ಬಿಸಿಲಿನ ತಾಪದ ನಡುವೆ ಅಡಿಕೆ ಬೆಳೆಗಾರರಿಗೆ ಮತ್ತೊಂದು ತಲೆನೋವು | ಹರಡುತ್ತಿರುವ ನುಸಿ ಬಾಧೆ | ಹತೋಟಿ ಕ್ರಮಗಳ ಬಗ್ಗೆ ವಿಜ್ಞಾನಿಗಳು ಮಾಹಿತಿ ಹೇಳಿದ್ದಾರೆ… |

April 7, 2023
10:08 AM
ಬಿಸಿಲಿನ ತಾಪ ಏರುತ್ತಿದ್ದಂತೆಯೇ ಇದೀಗ ಅಡಿಕೆ ಬೆಳೆಯಲ್ಲಿ ನುಸಿ ಬಾಧೆಯೂ ಹೆಚ್ಚಾಗಿದೆ. ಕೆಲವು ಕಡೆ ಎಳೆ ಅಡಿಕೆ ಬೀಳುವುದಕ್ಕೆ ಆರಂಭವಾಗಿದೆ, ಇನ್ನೂ ಕೆಲವು ಕಡೆ ಅಡಿಕೆ ಮರದ ಸೋಗೆಗಳಲ್ಲಿ ಸಮಸ್ಯೆ ಕಾಣುತ್ತಿದೆ. ಈ ಬಗ್ಗೆ ಹಲವು ಬೆಳೆಗಾರರು ಸಮಸ್ಯೆ ಪರಿಹಾರದ ಬಗ್ಗೆ ಕೇಳುತ್ತಿದ್ದಾರೆ. ಸಿ.ಪಿ.ಸಿ.ಆರ್.ಐ. ವಿಟ್ಲದ ಕೀಟಶಾಸ್ತ್ರ ವಿಜ್ಞಾನಿ ಡಾ. ಮಧು, ಟಿ.ಎನ್. ಅವರು ಕೃಷಿಕರ ಮೈಟ್ ಕುರಿತ ಪ್ರಶ್ನೆಯೊಂದಕ್ಕೆ ಸಾಮಾಜಿಕ ಜಾಲದಲ್ಲಿ ನೀಡಿದ ಉತ್ತರದ ಯಥಾವತ್ತಾದ ರೂಪ ಇಲ್ಲಿದೆ

ಇತ್ತೀಚಿನ ದಿನಗಳಲ್ಲಿ ನುಸಿ ಬಾಧೆಯೂ ಅಡಿಕೆ ಬೆಳೆಯಲ್ಲಿ ತೀವ್ರವಾಗಿ ಹರಡುತ್ತಿದ್ದು ಅಡಿಕೆ ಕೃಷಿಕರಿಗೆ ತಲೆ ನೋವಾಗಿ ಪರಿಣಮಿಸಿದೆ. ಅಡಿಕೆ ಬೆಳೆಯಲ್ಲಿ ಎರಡು ರೀತಿಯ ನುಸಿ ಕಂಡು ಬರುತ್ತದೆ, ಅದು ಬಿಳಿ ನುಸಿ ಮತ್ತು ಕೆಂಪು ನುಸಿ. ಸಾಮಾನ್ಯವಾಗಿ ಈ ನುಸಿಗಳು ಬೇಸಿಗೆಯಲ್ಲಿ ಹೆಚ್ಚಾಗಿ ಕಂಡುಬರುತ್ತದೆ, ಏಕೆಂದರೆ ಇದರ ಸಂತಾನೋತ್ಪತ್ತಿ ಮತ್ತು ಇನ್ನಿತರ ಚಟುವಿಕೆಗಳಿಗಾಗಿ ಉಷ್ಣತೆ ಅನಿವಾರ್ಯ. ದ್ಯುತಿ ಸಂಶ್ಲೇಷಣೆ ಕ್ರೀಯೆಯಲ್ಲಿ  ವ್ಯತ್ಯಾಸಗೊಂಡು ಸಸಿಗಳು ಸಾಯಲೂಬಹುದು
ಈ ನುಸಿಗಳು ಕೇವಲ 15-25 ದಿನಗಳಲ್ಲಿ ತಮ್ಮ ಜೀವನಚಕ್ರವನ್ನು ಪೂರ್ಣಗೊಳಿಸುತ್ತವೆ.

ಈ ನುಸಿಗಳು ಸೂರ್ಯನ ನೇರ ಕಿರಣಗಳನ್ನು ತಪ್ಪಿಸಿಕೊಳ್ಳಲು ಎಲೆಯ ಕೆಳ ಭಾಗದಲ್ಲಿ ಧಾಳಿ ಮಾಡಿ ಎಲೆಯ ಪತ್ರ ಹರಿತ್ತನ್ನು ತಿನ್ನುತ್ತವೆ…. ಕ್ರಮೇಣವಾಗಿ ಎಲೆಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ, ತೀವ್ರತೆ ಹೆಚ್ಚಾದಂತೆ ಎಲೆಗಳು ಒಣಗಳುತ್ತವೆ. ಇದರ ಪರಿಣಾಮದಿಂದ ದ್ಯುತಿ ಸಂಶ್ಲೇಷಣ ಕ್ರಿಯೆಗೆ ಅಡ್ಡಿಯಾಗಿ ಅಡಿಕೆ ಬೆಳೆಯಲ್ಲಿನ ಇಳುವರಿ ಕುಂಠಿತ ಗೊಳ್ಳುತ್ತದೆ ಮತ್ತು ಸಾಯಲು ಬಹುದು. ಈ ನುಸಿಗಳು ತಮ್ಮ ಜೀವನ ಚಕ್ರವನ್ನು 15 -25 ದಿನಗಳಲ್ಲಿ ಪೂರ್ಣಗೊಳಿಸುತ್ತವೆ. ವಾತಾವರಣ ವೈಪರೀತ್ಯದಿಂದ ಇದರ ಹಾವಳಿ ಹೆಚ್ಚಾಗುತ್ತಿದೆ.

ಗುರುತಿಸುವುದು ಹೇಗೆ: ನುಸಿ ಅಥವಾ ಮೈಟ್ ಅತ್ಯಂತ ಸಣ್ಣ ಗಾತ್ರವನ್ನು ಹೊಂದಿದ್ದು, ಬರಿಗಣ್ಣಿನಲ್ಲಿ ಸುಲಭವಾಗಿ ಗುರುತಿಸುವುದು ಕಷ್ಟ. ಬಿಳಿ ನುಸಿಯು ಬಿಳಿ ಬಣ್ಣದ ಬಲೆಯೊಳಗೆ ಅವಿತುಕೊಂಡು ರಸಹೀರುತ್ತವೆ. ಹಾಗಾಗಿ, ಬೆರಳ ತುದಿಯಿಂದ ಅಡಿಕೆ ಎಲೆಯ ಅಡಿ ಭಾಗವನ್ನು ಉಜ್ಜಿದಾಗ ಬಿಳಿ ಬಣ್ಣದ ಬಲೆ ಅಥವಾ ಕೆಂಪು ಬಣ್ಣ ಬೆರಳ ತುದಿಗೆ ಅಂಟಿಕೊಂಡರೆ ಮೈಟ್ ಕೀಟವೆಂದು ಗುರುತಿಸಬಹುದು.

ನಿರ್ವಹಣೆ ಹೇಗೆ?/ಹತೋಟಿ ಕ್ರಮಗಳು:   ಏಪ್ರಿಲ್ – ಮೇ ತಿಂಗಳಲ್ಲಿ ಈ ಕೀಟದ ಬಾಧೆ ಹೆಚ್ಚಿದ್ದು, ಮಳೆಗಾಲದಲ್ಲಿ ಕಡಿಮೆ ಆಗುತ್ತದೆ. ಪೊಟ್ಯಾಸಿಯಂ ಸೇರಿದಂತೆ ಇತರ ಪೋಷಕಾಂಶಗಳ ಸಮತೋಲಿತ ನಿರ್ವಹಣೆ, ನೀರುಣಿಸುವುದು ಹಾಗೂ ಸಸಿಗಳಿಗೆ ನೆರಳು ಒದಗಿಸುವುದು ಮೈಟ್ ಬಾಧೆಯನ್ನು ಕಡಿಮೆ ಮಾಡಲು ಸಹಕಾರಿ.

ಏಪ್ರಿಲ್ – ಮೇ ತಿಂಗಳಲ್ಲಿ ಅಡಿಕೆ ಸಸಿ ಮತ್ತು ಮರಗಳನ್ನು ಸರಿಯಾಗಿ ಗಮನಿಸುತ್ತಿರಬೇಕು. ಪ್ರಾರಂಭಿಕ ಹಂತದಲ್ಲಿಯೇ ಮೈಟ್ / ನುಸಿಯನ್ನು ಗುರುತಿಸಿ,  NSKE 10000 ppm (ಬೇವಿನ ಬೀಜದ ಉತ್ಪನ್ನ) ಅನ್ನು ಒಂದು ಲೀಟರ್ ನೀರಿಗೆ 5 ಎಂ.ಎಲ್ ಪ್ರಮಾಣದಲ್ಲಿ ಅಥವಾ ಗಂಧಕದ ಹುಡಿ (Wettable Sulfur) ಅನ್ನು ಪ್ರತೀ ಲೀಟರ್ ನೀರಿಗೆ 2ಗ್ರಾಂ ಪ್ರಮಾಣದಂತೆ ಎಲೆಯ ಕೆಳಭಾಗಕ್ಕೆ ಸಿಂಪಡಿಸಬೇಕು. ಇವೆರಡು ಬಳಕೆಗೆ ಸುರಕ್ಷಿತ.

ಹೆಚ್ಚಿನ ಬಾಧೆಯಿದ್ದರೆ ಅಥವಾ ತೀವ್ರತೆ ಹೆಚ್ಚು ಇರುವ ಪ್ರದೇಶಗಳಲ್ಲಿ 2 ಬಾರಿ (15 ದಿನಗಳ ಅಂತರದಲ್ಲಿ) ಸ್ಪೈರೋಮೆಸಿಫೆನ್ (Spiromesifen) ಅಥವಾ ಪ್ರೋಪರ್ಗೈಟ್ (Propargite) ಅಥವಾ ಫೆನಝಕ್ವಿನ್ (Fenazaquin) ನುಸಿನಾಶಕವನ್ನು ಒಂದು ಲೀಟರ್ ನೀರಿಗೆ ಒಂದು ಎಂ.ಎಲ್ ಪ್ರಮಾಣದಲ್ಲಿ ಎಲೆಯ ಅಡಿಭಾಗಕ್ಕೆ ಸಿಂಪಡಿಸಬಹುದು.

ಕಾಕ್ಸಿನೆಲ್ಲಿಡ್ ದುಂಬಿ (ಗುಲಗಂಜಿ ಕೀಟ),ಅಂಬ್ಲಿಸಿಯಸ್ (ಪರಭಕ್ಷಕ ನುಸಿ), ಪರಭಕ್ಷಕ ತ್ರಿಪ್ಸ್ ಸೇರಿದಂತೆ ಸುಮಾರು ಆರಕ್ಕಿಂತಲೂ ಹೆಚ್ಚು ಪರೋಪಕಾರಿ ಕೀಟಗಳು ನುಸಿಯನ್ನು ನಿಯಂತ್ರಿಸುತ್ತವೆ. ಹಾಗಾಗಿ, ಯಾವುದೇ ಕೀಟನಾಶಕವನ್ನು ಅನಿವಾರ್ಯ ಸಂದರ್ಭದಲ್ಲಿ ಮಾತ್ರ ಅಡಿಕೆ ತೋಟದಲ್ಲಿ ಸಿಂಪಡಿಸಬೇಕು. ಶಿಲಿಂದ್ರನಾಶಕ ಸಿಂಪಡಿಸುತ್ತಿದ್ದರೆ, ಜೊತೆಗೆ ಕೀಟನಾಶಕವೂ ಇರಲಿ ಎನ್ನುವುದು ಬೇಡ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 05-03-2026 | ಕರ್ನಾಟಕದಲ್ಲಿ ಬಿಸಿಲಿನ ಅಬ್ಬರ ಶುರು..! ಇನ್ನು 10 ದಿನ ಮಳೆಯ ಲಕ್ಷಣ ಇಲ್ಲ
March 5, 2026
12:20 PM
by: ಸಾಯಿಶೇಖರ್ ಕರಿಕಳ
ಅಡಿಕೆ ಮಾರುಕಟ್ಟೆ | ಕೆಲವು ಮಾರುಕಟ್ಟೆಗಳಲ್ಲಿ ಏರಿಕೆ, ಕೆಲವು ಸ್ಥಿರ – ಸಿಂಗಲ್‌ ಚೋಲ್‌ ಗೆ ಬೇಡಿಕೆ..! | ರಬ್ಬರ್ ದರದಲ್ಲಿ ಸ್ವಲ್ಪ ಕುಸಿತ
March 5, 2026
11:44 AM
by: ದ ರೂರಲ್ ಮಿರರ್.ಕಾಂ
ಕಾಡಾನೆ ನಿಯಂತ್ರಣಕ್ಕೆ ರಾಜ್ಯದ ಕ್ರಮ : ಎಲಿಫೆಂಟ್ ಟಾಸ್ಕ್ ಫೋರ್ಸ್ ರಚನೆ
March 5, 2026
9:58 AM
by: ಮಿರರ್‌ ಡೆಸ್ಕ್
ಕಾಡಾನೆ ಹಾವಳಿ ತಡೆಗೆ ಸರ್ಕಾರದ ಕ್ರಮ : ಕೊಪ್ಪ ಅರಣ್ಯ ವಿಭಾಗಕ್ಕೆ ₹12.77 ಕೋಟಿ, ರೈಲ್ವೆ ಬ್ಯಾರಿಕೇಡ್ ಅಳವಡಿಕೆ
March 5, 2026
9:38 AM
by: ಮಿರರ್‌ ಡೆಸ್ಕ್

You cannot copy content of this page - Copyright -The Rural Mirror