಗಳನ್ನು ಮೀರುವ ಮುಕ್ತಿಯ ವಿಶ್ಲೇಷಣೆ ಮುಂತಾದ ಮುಖ್ಯ ಚರ್ಚೆಯ ಅರಿವಿದ್ದರೂ ಸಾಕು. ಅದರಿಂದ ವ್ಯಕ್ತಿಗೆ ಬದುಕಿನ ಅರ್ಥವನ್ನ್ನು ನಿರ್ಧರಿಸುವ ಮಾರ್ಗ ಸಿಗುತ್ತದೆ. ಇದು ಕಷ್ಟವೆನ್ನಿಸಿದರೆ ರಾಮರಕ್ಷಾ, ವಿಷ್ಣು ಸಹಸ್ರನಾಮ, ಹನುಮಾನ್ ಚಾಲಿಸಾ, ದೇವೀ ಸ್ತೋತ್ರ, ಸೂರ್ಯಾಷ್ಟಕ ಅಥರ್ವಶೀರ್ಷ, ರುದ್ರ ಮುಂತಾಗಿ ಒಂದಲ್ಲ ಒಂದು ಸ್ತೋತ್ರದ ಪುನಶ್ಚರಣೆ ಉಪಯುಕ್ತವಾಗಿದೆ. ಅದು ದೇಹದಲ್ಲಿಯೂ ಪರಿಸರದಲ್ಲಿಯೂ ಕಂಪನಗಳನ್ನು ಸೃಸ್ಟಿಸಿ ಮನಸ್ಸಿನಲ್ಲಿ ಉಲ್ಲಾಸವನ್ನೂ ಮುಖದಲ್ಲಿ ತೇಜಸ್ಸನ್ನೂ ಹೆಚ್ಚಿಸುತ್ತದೆ.

“ದ ರೂರಲ್‌ ಮಿರರ್.ಕಾಂ” ವ್ಯಾಟ್ಸಪ್‌ ಚಾನೆಲ್‌ ಫಾಲೋ ಮಾಡಲು ಇಲ್ಲಿ ಕ್ಲಿಕ್‌ ಮಾಡಿರಿ…

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಡಾ.ಚಂದ್ರಶೇಖರ ದಾಮ್ಲೆ

ಡಾ. ಚಂದ್ರಶೇಖರ ದಾಮ್ಲೆಯವರು ಸುಳ್ಯದ ನೆಹರು ಮೆಮೋರಿಯಲ್ ಕಾಲೇಜ್ ನಲ್ಲಿ ಸಮಾಜಶಾಸ್ತ್ರ ಪ್ರಾಧ್ಯಾಪಕರಾಗಿ 35 ವರ್ಷಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರು. ವೃತ್ತಿಯಲ್ಲಿರುವಾಗಲೇ ರಾಷ್ಟ್ರೀಯ ಸೇವಾ ಯೋಜನಾಧಿಕಾರಿಯಾಗಿ ಸಮಾಜಸೇವೆಯಲ್ಲಿ ತೊಡಗಿಕೊಂಡವರು. ಸಾಂಸ್ಕೃತಿಕ ಸಂಘದ ಮೂಲಕ ಮಕ್ಕಳಿಗೆ ಯಕ್ಷಗಾನ ನಿರ್ದೇಶಕನ, ಸುಳ್ಯದಲ್ಲಿ ಯಕ್ಷಗಾನ ಹಿತರಕ್ಷಣಾ ವೇದಿಕೆಯ ಸ್ಥಾಪನೆ, ಸಂಪೂರ್ಣ ಸಾಕ್ಷರತಾ ಆಂದೋಲನದಲ್ಲಿ ಸಂಪನ್ಮೂಲ ವ್ಯಕ್ತಿ, ಕನ್ನಡಮಾಧ್ಯಮದಲ್ಲಿ ಸ್ನೇಹ ಶಿಕ್ಷಣ ಸಂಸ್ಥೆಯ ಸ್ಥಾಪನೆ ಮುಂತಾದ ಸಮಾಜಮುಖಿ ಕಾರ್ಯಗಳಲ್ಲಿ ಸೇವೆ ನೀಡಿದವರು. ಶಿಕ್ಷಣದಲ್ಲಿ ಸೃಜನಶೀಲತೆಗೆ ಒತ್ತು ನೀಡುವ ದಾಮ್ಲೆಯವರು ಸಂಶೋಧಕರಾಗಿದ್ದು ಕನ್ನಡ ಇಂಗ್ಲಿಷ್ ಭಾಷೆಗಳಲ್ಲಿ ಕೃತಿ ರಚನೆ ಮಾಡಿದವರು. 'ನೆಲದನಂಟು' ಮತ್ತು "ಶಾಲೆ ಎಲ್ಲಿದೆ?" ಇವು ಇವರ ಪ್ರಸಿದ್ಧ ಕಾದಂಬರಿಗಳು. ಅನೇಕ ಪ್ರಶಸ್ತಿ ಸಮ್ಮಾನಗಳಿಂದ ಗೌರವಿಸಲ್ಪಟ್ಟ ದಾಮ್ಲೆಯವರಿಗೆ ಅಸಾಮಾನ್ಯ ಕನ್ನಡಿಗ ಪ್ರಶಸ್ತಿ, ಯಕ್ಷಮಂಗಳ ಪ್ರಶಸ್ತಿ, ಅರಣ್ಯಮಿತ್ರ ಮತ್ತು ಜಲಮಿತ್ರ ಪ್ರಶಸ್ತಿ, Nation Builder ಪ್ರಶಸ್ತಿ ಮುಂತಾದುವು ಲಭಿಸಿವೆ. ಹೊಸದಿಗಂತ ಪತ್ರಿಕೆಯಲ್ಲಿ "ಇದ್ಯಾಕೆ ಹೀಗೆ " ಅಂಕಣವನ್ನು ಬರೆಯುತ್ತಿದ್ದರು.

Published by
ಡಾ.ಚಂದ್ರಶೇಖರ ದಾಮ್ಲೆ

Recent Posts

ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಬಾಗಲಕೋಟೆ ಜಿಲ್ಲೆಯ  ಶೂರ್ಪಾಲಿಯ ಶ್ರೀಲಕ್ಷ್ಮೀ ನರಸಿಂಹ ದೇವಾಲಯ

ಕೆಲ ದೇವಾಲಯಗಳು ತಮ್ಮ ಶಿಲ್ಪಕಲೆ, ಇತಿಹಾಸ, ಸೌಂದರ್ಯಕ್ಕೆ ಹೆಸರಾದರೆ ಮತ್ತೆ ಕೆಲವು ಭಕ್ತರ…

6 hours ago

ಕಾಯಕ ಗ್ರಾಮ  ಯೋಜನೆ | ಹಿಂದುಳಿದ ಗ್ರಾಮಗಳನ್ನು ದತ್ತು ಸ್ವೀಕರಿಸುವಂತೆ ಸಲಹೆ

ʼಕಾಯಕ ಗ್ರಾಮʼ ಯೋಜನೆಯಡಿ ಹಿಂದುಳಿ ದಿರುವ  ಗ್ರಾಮ ಪಂಚಾಯತಿಯನ್ನು  ದತ್ತು ಸ್ವೀಕಾರ ಮಾಡಬೇಕೆಂದು…

6 hours ago

ಡೆಂಘೀ ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಅಗತ್ಯ ಕ್ರಮಕೈಗೊಳ್ಳಲು ಸರ್ಕಾರದ ಸೂಚನೆ

ಡೆಂಗ್ಯೂ ಸೇರಿದಂತೆ ಸಾಂಕ್ರಾಮಿಕ ರೋಗಗಳ ನಿಯಂತ್ರಣದ ದೃಷ್ಟಿಯಿಂದ ಅಗತ್ಯ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲು…

6 hours ago

ಕನಿಷ್ಠ ಬೆಂಬಲ ಬೆಲೆಯಲ್ಲಿ ಸೂರ್ಯಕಾಂತಿ ಖರೀದಿ ಪ್ರಕ್ರಿಯೆ ಶೀಘ್ರ ಆರಂಭ

ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಹಿಂಗಾರು ಹಂಗಾಮಿಗೆ ಸೂರ್ಯಕಾಂತಿ ಖರೀದಿಗೆ ಕೇಂದ್ರ ಅನುಮತಿ…

6 hours ago

ವೈಜ್ಞಾನಿಕವಾಗಿ ಕಸ ವಿಲೇವಾರಿಗೆ ಕ್ರಮ ವಹಿಸಲು ಅಧಿಕಾರಿಗಳಿಗೆ ಉಪಲೋಕಾಯುಕ್ತರು ಸೂಚನೆ

ಉಪ ಲೋಕಾಯುಕ್ತರಾದ ಕೆ.ಎನ್.ಫಣೀಂದ್ರ ಅವರು ಅಗಿಲೆಯಲ್ಲಿರುವ ಕಸ ವಿಲೇವಾರಿ ಘಟಕಕ್ಕೆ ಭೇಟಿ ನೀಡಿ…

6 hours ago

ಈಶಾನ್ಯ ಭಾರತದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ

ಮುಂದಿನ ಮೂರರಿಂದ ನಾಲ್ಕು ದಿನಗಳಲ್ಲಿ ಕರಾವಳಿ ಆಂಧ್ರಪ್ರದೇಶ, ಯಾಣಂ, ರಾಯಲಸೀಮಾ, ತೆಲಂಗಾಣ, ಕರ್ನಾಟಕ,…

6 hours ago