ಅಡಿಕೆ ಪತ್ರಿಕೆಯ 35ನೇ ವರ್ಷಾಚರಣೆಗೆ ಚಾಲನೆ | ಶ್ರೀ ಪಡ್ರೆ ಅವರ ‘ಅಡಿಕೆ ಚೊಗರು’ ಪುಸ್ತಕ ಬಿಡುಗಡೆ | ಅಡಿಕೆ ಬಳಕೆಯ ಬಗ್ಗೆ ತಪ್ಪುಕಲ್ಪನೆ ಬೇಡ ಎಂದ ಸಂಶೋಧನಾ ಸಂಸ್ಥೆ ಅಟಾರಿ ನಿರ್ದೇಶಕ |

January 30, 2023
1:21 PM

ರಾಜ್ಯದಲ್ಲಿ ಅಡಿಕೆ ಬೆಳೆಯುವ ಹನ್ನೊಂದು ಜಿಲ್ಲೆಗಳಲ್ಲಿ ಅಡಿಕೆಯ ಮೌಲ್ಯವರ್ಧನೆ ಪ್ರಯೋಗಗಳಿಗೆ ಬೆಂಬಲ ನೀಡುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು ಎಂದು ಕೇಂದ್ರ ಸರ್ಕಾರದ ಕೃಷಿ ತಂತ್ರಜ್ಞಾನ ಅನ್ವಯಿಕ ಸಂಶೋಧನಾ ಸಂಸ್ಥೆ – ಅಟಾರಿ ನಿರ್ದೇಶಕ ಡಾ. ವಿ. ವೆಂಕಟಸುಬ್ರಮಣಿಯನ್ ಹೇಳಿದ್ದಾರೆ. ಅಡಿಕೆ ಬಳಕೆಯ ಬಗ್ಗೆ ತಪ್ಪುಕಲ್ಪನೆಗಳು ದೂರವಾಗಿ ಅದರ ಉಪ ಉತ್ಪನ್ನಗಳ ಬಳಕೆ ಹೆಚ್ಚಿಸುವ ಬಗ್ಗೆ ಗಮನಹರಿಸಬೇಕಿದೆ ಎಂದು ಪ್ರತಿಪಾದಿಸಿದ್ದಾರೆ.

Advertisement

ಅವರು ಪುತ್ತೂರು ಸಮೀಪದ ಪರ್ಪುಂಜದ ಸೌಗಂಧಿಕದಲ್ಲಿ ನಿನ್ನೆ ಅಡಿಕೆ ಪತ್ರಿಕೆಯ 35ನೇ ವರ್ಷಾಚರಣೆಗೆ ಚಾಲನೆ ನೀಡಿ ಮಾತನಾಡಿ, ಸ್ಥಳೀಯ ಸಂಪನ್ಮೂಲ ಮತ್ತು ತಂತ್ರಜ್ಞಾನಗಳು ಹೆಚ್ಚುಹೆಚ್ಚು ಬಳಕೆಗೆ ಬರಬೇಕು; ನಗರಗಳಿಂದ ಗ್ರಾಮಗಳಿಗೆ ಆದಾಯದ ಹರಿವಿರಬೇಕು; ಜಲಸಂರಕ್ಷಣೆ, ಹಲಸು, ಬಾಕಾಹು, ಚೊಗರು ಅಭಿಯಾನ ನಡೆಸಿದ ಅಡಿಕೆ ಪತ್ರಿಕೆ ತಂಡದ ಕಾರ್ಯ ಶ್ಲಾಘನೀಯ ಎಂದರು.

ಹಿರಿಯ ಸಾಹಿತಿ, ಕೃಷಿ ಲೇಖಕ ಡಾ. ನರೇಂದ್ರ ರೈ ದೇರ್ಲ ಅವರು ಶ್ರೀ ಪಡ್ರೆ ಅವರ ‘ಅಡಿಕೆ ಚೊಗರು; ಹೊಸ ನಿರೀಕ್ಷೆಗಳ ಚಿಗುರು’ ಪುಸ್ತಕ ಬಿಡುಗಡೆ ಮಾಡಿ, ನಿಸರ್ಗಕ್ಕೆ ಪೂರಕವಾಗಿಯೆ, ಪರಂಪರಾಗತ ಕೌಶಲ್ಯವನ್ನೊಳಗೊಂಡು ಚೊಗರು ತಯಾರಿಕೆ ಕ್ರಮ ಶತಮಾನಗಳಿಂದ ಬೆಳೆದುಬಂದಿದೆ; ಪಡ್ರೆಯವರು ಈ ಕ್ಷೇತ್ರದ ಒಳಹೊರಗನ್ನು ಅರ್ಥಪೂರ್ಣವಾಗಿ ವಿಶದಪಡಿಸಿದ್ದಾರೆ ಎಂದರು.

ಶ್ರೀ ಪಡ್ರೆ ಅವರು, ಮಲೆನಾಡಿನ ಕೆಲಭಾಗಗಳಲ್ಲಿ ಕೆಂಪಡಿಕೆ ಸಂಸ್ಕರಣೆ ವೇಳೆ ಸಹಜವಾಗಿಯೆ ಲಭಿಸುವ ಚೊಗರು ನೈಸರ್ಗಿಕ ಬಟ್ಟೆ ಬಣ್ಣ ಮಾತ್ರವಲ್ಲ, ಗೆದ್ದಲುನಾಶಕ ಮತ್ತಿ ಶಿಲೀಂಧ್ರನಾಶಕವೂ ಹೌದು; ಈ ಬಹೂಪಯೋಗಿ ಉತ್ಪನ್ನ ಸಾಕಷ್ಟು ವಾಣಿಜ್ಯಿಕ ಅವಕಾಶಗಳನ್ನು ತೆರೆದಿಟ್ಟಿದ್ದು ಇದನ್ನು ಬಳಸಿಕೊಳ್ಳಲು ಉತ್ಸಾಹಿ ನವೋದ್ಯಮಿಗಳು ಮುಂದೆಬರಬೇಕು ಎಂದು ಆಶಿಸಿದರು. ಅಡಿಕೆ ಕೃಷಿ ವ್ಯಾಪಕವಾಗಿ ಹಬ್ಬಿದ್ದರೂ ಚೊಗರಿನ ಬಳಕೆಯ ಬಗ್ಗೆ ಜನರಿಗೆ ಹೆಚ್ಚಿಗೆ ತಿಳಿದಿಲ್ಲ; ಅಡಿಕೆ ಪತ್ರಿಕೆ ವತಿಯಿಂದ 20ಕ್ಕೂ ಹೆಚ್ಚು ಸಂಸ್ಥೆ-ಕಂಪೆನಿಗಳಿಗೆ ಚೊಗರಿನ ಮಾದರಿ ಕಳುಹಿಸಿದ್ದು, ವಿವಿಧ ಪ್ರಯೋಗಗಳು ನಡೆಯುತ್ತಿವೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಫಾರ್ಮರ್ ಫಸ್ಟ್ ಟ್ರಸ್ಟಿನ ಅಧ್ಯಕ್ಷ ಪಡಾರು ರಾಮಕೃಷ್ಣ ಶಾಸ್ತ್ರಿ ಮಾತನಾಡಿ, ಮಣ್ಣಿನ ಬಣ್ಣದ ಅಡಿಕೆ ಚೊಗರು ನಮ್ಮ ಹೆಮ್ಮೆಯ ಬಣ್ಣವಾಗಬೇಕು; ಈ ನಿಟ್ಟಿನಲ್ಲಿ ಕಳೆದ ಆರೇಳು ತಿಂಗಳಿಂದ ಅಡಿಕೆ ಪತ್ರಿಕೆ ಸತತವಾಗಿ ಅಧ್ಯಯನ ನಡೆಸುತ್ತ ಬಂದಿದ್ದು ಹಲವಾರು ಲೇಖನಗಳನ್ನು ಪ್ರಕಟಿಸಿದೆ ಎಂದರು.

Advertisement

ಗಣ್ಯರು ಬಿಳಿಹಾಳೆಗೆ ಅಡಿಕೆ ಚೊಗರು ಎರಚಿ ಅದರ ಗಾಢ ಕಂದು ಬಣ್ಣವನ್ನು ಸಭಿಕರಿಗೆ ಪರಿಚಯಿಸಿದ್ದು ವಿಶೇಷವಾಗಿತ್ತು. ಅಡಿಕೆ ಪತ್ರಿಕೆಯ 35ನೇ ವರ್ಷಾಚರಣೆ ಅಂಗವಾಗಿ ಪತ್ರಿಕೆಯ ಹಿತೈಷಿ, ಲೇಖಕ ತುಮಕೂರಿನ ಹೆಚ್.ಜೆ. ಪದ್ಮರಾಜು ತೋವಿನಕೆರೆ ಅವರನ್ನು ಗೌರವಿಸಲಾಯಿತು. ಚೊಗರಿನ ವಿವಿಧ ಆಯಾಮಗಳನ್ನು ತಿಳಿಸುವ ಭಿತ್ತಿಚಿತ್ರಗಳು ಹಾಗೂ ಈ ಬಣ್ಣ ಬಳಸಿದ ಬುಗುರಿ ಇನ್ನಿತರ ಆಟಿಕೆಗಳು, ಗುಳೇದಗುಡ್ಡ ರವಿಕೆ ಖಣ, ಟವೆಲ್, ಶಾಲು, ಸಾಬೂನುದ್ರಾವಣ ಇತ್ಯಾದಿಗಳ ಪ್ರದರ್ಶನ ಗಮನಸೆಳೆಯಿತು.

ಚಂದ್ರ ಸೌಗಂಧಿಕ, ಮಾಧವ ಕಲ್ಲಾರೆ ಚೊಗರಿನ ಬಗ್ಗೆ ಹಾಡು ಸಾದರಪಡಿಸಿದರು. ಅರವಿಂದ ಕುಡ್ಲ ಪರಿಸರ ಗೀತೆ ಹಾಡಿದರು. ಆರಂಭದಲ್ಲಿ ಕೃಷಿ ಮಾಧ್ಯಮ ಕೇಂದ್ರದ ಶಿವರಾಂ ಪೈಲೂರು ಸ್ವಾಗತಿಸಿದರು. ಚಂದ್ರ ಸೌಗಂಧಿಕ ವಂದಿಸಿದರು.

ಅಡಿಕೆ ಪತ್ರಿಕೆ ಸಂಪಾದಕೀಯ ಮಂಡಳಿಯ ಸದಸ್ಯರಾದ ಎಂ.ಜಿ. ಸತ್ಯನಾರಾಯಣ, ಕಿನಿಲ ಅಶೋಕ್ ಹಾಗೂ ಗೇರು ಸಂಶೋಧನಾ ನಿರ್ದೇಶನಾಲಯದ ಪ್ರಧಾನ ವಿಜ್ಞಾನಿ ಡಾ. ಮೋಹನ್ ತಲಕಾಲುಕೊಪ್ಪ, ಮಂಗಳೂರು ಕೆವಿಕೆ ಮುಖ್ಯಸ್ಥ ಡಾ. ಟಿ.ಜೆ. ರಮೇಶ್, ಕ್ಯಾಂಪ್ಕೋ ಮಾಜಿ ಅಧ್ಯಕ್ಷ ಕೊಂಕೋಡಿ ಪದ್ಮನಾಭ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಅಮರನಾಥ ಯಾತ್ರೆ ಹಿನ್ನೆಲೆ | ಜುಲೈ 1 ರಿಂದ ಆಗಸ್ಟ್  ತಿಂಗಳವರೆಗೆ ಅಮರನಾಥ ಹಾರಾಟ ನಿಷೇಧ ವಲಯ
June 18, 2025
3:37 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 18-06-2025 | ರೈತರೇ ಗಮನಿಸಿ- ಜೂ.21 ರವರೆಗೆ ಮಳೆ ಕಡಿಮೆ ಇರಲಿದೆ | ಔಷಧಿ ಸಿಂಪಡಣೆಗೆ ಸಿಗಬಹುದು ಅವಕಾಶ |
June 18, 2025
12:35 PM
by: ಸಾಯಿಶೇಖರ್ ಕರಿಕಳ
ಹಂಸ ಮಹಾಪುರುಷ ರಾಜಯೋಗ | ಈ 3 ರಾಶಿಯವರಿಗೆ ಸಂಪತ್ತಿನ ಸುರಿಮಳೆ..!
June 18, 2025
6:50 AM
by: ದ ರೂರಲ್ ಮಿರರ್.ಕಾಂ
ರಾಜ್ಯದ 6 ಕಡೆ ಕೌಶಲ್ಯ ಪ್ರಯೋಗಾಲಯ ನಿರ್ಮಿಸಲು ಸರ್ಕಾರ ನಿರ್ಧಾರ
June 17, 2025
10:15 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group