ಕೃಷಿ ಕ್ಷೇತ್ರದಲ್ಲಿ ಸಮಸ್ಯೆಗಳು ನಿರಂತರ.ಇದಕ್ಕೆ ಅಡಿಕೆಯೂ ಹೊರತಲ್ಲ. ಸ್ವಾತಂತ್ರ್ಯ ಪೂರ್ವದಿಂದ ಹಿಡಿದು ಈ ತನಕ ಇಲ್ಲಿ ರೋಗಗಳು, ಬೆಳೆ ನಾಶ,ಬೆಲೆಯಲ್ಲಿ ಏರು ಪೇರು,ಆಮದು ಎಂಬಿತ್ಯಾದಿ ಸಮಸ್ಯೆಗಳು ಕಾಡುತ್ತಲೇ ಇದೆ.ಇವುಗಳ ಪರಿಹಾರಕ್ಕಾಗಿ ಹಲವು ರೀತಿಯ ಪರಿಹಾರೋಪಾಯಗಳನ್ನು ಕಂಡುಕೊಳ್ಳುವ ಉದ್ದೇಶದಿಂದ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕ್ರಮಗಳನ್ನು ಕೈಗೊಂಡಿದೆ.ಇವು ಸಂಶೋಧನಾ ಕೇಂದ್ರದ ಮೂಲಕ,ಸಮಿತಿಗಳ ಮೂಲಕ ಇಲ್ಲವೇ ಇಲಾಖೆಗಳ ಮೂಲಕ ಆಗಿವೆ.ಈ ದೃಷ್ಟಿಯಿಂದ ಇಲ್ಲಿಗೆ ಈ ತನಕ ಏನೇನು ಆಗಿವೆ ಎಂಬುದನ್ನು ನೋಡುವುದಾದರೆ……..ಮುಂದೆ ಓದಿ….
1.Adhoc arecanut committee : ಅವಿಭಜಿತ ಭಾರತದಲ್ಲಿ ಉತ್ಪಾದನೆ ಆಗುತ್ತಿದ್ದ ಅಡಿಕೆಯ ಪ್ರಮಾಣ ಸುಮಾರು 1,80,000 ಟನ್
ಆಗ ಆಂತರಿಕ ಬೇಡಿಕೆಯನ್ನು ನೀಗಿಸಲು ಆಮದಿಗೆ ಶರಣಾಯಿತು.ಈ ಸಂದರ್ಭದಲ್ಲಿ ಭಾರತ ಸರಕಾರ ಆಂತರಿಕವಾಗಿ ಉತ್ಪಾದನೆ ಹೆಚ್ಚಿಸಲು ICAR ಸಂಸ್ಥೆಗೆ 5 ಲಕ್ಷ ರುಪಾಯಿಗಳನ್ನು ನೀಡಿತ್ತು.ಇದರೊಂದಿಗೆ ಅಡಿಕೆ ಕ್ಷೇತ್ರದ ಸಮಸ್ಯೆಗಳನ್ನು ನೀಗಿಸಲು ಮತ್ತು ಇದಕ್ಕೆ ಸಂಬಂಧಿಸಿದ ಎಲ್ಲಾ ವಿಚಾರಗಳಲ್ಲಿ ವೇಗದ ಬದಲಾವಣೆಗಳನ್ನು ಕಂಡು ಕೊಳ್ಳಲು ಈ ಸಮಿತಿಯನ್ನು ನೇಮಿಸಿತ್ತು.ಈ ಸಮಿತಿ ಹಲವು ರೀತಿಯ ತಾತ್ಕಾಲಿಕ ಹಾಗು ದೂರಗಾಮಿ ಪರಿಹಾರಗಳನ್ನು ಸೂಚಿಸಿತ್ತು.ಇವುಗಳಲ್ಲಿ ಸಹಕಾರಿ ಮಾರುಕಟ್ಟೆ ವ್ಯವಸ್ಥೆ, ಸಣ್ಣ ಬೆಳೆಗಾರರಿಗೆ ಹಣಕಾಸಿನ ಪೂರೈಕೆ,ಸಂಶೋಧನಾ ಕೇಂದ್ರದ ಸ್ಥಾಪನೆ,,ರೆಗುಲೇಟೆಡ್ ಮಾರ್ಕೆಟ್,ಬೆಳೆಗಾರರಿಗೆ ಶಿಕ್ಷಣ,ವಿಸ್ತೀರ್ಣದ ಬಗ್ಗೆ ಅಂಕಿ ಅಂಶಗಳ ಸಂಗ್ರಹ ಎಂಬಿತ್ಯಾದಿ ವಿಚಾರಗಳನ್ನು ಹೆಸರಿಸಿ ಕ್ಷೇತ್ರದ ಅಭಿವೃದ್ಧಿಗಾಗಿ ಒಂದು ಶಾಶ್ವತ ಸಮಿತಿಯನ್ನು ಸ್ಥಾಪಿಸಲು ಸಲಹೆ ನೀಡಿತ್ತು.
2.ಭಾರತದ ಕೇಂದ್ರೀಯ ಅಡಿಕೆ ಸಮಿತಿ(1949) : 1860ರ ಸಂಘಗಳ ಅಧಿನಿಯಮ 21 ರ ಪ್ರಕಾರ ಈ ಸಮಿತಿಯನ್ನು ರಚಿಸಲಾಯಿತು.ಈ ಸಮಿತಿಯ ನೇಮಕಕ್ಕೆ ಮುಖ್ಯ ಕಾರಣವೆಂದರೆ ಎರಡನೇ ಮಹಾ ಯುದ್ದದ ಅಂತಿಮ ಕ್ಷಣದಲ್ಲಿ ಅಧಿಕ ಪ್ರಮಾಣದ ಅಡಿಕೆ ಆಮದು ಆಗಿ ದೇಶದ ಬೆಳೆಗಾರರು ಕಂಗೆಟ್ಟು ಹೋದ್ದು. ಇದರೊಂದಿಗೆ ಭಾರತ ಸರಕಾರ 1944ರಲ್ಲಿ ಆಂತರಿಕವಾಗಿ ಉತ್ಪಾಡಿಸಲ್ಪಡುವ ಒಂದು ಪೌಂಡ್ ಅಡಿಕೆಗೆ 2 ಆಣೆ ಎಕ್ಸೈಸ್ ಸುಂಕ ವಿಧಿಸಿ ಬೆಳೆಗಾರರ ಸಮೂಹಕ್ಕೆ ಹೊಡೆತ ಕೊಟ್ಟಿತ್ತು.ಆಗ ಬೆಳೆಗಾರರೆಲ್ಲ ಒಗ್ಗೂಡಿ 1945 ರಲ್ಲಿ ಒಂದು ಸಮ್ಮೇಳನದಲ್ಲಿ ಸುಂಕವನ್ನು ವಿರೋಧಿಸಿದರು. ಇದೇ ಸಮ್ಮೇಳನದಲ್ಲಿ ಅಡಿಕೆ ಬೆಲೆ ನಿರ್ಣಯ,ಆಮದಿಗೆ ಪರವಾನಗಿ,ಸಂಶೋಧನೆ,ಉಪ ಉತ್ಪನ್ನಗಳ ತಯಾರಿ ಎಂಬಿತ್ಯಾದಿ ವಿಚಾರಗಳ ಬಗ್ಗೆ ಕಾರ್ಯ ನಿರ್ವಹಿಸಲು ಅಡಿಕೆ ಮಂಡಳಿಯ ರಚನೆ ಆಗಬೇಕೆಂದು ಸರಕಾರವನ್ನು ಆಗ್ರಹಿಸಿದ್ದರು. ಇದೇ ಸಂದರ್ಭದಲ್ಲಿ ಅಸ್ತಿತ್ವಕ್ಕೆ ಬಂದ ಸಮಿತಿಯು ಕ್ಷೇತ್ರದ ಅಭಿವೃದ್ಧಿಗಾಗಿ ಕೆಲವು ಕ್ರಮಗಳನ್ನು ಹಮ್ಮಿಕೊಂಡಿತ್ತು. ಅವುಗಳೆಂದರೆ…
- ಉಪಯೋಗ ಆಗದೆ ಇದ್ದ ಭೂಮಿಯಲ್ಲಿ ಅಡಿಕೆ ಕೃಷಿ ಕೈಗೊಳ್ಳುವ ಬಗ್ಗೆ ಸಮೀಕ್ಷೆ.
- ಅಡಿಕೆ ಗಿಡಗಳ ನರ್ಸರಿ ಸ್ಥಾಪನೆ
- ಅಡಿಕೆ ಸಂಶೋಧನಾ ಕೇಂದ್ರದ ಸ್ಥಾಪನೆ.
- ರೋಗಗಳ ಬಗ್ಗೆ ಅಧ್ಯಯನ.
- ಅಡಿಕೆ ಬಗ್ಗೆ ತಾಂತ್ರಿಕ ಸಂಶೋಧನೆ.
- ಅಡಿಕೆ ಬೆಳೆಯ ಉತ್ಪಾದನಾ ವೆಚ್ಚದ ನಿರ್ಣಯ.
- ವಿಸ್ತೀರ್ಣ ಮತ್ತು ಉತ್ಪಾದನೆ ಬಗ್ಗೆ ಸರಿಯಾದ ಮಾಹಿತಿ ಸಂಗ್ರಹಣೆಗೆ ಸಮೀಕ್ಷೆ.
- ಅಡಿಕೆಗೆ ಕನಿಷ್ಟ ಮತ್ತು ಗರಿಷ್ಟ ಮಟ್ಟದ ಬೆಲೆ ನಿರ್ಣಯ.
- ಅಡಿಕೆ ಬಗ್ಗೆ ಪ್ರಚಾರ.
3. ಪೌಲೋಸ್ ಟಿ. ಟಿ.ಸಮಿತಿ : 1970ರ ದಶಕದ ಆರಂಭದಲ್ಲಿ ಅಡಿಕೆ ಧಾರಣೆ ನಿರಂತರವಾಗಿ ಕುಸಿದು 1970 ರಲ್ಲಿದ್ದ ಕ್ವಿಂಟಾಲ್ ಒಂದರ ರೂಪಾಯಿ 600. 1973 ರ ವೇಳೆಗೆ ರೂಪಾಯಿ 300ಕೆ ಇಳಿಯಿತು.ಇದರಿಂದಾಗಿ ಬೆಳೆಗಾರರು ದಿಕ್ಕೆಡುವುದರೊಂದಿಗೆ ವ್ಯಾಪಾರಸ್ಥರು ಕೂಡ ವ್ಯಾಪಾರದಿಂದ ಹಿಂಜರಿದರು.ಈ ಸಮಯದಲ್ಲಿ ಬೆಳೆಗಾರರ ಹಿತಾಸಕ್ತಿ ಕಾಪಾಡಲು ಆಗಿನ ಮೈಸೂರು ಸರಕಾರ ಕ್ಷೇತ್ರದ ವಿವಿಧ ಸಮಸ್ಯೆಗಳನ್ನು ಅಧ್ಯಯನ ಮಾಡಿ ಪರಿಹಾರ ಸೂಚಿಸಲು 1972ರಲ್ಲಿ ಒಂದು ಉನ್ನತ ಮಟ್ಟದ ಸಮಿತಿಯನ್ನು ರಚಿಸಿತ್ತು.ಸಮಿತಿಯ ಮುಖ್ಯಸ್ಥರಾಗಿ ಕೇಂದ್ರೀಯ ಅಡಿಕೆ ಮತ್ತು ಸಂಬಾರ ಪದಾರ್ಥಗಳ ನಿರ್ದೇಶನಾಲಯದ ನಿರ್ದೇಶಕರು ಆಗಿದ್ದ ಟಿ. ಟಿ ಪೌಲೊಸ್ ಅವರನ್ನು ನೇಮಿಸಲಾಯಿತು. ಈ ಸಮಿತಿ ವಿವಿಧ ಆಯಾಮಗಳಲ್ಲಿ ಅಧ್ಯಯನ ಕೈಗೊಂಡು ಕೆಳಗೆ ಹೆಸರಿಸಿದ ಅಂಶಗಳನ್ನು ಹೆಸರಿಸಿತು…
- ಅಡಿಕೆಯ ಆಮದನ್ನು ನಿಲ್ಲಿಸಬೇಕು ಮತ್ತು ಕಳ್ಳ ಸಾಗಣೆಯ ಮೇಲೆ ಕಠಿಣವಾದ ಕಣ್ಗಾವಲು ಇಡಬೇಕು.
- ಮುಂದೆ ಯಾವುದೇ ರೀತಿಯಲ್ಲಿ ಅಡಿಕೆ ಬೆಳೆಯ ವಿಸ್ತರಣೆಗೆ ಪ್ರೋತ್ಸಾಹ ನೀಡಬಾರದು.
- ಅಡಿಕೆ ಗಿಡಗಳ ಮತ್ತು ಬೀಜಗಳ ವಿತರಣೆ ನಿಲ್ಲಿಸಬೇಕು.
- ಅಡಿಕೆ ಬೆಳೆಯ ವಿಸ್ತರಣೆಗೆ ಹಣಕಾಸಿನ ಸಂಸ್ಥೆಗಳು ನೆರವು ನೀಡದಂತೆ ಕೋರಬೇಕು.
- ಅಡಿಕೆಯ ಗುಣಮಟ್ಟ ಕಾಯ್ದುಕೊಳ್ಳಲು ಬೆಳೆಗಾರರಿಗೆ ಬೇಕಾದ ಮಾಹಿತಿ ಒದಗಿಸುವ ಕೆಲಸ ಆಗಬೇಕು.
- ಅಡಿಕೆ ಮಾರುಕಟ್ಟೆಯಲ್ಲಿರುವ ಮಧ್ಯವರ್ತಿಗಳ ಸಂಖ್ಯೆಯನ್ನು ಇಳಿಸಲು ಕ್ರಮ ಕೈಗೊಳ್ಳಬೇಕು.
- ವಿದೇಶಿ ಮಾರುಕಟ್ಟೆಯಲ್ಲಿ ಸೆಂಟೆಡ್ ಸುಪಾರಿಯನ್ನು ಹೆಚ್ಚು ಮಾರಾಟ ಮಾಡಲು ಕ್ರಮ ಕೈಗೊಳ್ಳಬೇಕು.
- ಅಡಿಕೆಯಿಂದ ಟೂತ್ ಪೇಸ್ಟ್ ಮತ್ತು ಚೂಯಿಂಗ್ ಗಮ್ ತಯಾರಿಸಲು ಕ್ರಮ ಕೈಗೊಳ್ಳಬೇಕು.
- ಅಡಿಕೆಯ ಬದಲಿ ಉತ್ಪನ್ನಗಳ ತಯಾರಿಗೆ ಹೆಚ್ಚಿನ ಸಂಶೋಧನೆಗಳಿಗೆ ಆದ್ಯತೆ ನೀಡಬೇಕು.
1973 ಈ ಸಮಿತಿ ವರದಿ ಸಲ್ಲಿಸುವ ಸಂದರ್ಭದಲ್ಲಿ ಅದು ಹೆಸರಿಸಿದ ಒಂದು ಮುಖ್ಯ ಅಂಶವೆಂದರೆ ಮಾರುಕಟ್ಟೆಯ ಅಭಿವೃದ್ಧಿಗೆ ಒಂದು ಸಾರ್ವಜನಿಕ ಇಲ್ಲವೇ ಸಹಕಾರಿ ಮಾರುಕಟ್ಟೆ ವ್ಯವಸ್ಥೆ ಅಡಿಕೆ ಕ್ಷೇತ್ರಕ್ಕೆ ಆಗಬೇಕೆನ್ನುವುದು. ಇದೇ ಸಂದರ್ಭದಲ್ಲಿ ನಮ್ಮ ಕ್ಯಾಂಪ್ಕೊ ಸಂಸ್ಥೆ ಉದಯವಾಯಿತು.
4. ನರಸಿಮಯ್ಯ ಸಮಿತಿ : 1997 ರಲ್ಲಿ ಕರ್ನಾಟಕ ಸರಕಾರ ಯುವಜನರ ಮೇಲೆ ಪಾನ್ ಮಸಾಲ ಮತ್ತು ಗುಟ್ಕಾ ಸೇವನೆಯ ದುಷ್ಪರಿಣಾಮಗಳ ಬಗ್ಗೆ ಅಧ್ಯಯನ ಮಾಡಲು ಈ ಸಮಿತಿ ರಚಿಸಿತ್ತು.ಈ ಸಮಿತಿ ತನ್ನ ವರದಿಯಲ್ಲಿ ಇವುಗಳ ಮೇಲೆ ಹತೋಟಿ ಕ್ರಮ ಕೈಗೊಳ್ಳುವುದರ ಜೊತೆಗೆ ನಿಷೇಧ ಹೇರಬೇಕು ಎಂದು ಹೇಳಿತು.
5. Retinam committee : 2000 ದಲ್ಲಿ ಅಡಿಕೆ ಧಾರಣೆಯ ಕುಸಿತದಿಂದ ತೀವ್ರ ಸಂಕಷ್ಟಕ್ಕೆ ಒಳಗಾದ ಕರ್ನಾಟಕ ಮತ್ತು ಕೇರಳ ರಾಜ್ಯಗಳ ಕೃಷಿಕರ ಬವಣೆಯನ್ನು ನೀಗಿಸಲು ಕೇಂದ್ರ ಸರ್ಕಾರ ತೆಂಗು ಅಭಿವೃದ್ಧಿ ಮಂಡಳಿಯ ಮುಖ್ಯಸ್ಥರಾಗಿದ್ದ P.Retinam ನೇತೃತ್ವದ ಸಮಿತಿ ರಚಿಸಿತು.
ಈ ಸಮಿತಿ ತನ್ನ ವರದಿಯನ್ನು ಏಪ್ರಿಲ್ 2001 ಕೇಂದ್ರ ಸರಕಾರಕ್ಕೆ ಸಲ್ಲಿಸಿತ್ತು. ಸಮಿತಿಯ ಮೂಲ ಉದ್ದೇಶಗಳು.
- ಉತ್ಪಾದನೆ ಮತ್ತು ಬಳಕೆ ಬಗ್ಗೆ ಅಧ್ಯಯನ. ಪ್ರತೀ ಹೆಕ್ಟೇರಿಗೆ ಆದಾಯ ಹೆಚ್ಚಿಸುವ ಪರಿಹಾರಗಳನ್ನು ಸೂಚಿಸುವುದು.
- ಬದಲಿ ಬಳಕೆಯನ್ನು ಅಭಿವೃದ್ಧಿಪಡಿಸುವುದು.
- ಅಡಿಕೆ ಮಾರುಕಟ್ಟೆಯ ಕಾರ್ಯವಿಧಾನ ಹಾಗೂ ಆಮದಿನ ಪ್ರಭಾವಗಳ ಬಗ್ಗೆ ಅಧ್ಯಯನ. ಇದರೊಂದಿಗೆ ಹೆಚ್ಚಿನ ಧಾರಣೆ ಗಳಿಸಲು ಮಾರುಕಟ್ಟೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವುದು.
ವರದಿಯಲ್ಲಿ ಹೆಸರಿಸಿರುವ ಮುಖ್ಯ ಅಂಶಗಳು:
- ಅಡಿಕೆಯಲ್ಲಿರುವ ಔಷಧೀಯ ಮೌಲ್ಯ ಹಾಗೂ ಬದಲಿ ಬಳಕೆಯ ಬಗ್ಗೆ ಅಧ್ಯಯನ. ಮೌಲ್ಯವರ್ಧಿತ ಉತ್ಪನ್ನಗಳ ತಯಾರಿಗೆ ತಂತ್ರಜ್ಞಾನ ಅಭಿವೃದ್ಧಿ.
- ಇಳುವರಿಯನ್ನು ಹೆಚ್ಚಿಸಿ ಉತ್ಪಾದನಾ ವೆಚ್ಚ ಕಡಿಮೆ ಮಾಡಲು ಕ್ರಮ ಕೈಗೊಳ್ಳಬೇಕು.
- ವಿಸ್ತರಣೆಗೆ ಅವಕಾಶ ಕೊಡಬಾರದು. ಬೆಳೆಗಾರರು ವಿಸ್ತರಣೆಯನ್ನು ನಿಲ್ಲಿಸಬೇಕು.
- ಅಡಿಕೆಯ ಇನ್ನಿತರೇ ಬಳಕೆಗಳ ಬಗ್ಗೆ ಸಂಶೋಧನಾ ಕೇಂದ್ರಗಳು ಸಂಶೋಧನೆ ಮಾಡಬೇಕು.
- ಅಡಿಕೆ ಬೆಳೆಯ ವಿಸ್ತರಣೆ ತಡೆಯಲು ಆಹಾರೋತ್ಪನ್ನಗಳಿಗಾಗಿ ಮೀಸಲಿಟ್ಟ ಪ್ರದೇಶಗಳಲ್ಲಿ ಯಾವುದೇ ಬೆಂಬಲ ಕೊಡಬಾರದು.
- ಅಡಿಕೆ ಬೀಜ,ಗಿಡ ಇತ್ಯಾದಿಗಳನ್ನು ಈಗಿರುವ ಬೆಳೆಗಾರರಿಗೆ ಪೂರೈಕೆ ಮಾಡಬೇಕು ಹೊರತು ಹೊಸತಾಗಿ ಕೃಷಿ ಮಾಡುವವರಿಗೆ ಕೊಡಬಾರದು.
- ವಿಸ್ತೀರ್ಣದ ಹೆಚ್ಚಳ ಮುಂದೆ ಬೆಳೆಗಾರರಿಗೆ ಕೊಡಬಹುದಾದ ಸಮಸ್ಯೆಗಳ ಬಗ್ಗೆ ಮಾಹಿತಿ ಕೊಡಬೇಕು.
- ಹೊಸ ಅಡಿಕೆ ತೋಟಗಳಿಗೆ ಹಣಕಾಸಿನ ಪೂರೈಕೆ ಅನ್ನು ನಬಾರ್ಡ್ ಮತ್ತು ಬ್ಯಾಂಕ್ ಗಳು ನಿಲ್ಲಿಸಬಹುದು.
- ಮಿಶ್ರ ಬೆಳೆಗೆ ಬೆಂಬಲ
- ಅಂಕಿ ಅಂಶಗಳು ಸರಿಯಾಗಿ ಇಲ್ಲದೇ ಇರುವುದರಿಂದ ಇಲ್ಲಿಗೆ ಗಮನ ಕೊಡಬೇಕು
- ಅಡಿಕೆಗೆ ಯಾವುದೇ ತೆರಿಗೆ ಹಾಕಬಾರದು.
- ಆಮದಿನ ಬಗ್ಗೆ ಕೇಂದ್ರ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು.
ಈ ಸಮಿತಿ ಬೆಳೆಗಾರರಿಗೆ ಎಚ್ಚರಿಕೆಯ ಗಂಟೆ ನೀಡಿದ್ದು ಇದೇ ರೀತಿ ಪೌಲಸೋ ಸಮಿತಿಯೂ ಎಚ್ಚರಿಸಿತ್ತು.
6. ಚೌದರಿ ಸಮಿತಿ : 2007 ರಲ್ಲಿ ಅಡಿಕೆಗೆ ಬಂದ ಕೊಳೆ ರೋಗಕ್ಕೆ ಪರಿಹಾರಕ್ಕಾಗಿ ರೂಪಿಸಲ್ಪಟ್ಟ ಸಮಿತಿಯಿದು. ಇದರಿಂದಾಗಿ ಬೆಳೆಗಾರರಿಗೆ ಪರಿಹಾರ ದೊರಕಿದೆ.
7. ಗೋರಕ್ ಸಿಂಗ್ ಸಮಿತಿ : 2009 ರಲ್ಲಿ ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳ ಬೆಳೆಗಾರರು ಎದುರಿಸುತ್ತಿದ್ದ ಸಮಸ್ಯೆಗಳ ಪರಿಶೀಲನೆಗೆ ಇದು ಕಾರ್ಯ ನಿರ್ವಹಿಸಿದೆ. ಇದು ಹೆಸರಿಸಿದ ಅಂಶಗಳೆಂದರೆ..
- ಕಾಲುವೆ ಪ್ರದೇಶ ಹಾಗೂ ನೆಲದಡಿಯ ನೀರನ್ನು ಬಳಸಿ ಅಡಿಕೆ ಕೃಷಿ ಮಾಡುವುದಕ್ಕೆ ಉತ್ತೇಜನ ನೀಡಬಾರದು.
- ಕರಾವಳಿ ಮತ್ತು ಮಲೆನಾಡು ಪ್ರದೇಶದ ಬೆಳೆಗಾರರಿಗೆ ಮಾತ್ರ ಉತ್ತೇಜನ ನೀಡಬೇಕು.
- ಹಳದಿ ಎಲೆ ಬಾಧಿತ ತೋಟಗಳ ಬೆಳೆಗಾರರಿಗೆ ಪುನರ್ವಸತಿ ಮತ್ತು ICAR ಮೂಲಕ ಈ ಪ್ರದೇಶದ ಅಭಿವೃದ್ಧಿ ವೇಗವಾಗಿ ಆಗಬೇಕು.
- ಸಾಂಸ್ಥಿಕ ಧನವಿನಿಯೋಗದ ಮೂಲಕ ಅಡಿಕೆಯ ಔಷದೀಯ ಮತ್ತು ಕೈಗಾರಿಕಾ ಉಪಯೋಗಕ್ಕೆ ಪ್ರೋತ್ಸಾಹ ನೀಡುವುದು.
- ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ನಾಲ್ಕು ಹೆಕ್ಟೇರ್ಗಿಂತ ಕಡಿಮೆ ಇರುವ ಬೆಳೆಗಾರರ ಸಾಲ ಮನ್ನಾ ಮಾಡುವುದಲ್ಲದೆ ಹೊಸ ಸಾಲವನ್ನು ನೀಡುವುದು.
ಈ ಎಲ್ಲಾ ಸಮಿತಿಗಳು ಸಾಂಪ್ರದಾಯಿಕ ಪ್ರದೇಶಗಳಲ್ಲಿ ಹೊಸತಾಗಿ ಬೆಳೆ ವಿಸ್ತರಣೆ ಮಾಡಬಾರದೆಂದು ಹೇಳಿದ್ದು ಇದರೊಂದಿಗೆ ಕಾಲುವೆ ಮತ್ತು ಬೋರ್ವೆಲ್ ನೀರು ಬಳಸಿ ಅಡಿಕೆ ಕೃಷಿ ಮಾಡುವುದಕ್ಕೆ ಪ್ರೇರಣೆ ನೀಡಬಾರದೆಂದು ಹೇಳಿದೆ. ಇಷ್ಟು ಮಾತ್ರವಲ್ಲದೆ ಅಡಿಕೆಯ ಪರ್ಯಾಯ ಬಳಕೆ ಬಗ್ಗೆ ಅಧ್ಯಯನ, ಸಂಶೋಧನೆ ಇತ್ಯಾದಿಗಳು ಆಗಲೇಬೇಕು ಎಂದಿವೆ. ಇನ್ನು ಆಮದು ಆಂತರಿಕವಾಗಿ ತೊಂದರೆ ಕೊಡುವುದಿಲ್ಲ ಬದಲಾಗಿ ಇಲ್ಲಿರುವ ಮಾರುಕಟ್ಟೆ ವ್ಯವಸ್ಥೆಯೇ ಏರು ಪೇರುಗಳಿಗೆ ಕಾರಣ ಎಂದಿವೆ.
ಮೇಲೆ ತಿಳಿಸಿದ ಈ ಸಮಿತಿಗಳು ಅಡಿಕೆ ಕ್ಷೇತ್ರದ ಅಭಿವೃದ್ಧಿಗಾಗಿ ಹಲವು ಸೂತ್ರಗಳನ್ನು ಹೆಸರಿಸಿದ್ದರೂ ಹಲವಕ್ಕೆ ಸರಕಾರಗಳು ಕ್ರಮಗಳನ್ನು ಕೈಗೊಂಡಿಲ್ಲ. ಇನ್ನು ಬೆಳೆಗಾರರು ಈ ಬಗ್ಗೆ ಚಿಂತಿಸಿದಂತಿಲ್ಲ. ಸರಕಾರಗಳು ಅಡಿಕೆ ಕ್ಷೇತ್ರದ ಬಗ್ಗೆ ಆಸಕ್ತಿ ತೋರಿಸುವುದನ್ನು ಬಿಟ್ಟಿವೆ.ಇನ್ನು ಏನಿದ್ದರೂ ಬೆಳೆಗಾರ ಸಮೂಹ ತಮ್ಮ ಭವಿಷ್ಯ ತಾವೇ ನಿರ್ದರಿಸಬೇಕಾಗಬಹುದು.
The agricultural sector has faced continuous challenges, and the cultivation of arecanut is no exception. Since the pre-independence era, this field has been plagued by diseases, crop destruction, price fluctuations, and import-related issues. To address these persistent problems, various measures have been implemented. These efforts have been channeled through research centers, committees, and governmental departments. Despite numerous initiatives, resolving the multi-faceted issues in this sector remains a complex task requiring ongoing attention and innovation.