ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯ ಕೇಂದ್ರದ ಸಮಗ್ರ ಕೀಟ ನಿರ್ವಹಣಾ ಕೇಂದ್ರಗಳು ನಡೆಸಿದ ಸಮೀಕ್ಷೆಗಳ ಪ್ರಕಾರ, 2022-23 ರಿಂದ 2024-25 ರ ಅವಧಿಯಲ್ಲಿ ಕರ್ನಾಟಕದ ಮಲೆನಾಡು ಪ್ರದೇಶದಲ್ಲಿ ಅಡಿಕೆಯ ಮೇಲೆ ಪರಿಣಾಮ ಬೀರುವ ಅಡಿಕೆ ಕೊಳೆರೋಗ , ಎಲೆ ಚುಕ್ಕೆ ರೋಗಕ್ಕೆ ಸಂಬಂಧಿಸಿದ ಪ್ರಕರಣಗಳು ಕಂಡುಬಂದಿವೆ. ಆದರೆ ಪ್ರಸ್ತುತ ವರ್ಷ ಅಂದರೆ 2025-26 ರಲ್ಲಿ ಇಲ್ಲಿಯವರೆಗೆ ಕೊಳೆರೋಗ ಮತ್ತು ಎಲೆ ಚುಕ್ಕಿ ರೋಗ ಯಾವುದೇ ಪ್ರಕರಣಗಳು ವರದಿಯಾಗಿಲ್ಲ ಎಂದು ಕೇಂದ್ರ ಕೃಷಿ ಸಚಿವಾಲಯ ತಿಳಿಸಿದೆ.
ಸಂಸದ ಬಿ ವೈ ರಾಘವೇಂದ್ರ ಅವರು ಲೋಕಸಭಾ ಅಧಿವೇಶನದಲ್ಲಿ ಅಡಿಕೆ ಹಾನಿಯ ಬಗ್ಗೆ ಕೇಳಿರುವ ಪ್ರಶ್ನೆಗೆ ಕೃಷಿ ಸಚಿವಾಲಯ ಉತ್ತರ ನೀಡಿದೆ. ಅವರು ಕರ್ನಾಟಕದ ಶಿವಮೊಗ್ಗ ಜಿಲ್ಲೆ ಸೇರಿದಂತೆ ಮಲೆನಾಡು ಪ್ರದೇಶದಲ್ಲಿಅಡಿಕೆ ಕೊಳೆರೋಗ, ಎಲೆ ಚುಕ್ಕೆ ರೋಗ ಮತ್ತು ಹಳದಿ ಎಲೆ ರೋಗಗಳಿಂದಾಗಿ ಅಡಿಕೆ ಬೆಳೆಗೆ ಉಂಟಾದ ಹಾನಿಯ ಬಗ್ಗೆ ಸರ್ಕಾರದ ಮಾಹಿತಿಯನ್ನು ಕೋರಿದ್ದರು.
ಇದೇ ವೇಳೆ ಕಳೆದ ಮೂರು ವರ್ಷಗಳಲ್ಲಿ ಅಡಿಕೆ ಕೊಳೆರೋಗ, ಎಲೆ ಚುಕ್ಕೆ ರೋಗಗಳಿಂದಾಗಿ ಶಿವಮೊಗ್ಗ ಜಿಲ್ಲೆಯಲ್ಲಿ ಆಗಿರುವ ಆರ್ಥಿಕ ನಷ್ಟದ ಬಗ್ಗೆಯೂ ಕೇಳಿದ್ದರು, ಇದಕ್ಕೆ ನೀಡಿದ ಮಾಹಿತಿಯಂತೆ 2022-23 ರಲ್ಲಿ ಒಟ್ಟು 1,18,836 ಹೆಕ್ಟೇರ್ ಪ್ರದೇಶದದ ಅಡಿಕೆ ತೋಟದಲ್ಲಿ 5991.3 ಹೆಕ್ಟೇರ್ ಪ್ರದೇಶ ಎಲೆಚುಕ್ಕಿ ರೋಗದಿಂದ ಹಾನಿಯಾಗಿ 14.9 ಕೋಟಿ ನಷ್ಟವಾಗಿದೆ. 6720.1 ಹೆಕ್ಟೇರ್ ಪ್ರದೇಶ ಕೊಳೆರೋಗದಿಂದ ಹಾನಿಯಾಗಿ 16.8 ಕೋಟಿ ನಷ್ಟವಾಗಿದೆ.
2023-24 ರಲ್ಲಿ ಒಟ್ಟು 1,25,456 ಹೆಕ್ಟೇರ್ ಪ್ರದೇಶದದ ಅಡಿಕೆ ತೋಟದಲ್ಲಿ 11950 ಹೆಕ್ಟೇರ್ ಪ್ರದೇಶ ಎಲೆಚುಕ್ಕಿ ರೋಗದಿಂದ ಹಾನಿಯಾಗಿ 31.3 ಕೋಟಿ ನಷ್ಟವಾಗಿದೆ. 8800 ಹೆಕ್ಟೇರ್ ಪ್ರದೇಶ ಕೊಳೆರೋಗದಿಂದ ಹಾನಿಯಾಗಿ 23 ಕೋಟಿ ನಷ್ಟವಾಗಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ.
2024-25 ರಲ್ಲಿ ಒಟ್ಟು 1,37,410 ಹೆಕ್ಟೇರ್ ಪ್ರದೇಶದದ ಅಡಿಕೆ ತೋಟದಲ್ಲಿ 30630 ಹೆಕ್ಟೇರ್ ಪ್ರದೇಶ ಎಲೆಚುಕ್ಕಿ ರೋಗದಿಂದ ಹಾನಿಯಾಗಿ 136.3 ಕೋಟಿ ನಷ್ಟವಾಗಿದೆ. 37383.4 ಹೆಕ್ಟೇರ್ ಪ್ರದೇಶ ಕೊಳೆರೋಗದಿಂದ ಹಾನಿಯಾಗಿ 166.3 ಕೋಟಿ ನಷ್ಟವಾಗಿದೆ. …… ಮುಂದೆ ಓದಿ……
ಎಲೆಚುಕ್ಕಿ ರೋಗ ಹಾಗೂ ಹಳದಿ ಎಲೆರೋಗ ಪರಿಹಾರ ಕ್ರಮದ ಅಂಗವಾಗಿ, 2022 ರಲ್ಲಿ ಅಡಿಕೆ ರೈತರ ಮೇಲೆ ಪರಿಣಾಮ ಬೀರುವ ಹಳದಿ ಎಲೆ ರೋಗ ಮತ್ತು ಎಲೆ ಚುಕ್ಕೆ ರೋಗ ಸೇರಿದಂತೆ ವಿವಿಧ ಸಮಸ್ಯೆಗಳನ್ನು ಪರಿಹರಿಸಲು ರಾಷ್ಟ್ರೀಯ ವೈಜ್ಞಾನಿಕ ಸಮಿತಿ ರಚಿಸಲಾಗಿತ್ತು. ವಿವರವಾದ ಕ್ಷೇತ್ರ ಅಧ್ಯಯನಗಳು, ಸಮಾಲೋಚನೆಗಳು ಮತ್ತು ವೈಜ್ಞಾನಿಕ ಮೌಲ್ಯಮಾಪನಗಳ ಆಧಾರದ ಮೇಲೆ, ಸೂಕ್ತ ಪೋಷಕಾಂಶ ನಿರ್ವಹಣೆ ಮತ್ತು ಶಿಲೀಂಧ್ರನಾಶಕ ಅನ್ವಯಿಕೆಗಳ ಮೂಲಕ ಎಲೆಚುಕ್ಕಿ ರೋಗ ಸಮಗ್ರ ನಿರ್ವಹಣೆಯನ್ನು ಶಿಫಾರಸು ಮಾಡುವ ತನ್ನ ಅಂತಿಮ ವರದಿಯನ್ನು ಸಲ್ಲಿಸಲಾಗಿದೆ. ಹಳದಿ ಎಲೆರೋಗ ನಿವಾರಣೆಗೆ ರೋಗ ನಿರೋಧಕ ತಳಿಯನ್ನು ಗುರುತಿಸಿ ಮತ್ತು ಅಂಗಾಂಶ ಕೃಷಿಯ ಮೂಲಕ ಅವುಗಳನ್ನು ಪ್ರಸಾರ ಮಾಡಲು ದೀರ್ಘಕಾಲೀನ ಕಾರ್ಯತಂತ್ರವನ್ನು ರೂಪಿಸಲಾಗಿದೆ ಎಂದು ಸಚಿವಾಲಯ ಇದೇ ವೇಳೆ ಉತ್ತರ ನೀಡಿದೆ.
ಎಲೆಚುಕ್ಕಿ ರೋಗಕ್ಕೆ ಸಂಬಂಧಿಸಿದಂತೆ ಅಡಿಕೆ ಮತ್ತು ಸಾಂಬಾರ ಅಭಿವೃದ್ಧಿ ನಿರ್ದೇಶನಾಲಯ 2024-25 ರಿಂದ ಕರ್ನಾಟಕದ 4 ಜಿಲ್ಲೆಗಳ (ಶಿವಮೊಗ್ಗ, ಚಿಕ್ಕಮಗಳೂರು, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ) 10 ತಾಲೂಕುಗಳಲ್ಲಿ ಅಡಿಕೆ ತೋಟಗಳಲ್ಲಿ ಎಲೆ ಚುಕ್ಕೆ ರೋಗದ ಸಮುದಾಯ ಆಧಾರಿತ ನಿರ್ವಹಣೆಯ ಕುರಿತು ದೊಡ್ಡ ಪ್ರಮಾಣದ ಪ್ರಾತ್ಯಕ್ಷಿಕೆಯನ್ನು ಪೀಡಿತ ಪ್ರದೇಶದ ಆಯ್ದ ರೈತರ ಹೊಲಗಳಲ್ಲಿ ನಡೆಸುತ್ತಿದೆ. ಇದಕ್ಕಾಗಿ ಮೂರು ವರ್ಷಗಳ ಅವಧಿಗೆ 6.316 ಕೋಟಿ ರೂ.ಗಳನ್ನು ಮಂಜೂರು ಮಾಡಲಾಗಿದೆ ಎಂದೂ ಕೃಷಿ ಸಚಿವಾಲಯವು ಸಂಸದರಿಗೆ ಉತ್ತರದಲ್ಲಿ ಮಾಹಿತಿ ನೀಡಿದೆ.
ಅಡಿಕೆ ಬೆಳೆಗಾರರಿಗೆ ಎಲ್ಲಾ ರೀತಿಯ ಸಮಸ್ಯೆಗಳಿಗಾಗಿ , ಮುಂಗಾರು ಮತ್ತು ಮಳೆಗಾಲದ ನಂತರದ ಅವಧಿಯ ಹಾನಿಗಾಗಿ ಪುನರ್ರಚಿಸಿದ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ ಅಡಿಯಲ್ಲಿ ಜಿಲ್ಲೆಗಳಲ್ಲಿ ಅಡಿಕೆ ಬೆಳೆಯನ್ನು ಅಧಿಸೂಚಿಸಲಾಗಿದೆ ಮತ್ತು ಹವಾಮಾನ ವೈಪರೀತ್ಯದಿಂದಾಗಿ ಬೆಳೆ ನಷ್ಟವಾದರೆ ಈ ಯೋಜನೆಯಡಿಯಲ್ಲಿ ವಿಮಾ ಪರಿಹಾರವನ್ನು ನೀಡಲಾಗುತ್ತಿದೆ ಎಂದು ಹೇಳಿದೆ. 2025-26 ರಲ್ಲಿ, ಈ ಯೋಜನೆಯ ಅಡಿಯಲ್ಲಿ ಒಟ್ಟು 6,52,440 ಅಡಿಕೆ ವಿಮೆ ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, ಅದರಲ್ಲಿ 1,18,345 ಶಿವಮೊಗ್ಗ ಜಿಲ್ಲೆಯಿಂದ ಬಂದಿವೆ ಎಂದು ಸಂಸದರಿಗೆ ಉತ್ತರ ನೀಡಲಾಗಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ.


