ಅಡಿಕೆ ಹಳದಿ ರೋಗ | ಹಳದಿ ರೋಗ ವಿಸ್ತರಣೆ ನಿಧಾನ ಮಾಡಿದ್ದು ಹೇಗೆ ಈ ಕೃಷಿಕ ? |

October 1, 2021
10:14 PM
ಅಡಿಕೆ ಹಳದಿ ಎಲೆ ರೋಗ ವಿಸ್ತರಣೆಯಾಗುತ್ತಿರುವ ಬಗ್ಗೆ ದಕ್ಷಿಣ ಕನ್ನಡ  ಜಿಲ್ಲೆಯ ಕೃಷಿಕರಲ್ಲಿ  ಚರ್ಚೆಯಾಗುತ್ತಿದೆ. ಅಡಿಕೆ ಹಳದಿ ಎಲೆರೋಗ ಶಾಶ್ವತ ಪರಿಹಾರ ಇದುವರೆಗೂ ಇಲ್ಲದೇ ಇದ್ದರೂ, ಸದ್ಯ ಹಳದಿ ಎಲೆ ರೋಗ ವಿಸ್ತರಣೆ ನಿಧಾನವಾದ ಮಾದರಿಗಳೂ ಈಗ ಅಡಿಕೆ ಬೆಳೆಗಾರರಿಗೆ ಅಗತ್ಯವಾಗಿದೆ. ಅಂತಹ ಮಾದರಿಗಳು ಇದ್ದರೆ ನಮಗೂ ತಿಳಿಸಿ ಅನೇಕ ಕೃಷಿಕರಿಗೆ ಪ್ರಯೋಜನವಾಗಬಹುದು. ಇದೆಲ್ಲದರ ಜೊತೆಗೆ ರೋಗ ನಿರೋಧಕ ತಳಿ ಅಭಿವೃದ್ಧಿ ಬಗ್ಗೆಯೂ ಚಿಂತನೆ ನಡೆಯುತ್ತಿದೆ.

ಸುಳ್ಯ ತಾಲೂಕು ಗಡಿಭಾಗದ ಮಡಿಕೇರಿ ತಾಲೂಕಿನ ಚೆಂಬು ಗ್ರಾಮದ ಕೃಷಿಕ  ಕರುಣಾಕರ ಅವರು ಅಡಿಕೆ ಹಳದಿ ಎಲೆ ರೋಗ ವಿಸ್ತರಣೆಯನ್ನು ತಮ್ಮ ತೋಟದಲ್ಲಿ ನಿಧಾನ ಮಾಡಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಅವರ ತೋಟದಲ್ಲಿ  ಹಳದಿ ರೋಗವನ್ನು ಗೆದ್ದಿದ್ದೇನೋ ಎಂದರೆ ನಿಸ್ಸಂದೇಹವಾಗಿ ಇಲ್ಲ ಎನ್ನಬೇಕಾಗುತ್ತದೆ ಎನ್ನುವ ಕರುಣಾಕರ ಅವರು  ನಿಧಾನವಾಗಿ ನನ್ನ ಬೈಲು ಗದ್ದೆಯ ತೋಟಕ್ಕೆ ಹಳದಿ ವಕ್ಕರಿಸಿದೆ ಎನ್ನುತ್ತಾ ಹೀಗೆ ವಿವರಿಸುತ್ತಾರೆ,

Advertisement

ನನ್ನ ಮನೆಯೆದುರಿನ ತೋಟದ ಮೂಲೆಗೆ ಹಳದಿ ರೋಗ ಬಂದಿತ್ತು. ಇದು 20 ವರ್ಷಗಳ ಹಿಂದಿನ ಮಾತು. ನಾನು ತೋಟದ ಅಸೆ ಬಿಟ್ಟೆ. ಕಾರಣ ಸುತ್ತಮುತ್ತಲ ಸ್ಥಿತಿ ಹಾಗಿತ್ತು. ಆದರೆ ನಾನು ಈಗ್ಗೆ ಸುಮಾರು 20 ವರ್ಷಗಳ ಹಿಂದೆ ಕೃಷಿ ಶುರುಮಾಡಿದಾಗ ನಾನು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸಿದೆ.

ತೋಟದ ಮೇಲಿಂದ ಬರುವ ಕಾಡಿನ ಒರತೆ ನೀರಿಗೆ ಅಪ್ಪ ತೋಟದ ಬದಿಯಲ್ಲಿ ಮಣ್ಣಿನ ಟ್ಯಾಂಕ್‌ ಮಾಡಿ ಅದರಲ್ಲಿ ನೀರು ಸಂಗ್ರಹಿಸಿ ಬೇಸಿಗೆಯಲ್ಲಿ ತೋಟಕ್ಕೆ ನೀರು ಎರೆಚುವ ವ್ಯವಸ್ಥೆ ಮಾಡಿದ್ದರು. ನಾನು ಆ ಟ್ಯಾಂಕ್‌ ಮುಚ್ಚಿಸಿ ಮಳೆಗಾಲದಲ್ಲಾಗಲಿ ,ಬೇಸಿಗೆಯಲ್ಲಾಗಲಿ ತೋಟದ ಮೇಲಿಂದ ಬರುವ ನೀರು ನಿಲ್ಲದ ಹಾಗೆ ಮಾಡಿದೆ. ಕೆಲವು ಬಿಗಡಾಯಿಸಿದ ಮರ ತೆಗೆದು ಹೊಸ ಗಿಡ ಊರತಳಿ ನೆಟ್ಟೆ. ರೋಗ ಇಲ್ಲ. ಹಾಗಾಗಿ ನಾನೊಂದು ತೀರ್ಮಾನಕ್ಕೆ ಬಂದೆ. ಹಳದಿ ರೋಗಕ್ಕೆ ಕಾರಣ ಒಂದೇ ಅಲ್ಲ, ಹಳದಿರೋಗದಂತೆ ಕಾಣುವ ಎಲ್ಲವೂ ಹಳದಿ ರೋಗ ಅಲ್ಲ. ನೀರನ್ನು ಮಿತವಾಗಿ ನೀಡಿದರೆ ಒಂದು ವಿಧದ ಹಳದಿ ನಿಯಂತ್ರಣಕ್ಕೆ ಬರುತ್ತದೆ ಎಂದು. ಇದು ಮತ್ತೊಮ್ಮೆ ನಿಜವಾಗಿದೆ.

ಬೈಲು ಗದ್ದೆಗಳ ಸಾಲು ನಮಗೆ ನಾಲ್ಕು ಕುಟುಂಬಗಳಿಗೆ ಸೇರಿದ್ದು ಒಂದೇ ಸಾಲಿನಲ್ಲಿದೆ. ಇವನ್ನು ಕ್ರಮವಾಗಿ  1, 2 , 3, 4, 5 ಎಂದು ಗುರುತಿಸಿದರೆ, ಒಂದನೆ ತೋಟದಲ್ಲಿ ಕೃಷಿ ಇಲ್ಲ. ಇಲ್ಲ ಎಂದರೆ ಪೂರ್ತಿ ಸೊನ್ನೆ. ತೋಟ ಎನ್ನವುದಕ್ಕಿಂತ ಮೇಯುವ ದನಗಳ ಕಾಡು ಅದು. ಒಂದು ಫೀಟ್ ನಲ್ಲಿ ಬೇಸಿಗೆಯಲ್ಲೂ ನೀರಿದೆ. ಆದರೆ ಅಲ್ಲಿ ಹಳದಿ ರೋಗ ಇಲ್ಲ.

ಅದರ ಕೆಳಗಿನದ್ದು ಎರಡನೇ ತೋಟ, ಅದು ವ್ಯವಸ್ಥಿತ ಕೃಷಿ ತೋಟ , ಆದರೆ ರಾಸಾಯನಿಕ ಇಲ್ಲ ಈಗ 5 ವರ್ಷದ ಹಿಂದಿನಿಂದ ಲಕ್ಷಣ ಕಾಣಿಸಿದೆ. ಆದರೆ ಬಿಗಡಾಯಿಸಿಲ್ಲ. ನಿಧಾನಕ್ಕೆ ವ್ಯಾಪಿಸುತ್ತಿದೆ.

Advertisement

ಮೂರನೆಯದ್ದಕ್ಕೆ ವಿಚಿತ್ರ ನೀರಾವರಿ ವ್ಯವಸ್ಥೆ ಇದೆ. ಮಳೆಗಾಲ ಹೋಗುತ್ತಿದ್ದಂತೆ ತೋಡಿಗೆ ಕಟ್ಟ ಹಾಕಿ ನೀರು ನಿಲ್ಲಿಸಿದರೆ ಬೇಸಿಗೆಯಲ್ಲಿ ನೀರು ಅದಾಗಿ ಆರುವ ವರೆಗೆ ಅದು ನೆನೆಯುತ್ತಿರುತ್ತದೆ. ಇಲ್ಲಿ ಕಟ್ಟದ ಬುಡದಿಂದ ಅರ್ಧ ತೋಟದ ವರೆಗೆ ಹಳದಿ ಬಂದು ತೋಟ ನಾಶವಾಗಿದೆ. ಉಳಿದದ್ದು ಚೆನ್ನಾಗಿದೆ. ಆದರೆ ಕಟ್ಟ ಕಟ್ಟುವುದನ್ನುನಿಲ್ಲಿಸಿದ ಬಳಿಕ.

ನಾಲ್ಕನೆಯದ್ದು ಕೃಷಿಯಾಗುವ ತೋಟ. ಈಗ ಹಳದಿಯ ಲಕ್ಷಣ ಕಾಣುತ್ತದೆ. ಆದರೆ ಕೃಷಿಗೆ ರಾಸಾಯನಿಕ ಇಲ್ಲ.

ಐದನೆಯದ್ದು ಸಂಪೂರ್ಣ ನಾಶದತ್ತ ಸರಿದ ತೋಟ. ಕೃಷಿಕ್ರಮ ರಾಸಾಯನಿಕ ಮತ್ತು ಸಾವಯವ ಹಾಗೂ ಬೈಲು ಗದ್ದೆಯಾದರೂ ಬೇಸಿಗೆಯಲ್ಲಿ ವಿಪರಿತ ನೀರಾವರಿ. ಬೈಲು ಗದ್ದೆಗಳೆಂದರೆ ಮೂರುಬೆಳೆಯಾಗುವ ಗದ್ದೆಗಳು. ಆದರೆ ನಮ್ಮ ಕಡೆ ಗುಡ್ಡದಲ್ಲಿ ಮಾಡಿದ ಅಡಿಕೆತೋಟಗಳೂ ಸರ್ವನಾಶವಾಗಿವೆ.

ನೆನಪಿಡಬೇಕಾದ್ದು ನಿಸ್ಸಂದೇಹವಾಗಿ ಅವೆಲ್ಲವೂ ಹಟ್ಟಗೊಬ್ಬರದೊಂದಿಗೆ ಯಥೇಚ್ಛವಾಗಿ ರಸಾಯನಿಕ ಗೊಬ್ಬರ ತಿಂದ ತೋಟಗಳು. ನನಗನ್ನಿಸುವಂತೆ ಈ ನಡುವೆ ಎಲ್ಲೋ ಉತ್ತರವೊಂದಿದೆ. ಸ್ವಲ್ಪ ತಾಳ್ಮೆಯ ಅವಲೋಕನ ವಿಶ್ಲೇಷಣಿ ಬೇರೆಯದೇ ಒಂದು ಸತ್ಯವನ್ನು ಕಾಣಿಸಿದರೂ ಆಶ್ವರ್ಯ ಇಲ್ಲ. ನಾನು ತೋಟಕ್ಕೆ ಗೊಬ್ಬರ ಮತ್ತು ಅದು ಸಿಗದಿದ್ದಾಗ ಸೊಪ್ಪು ಮಾತ್ರ ಹಾಕುತ್ತಿದ್ದೆ. ಈಗಲೂ ಅದೆ ಕ್ರಮ. ಆದರೆ ಈಗ ಕೂಲಿಯಾಳುಗಳ ಅಲಭ್ಯತೆಯ ಕಾರಣಕ್ಕೆ ಆಡು ಗೊಬ್ಬರ ಮತ್ತು ಹಟ್ಟಿಗೊಬ್ಬರಕ್ಕೆ ಸೀಮಿತಗೊಂಡಿದ್ದೇನೆ.

ಹಳದಿರೋಗದಿಂದ ತೋಟ ನಾಶವಾಗುವುದಾದರೆ ಊರಿಗೆ ಬಂದದ್ದನ್ನು ನಾನು ತಡೆಯಲಾಗದಿದ್ದರೂ ತಡಮಾಡಿಸುವಲ್ಲಿ ಸಫಲನಾದೆ ಎಂದು ಸಮಾಧಾನ ಪಡಬಹುದು. ಇದರೊಂದಿಗೆ ಅದೆ ಸ್ಥಳದಲ್ಲಿ ಪರ್ಯಾಯ ಬೆಳೆಗೆ ಅಡಿಪಾಯ ಹಾಕಲಾರಂಭಿಸಿದ್ದೇನೆ. ಕಾರಣ ನನ್ನ ತೋಟದ ನೆಲದ ಎರೆಹುಳ ಮಣ್ಣು ತಿಂದು ಬದುಕಬಹುದು; ಆದರೆ ನನಗದು ಸಾಧ್ಯವಿಲ್ಲವಲ್ಲ?!.

Advertisement

ಹಾಗಂತ ಸರಕಾರ ಕಡೆ ಪರ್ಯಾಯ ಬೆಳೆಗೆ ಸಹಾಯಕ್ಕಾಗಿ ಕೈಚಾಚುವುದು ನನಗಾಗದು. ಯಾಕೆಂದರೆ ಕಾಡು ಗುಡ್ಡ ಕಣಿವೆಯನ್ನು ಕಡಿದು ಗದ್ದೆಮಾಡಿದಾಗ ನನ್ನ ಹಿರಿಯರು ಸರಕಾರದ ಸಹಾಯ ಕೇಳಿರಲಿಲ್ಲ. ಗದ್ದೆಗೆ ತೋಟ ಹಾಕಿ ದುಡ್ಡುಮಾಡಹೊರಟಾಗ ನಾವು ಸರಕಾರದ ಸಹಾಯ ಕೇಳಿರಲಿಲ್ಲ. ಅಂದಮೇಲೆ ಅಡಿಕೆ ಹೋಗಿ ಬೇರೇನಾದರೂ ಮಾಡುವಾಗ ಸರಕಾರದ ಸಹಾಯವನ್ನೇಕೆ ಕೇಳಬೇಕು?

# ಕರುಣಾಕರ ಎನ್‌ ವಿ

Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಪಶು ಆಹಾರ : ಈ ವಿಷಯ ನಿಮಗೆ ತಿಳಿದಿರಲಿ !
June 24, 2025
10:26 AM
by: ದ ರೂರಲ್ ಮಿರರ್.ಕಾಂ
ದೇಸೀ ಗೋವು ಸಾಕಾಣಿಕೆಗೆ ಹಳ್ಳಿಯಷ್ಟೇ ಅಲ್ಲ, ನಗರದಲ್ಲೂ ಸಾಧ್ಯ
June 23, 2025
1:18 PM
by: ದ ರೂರಲ್ ಮಿರರ್.ಕಾಂ
ಅಡಿಕೆ ಮಾರುಕಟ್ಟೆ ಏನಾಯ್ತು..? | ವಿಘ್ನೇಶ್ವರ ಭಟ್‌ ವರ್ಮುಡಿ ಅವರ ವಿಶ್ಲೇಷಣೆ …
May 22, 2025
8:43 PM
by: The Rural Mirror ಸುದ್ದಿಜಾಲ
ಜೇನು ಕುಟುಂಬ ಉಳಿಸುವ ಅಭಿಯಾನ | ನಾಶವಾಗುವ ಮುನ್ನ ಎಚ್ಚೆತ್ತುಕೊಳ್ಳೋಣ
April 9, 2025
11:00 AM
by: ಎ ಪಿ ಸದಾಶಿವ ಮರಿಕೆ

You cannot copy content of this page - Copyright -The Rural Mirror

Join Our Group