ಮಹಾರಾಷ್ಟ್ರದಲ್ಲಿ ತಡೆಹಿಡಿಯಲಾಗಿರುವ ಅಡಿಕೆ ಸಾಗಣೆ ವಾಹನಗಳನ್ನು ತಕ್ಷಣ ಬಿಡುಗಡೆ ಮಾಡುವಂತೆ ಹಾಗೂ ಮುಂದಿನ ದಿನಗಳಲ್ಲಿ ಸೂಕ್ತ ದಾಖಲೆಗಳಿರುವ ಅಡಿಕೆ ಸಾಗಣೆ ವಾಹನಗಳಿಗೆ ಯಾವುದೇ ಅಡಚಣೆ ಉಂಟಾಗದಂತೆ ಪಾರದರ್ಶಕ ಕಾರ್ಯವಿಧಾನ ರೂಪಿಸುವಂತೆ ಕರ್ನಾಟಕದ ಅಡಿಕೆ ಸಹಕಾರಿ ಸಂಸ್ಥೆಗಳ ನಿಯೋಗವು ರಾಜ್ಯದ ಸಂಸದರ ಜೊತೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ನವದೆಹಲಿಯಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿತು.
ನಿಯೋಗಕ್ಕೆ ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ನೇತೃತ್ವ ವಹಿಸಿದ್ದು, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಉಪಸ್ಥಿತಿಯಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರೊಂದಿಗೆ ಮಹತ್ವದ ಸಭೆ ನಡೆಯಿತು.
ಸಭೆಯಲ್ಲಿ MAMCOS, CAMPCO, TUMCOS ಹಾಗೂ ಕರ್ನಾಟಕ ರಾಜ್ಯ ಅಡಿಕೆ ಮಾರುಕಟ್ಟೆ ಸಹಕಾರ ಸಂಘಗಳ ಒಕ್ಕೂಟದ ಪ್ರತಿನಿಧಿಗಳು ಭಾಗವಹಿಸಿದ್ದರು.
ನಿಯೋಗದ ಮಾಹಿತಿ ಪ್ರಕಾರ, ಮಹಾರಾಷ್ಟ್ರ ಆಹಾರ ಮತ್ತು ಔಷಧ ಆಡಳಿತ (FDA) ಅಧಿಕಾರಿಗಳು ಉತ್ತರ ಭಾರತದ ಮಾರುಕಟ್ಟೆಗಳಿಗೆ ತೆರಳುತ್ತಿದ್ದ 50ಕ್ಕೂ ಹೆಚ್ಚು ಅಡಿಕೆ ಲಾರಿಗಳನ್ನು ವಿವಿಧ ಚೆಕ್ಪೋಸ್ಟ್ಗಳಲ್ಲಿ ತಡೆಹಿಡಿದಿದ್ದಾರೆ. ಈ ಎಲ್ಲಾ ಲಾರಿಗಳಲ್ಲಿ GST ಇನ್ವಾಯ್ಸ್, ಇ-ವೇ ಬಿಲ್, FSSAI ನೋಂದಣಿ ಸೇರಿದಂತೆ ಎಲ್ಲಾ ಕಡ್ಡಾಯ ದಾಖಲೆಗಳು ಇದ್ದರೂ ಸಾಗಣೆ ಸ್ಥಗಿತಗೊಂಡಿರುವುದರಿಂದ ರೈತರು ಹಾಗೂ ಸಹಕಾರಿ ಸಂಸ್ಥೆಗಳಿಗೆ ಆರ್ಥಿಕ ನಷ್ಟ ಉಂಟಾಗಿದೆ ಎಂದು ನಿಯೋಗ ತಿಳಿಸಿದೆ.

“ಅಡಿಕೆ ಕೇವಲ ಬೆಳೆ ಅಲ್ಲ, ಲಕ್ಷಾಂತರ ಕುಟುಂಬಗಳ ಜೀವನಾಧಾರ”
ಸಭೆಯಲ್ಲಿ ಮಾತನಾಡಿದ ಸಂಸದ ಬಿ.ವೈ. ರಾಘವೇಂದ್ರ, ಭಾರತದ ಒಟ್ಟು ಅಡಿಕೆ ಉತ್ಪಾದನೆಯಲ್ಲಿ ಕರ್ನಾಟಕದ ಪಾಲು ಶೇ.70ಕ್ಕೂ ಅಧಿಕವಾಗಿದೆ. ದಕ್ಷಿಣ ಭಾರತದ ಲಕ್ಷಾಂತರ ರೈತ ಕುಟುಂಬಗಳ ಜೀವನೋಪಾಯ ಅಡಿಕೆ ಕೃಷಿಯನ್ನು ಅವಲಂಬಿಸಿದೆ ಎಂದು ಹೇಳಿದರು.
“ಪ್ರತಿಯೊಂದು ಅಡಿಕೆ ಲಾರಿಯ ಹಿಂದೆ ನೂರಾರು ರೈತ ಕುಟುಂಬಗಳ ಶ್ರಮವಿದೆ. ಸೂಕ್ತ ದಾಖಲೆಗಳೊಂದಿಗೆ ಸಾಗುತ್ತಿರುವ ವಾಹನಗಳನ್ನು ಅನಗತ್ಯವಾಗಿ ತಡೆಹಿಡಿಯಬಾರದು. ಅಡಿಕೆ ಕೇವಲ ಒಂದು ಬೆಳೆ ಅಲ್ಲ, ಅದು ಲಕ್ಷಾಂತರ ಕುಟುಂಬಗಳ ಜೀವನಾಧಾರವಾಗಿದೆ” ಎಂದು ಅವರು ಹೇಳಿದರು.
ಪ್ರಸ್ತುತ ತಡೆಹಿಡಿದಿರುವ ಎಲ್ಲಾ ಅಡಿಕೆ ವಾಹನಗಳನ್ನು ತಕ್ಷಣ ಬಿಡುಗಡೆ ಮಾಡಬೇಕು. ಮುಂದಿನ ದಿನಗಳಲ್ಲಿ ಮಾನ್ಯತೆ ಪಡೆದ ಸಹಕಾರಿ ಸಂಸ್ಥೆಗಳ ದಾಖಲೆಗಳಿರುವ ವಾಹನಗಳ ಸುಗಮ ಸಂಚಾರಕ್ಕೆ ಸ್ಪಷ್ಟ ಹಾಗೂ ಕಾಲಬದ್ಧ ಕಾರ್ಯವಿಧಾನ ರೂಪಿಸಬೇಕು ಎಂದು ನಿಯೋಗ ಒತ್ತಾಯಿಸಿತು.
ಮಹಾರಾಷ್ಟ್ರದಲ್ಲಿ ಪ್ರವಾಹ ಪರಿಸ್ಥಿತಿಯ ನಡುವೆಯೂ ಸಭೆಗೆ ಅವಕಾಶ ನೀಡಿದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರಿಗೆ ಸಂಸದ ರಾಘವೇಂದ್ರ ಧನ್ಯವಾದ ಸಲ್ಲಿಸಿದರು. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಫಾಲೋಮಾಡಲು ಇಲ್ಲಿ ಕ್ಲಿಕ್ ಮಾಡಿ

ನಿಯೋಗದಲ್ಲಿ ಯಾರಿದ್ದರು..? : ಅಡಿಕೆ ಮಹಾಮಂಡಲ ಅಧ್ಯಕ್ಷ ಆರಗ ಜ್ಞಾನೇಂದ್ರ, ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಚಿಕ್ಕಮಗಳೂರು–ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್, MAMCOS ಉಪಾಧ್ಯಕ್ಷ ಮಹೇಶ್ ಹುಲ್ಕುಳಿ, ಕ್ಯಾಂಪ್ಕೊ ಎಂಡಿ ಡಾ.ಸತ್ಯನಾರಾಯಣ CAMPCO ಹಾಗೂ TUMCOS ಉಪಾಧ್ಯಕ್ಷರು ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
A delegation representing CAMPCO, MAMCOS, TUMCOS and the Karnataka Arecanut Cooperative Federation, led by MP B.Y. Raghavendra, met Maharashtra Chief Minister Devendra Fadnavis in New Delhi seeking the immediate release of over 50 detained arecanut trucks. The delegation urged Maharashtra to ensure smooth movement of legally documented arecanut consignments to protect the livelihoods of lakhs of arecanut farmers.
AdvertisementView this post on Instagram
A post shared by Rural Mirror (@theruralmirror)
Advertisement

