ಯಕ್ಷಗಾನ ಕಲೆ ಅಥವಾ ಇನ್ಯಾವುದೇ ಕಲೆಯು ಕೇವಲ ಮನರಂಜನೆಯಷ್ಟೇ ಅಲ್ಲ. ಪ್ರತೀ ಕಲೆ ಹಾಗೂ ಕಲಾವಿದರು ಇನ್ನಷ್ಟು ಮಂದಿಯ ಬದುಕಿಗೆ ಪ್ರೇರಣೆಯಾಗುತ್ತಾರೆ. ಅಂತಹ ಕಲಾವಿದರ ಸಾಲಿನಲ್ಲಿ ಪ್ರಸಿದ್ಧ ಹಿಮ್ಮೇಳವಾದಕ ದೇಲಂತಮಜಲು ಸುಬ್ರಹ್ಮಣ್ಯ ಭಟ್ ಅವರು ಇದ್ದಾರೆ ಎಂದು ಸಿರಿಬಾಗಿಲು ವೆಂಕಪ್ಪಯ್ಯ ಪ್ರತಿಷ್ಟಾನದ ಸಂಚಾಲಕ ರಾಮಕೃಷ್ಣ ಮಯ್ಯ ಹೇಳಿದರು.
ಅವರು ಕುಕ್ಕೆ ಸುಬ್ರಹ್ಮಣ್ಯದ ರಥಬೀದಿಯ ನೂತನ ಸಭಾಗೃಹದಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸಹಯೋಗದಲ್ಲಿ ಯಕ್ಷಮಿತ್ರರು ಬಳಗ ಕುಕ್ಕೆ ಸುಬ್ರಹ್ಮಣ್ಯ ಆಯೋಜಿಸಿದ ಸನ್ಮಾನ ಕಾರ್ಯಕ್ರಮ ಹಾಗೂ ಶ್ರೀದೇವೀಮಹಾತ್ಮ್ಯೆ ಯಕ್ಷಗಾನ ಬಯಲಾಟ ಕಾರ್ಯಕ್ರಮದಲ್ಲಿ ಮಾತನಾಡಿದರು. ಯಕ್ಷಗಾನ ಪ್ರದರ್ಶನ ಮಾತ್ರವಲ್ಲ, ಕಲೆ, ಕಲಾವಿದರಿಗೆ ಪ್ರೋತ್ಸಾಹ, ಅಭಿನಂದನೆ ಹಾಗೂ ಗುರುತಿಸುವ ಕೆಲಸ ಅಕಾಡೆಮಿ ಕಡೆಯಿಂದಲೂ ನಡೆಯುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಹಿರಿಯ ಹಿಮ್ಮೇಳ ವಾದಕ ದೇಲಂತಮಜಲು ಸುಬ್ರಹ್ಮಣ್ಯ ಭಟ್ ಅವರು ಯಕ್ಷಗಾನಕ್ಕೆ ನೀಡಿದ ಕೊಡುಗೆ ಅಪಾರವಾಗಿದೆ. 40 ವರ್ಷಗಳಿಂದಲೂ ಅನೇಕರಿಗೆ ಕಲಾ ರಸದೌತಣ ನೀಡಿದ್ದಷ್ಟೇ ಅಲ್ಲ, ಅನೇಕರಿಗೆ ಪ್ರೇರಣೆಯೂ ಆಗಿದ್ದಾರೆ. ಇಂತಹ ಶ್ರೇಷ್ಟ ಕಲಾವಿದರಿಗೆ ಗೌರವಿಸುವುದು ಅಗತ್ಯವಾದ ಕೆಲಸ. ಯಕ್ಷಗಾನ ಅಕಾಡೆಮಿ ಹಾಗೂ ಯಕ್ಷಮಿತ್ರರ ಬಳಗ ಮಾಡಿರುವ ಕೆಲಸ ಸ್ತುತ್ಯರ್ಹ ಎಂದರು.
ಸಭಾಧ್ಯಕ್ಷತೆಯನ್ನು ವಹಿಸಿದ್ದ ಕಲಾಸಂಘಟಕ ಯಜ್ಞೇಶ್ ಆಚಾರ್, ಕಲಾವಿದರನ್ನು ಗೌರವಿಸುವ ಮೂಲಕ ಕಲೆಗೆ ಹೆಚ್ಚಿನ ಪ್ರೋತ್ಸಾಹ ನೀಡಿದಂತಾಗುತ್ತದೆ. ಇಂತಹ ಕಾರ್ಯಗಳು ಹೆಚ್ಚು ನಡೆಯಲಿ ಎಂದರು.
ಯಕ್ಷಮಿತ್ರರು ಬಳಗ ಕುಕ್ಕೆ ಸುಬ್ರಹ್ಮಣ್ಯ ಇದರ ಸಂಚಾಲಕ ಶಂಭಯ್ಯ ಕಂಜರ್ಪಣೆ ಪ್ರಸ್ತಾವನೆಗೈದು, ಕುಕ್ಕೆ ಸುಬ್ರಹ್ಮಣ್ಯದ ಯಕ್ಷಮಿತ್ರ ಬಳಗವು ಅನೇಕ ವರ್ಷಗಳಿಂದ ಯಕ್ಷಗಾನ ರಂಗಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಿದೆ. ಗ್ರಾಮೀಣ ಭಾಗದಲ್ಲೂ ನಮ್ಮ ಮಣ್ಣಿನ ಕಲೆ ಯಕ್ಷಗಾನವನ್ನು ಗಟ್ಟಿಗೊಳಿಸುವಲ್ಲಿ ಶ್ರಮ ವಹಿಸಿದೆ. ಊರಿನಲ್ಲಿ ಮಾತ್ರವಲ್ಲ ಪರವೂರಿನಲ್ಲೂ ಯಕ್ಷಗಾನ ರಂಗಕ್ಕಾಗಿ ಯಕ್ಷಮಿತ್ರರ ಬಳಗವು ಕೆಲಸ ಮಾಡಿದೆ. ಯಕ್ಷಗಾನ ಸಂಘಟನೆ ಮಾತ್ರವಲ್ಲ, ಯಕ್ಷಗಾನ ರಂಗದ ಒಬ್ಬ ಸಾಧಕನನ್ನು ಗುರುತಿಸುವ ಮೂಲಕ ಈಗ ಇನ್ನೊಂದು ಹೆಜ್ಜೆಯತ್ತ ಸಾಗಿದೆ ಎಂದರು.
ವೇದಿಕೆಯಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಪುರೋಹಿತ ಸರ್ವೇಶ್ವರ ಭಟ್ ಅವರು ಉಪಸ್ಥಿತರಿದ್ದರು. ಕಲಾವಿದ ಲಕ್ಷ್ಮಣ ಕುಮಾರ್ ಮರಕಡ ಸನ್ಮಾನ ಪತ್ರ ವಾಚಿಸಿದರು. ಇದೇ ವೇಳೆ, ಈಚೆಗಷ್ಟೆ ಅಗಲಿದ ಖ್ಯಾತ ಭಾಗವತ ದಿನೇಶ್ ಅಮ್ಮಣ್ಣಾಯ ಅವರಿಗೆ ಶ್ರದ್ಧಾಂಜಲಿ ನಡೆಯಿತು. ಕರ್ನಾಟಕ ಯಕ್ಷಗಾನ ಅಕಾಡಮಿ ಬೆಂಗಳೂರು ಇದರ ಸಹಯೋಗದೊಂದಿಗೆ ನಡೆದ ಕಾರ್ಯಕ್ರಮದಲ್ಲಿ ಬೆಳಗ್ಗೆ ಕಾರ್ಯಕ್ರಮ ಉದ್ಘಾಟನೆ ಮತ್ತು ಚಿಂತನಾಗೋಷ್ಠಿ ನಡೆಯಿತು. ಸಂಜೆ ಶ್ರೀದೇವೀ ಮಹಾತ್ಮ್ಯೆ ಯಕ್ಷಗಾನ ಪ್ರದರ್ಶನ ನಡೆಯಿತು. ನೂರಾರು ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆ ಮುಂಜಾಗೃತಾ ಕ್ರಮವಾಗಿ…
ಮಂಗಳೂರಿನಲ್ಲಿ ಜುಲೈ 30ರಂದು ವಿವಿಧ ಖಾಸಗಿ ಸಂಸ್ಥೆಗಳ ಹುದ್ದೆಗಳ ಭರ್ತಿಗಾಗಿ ನೇರ ಸಂದರ್ಶನ…
ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿರುವ ಭಾರತ, ರಸಗೊಬ್ಬರದಲ್ಲಿ ಇನ್ನೂ ಆಮದು ಅವಲಂಬಿತವಾಗಿದೆ. ದೇಶೀಯ…
ಕರಾವಳಿ ಮತ್ತು ಮಲೆನಾಡಿನಲ್ಲಿ ಸಾಧಾರಣ ಮಳೆ ಮುಂದುವರಿಯಲಿದ್ದು, ಸುಳ್ಯ-ಮಡಿಕೇರಿ ಘಾಟಿ ಭಾಗಗಳಲ್ಲಿ ಮಳೆ…
ಕಣ್ಣೂರಿನ ಜಿನೇಶ್ ಕಲಿಯಾಣಿ 18 ಕರಿಮೆಣಸು ತಳಿಗಳ ನರ್ಸರಿ, ಮಿಶ್ರ ಕೃಷಿ ಮತ್ತು…
ಕರಾವಳಿಯಲ್ಲಿ ಭಾರೀ ಮಳೆಯ ಮುನ್ಸೂಚನೆ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಶಾಲೆ,…