ಆಜಾದಿ ಕಾ ಅಮೃತ ಮಹೋತ್ಸವ… | ಗ್ರಾಮೀಣ ಭಾಗದ ಸಮಸ್ಯೆಗಳು… | ಮಾಧ್ಯಮ ವರದಿಗಳು…. | ಅಪವಾದಗಳು…! |

July 14, 2022
11:54 PM

ಗ್ರಾಮೀಣ ಭಾಗದ ಸಮಸ್ಯೆಗಳು  ಹಲವಾರು.ಈಚೆಗೆ ಸಾಮಾಜಿಕ ಜಾಲತಾಣಗಳು ಹೆಚ್ಚು ಸಕ್ರಿಯವಾದ ಬಳಿಕ ಸಮಸ್ಯೆಗಳೂ ಹೆಚ್ಚು ಹೆಚ್ಚು ಬೆಳಕಿಗೆ ಬರುತ್ತಿವೆ. ಅನೇಕ ಬಾರಿ “ಯಾಕೆ ಸುಮ್ಮನೆ” ಎನ್ನುತ್ತಿದ್ದ ಎಲ್ಲಾ ಪ್ರಕರಣಗಳೂ ಹೊರಜಗತ್ತಿಗೆ ಕಾಣುತ್ತಿವೆ. ಅಂತಹ ಮೂಲಭೂತ ಸಮಸ್ಯೆಗಳ ಕಡೆಗೆ ಮಾಧ್ಯಮಗಳೂ ಬೆಳಕು ಚೆಲ್ಲುತ್ತವೆ. ಆದರೆ ಈಗ ಇಂತಹ ಪ್ರಕರಣಗಳು ಬಿಸಿ ತುಪ್ಪವಾಗಿದೆ. ಎರಡೂ ಕಡೆಯಿಂದ ಅಪವಾದಗಳು ಮಾಧ್ಯಮಗಳ ಮೇಲೆ…!.

Advertisement
Advertisement

ಗ್ರಾಮೀಣ ಭಾಗದ ಸಮಸ್ಯೆಗಳಿಗೆ ಈಗಲಾದರೂ ಪರಿಹಾರ ದೊರೆಯಬೇಕು. ಇಡೀ ದೇಶದಲ್ಲಿ ಆಜಾದಿ ಕಾ ಅಮೃತಮಹೋತ್ಸವ ಆಚರಣೆ ಮಾಡಲಾಗುತ್ತಿದೆ. ವಿವಿಧ ಇಲಾಖೆಗಳು ಕೆಲಸ ಇದೇ ಹಿನ್ನೆಲೆಯಲ್ಲಿ ಕೆಲಸ ಮಾಡುತ್ತಿವೆ. ” ದೇಶವು ಪ್ರತಿಯೊಬ್ಬರ ಕೊಡುಗೆಯನ್ನು ಸ್ವೀಕರಿಸಿದಾಗ, ಗೌರವಿಸಿದಾಗ ಮತ್ತು ಅಂಗೀಕರಿಸಿದಾಗ ಮಾತ್ರ ಅದು ಮುಂದುವರೆಯುತ್ತದೆ. ನಾವು ಇದೇ ಮಂತ್ರದೊಂದಿಗೆ ಬೆಳೆದಿದ್ದೇವೆ. ಮತ್ತು ಅದೇ ಮಂತ್ರದೊಂದಿಗೆ ಮುಂದುವರೆಯಲು ಇಚ್ಛಿಸುತ್ತೇವೆ ” ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಆಜಾದಿ ಕಾ ಅಮೃತಮಹೋತ್ಸವ ಆಚರಣೆ ಬಗೆಗಿನ ಮೊದಲ ಭಾಷಣದಲ್ಲಿ ಹೇಳಿದ್ದರು. ಈ ಸಂದರ್ಭದಲ್ಲಿ ಗ್ರಾಮೀಣ ಭಾಗದ ಜನರು “ಆಜಾದಿ ಕಾ ಅಮೃತ ಮಹೋತ್ಸವ” ವನ್ನು ಸೌಲಭ್ಯದ ಬೇಡಿಕೆಯ ಮೂಲಕ, ನವ ಭಾರತವನ್ನು ಕಟ್ಟಲು ಕಾತರರಾಗಿದ್ದಾರೆ. ಇಂದಿಗೂ ಗ್ರಾಮೀಣ ಭಾಗದಲ್ಲಿ ಹಲವಾರು ಸಮಸ್ಯೆಗಳು ಜೀವಂತವಾಗಿವೆ. ಅವು ಬದುಕಿನ ಪ್ರಶ್ನೆ. ಹೊರ ಜಗತ್ತಿನ ಸಂಪರ್ಕಕ್ಕೆ ಇರುವ ಮಾರ್ಗಗಳು. ಇಂದಿಗೂ ಬಗೆಹರಿಯದ ಸಮಸ್ಯೆಗಳ ಕಡೆಗೆ ಅದೇ ಊರಿನ ಜನರು ಆಕ್ರೋಶ, ಅಸಹನೆ ವ್ಯಕ್ತಪಡಿಸುವುದು  ಸಹಜವೇ. ಏಕೆಂದರೆ ಆ ಸಮಸ್ಯೆ, ಅನುಭವಿಸಿದ ನೋವು ಅವರಿಗೆ ಮಾತ್ರಾ ಅರ್ಥವಾಗುತ್ತದೆ. ಇದೇ ನೋವನ್ನು ಇಂದು ದೇಶದ ಪ್ರಧಾನಿಯಿಂದ ತೊಡಗಿ ಅಂತರಾಷ್ಟ್ರೀಯ ಮಟ್ಟದಲ್ಲೂ ಉಪಯೋಗಿಸುವ ಡಿಜಿಟಲ್‌ ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳನ್ನು ಬಳಸಿ ಗ್ರಾಮೀಣ ಜನರೂ ತಮ್ಮ ನೋವನ್ನು ಹೊರಜಗತ್ತಿಗೆ ತೆರೆದಿಡುತ್ತಾರೆ. ಆದರೆ ಅನೇಕ ಸಮಯದಲ್ಲಿ  ಇದೇ ಅಪಥ್ಯವಾಗುತ್ತದೆ. ಬರೆದವರು, ಬರೆಯಿಸಿದವರು ಕೆಂಗಣ್ಣಿಗೆ ಗುರಿಯಾಗುತ್ತಾರೆ. “ಆಜಾದಿ ಕಾ ಅಮೃತ ಮಹೋತ್ಸವ”ದ ಸಂದರ್ಭದಲ್ಲಾದರೂ ಗ್ರಾಮೀಣ ಜನರ ಮೂಲಭೂತ ಸಮಸ್ಯೆಗೆ ಪರಿಹಾರ ಒದಗಿಸುವ ಪ್ರಯತ್ನ ಹೆಚ್ಚು ಆಗಬೇಕಿದೆ. ಅದರ ಬದಲಾಗಿ ಮಾಧ್ಯಮಗಳ ಮೇಲೆ, ಸಾಮಾಜಿಕ ಜಾಲತಾಣಗಳ ಮೇಲೆಯೇ ಅಸಮಾಧಾನ ವ್ಯಕ್ತಪಡಿಸುವುದು  ಕಂಡುಬರುತ್ತದೆ.

ಸುಳ್ಯದಲ್ಲಿ ಇದು ಎರಡು ಘಟನೆಗಳು ನಡೆದಿದೆ. ಒಂದು ಕಡೆಯಲ್ಲಿ  ಬಾಳುಗೋಡು ಗ್ರಾಮದ ಉಪ್ಪುಕಳದಲ್ಲಿ  ಕಾಲು ಸಂಕ ನೀರಿಗೆ ಕೊಚ್ಚಿ ಹೋಗಿದೆ. ಅನೇಕ ಸಮಯಗಳಿಂದ ಆ ಭಾಗದ ಜನರು ಸಂಕಷ್ಟ ಅನುಭವಿಸುತ್ತಾರೆ. ಊಹಿಸಿ.. ಇಂದಿನ ದಿನವೂ ಮನೆಯವರೆಗೆ ವಾಹನ ಬಾರದ ವ್ಯವಸ್ಥೆ…! ಸಹಜವಾಗಿಯೇ ಆಕ್ರೋಶ ಇದ್ದೇ ಇರುತ್ತದೆ. ಇದುವರೆಗೂ ಮಾತನಾಡದ ಜನ, ಇಂದಿಗೂ ಮೌನವೇ ಆಗಿರುವ ಜನ…!. ಅಲ್ಲಿನ ಯುವಕರು ಹಾಗಿರಲು ಸಾಧ್ಯವೇ.. ? ಇಷ್ಟೂ ವರ್ಷಗಳ ಕಾಲ ಇದ್ದ ಮಾಧ್ಯಮಗಳೂ ಈ ಬಗ್ಗೆಯೂ ಮಾತನಾಡಿಲ್ಲ…!. ಯಾವಾಗ ಸಾಮಾಜಿಕ ಜಾಲತಾಣದಲ್ಲಿ ಈ ಫೋಟೊ ವೈರಲ್‌ ಆಗಿತ್ತೋ ಅಂದು ಅದೊಂದು ಸಮಸ್ಯೆಯಾಗಿ ಕಂಡಿತು. ಸಚಿವರೂ ಸ್ಥಳಕ್ಕೆ ಭೇಟಿ ನೀಡುವಂತೆ ಮಾಡಿತು. ಸಮಸ್ಯೆ ಪರಿಹಾರ ಕಾಣಲು ಸಾಧ್ಯತೆ ಇದೆ.

ಈ ವೇಳೆ ಮಾಧ್ಯಮಗಳ ಮೇಲೆ, ಸಾಮಾಜಿಕ ಜಾಲತಾಣಗಳ ಮೇಲೆ ಸಹಜವಾಗಿಯೇ ಅಸಮಾಧಾನ ಕೇಳಿಬಂತು. ಹೌದು ಮಾಧ್ಯಮಗಳು ಆದ ಸುದ್ದಿಯನ್ನೂ ಹೇಳಬೇಕು ನಿಜ. ಆದ ಸುದ್ದಿಯನ್ನು ಉದ್ಘಾಟನೆಯ ವೇಳೆ ಹೇಳುತ್ತಾರೆ, ಸುದ್ದಿಗೋಷ್ಟಿಯ ಮೂಲಕ ಇಡೀ ಲೋಕಕ್ಕೆ ತಿಳಿಯುತ್ತದೆ. ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿ ಗ್ರಾಮೀಣ ಭಾಗದ ಸಮಸ್ಯೆಯನ್ನು ಹೇಳದೇ ಇದ್ದರೆ ಗ್ರಾಮೀಣ ಜನರಿಗೆ ಸೌಲಭ್ಯ ದೊರೆಯಲು ಇನ್ನೊಂದು ಅಮೃತಮಹೋತ್ಸವವೇ ಬರಬೇಕಾದೀತು…!. ಸಮಸ್ಯೆಗಳು ಹಲವಾರು ಇವೆ, ನಿಜ ಆದರೆ ಪರಿಹರಿಸಬೇಕಾದವರೇ ತಿರುಗಿ ನೋಡಿದರೆ…?. ಟೀಕೆಗಳು ಇರಲಿ, ಆದರೆ ರಚನಾತ್ಮಕವಾಗಿ ತೆಗೆದುಕೊಳ್ಳಲು ಏಕೆ ಸಾಧ್ಯವಿಲ್ಲ. ಎಲ್ಲವೂ, ಎಲ್ಲರೂ ಪರಿಪೂರ್ಣರಾಗಿರಲು ಸಾಧ್ಯವಿಲ್ಲ. ಆದರೆ ಟೀಕೆಗಳು ಬಂದಾಕ್ಷಣವೇ , ಸಮಸ್ಯೆಗಳನ್ನು ತೋರಿಸಿದ ತಕ್ಷಣವೇ ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳು ಏಕೆ ವಿರೋಧಕ್ಕೆ ಒಳಗಾಗುತ್ತವೆ. ಗ್ರಾಮೀಣ ಭಾಗದ ಸಮಸ್ಯೆಗಳನ್ನು ಹೇಳಿದ ತಕ್ಷಣವೇ ಸ್ಥಳಕ್ಕೆ ಬಾರದ ಮಾಧ್ಯಮಗಳ ಮೇಲೂ ಸಿಟ್ಟು ಬರುತ್ತದೆ. ಆದರೆ, ಗ್ರಾಮೀಣ ಭಾಗದ ಮೂಲಭೂತ  ಸಮಸ್ಯೆಗಳನ್ನು ಹೇಳದೇ ಇರುವ ಮಾಧ್ಯಮಗಳು ಈ ಸಮಾಜಕ್ಕೆ, ಗ್ರಾಮೀಣ ಜನರಿಗೆ ಮಾಡುವ ವಂಚನೆಯೇ ಆಗಿರುತ್ತದೆ.

Advertisement

ಇನ್ನೊಂದು ಘಟನೆಯಲ್ಲಿ, ಪೆರುವಾಜೆ ಗ್ರಾಮ ಮತ್ತು ಕೊಡಿಯಾಲ ಗ್ರಾಮದ ಜನರು ನಿತ್ಯ ಓಡಾಟ ಮಾಡುವ ರಸ್ತೆ. ಇಲ್ಲಿ ಸುಮಾರು 45 ವರ್ಷಗಳ ಹಿಂದೆ ನಿರ್ಮಾಣವಾದ ಕಿಂಡಿಅಣೆಕಟ್ಟು ಇದೆ. ಇದು ಶಿಥಿಲವಾಗಿದೆ ಹಾಗೂ ಜನರಿಗೆ ಓಡಾಟಕ್ಕೆ ಕಷ್ಟವಾಗಿದೆ. ಈ ಬಗ್ಗೆ ಸಾಮಾಜಿಕ ಕಾರ್ಯಕರ್ತ ಸದಾಶಿವ ಎಂಬವರು ವಿಡಿಯೋ ಮೂಲಕ ಸಮಸ್ಯೆಯನ್ನು ವಿವರಿಸಿದರು. ಇದೇ ವೇಳೆ ವಿವಿಧ ಮಾಧ್ಯಮಗಳಿಗೆ ಕರೆ ಮಾಡಿದೆ ಎಂದು ಹೇಳಿದ್ದಾರೆ, ಯಾರೂ ಸ್ಪಂದಿಸಲಿಲ್ಲ ಎಂದೂ ಹೇಳಿದ್ದಾರೆ. ಕೊನೆಗೆ ಅದೇ ವಿಡಿಯೋದಲ್ಲಿ ಕ್ಯಾಕರಿಸಿ ಉಗಿದಿದ್ದಾರೆ ಕೂಡಾ. ಜನರು ಸತ್ತರೆ ಮಾತ್ರಾ ಸ್ಥಳಕ್ಕೆ ಬರುತ್ತಾರೆ ಎಂದು ಅಸಮಾಧಾನ, ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾಧ್ಯಮಗಳಿಗೆ ಅದರಲ್ಲೂ ರಾಜ್ಯಮಟ್ಟದ ಮಾಧ್ಯಮಗಳು, ವರದಿಗಾರರು ಅವರದೇ ಆದ ಒತ್ತಡದಲ್ಲಿ ಕೆಲಸ ಮಾಡುತ್ತಿರುತ್ತಾರೆ. ಅನೇಕರು ಗ್ರಾಮೀಣ ಭಾಗದ ಕಾಳಜಿ ಇದ್ದವರೇ ಆಗಿದ್ದರೂ ಕೂಡಾ ಕೇಂದ್ರದಿಂದ ಬಹುದೂರ ಬರುವುದು  ಕೂಡಾ ಸುಲಭವಲ್ಲ. ಗ್ರಾಮೀಣ ಭಾಗದ ಎಲ್ಲಾ ಸುದ್ದಿಗಳಿಗೂ ಬರುವುದೂ ಸುಲಭ ಅಲ್ಲ. ಆದರೆ ಎಲ್ಲರೂ ಕಾಳಜಿ ಇದ್ದವರೇ ಆಗಿರುತ್ತಾರೆ. ಹೀಗಾಗಿ ಮಾಧ್ಯಮಗಳು ಬಂದಿಲ್ಲ ಎನ್ನುವ ಆಕ್ರೋಶ ಇಲ್ಲೂ ಕೇಳಬೇಕಾಗುತ್ತದೆ.

ಇದೆರಡೂ ಘಟನೆಯ ಬಳಿಕ ಮಾಧ್ಯಮದ ಮಂದಿ ಎಲ್ಲೂ ಲೋಪ ಮಾಡಿಲ್ಲ, ಸಹಜವಾಗಿಯೇ ಎರಡನ್ನೂ ಸ್ವೀಕರಿಸಿದ್ದಾರೆ,ಗ್ರಾಮೀಣ ಭಾಗದ ಸಮಸ್ಯೆಗಳನ್ನು ಯಥಾವತ್ತಾಗಿ ಹೊರಜಗತ್ತಿಗೆ ತೋರಿಸಿದ್ದಾರೆ. ಸಮಸ್ಯೆಗಳು ಪರಿಹಾರ ಕಾಣಲಿ ಎಂಬುದಷ್ಟೇ ಮಾಧ್ಯಮಗಳ ಕಾಳಜಿ ಕೂಡಾ. ಆಜಾದಿ ಕಾ ಅಮೃತ ಮಹೋತ್ಸವದ ವೇಳೆ ಗ್ರಾಮೀಣ ಭಾಗದಲ್ಲೂ ಸ್ವಾತಂತ್ರ್ಯದ ಸಂಭ್ರಮ ಹೆಚ್ಚಲಿ. ಅದರಲ್ಲಿ ಮಾಧ್ಯಮಗಳ ಪಾಲೂ ಇರಲಿ. ಜನರ ಪಾಲೂ ಇರಲಿ. ಜನಪ್ರತಿನಿಧಿ, ಅಧಿಕಾರಿಗಳ ಪಾಲೂ ಇರಲಿ.

 

Advertisement

Advertisement

Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ವಿಶೇಷ ಪ್ರತಿನಿಧಿ

ರೂರಲ್‌ ಮಿರರ್‌ ವಿಶೇಷ ಪ್ರತಿನಿಧಿ.

ಇದನ್ನೂ ಓದಿ

ಕರೆಂಟ್ ಹೊದ ಕೂಡ್ಲೆ ಬೊಬ್ಬೆ ಹೊಡೆಯೋದು ಯಾಕೆ..!?
May 25, 2025
9:29 AM
by: ಟಿ ಆರ್ ಸುರೇಶ್ಚಂದ್ರ ತೊಟ್ಟೆತ್ತೋಡಿ
ಮಳೆ Update | ಕರಾವಳಿ ಜಿಲ್ಲೆಯಲ್ಲಿ ವ್ಯಾಪಕ ಮಳೆ | ಹಲವು ಕಡೆ 100 ಮಿಮೀಗಿಂತಲೂ ಅಧಿಕ ಮಳೆ | ಉಡುಪಿಯಲ್ಲಿ 164 ಮಿಮೀ ಮಳೆ |
May 25, 2025
9:07 AM
by: ದ ರೂರಲ್ ಮಿರರ್.ಕಾಂ
ಬಿತ್ತನೆ ಬೀಜ ರಸಗೊಬ್ಬರ ಕಾಳಸಂತೆಯಲ್ಲಿ ಮಾರಾಟ ಮಾಡಿದರೆ ಕಠಿಣ ಕ್ರಮದ ಎಚ್ಚರಿಕೆ
May 25, 2025
6:13 AM
by: The Rural Mirror ಸುದ್ದಿಜಾಲ
ರೈತರು ಉತ್ತಮ ಇಳುವರಿ ಪಡೆಯಲು ಸಂಯುಕ್ತ ರಸಗೊಬ್ಬರ ಬಳಸುವಂತೆ ಕೃಷಿ ಇಲಾಖೆ ಸೂಚನೆ
May 25, 2025
6:05 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group