ಅಡಿಕೆ ಕಳ್ಳಸಾಗಣೆ ಮತ್ತು ತೆರಿಗೆ ವಂಚನೆ ಜಾಲವನ್ನು ಮಹಾರಾಷ್ಟ್ರದಲ್ಲಿ ಅಧಿಕಾರಿಗಳು ಭೇದಿಸಿದ್ದು, ಈ ಸಂದರ್ಭ ಪಾನ್ ಮಸಾಲಾದಲ್ಲಿ ಬಳಸಲಾಗುವ 11 ಲಾರಿಗಳಲ್ಲಿ ಬರುತ್ತಿದ್ದ ಇಂಡೋನೇಷ್ಯಾದ ಅಡಿಕೆ ಸಾಗಾಟವನ್ನು ತಡೆದಿದ್ದಾರೆ.
ಇಂಡೋನೇಷ್ಯಾದಿಂದ ಕಳಪೆ ಗುಣಮಟ್ಟದ ಅಡಿಕೆ ಕಳ್ಳಸಾಗಣೆ ಜಾಲವನ್ನು ಭೇದಿಸಿದ ಕೇಂದ್ರ ಸರಕು ಮತ್ತು ಸೇವಾ ತೆರಿಗೆ (ಸಿಜಿಎಸ್ಟಿ) ಇಲಾಖೆ, 2,500 ಟನ್ಗಳಿಗಿಂತ ಹೆಚ್ಚು ಕಳ್ಳಸಾಗಣೆ ಮಾಡಿದ 100 ಕ್ಕೂ ಹೆಚ್ಚು ಟ್ರಕ್ಗಳು ಈಗಾಗಲೇ ದೆಹಲಿಯ ವಿತರಕರನ್ನು ತಲುಪಿ ನಂತರ ಪಾನ್ ಮಸಾಲಾ ತಯಾರಕರಿಗೆ ಸರಬರಾಜು ಮಾಡಿರಬಹುದು ಎಂದು ಹೇಳಿದೆ, ಈ ಬಗ್ಗೆ ತನಿಖೆ ನಡೆಸುತ್ತಿದೆ. ಸದ್ಯ 11 ಲಾರಿಗಳಲ್ಲಿ ಸಾಗಾಟವಾಗುತ್ತಿದ್ದ ಅಡಿಕೆ ವಶಕ್ಕೆ ಪಡೆದಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ.
ಭಾರತೀಯ ಅಡಿಕೆಯಂತೆ ಹೋಲುವ ಕಳಪೆ ಗುಣಮಟ್ಟದ ಅಡಿಕೆಯನ್ನು ಭಾರತಕ್ಕೆ ತರಲಾಗಿದ್ದು ಕಳಪೆ ಅಡಿಕೆಗೆ ಪಾಲಿಶ್ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಲಾಖೆಯ ಮಾಹಿತಿ ಪ್ರಕಾರ, ಅಡಿಕೆ ಪೂರೈಕೆಗೆ ಜಿಎಸ್ಟಿ ನೋಂದಣಿಗಳು ಹೊಂದಿದ ಕರ್ನಾಟಕ ಮೂಲದ ಎನ್ಎನ್ ಟ್ರೇಡರ್ಸ್ ಮತ್ತು ಎಸ್ಆರ್ಎಸ್ ಟ್ರೇಡರ್ಸ್ಗೆ ಸೇರಿವೆ. ಎರಡೂ ಸಂಸ್ಥೆಗಳ ಮಾಲೀಕರು ಬಡತನ ರೇಖೆಗಿಂತ ಕೆಳಗಿರುವ ಹಿನ್ನೆಲೆಯಿಂದ ಬಂದವರಾಗಿದ್ದು, ನಕಲಿ ನಿರ್ವಾಹಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಶಂಕಿಸಲಾಗಿದೆ. ತನಿಖೆಯ ವೇಳೆ ಈ ಸಾಗಾಟದ ಹಿಂದೆ ಕೇರಳದ ಕಾಸರಗೋಡಿನ ಖಾದರ್ ಖಾನ್ ಮತ್ತು ಕರ್ನಾಟಕದ ಮಂಗಳೂರಿನ ಸಮೀರ್ ಖಾನ್ ಇದ್ದಾರೆ ಎಂದು ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ದಕ್ಷಿಣ ರಾಜ್ಯಗಳ ಮೂಲಕ ಕಳ್ಳಸಾಗಣೆ ಮಾಡಿದ ಅಡಿಕೆಯನ್ನು ರಾಸಾಯನಿಕ ಹಾಕಿ ಇಲ್ಲಿನ ಅಡಿಕೆಯಂತೆ ನಕಲು ಮಾಡಿ ನಂತರ ಮಾರಾಟ ಮಾಡಲಾಗುತ್ತಿತ್ತು. ಇನ್ನೂ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಸುದ್ದಿಸಂಸ್ಥೆಗಳು ವರದಿ ಮಾಡಿವೆ. (Photo Credit- India Today)

