ಅಡಿಕೆ ಬಳಕೆ ಹಾಗೂ ಅದರ ನೀತಿಯ ಕುರಿತು 2026 ರ ಜನವರಿ 30 ರಂದು ವಿಶ್ವ ಆರೋಗ್ಯ ಸಂಸ್ಥೆ (WHO) ವತಿಯಿಂದ ನಡೆಯಲಿರುವ “Areca Nut Challenge: Turning Policy into Impact in South-East Asia” ವೆಬಿನಾರ್ ಹಿನ್ನೆಲೆಯಲ್ಲಿ, ಅಡಿಕೆ ಸಂಬಂಧಿತ ಮಹತ್ವದ ವಿಚಾರಗಳ ಕುರಿತು ಚರ್ಚಿಸಲು ವಿಜ್ಞಾನಿಗಳು, ಸಂಶೋಧಕರು, ಸಹಕಾರ ಕ್ಷೇತ್ರದ ನಾಯಕರು ಹಾಗೂ ಅಡಿಕೆ ಬೆಳೆಗಾರ ಹಿತಚಿಂತಕರ ಪೂರ್ವಭಾವಿ ಸಭೆ ಆಯೋಜಿಸಲಾಯಿತು.
ಪುತ್ತೂರಿನ ಕ್ಯಾಂಪ್ಕೊ ಚಾಕೋಲೇಟ್ ಕಚೇರಿಯಲ್ಲಿ ಶುಕ್ರವಾರ ನಡೆದ ಸಭೆಯ ಅಧ್ಯಕ್ಷತೆಯನ್ನು ಕ್ಯಾಂಪ್ಕೊ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ ವಹಿಸಿದ್ದರು. ಸಭೆಯಲ್ಲಿ ಅಡಿಕೆಯ ಪ್ರಸ್ತುತ ವರ್ಗೀಕರಣ, ಅದರ ಸಾಮಾಜಿಕ-ಆರ್ಥಿಕ, ಸಾಂಸ್ಕೃತಿಕ ಮತ್ತು ಕೃಷಿ ಮಹತ್ವದ ಕುರಿತು ವಿಸ್ತೃತ ಚರ್ಚೆ ನಡೆಯಿತು.
ಅಡಿಕೆಯನ್ನು WHO ಗುಂಪು–1 ಕ್ಯಾನ್ಸರ್ಕಾರಕ ಪಟ್ಟಿಯಲ್ಲಿ ಸೇರಿಸಿರುವುದರ ಕುರಿತು ಸಭೆಯಲ್ಲಿ ಗಂಭೀರ ಆಕ್ಷೇಪ ವ್ಯಕ್ತವಾಯಿತು. ಅಡಿಕೆ ಮಾತ್ರವೇ ಸ್ವತಂತ್ರವಾಗಿ ಕ್ಯಾನ್ಸರ್ಕಾರಕವಲ್ಲ ಎಂಬ ಅಭಿಪ್ರಾಯವನ್ನು ಸಭೆಯಲ್ಲಿ ವ್ಯಕ್ತಪಡಿಸಲಾಯಿತು. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ
ಈ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರದ ಮಾರ್ಗದರ್ಶನದಲ್ಲಿ ಸಿಪಿಸಿಆರ್ಐ (CPCRI) ಸೇರಿದಂತೆ 11 ಪ್ರತಿಷ್ಠಿತ ರಾಷ್ಟ್ರೀಯ ಸಂಸ್ಥೆಗಳ ಮೂಲಕ ಸಮಗ್ರ ಹಾಗೂ ನಿರ್ಣಾಯಕ ವೈಜ್ಞಾನಿಕ ಅಧ್ಯಯನ ಪೂರ್ಣಗೊಳ್ಳುವವರೆಗೂ, ಅಡಿಕೆಯನ್ನು ಗುಂಪು–1 ವರ್ಗೀಕರಣದಿಂದ ಗುಂಪು–2ಕ್ಕೆ ಮರುವರ್ಗೀಕರಿಸುವಂತೆ WHOಗೆ ಮನವಿ ಸಲ್ಲಿಸುವ ನಿರ್ಧಾರ ಕೈಗೊಳ್ಳಲಾಯಿತು.
ಅಡಿಕೆಯನ್ನು ಕ್ಯಾನ್ಸರ್ಕಾರಕವೆಂದು ಘೋಷಿಸಲು WHO ಬಳಸಿರುವ ವೈಜ್ಞಾನಿಕ ಆಧಾರ ಮತ್ತು ಸಾಕ್ಷ್ಯಗಳನ್ನು ಸಾರ್ವಜನಿಕವಾಗಿ ಹಂಚಿಕೊಳ್ಳಬೇಕೆಂಬ ಆಗ್ರಹವೂ ಸಭೆಯಲ್ಲಿ ಕೇಳಿಬಂತು. ಪಾನ್ ಮಸಾಲಾ, ಅಡಿಕೆ ಮಿಶ್ರಿತ ಉತ್ಪನ್ನಗಳು ಸೇರಿದಂತೆ ಕೆಲವು ಸಿದ್ಧ ಉತ್ಪನ್ನಗಳನ್ನು ಹಾನಿಕಾರಕವೆಂದು WHO ಗುರುತಿಸಿದ್ದರೂ, ಅಡಿಕೆಯನ್ನು ಮಾತ್ರಾ ಮತ್ತು ಈ ಬಗ್ಗೆ ವಿಶೇಷ ಸಂಶೋಧನೆ ನಡೆದಿದೆಯೇ ಎಂಬುದರ ಬಗ್ಗೆ ಸ್ಪಷ್ಟತೆ ನೀಡಬೇಕೆಂದು ಸಭೆ ಒತ್ತಾಯಿಸಿತು.
ಆಯುರ್ವೇದ ಮತ್ತು ಪಾರಂಪರಿಕ ವೈದ್ಯಕೀಯ ಪದ್ಧತಿಗಳಲ್ಲಿ ಅಡಿಕೆಯನ್ನು ಶತಮಾನಗಳಿಂದ ಔಷಧೀಯ ಗುಣಗಳಿಗಾಗಿ ಬಳಸಲಾಗುತ್ತಿದ್ದು, ಈ ಐತಿಹಾಸಿಕ ಹಿನ್ನೆಲೆ ಮತ್ತು ವೈದ್ಯಕೀಯ ಪ್ರಸ್ತುತತೆಯನ್ನೂ ನೀತಿ ನಿರ್ಣಯಗಳಲ್ಲಿ ಪರಿಗಣಿಸಬೇಕೆಂದು ಸಭೆ ಅಭಿಪ್ರಾಯಪಟ್ಟಿತು.
ಈ ಸಂದರ್ಭದಲ್ಲಿ ಕ್ಯಾಂಪ್ಕೊ ಸಂಸ್ಥೆ, ರೈತರಿಗೆ ನ್ಯಾಯ ದೊರಕಿಸುವಂತೆ ಮತ್ತು ಸಾರ್ವಜನಿಕ ಆರೋಗ್ಯದ ಚಿಂತನೆಗಳನ್ನು ಜವಾಬ್ದಾರಿಯಿಂದ ಎದುರಿಸುವ ದೃಷ್ಟಿಯಿಂದ, ನೀತಿ ನಿರೂಪಕರು, ವೈಜ್ಞಾನಿಕ ಸಂಸ್ಥೆಗಳು ಹಾಗೂ ಅಂತರರಾಷ್ಟ್ರೀಯ ಸಂಘಟನೆಗಳೊಂದಿಗೆ ಸಂವಾದ ಮುಂದುವರಿಸುವ ಬಗ್ಗೆ ಭರವಸೆ ನೀಡಿತು. ಮುಂದಿನ ದಿನಗಳಲ್ಲಿ ಅಡಿಕೆಯನ್ನು ಹಾನಿಕಾರಕ ಪಟ್ಟಿಯಿಂದ ಹೊರತರಲು ಅಗತ್ಯ ಕ್ರಮಗಳನ್ನು ಹಂತ ಹಂತವಾಗಿ ಕೈಗೊಳ್ಳುವ ನಿರ್ಧಾರವೂ ಕೈಗೊಳ್ಳಲಾಯಿತು.
ಸಭೆಯಲ್ಲಿ ಸಿಪಿಸಿಆರ್ಐ ನಿರ್ದೇಶಕ ಡಾ. ಬಾಲಚಂದ್ರ ಹೆಬ್ಬಾರ್, ವಿಜ್ಞಾನಿ ಡಾ. ರಮೇಶ್, ಟಿಎಸ್ಎಸ್ ಸಂಸ್ಥೆಯ ಡಾ. ಕೇಶವ ಕೋರ್ಸೆ, ರಾಮಯ್ಯ ವಿಶ್ವವಿದ್ಯಾಲಯದ ಡಾ. ರಾಜಾ ಹಾಗೂ ಡಾ. ಕದಂಬಿ, ಮ್ಯಾಮ್ಕೋಸ್ ಎಂಡಿ ಶ್ರೀಕಾಂತ್, ಕ್ಯಾಂಪ್ಕೊ ನಿರ್ದೇಶಕ ವಿಶ್ವನಾಥ ಇ. ಹೆಗಡೆ ಅವರು ಆನ್ಲೈನ್ ಮೂಲಕ ಅಭಿಪ್ರಾಯ ವ್ಯಕ್ತಪಡಿಸಿದರು.
ಸಭೆಯಲ್ಲಿ ಕ್ಯಾಂಪ್ಕೊ ಆಡಳಿತ ನಿರ್ದೇಶಕ ಸತ್ಯನಾರಾಯಣ, ಕೃಷಿ ಮಾರುಕಟ್ಟೆ ತಜ್ಞ ಡಾ. ವಿಘ್ನೇಶ್ವರ ಭಟ್ ವರ್ಮುಡಿ, ಅಗ್ರಿಲೀಫ್ ಸಂಸ್ಥೆಯ ಅವಿನಾಶ್ ರಾವ್, ಎಆರ್ಡಿಎಫ್ ಕಾರ್ಯನಿರ್ವಹಣಾಧಿಕಾರಿ ಡಾ. ಕೇಶವ ಭಟ್, ದಂತ ವೈದ್ಯ ಡಾ. ಪ್ರಕಾಶ್, ವಿವೇಕಾನಂದ ವಿದ್ಯಾಸಂಸ್ಥೆಯ ಫಾರ್ಮಸಿಟಿಕಲ್ ಸೈನ್ಸ್ ವಿಭಾಗದ ಡಾ. ಗುರುರಾಜ್, ಕ್ಯಾಂಪ್ಕೊ ನಿರ್ದೇಶಕ ಮುರಳಿಕೃಷ್ಣ ಚಳ್ಳಂಗಾರು ಹಾಗೂ ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಮಹೇಶ್ ಪುಚ್ಚಪ್ಪಾಡಿ ಅವರು ಉಪಸ್ಥಿತರಿದ್ದರು. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ




