ರಾಜ್ಯದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸಂಚಲನ ಸೃಷ್ಟಿಸಿದ್ದಾರೆ. ದಾವಣಗೆರೆಯಲ್ಲಿ ಆಮ್ ಆದ್ಮಿ ಪಕ್ಷ ನಡೆಸಿದ ಪದಾಧಿಕಾರಿಗಳ ಸಮಾವೇಶದಲ್ಲಿ ಭರ್ಜರಿ ಭಾಷಣ ಮಾಡಿದ್ದಾರೆ. ಭರವಸೆಗಳ ಮಹಾಪೂರ ಹರಿಸಿದ್ದಾರೆ. ಸಂಕಷ್ಟದಲ್ಲಿರುವ ಕೃಷಿಕರಿಗೆ ನೆರವಾಗುವ ಭರವಸೆಯನ್ನು ನೀಡಿದ್ದಾರೆ. ರಾಜ್ಯದ ರೈತರ ಸಾಲಮನ್ನಾ ಹಾಗೂ ಬೆಳೆಗೆ ಕನಿಷ್ಟ ಬೆಂಬಲ ಬೆಲೆ ನೀಡುವ ಯೋಜನೆಯ ಬಗ್ಗೆ ಮಾತನಾಡಿದ್ದಾರೆ. ಇದರ ಜೊತೆಗೆ ಕೃಷಿ ವಲಯದ ಅಭಿವೃದ್ಧಿ ಯೋಜನಾಬದ್ಧ ವ್ಯವಸ್ಥೆಯ ಬಗ್ಗೆ ತಿಳಿಸಿದ್ದಾರೆ.
ಅದೃಷ್ಟದ ನೆಲ ಎಂದೇ ಬಿಂಬಿತವಾಗಿರುವ ಮಧ್ಯಕರ್ನಾಟಕದ ದಾವಣಗೆರೆಯಲ್ಲಿ ಆಮ್ ಆದ್ಮಿ ಪಕ್ಷದ ಅಬ್ಬರ ಪ್ರಚಾರಕ್ಕೆ ಚಾಲನೆ ನೀಡಲಾಗಿದೆ. ಕರ್ನಾಟಕದಲ್ಲೂ ಆಪ್ ತನ್ನ ಖಾತೆ ತೆರೆಯಲು ಹೆಜ್ಜೆ ಇರಿಸಿದೆ. ಇದಕ್ಕಾಗಿಯೇ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಆಗಮಿಸಿದ್ದು ರೈತರ ಕಲ್ಯಾಣಕ್ಕೆ ಮುಂದಾಗಿದ್ದಾರೆ.
ದಾವಣಗೆರೆಯ ಸಮಾವೇಶದಲ್ಲಿ ರಾಜ್ಯ ಸರ್ಕಾರದ ವೈಫಲ್ಯಗಳ ಬಗ್ಗೆ ಬೊಟ್ಟು ಮಾಡಿದ್ದಾರೆ. ಎರಡು ರಾಜ್ಯಗಳ ತುಲನಾತ್ಮಕವಾದ ಮಾಹಿತಿಯನ್ನು ಜನತೆಯ ಮುಂದೆ ಇರಿಸಿದ್ದು, ಡಬಲ್ ಎಂಜಿನ್ ಸರ್ಕಾರದಲ್ಲಿ ಎಂಜಿನ್ ಹಾಳಾಗಿದೆ, ಇದಕ್ಕಾಗಿ ಹೊಸ ಎಂಜಿನ್ ಇಲ್ಲಿಗೆ ಅಗತ್ಯ ಇದೆ. ರಾಜ್ಯದ ಜನತೆ ಒಳ್ಳೆಯವರು, ಆದರೆ ಇಲ್ಲಿನ ನಾಯಕರು ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ, ಡಬಲ್ ಎಂಜಿನ್ ಸರ್ಕಾರದ ಎಂಜಿನ್ ಹಾಳಾಗಿದೆ ಎಂದು ಛೇಡಿಸಿದ್ದಾರೆ.
ರಾಜ್ಯದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸೃಷ್ಟಿಸಿದ ಕೃಷಿ ಸಂಚಲನ | ರೈತರ ಎಲ್ಲಾ ಸಾಲಮನ್ನಾ | ರೈತರ ಬೆಳೆಗೆ ಕನಿಷ್ಟ ಬೆಂಬಲ ಬೆಲೆ | ಬಡವರಿಗಾಗಿ ವಿಶೇಷ ಯೋಜನೆ | https://t.co/qbIY3iK44g#Kejriwal #KarnatakaWantsKejriwal @AAPKarnataka@AAPDaksnKannada
Advertisement— theruralmirror (@ruralmirror) March 5, 2023
ರೈತರ ಕಲ್ಯಾಣದ ಬಗ್ಗೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಘೋಷಣೆ ಮಾಡಿದ್ದಾರೆ. ರೈತರ ಎಲ್ಲಾ ಸಾಲಮನ್ನಾ ಮಾಡುವುದಾಗಿ ಹೇಳಿದ್ದಾರೆ. ಬೆಳೆದ ಬೆಳೆಗೆ ಉತ್ತಮ ಧಾರಣೆ ಲಭ್ಯವಾಗಲು ಕನಿಷ್ಟ ಬೆಂಬಲ ಬೆಲೆ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಭ್ರಷ್ಟಾಚಾರ ಮುಕ್ತ ಮಾಡುತ್ತೇವೆ, 24 ಗಂಟೆಯೂ ಉಚಿತ ವಿದ್ಯುತ್, ಗುಣಮಟ್ಟದ ಆರೋಗ್ಯ ವ್ಯವಸ್ಥೆ, ಅಂತರಾಷ್ಟ್ರೀಯ ಗುಣಮಟ್ಟದ ಸರ್ಕಾರಿ ಶಾಲೆ, ಎಲ್ಲರಿಗೂ ಉದ್ಯೋಗ, 3000 ರೂಪಾಯಿ ನಿರುದ್ಯೋಗ ಭತ್ತೆ ಸೇರಿದಂತೆ ಬಡವರಿಗಾಗಿ ಜನಪರ ಯೋಜನೆ ತರುತ್ತೇವೆ ಎಂದು ಹೇಳಿದ್ದಾರೆ.
ಕರ್ನಾಟಕದಲ್ಲಿರುವ 40% ಸರ್ಕಾರ ಹೋಗಬೇಕು, ಅದಕ್ಕಾಗಿ ಆಮ್ ಆದ್ಮಿ ಪಕ್ಷ ಕರ್ನಾಟಕಕ್ಕೆ ಬಂದಿದೆ. ದೆಹಲಿ, ಪಂಜಾಬ್ ನಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇವೆ. ಕರ್ನಾಟಕದಲ್ಲೂ ಪ್ರಾಮಾಣಿಕವಾಗಿ ಸರ್ಕಾರ ನೀಡುವ ಗುರಿ ಇದೆ. ಕರ್ನಾಟಕದಲ್ಲೂ ಆಮ್ ಆದ್ಮಿ ಪಕ್ಷದ ಬಲವರ್ಧನೆ ಮಾಡುತ್ತಿದ್ದೇವೆ ಎಂದರು.