ಸುದ್ದಿಗಳು

#Opinion | ಅಡಿಕೆ ಬೆಳೆಗಾರರಿಗೆ ಮಾರಕವಾದ ‘ಹಳದಿ’ ಸರಕಾರಗಳು….!!

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಪತ್ರಿಕೋದ್ಯಮದಲ್ಲಿ ಹಳದಿ ಪತ್ರಿಕೋದ್ಯಮ ಅಂತ ಒಂದು ಪ್ರಯೋಗ ಇದೆ. ಯಾವುದೇ ಸಮರ್ಥನೀಯವಲ್ಲದ, ಸಂಶೋಧನೆ ಮಾಡದ, ಆಕರ್ಷಣೀಯವಾದ, ವೈಭವೀಕರಿಸುವ, ದೂಷಣೆ ಮಾಡುವ, ಉದ್ರೇಕಗೊಳಿಸುವ, ಸಮಾಜಕ್ಕೆ ‘ಮಾರಕ’ವಾಗುವ ಸುದ್ದಿಗಳನ್ನು ಪ್ರಕಟಿಸುವ ಪತ್ರಿಕೆಗಳಿಗೆ “ಹಳದಿ ಪತ್ರಿಕೆ” ಎಂದು ವಿಡಂಬಿಸಲಾಗುತ್ತದೆ. ಪತ್ರಿಕೆಗಳ ಈ ‘ಹಳದಿ’ ಒಂದು ರೋಗ!! ಅಂತ ‘ಪೀತ’ ಪತ್ರಿಕೆಗಳ ಬಗ್ಗೆ ವರ್ಣಿಸಲಾಗುತ್ತದೆ!!

Advertisement

ಮನುಷ್ಯರಲ್ಲೂ, ಪ್ರಾಣಿಗಳಲ್ಲೂ ಬರುವ ಜಾಂಡೀಸ್ ರೋಗಕ್ಕೂ ಹಳದಿ ಕಾಮಾಲೆ ರೋಗ ಅಂತ ಕರೆಯಲಾಗುತ್ತದೆ. ಶೃಂಗೇರಿ ಸುತ್ತಮುತ್ತ ದಶಕಗಳ ಹಿಂದೆಯೇ ಕಾಣಿಸಿಕೊಂಡು, ಔಷಧವಿಲ್ಲದೆ ತೋಟಗಳನ್ನೇ ನಾಶಮಾಡುತ್ತಿರುವ ಅಡಿಕೆಯ ರೋಗದ ಹೆಸರೂ ಹಳದಿ ಎಲೆ ರೋಗ!!!

ಇತ್ತೀಚಿಗಿನ (ಈಗಿನ ಮತ್ತು ಹಿಂದಿನ) ರಾಜ್ಯ ಸರಕಾರಗಳು ಮಲೆನಾಡಿನ ಅಡಿಕೆ ಬೆಳೆಗಾರರಿಗೆ ಹಳದಿ ಪತ್ರಿಕೆಗಳಂತೆ, ಹಳದಿ ಕಾಮಾಲೆ ರೋಗದಂತೆ, ಅಡಿಕೆ ಹಳದಿ ಎಲೆ ರೋಗದಂತೆ, ಹಳದಿ ಸರಕಾರಗಳಾಗಿವೆ!!

ಹೇಗೆ ಎಂಬುದನ್ನು ಒಂದೊಂದೆ ನೋಡುವ:

1. “ಫಸಲ್ ಭೀಮಾ ಯೋಜನೆಗೆ ರಾಜ್ಯ ಸರ್ಕಾರ ಗುಡ್ ಬೈ?” ಹೇಳ್ತಾ ಇದೆ ಎಂಬ ವರದಿ ಮೊನ್ನೆ ಪ್ರಕಟವಾಗಿದೆ, ಪ್ರಶ್ನಾರ್ಥಕ ಚಿಹ್ನೆಯೊಂದಿಗೆ!!. ಅಲ್ಲಿಗೆ ಅತಿವೃಷ್ಟಿಯಿಂದ ಬೆಳೆ ಕಳೆದುಕೊಂಡಿದ್ದ ರೈತರಿಗೆ ಸಮಾಧಾನ ನೀಡುತ್ತಿದ್ದ, ಹಿಂದೆ 3 ವರ್ಷಗಳು ರೈತರಿಗೆ ವರದಾನವಾಗಿದ್ದ ಮತ್ತು ಕಳದೆರೆಡು ವರ್ಷಗಳಲ್ಲಿ ವಿವಿಧ ಕಾರಣಗಳಿಂದ ಅಡಿಕೆ ಬೆಳೆಗಾರರಿಗೆ ಪರಿಹಾರ ಸಿಗದಂತೆ ಮಾಡಿದ್ದ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಗೆ ರಾಜ್ಯ ಸರಕಾರ ‘ಹಳದಿ’ ಅಕ್ಷತೆ ಸೇರಿಸಿ ತಿಲಾಂಜಲಿ ಇಟ್ಟಂತೆ ತ ಹೊಸ ಬೆಳೆ ವಿಮಾ ಯೋಜನೆಗೆ ಸರಕಾರದ ಚಿಂತನೆ” ಅಂತ ಅದೇ ವರದಿಯಲ್ಲಿ ಪ್ರಕಟವಾಗಿದೆ. ಹಿಂದಿನ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಗೆ ಈಗಾಗಲೆ ಗುಡ್ ಬೈ ಹೇಳಿಯಾಯ್ತಾ? ಹೊಸ ಸ್ವಂತ ಯೋಜನೆಗೆ ಚಿಂತನೆ ಶುರುವಾಗಿದೆಯಾ? ಚರ್ಚೆ ನೆಡೆಯುತ್ತಿದೆಯಾ? ಹಳೇ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ‘ಕೈ’ ಬಿಡುವುದಕ್ಕೆ ಮತ್ತು ಹೊಸ ಯೋಜನೆಗೆ ಮುಂಚಿತವಾಗಿಯೇ ಯಾಕೆ ಚಿಂತನೆ ಮಾಡಲಿಲ್ಲ? ಜೂನ್ ಕೊನೆಯಲ್ಲಿ ರೈತರು ಪ್ರೀಮಿಯಮ್ ಕಟ್ಟಿ, ಜುಲೈ‌ಯಿಂದ ರೈತರಿಗೆ ರಿಸ್ಕ್ ಕವರೇಜ್ ಶುರುವಾಗಬೇಕಿತ್ತು, ಆದರೆ ಅರ್ಧ ಮುಂಗಾರು ಆದ ಮೇಲೆ ಈಗಿರುವ ಇನ್ಷ್ಯೂರೆನ್ಸ್‌ಗೆ ‘ಗುಡ್ ಬೈ’ ಮತ್ತು ಹೊಸ ‘ಸ್ವಂತ’ ಇನ್ಷ್ಯೂರೆನ್ಸ್ ಬಗ್ಗೆ ಚಿಂತನೆ ಶುರುವಾಗಿದ್ದೇಕೆ? ಹಳೇ ಇನ್ಷ್ಯೂರೆನ್ಸ್ ‘ಕೈ’ ಬಿಡಲು ತಜ್ಞರ ಸಮಿತಿ ಮಾಡಿತ್ತಾ? ವರದಿ ಬಂದಿತ್ತಾ? ಹಿಂದಿನ ಇನ್ಷ್ಯೂರೆನ್ಸ್‌ನಲ್ಲಿದ್ದ ಲೋಪಗಳನ್ನು ರೈತರ ಪರವಾಗಿ ನಿಂತು ಬಹಿರಂಗ ಮಾಡುತ್ತಿಲ್ಲ ಏಕೆ? ಹೊಸ ಇನ್ಷ್ಯೂರೆನ್ಸ್‌ಗೆ ಚಿಂತನೆ ಮಾಡುತ್ತಿದ್ದರೆ, ಅದರ ಅನುಷ್ಠಾನಕ್ಕೆ ಕಾಲ ಯಾವಾಗ? ಅಧಿಕಾರಕ್ಕೆ ಬಂದು 24 ಗಂಟೆಯಲ್ಲಿ ಮಾಡುತ್ತೇವೆ ಎಂದು ಘೋಷಣೆ ಮಾಡಿದ್ದ ಗ್ಯಾರಂಟಿ ಯೋಜನೆಗಳೇ ಮುಂದಕ್ಕೆ ಹೋಗುತ್ತಿರುವಾಗ, ಚಿಂತನೆಯ ಹಂತದಲ್ಲಿರುವ ಇನ್ಷ್ಯೂರೆನ್ಸ್ ಯೋಜನೆಗಳು ಯಾವಾಗ ಜಾರಿ ಆಗುತ್ತವೆ ಅಂತ ಸರಕಾರ ರೈತರ ಕಿವಿ ಮೇಲೆ ‘ಹಳದಿ’ ದಾಸಿವಾಳ ಇಟ್ಟು ಹೇಳುವುದಕ್ಕೆ ಹೊರಟಿದೆಯಾ?

2) ಹಿಂದಿದ್ದ ಇನ್ಷ್ಯೂರೆನ್ಸ್‌ನಲ್ಲಿ ಅನೇಕ ಲೋಪದೋಷಗಳಿದ್ದು, ಅಡಿಕೆ ಬೆಳೆಗಾರರಿಗೆ ಎರಡು ವರ್ಷಗಳು ಕಂಡು ಕೇಳಿರದ ಅತಿವೃಷ್ಟಿ ಆದರೂ, ರೈತ ಆತ್ಮಹತ್ಯೆ ಮಾಡಿಕೊಂಡರೂ, ಇನ್ಷ್ಯೂರೆನ್ಸ್ ಕಂಪನಿಗಳು ಮಾತ್ರ ಲಾಭ ಮಾಡಿಕೊಳ್ಳುವಂತಹ ಭಯಂಕರ ಲೋಪಗಳಿದ್ದರೂ, ಆಗಿನ ಸರಕಾರ ‘ಚಿಂತನೆ’ ಮಾಡದೆ ‘ಹಳದಿ’ ಕಣ್ಣಿನಿಂದಲೇ ಮೌನವಾಗಿದ್ದವು!!. ಈಗ ಸರಕಾರದಲ್ಲಿರುವ ಆಗಿನ ವಿರೋಧ ಪಕ್ಷ ಆ ಮೌನಕ್ಕೆ ಪಾರ್ಟ್‌ನರ್ ಆಗಿತ್ತು!!. ಈಗಿನ ಸರಕಾರ ಆ ಇನ್ಷ್ಯೂರೆನ್ಸ್ ಯೋಜನೆಯಲ್ಲಿದ್ದ ಲೋಪದೋಷಗಳನ್ನು ಸರಿ ಮಾಡುವ ಪ್ರಯತ್ನ ಮಾಡದೆ ಗುಡ್ ಬೈ ಹೇಳುವ ಕೆಲಸಕ್ಕೆ ಮುಂದಾಗಿದೆಯಾ? ರೈತ ಕಟ್ಟುವ ಪ್ರೀಮಿಯಮ್ ಪರ್ಸಂಟೇಜ್, ಸರಕಾರಗಳ ಪ್ರೀಮಿಯಂ ಪರ್ಸಂಟೇಜ್ ಅಥವಾ ಇನ್ಯಾವುದಾದರೂ ಪರ್ಸಂಟೇಜ್‌ಗಳಲ್ಲಿ ಈಗಿನ ಸರಕಾರಕ್ಕೆ ‘ಸಮಾಧಾನ’ ಇಲ್ಲವಾ!!!

3) ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಗೆ ಕಟ್ಟುವ ರಿಸ್ಕ್ ಕವರೇಜಿನ 51% ಪ್ರೀಮಿಯಮ್‌‌ನಲ್ಲಿ (ಇಷ್ಟು ಪ್ರೀಮಿಯಮ್ ಪದ್ದತಿ ಪ್ರಪಂಚದ ಯಾವ ದೇಶದಲ್ಲೂ ಇರಲಿಕ್ಕಿಲ್ಲ!!?) ರಾಜ್ಯ ಸರಕಾರದ ಪಾಲು ದೊಡ್ಡದಿರುವುದರಿಂದ, ಗ್ಯಾರಂಟಿ ಯೋಜನೆಗಳಿಗೇ ಹಣವಿಲ್ಲದೆ, ಬಜೆಟ್‌ನಲ್ಲಿ ಇನ್ಷ್ಯೂರೆನ್ಸ್ ಪ್ರೀಮಿಯಮ್ ಮೊತ್ತ ನಿಗದಿ ಮಾಡಲು ಸಾಧ್ಯವಿಲ್ಲದ ‘ಹಿಡನ್ ಕಾರಣದಿಂದಾಗಿ'(?) ಇನ್ಷ್ಯೂರೆನ್ಸ್ ಯೋಜನೆ ನಿಲ್ಲಿಸಲಾಗಿದೆಯಾ?

4) ಈಗಿನ ಸರಕಾರ ಗ್ಯಾರಂಟಿ ಕೊಟ್ಟಿದ್ದನ್ನೇ ಅನುಷ್ಠಾನ ಮಾಡುವುದಕ್ಕೆ ಮೀನಾ ಮೇಷ ಎಣಿಸುತ್ತಿದೆ. ಹೀಗಿರುವಾಗ ಹೊಸ ಇನ್ಷ್ಯೂರೆನ್ಸ್ ಆಗಲಿ, ಅದಕ್ಕೆ ಬೇಕಾಗುವ ಸಾವಿರಾರು ಕೋಟಿ ಪ್ರೀಮಿಯಮ್ ಭರಿಸುವುದಕ್ಕಾಗಲಿ, ಮತ್ತೆ ತೀವ್ರವಾಗಿ ಹರಡುತ್ತಿರುವ ಅಡಿಕೆ ಎಲೆಚುಕ್ಕಿ ರೋಗದ ಸಂಶೋಧನೆಗಾಗಲಿ, ಅಡಿಕೆ ರೋಗಗಳಿಂದ ಸಂತ್ರಸ್ತರಾದವರಿಗೆ ಸಹಾಯ ಮಾಡುವುದಾಗಲಿ, ರಿಯಾಯ್ತಿ ಔಷಧಿ, ದೋಟಿ, ಸಹಾಯ ಧನ ಕೊಡುವುದಾಗಲಿ ಮಾಡುವುದಕ್ಕೆ ಸಾದ್ಯವಿದೆಯೆ?

5) ಆಗ ವಿರೋಧ ಪಕ್ಷದಲ್ಲಿದ್ದು ಅಡಿಕೆ ರೋಗಗಳ ವಿಚಾರದಲ್ಲಿ ಮೌನವಾಗಿದ್ದು, ಈಗ ಅಧಿಕಾರದಲ್ಲಿದ್ದಾಗಲೂ ಮೌನವಾಗಿಯೇ ಮುಂದುವರೆಯಲು ಯೋಚಿಸಿದೆಯಾ?

6) PMPBY ಯೋಜನೆ ಅನುಷ್ಠಾನದಲ್ಲಿ, ಪರಿಹಾರ ವಿತರಣೆಯಲ್ಲಿ ರಾಜ್ಯವು ದೇಶದಲ್ಲೇ ಮೊದಲ ಸ್ಥಾನ” ಎಂಬ ವರದಿ ಇತ್ತೀಚಗೆ ಪ್ರಕಟವಾಗಿತ್ತು (ಅದು ಅಪ್ಪಟ ಸುಳ್ಳು ಅಂತ ಮಲೆನಾಡಿನ ಪ್ರತೀ ಅಡಿಕೆ ಬೆಳೆಗಾರರಿಗೆ ಗೊತ್ತು!!), ಈಗಿನ ಸರಕಾರ ಮೊನ್ನೆ ಇದೇ PMPBY ಯೋಜನೆ ಬಗ್ಗೆ “ಇನ್ಷ್ಯೂರೆನ್ಸ್ ಕಂಪನಿಗಳು ಕಟ್ಟಿದ ಪ್ರೀಮಿಯಂ‌ಗಿಂತ ಐದಾರು ಪಟ್ಟು ಹೆಚ್ಚು ಕ್ಲೈಮ್‌ನ್ನು ರೈತರಿಗೆ ಕೊಟ್ಟಿದ್ದರಿಂದ, ಕಂಪನಿಗಳಿಗೆ ನಷ್ಟವಾಗಿದೆ ಎಂದು ಹೇಳಿಕೆ ಕೊಟ್ಟಿದೆ. ಪಾಲಿಸಿ ರಿಸ್ಕ್ ಮೊತ್ತದ 51% ಪ್ರೀಮಿಯಂ ಕಟ್ಟಿಸಿಕೊಳ್ಳುವ ಇನ್ಷ್ಯೂರೆನ್ಸ್ ಕಂಪನಿಗಳು ಐದಾರು ಪಟ್ಟು ನಷ್ಟ ಪರಿಹಾರ ಕೊಡುವುದಾದರೂ ಹೇಗೆ? ಇಂತಹ ಸುಳ್ಳು ವರದಿಗಳನ್ನು ಮಂತ್ರಿಗಳ ಬಾಯಲ್ಲಿ ಹೇಳಿಸುವ ಅಧಿಕಾರಿಗಳಿಗೆ *ಏನೆಲ್ಲ ಲಾಭ* ಇರಬಹುದು?

7) ಈಗ ಹಿಂದಿನ ಸರಕಾರದ ‘ಬಣ್ಣದವೇಷ’ಗಳನ್ನು ನೋಡೋಣ:

a) ಅಡಿಕೆ ಬೆಳೆಗಾರರ ಸಮಾವೇಶ ಮಾಡಿ, ಕೇಂದ್ರ ಸಚಿವರನ್ನು ಕರೆಸಿದ್ದಾಯ್ತು.

b) ಬೆಳೆಗಾರರ ಸಂಘ ಅಸಮರ್ಪಕ ಇನ್ಷ್ಯೂರೆನ್ಸ್ ಪರಿಹಾರ ವಿಚಾರವೂ ಸೇರಿದಂತೆ ಎಲೆಚುಕ್ಕಿ ರೋಗದ ಘನ ವಿಚಾರದಲ್ಲಿ ಮನವಿ ಪಡೆದಿದ್ದಾಯ್ತು,

c) ಸೆಂಟ್ರಲ್ ತಜ್ಞರ ಟೀಮ್ ಕರೆಸಿದ್ದಾಯ್ತು, ಅವರು ರೈತರಿಗೆ ತಿಳಿಯದಂತೆ ಸರಕಾರಕ್ಕೆ ರಹಸ್ಯ ವರದಿ ಕೊಟ್ಟಿದ್ದಾಯ್ತು!!

d) ಅಡಿಕೆ ಎಲೆಚುಕ್ಕಿ ಸಂಶೋಧನೆಗೆ ಕೇವಲ ಭಾಷಣದಲ್ಲಿ ಕೋಟಿ ಕೋಟಿ ಕೊಟ್ಟಿದ್ದಾಯ್ತು,

e) ಗೃಹ ಮಂತ್ರಿಗಳು, ತೋಟಗಾರಿಕಾ ಮಂತ್ರಿಗಳು, ಕೇಂದ್ರ ಕೃಷಿ ಸಚಿವರು, ಮುಖ್ಯ ಮಂತ್ರಿಗಳು, ಕ್ಷೇತ್ರದ ಜನ ಪ್ರತಿನಿಧಿಗಳು… ಗೂಟದ ಕಾರಲ್ಲಿ, ಹೆಲಿಕ್ಯಾಪ್ಟರ್‌ಗಳಲ್ಲಿ ಬಂದು ಅಡಿಕೆ ಬೆಳೆಗಾರರ ಕಷ್ಟ ವಿಚಾರಿಸಿದ್ದಾಯ್ತು,

f) ವಿಧಾನ ಸಭೆ, ವಿಧಾನ ಪರಿಷತ್ತು, ಸಂಸದ್‌ಗಳಲ್ಲಿ ಅಡಿಕೆ ಎಲೆ ಚುಕ್ಕಿ, ಹಳದಿ ರೋಗಗಳ ಪರಿಣಾಮದ ಬಗ್ಗೆ ಚರ್ಚಿಸಿ ಸಮಯ ಕಳೆದಿದ್ದಾಯ್ತು,

g) ಅವತ್ತಿನ ವಿರೋದ ಪಕ್ಷದ ಪ್ರಶ್ನೆಗೂ, ಆಡಳಿತ ಪಕ್ಷದ ಉತ್ತರಕ್ಕೂ ಮಲೆನಾಡಿನ ರೈತರಿಗೆ ಕೇಳುವಷ್ಟು ಮೇಜು ಕುಟ್ಟಿದ್ದೂ ಆಯ್ತು,

h) ಅಡಿಕೆ ಎಲೆ ಚುಕ್ಕಿ ನಿಯಂತ್ರಣಕ್ಕೆ ಔಷಧಿ ಸ್ಪ್ರೇ ಮಾಡಲು ಎರಡು ಬಾರಿ ತಲಾ 4 ಕೋಟಿ ಅನುದಾನ, ರೋಗ ತೀವ್ರತೆ ಹೆಚ್ಚಿದಾಗ ಹೆಚ್ಚುವರಿ 10 ಕೋಟಿ ಅನುದಾನ, ಬಜೆಟ್‌ನಲ್ಲಿ 10 ಕೋಟಿ ಅನುದಾನದ *ಭರವಸೆ* ಕೊಟ್ಟಿದ್ದೂ ಆಯ್ತು. (ಹಿಂದಿನ ಬಜೆಟ್‌ನ 10 ಕೋಟಿ ಅನುದಾನ, ಈ ಬಜೆಟ್‌ನಲ್ಲಿ ‘ಕೈ’ ಬಿಡಲಾಗಿದೆ!! ಉಳಿದ 18 (4+4+10) ಕೋಟಿ ವಿಚಾರದಲ್ಲಿ ಎಷ್ಟು ಪರ್ಸೆಂಟ್ ಎಲ್ಲಿಗೆ ಹೋಯ್ತು? ಯಾವ ರೈತರಿಗೂ ಗೊತ್ತಿಲ್ಲ!!

i) ಮಧ್ಯದಲ್ಲಿ ಎಲೆ ಚುಕ್ಕಿಗೆ ಸ್ಪ್ರೇ ಮಾಡಲು ಅವತ್ತಿನ ಸರಕಾರ ₹300 ಬೆಲೆಯ ಹೆಕ್ಸಾಕೊನಾಜೋಲ್ ಎಂಬ ಔಷಧಿ ಉಚಿತ ಕೊಟ್ಟು, ರೈತರು ಅದನ್ನು ಮನೆಗೆ ತಂದು “ಯಾವತ್ತು ಔಷಧಿ ಹೊಡೆಯೋಣ?” ಅಂತ ಯೋಚನೆ ಮಾಡುವ ಮೊದಲೆ ಅದೇ ಸರಕಾರದ ತಜ್ಞರ ಮೂಲಕ “ಹೆಕ್ಸಾಕೊನಾಜೋಲ್ ಅಷ್ಡು ಪರಿಣಾಮಕಾರಿ ಅಲ್ಲ, ಬದಲಿಗೆ ಪ್ರೊಪೊಕೊನಾಜೋಲ್ ಅಥವಾ ಟ್ಯುಬೊಕೊನಾಜೋಲ್ ಹೊಡೆಯಿರಿ” ಅಂತ ಹೇಳಿಸಿದ್ದೂ ಆಯ್ತು. (ಹೆಕ್ಸಾಕೊನಾಜೋಲ್ ಇವತ್ತಿಗೂ ಅನೇಕ ರೈತರ ಸೌದೆ ಕೊಟ್ಟಿಗೆಯಲ್ಲಿ ಭದ್ರವಾಗಿ ಕುಳಿತಿದೆ!!)

j) ಅಡಿಕೆ ಬೆಳೆಗಾರರ ತೀವ್ರ ಒತ್ತಾಯದ ಮೇರೆಗೆ “ಅಗತ್ಯ ಬಿದ್ದರೆ, ಇಸ್ರೇಲ್‌ನಿಂದ ನುರಿತ ವಿಜ್ಞಾನಿಗಳನ್ನು ಕರೆಸುತ್ತೇವೆ” ಎಂದು ಶಾರದೆಯ ನೆಲೆ ಶೃಂಗೇರಿಯಲ್ಲಿ ಭರವಸೆ ಕೊಟ್ಟ ಸರಕಾರ, ಶೃಂಗೇರಿ-ತೀರ್ಥಹಳ್ಳಿಗಳ ಅಡಿಕೆ ಸಂಶೋಧನಾ ಕೇಂದ್ರಗಳಿಗೆ *ಎಲೆ ಚುಕ್ಕಿ ರೋಗದ ಸಂಶೋಧನೆ ಮತ್ತು ರೋಗಕ್ಕೆ ವ್ಯಾಕ್ಸಿನ್ ಕಂಡು ಹಿಡಿಯಲು* ಮೂರು ಜನ ದೇಶೀಯ ವಿಜ್ಞಾನಿಗಳನ್ನು ಡೆಪ್ಯುಟ್ ಮಾಡಿತು!!. ಅತ್ಯಂತ ಹಾಸ್ಯಾಸ್ಪದ ವಿಚಾರ – ಮೂರು ಜನ ವಿಜ್ಞಾನಿಗಳು ಅಡಿಕೆ ಕ್ಷೇತ್ರಕ್ಕೇ ಹೊಸಬರು!!! ಅಡಿಕೆ ಕ್ಷೇತ್ರದ ಸಂಶೋದನೆಯ ಅನುಭವ ಶೂನ್ಯ ಅಂತ ರೈತರೊಂದಿಗಿನ ಸಂವಾದದಲ್ಲಿ ಸ್ವತಃ ವಿಜ್ಞಾನಿಗಳೇ ಒಪ್ಪಿಕೊಂಡಿದ್ದರು!!. ಸುಮಾರು 6-7 ತಿಂಗಳಾದರೂ ಹೊಸ ವಿಜ್ಞಾನಿಗಳು ಔಷಧಿ, ವ್ಯಾಕ್ಸಿನ್ ಇರಲಿ, ಎಲೆ ಚುಕ್ಕಿ ರೋಗಕ್ಕೆ ಪ್ರಥಮ ಚಿಕಿತ್ಸೆ ಮಾರ್ಗದರ್ಶನ ಕೊಟ್ಟಿಲ್ಲ.

ಈಗಿನ ಜನ ಪ್ರತಿನಿಧಿಗಳೂ ಅಸಮರ್ಪಕ ಅಡಿಕೆ ಇನ್ಷ್ಯೂರೆನ್ಸ್ ಮತ್ತು ಎಲೆ ಚುಕ್ಕಿ ರೋಗದ ವಿಚಾರದಲ್ಲಿ ದಿವ್ಯ ನಿರ್ಲಕ್ಷ್ಯ ತೋರುತ್ತಿರುವುದು ಅಡಿಕೆ ಬೆಳೆಗಾರರಲ್ಲಿ ತೀವ್ರ ಅಸಮಧಾನ ಉಂಟು ಮಾಡಿದೆ.

ಕೇಸರೀಕರಣ, ಹಸಿರುಕರಣದ ರಾಜಕೀಯದಲ್ಲೇ ನಿರತವಾದ ಪಕ್ಷಗಳು ಹಸಿರು ಅಡಿಕೆ ತೋಟಗಳು ಹಳದಿ ರೋಗ ಬಂದಿದ್ದರೂ, ಕಪ್ಪು ಎಲೆ ಚುಕ್ಕಿ ರೋಗ ಬಂದು ತೋಟಗಳೇ ನಾಶವಾಗಿ, ಮಲೆನಾಡಿಗರ ಬದುಕೇ ರೆಡ್ ಅಲಾರ್ಟ್ ಆದರೂ ಅವತ್ತು ಸರಕಾರ ನೆಡೆಸಿದ, ಇವತ್ತು ಸರಕಾರ ನೆಡೆಸುತ್ತಿರುವ ಬಿಳಿ ಬಟ್ಟೆಯವರಿಗೆ ಕಿಂಚಿತ್ತೂ ಕಾಳಜಿ ಇಲ್ಲದೇ ಹೋಗಿದ್ದು ಅಡಿಕೆ ಬೆಳೆಗಾರರ ದುರಂತ.

ವಾತಾವರಣದ ಬಿಸಿಲು ಮಳೆ ಆಟದ ರಮ್ಯ ವಾತಾವರಣದಲ್ಲಿ ಎಲೆ ಚುಕ್ಕಿ ರೋಗದ ಫಂಗಸ್‌ಗಳ ಪಾಪ್ಯುಲೇಷನ್ ಯಾವುದೇ ಕುಟುಂಬ ಯೋಜನೆ ಚಿಕಿತ್ಸೆಗೆ ಒಳಪಡದೆ, ಪಕ್ಷ ಭೇದವಿಲ್ಲದೆ, ಭಯಾನಕವಾಗಿ ಬೆಳೆಯುತ್ತಿದೆ, ಹರಡುತ್ತಿದೆ.

ಒಂದೆರೆಡು ವರ್ಷಗಳಲ್ಲಿ ಮಲೆನಾಡಿನ ಅಡಿಕೆ ತೋಟಗಳು ನಾಶವಾಗುವುದು ‘ಗ್ಯಾರಂಟಿ’ ಅಂತ ಅಡಿಕೆ ಬೆಳೆಗಾರರು ಸಂಕಟದಲ್ಲಿ ಮಾತಾಡಿಕೊಳ್ತಾ ಇದ್ದಾರೆ.

ಬರಹ :
ಅರವಿಂದ ಸಿಗದಾಳ್, ಮೇಲುಕೊಪ್ಪ.
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸ್ವಚ್ಛತಾ ಅಭಿಯಾನ | 3570 ಟನ್ ಕಟ್ಟಡ ತ್ಯಾಜ್ಯ ತೆರವು

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬೃಹತ್ ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಎರಡು…

11 hours ago

ಇಂದು ಶೂನ್ಯ  ನೆರಳಿನ ದಿನ | ಪಿಲಿಕುಳದಲ್ಲಿ  ಪ್ರಾತ್ಯಕ್ಷಿಕೆ

ಎಪ್ರಿಲ್ 24 ರಂದು ಮಧ್ಯಾಹ್ನ ನಿಮ್ಮ ನೆರಳನ್ನು ಕಾಣಲಾಗುವುದಿಲ್ಲ.  ಏಕೆಂದರೆ ಈಗ ಕರ್ಕಾಟಕ…

11 hours ago

ಬದುಕು ಕಲಿಸುವ ಪಾಠಗಳು

ಹಂಚಿ ತಿನ್ನುವ ಅಭ್ಯಾಸ ರೂಡಿ ಇಲ್ಲವಾದರೂ ಸಂಸಾರಿಯಾದ ಕೂಡಲೇ ಎಲ್ಲವೂ ಬದಲಾಗುತ್ತದೆ. ಆ…

11 hours ago

82 ವರ್ಷಗಳ ಬಳಿಕ ಅಕ್ಷಯ ತೃತೀಯ ದಿನವೇ 3 ಅಪರೂಪದ ಯೋಗಗಳ ನಿರ್ಮಾಣ

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

12 hours ago

ಪ್ರಕೃತಿ ಸೌಂದರ್ಯ ಮತ್ತು ಧಾರ್ಮಿಕತೆ ಮೇಳೈಸಿದ ಸ್ಥಳ ನಾಕೂರುಗಯ | ಭಕ್ತಿ ಪ್ರಕೃತಿಗಳ ಸಂಗಮ

ಸಕಲಜೀವಿಗಳ ಆಡುಂಬೊಲ ನಮ್ಮೀ  ಪ್ರಕೃತಿ. ಪ್ರಕೃತಿಯೊಡಲು ನಮ್ಮತಾಯ ಮಡಿಲು. ಪ್ರಕೃತಿಯು ಕೆಲವೆಡೆ ರುದ್ರರಮಣೀಯ;…

12 hours ago

ಕೂಡಿಟ್ಟ ಆಸ್ತಿ ಮನೆಯಲ್ಲೇ ನಡೀತು ಕುಸ್ತಿ

ಹಕ್ಕಿಗಳು ಮರಿಗಳಿಗೆ ಹಾರಲು ಕಲಿಸುತ್ತವೆ. ಒಮ್ಮೆ ಹಾರಲು ಬಂತೆಂದರೆ ಗೂಡು ಬಿಟ್ಟು ಹಾರುತ್ತವೆ…

20 hours ago