ವಾಲ್ಮೀಕಿ ಮಹರ್ಷಿಗಳು ರಾಮಯಣವನ್ನು ರಚಿಸಿದ ‘ಮಹಾಕವಿ’. ಒಂದು ಕಾವ್ಯದ ಹುಟ್ಟು, ಅದು ಜೀವನವಾಗಿ ಮತ್ತು ಜನಜೀವನದಲ್ಲಿ ಬದುಕಾಗಿ ಹರಿಯುವ ವಿದ್ಯಮಾನ ಇದೆಯಲ್ಲಾ, ಅದು ಕಾವ್ಯದ ಗಟ್ಟಿತನ. ಕಾವ್ಯವು ಸಾರುವ ಬದುಕಿನ ಸಂದೇಶಗಳು ದಿನವೂ ನವನವೀನ. ಮರುಓದು ಮಾಡಿದಂತೆಲ್ಲಾ ಹೊಸ ಹೊಸ ಹೊಳಹು ರಾಚುತ್ತದೆ. ತ್ರೇತಾಯುಗದ ಕಥಾನಕವು ಕಲಿಯುಗದಲ್ಲೂ ಅಂದರೆ ಈಗಲೂ ವಿಮರ್ಶೆಗೊಳ್ಳುತ್ತಾ ಇರುವುದು ಬುದ್ಧಿವಂತರ ಬುದ್ಧಿಮತ್ತೆಯ ದ್ಯೋತಕವಲ್ಲ. ಅದು ಕಾವ್ಯವು ಕಟ್ಟಿಕೊಟ್ಟ ಗಟ್ಟಿ ಹೂರಣ.
ವರ್ತಮಾನವನ್ನು ಪ್ರತಿನಿಧಿಸುವ ಒಂದು ಸಾಹಿತ್ಯ ಕೃತಿಯು ಜನಸಮೂಹದ ಮಧ್ಯದಿಂದಲೇ ಮೇಲೆದ್ದು ಬಂದಾಗ ಅದು ಸಮಾಜದ ದನಿಯಾಗುತ್ತದೆ. ಅದು ಬದುಕಿಗೆ ದೀವಿಗೆಯಾದರೆ ಸಾಹಿತ್ಯ ಸರ್ವಜನಾದರಣೀಯವಾಗಿ ಸ್ವೀಕೃತವಾಗಿದೆ ಎಂದರ್ಥ. ಇಂತಹ ಸಾಹಿತ್ಯವನ್ನು ರಚಿಸಿದ ಕವಿಗಳನ್ನು ‘ಆಧುನಿಕ ವಾಲ್ಮೀಕಿ’ ಎಂದು ಬಿರುದಿನೊಂದಿಗೆ ಗೌರವಿಸುತ್ತೇವೆ, ಮಾನಿಸುತ್ತೇವೆ.
ಅರ್ಹತೆ ಇಲ್ಲದೆ ತಾವಾಗಿಯೇ ಹೆಸರನ್ನು ಹೊಸೆದುಕೊಳ್ಳುವ ಮಹಾಶಯರೂ ಇದ್ದಾರಲ್ವಾ! ಸಾಹಿತ್ಯದಲ್ಲಿ ಸಮಾಜದ ಹಿತವು ಮಿಳಿತಗೊಳ್ಳಬೇಕು. ಸಮಾಜವನ್ನು ದಾರಿತಪ್ಪಿಸುವ, ನಂಬುಗೆಗಳನ್ನು ಅಲುಗಾಡಿಸುವ, ಘಾಸಿ ಮಾಡುವ, ಸುಳ್ಳಿನ ಕಂತೆಗಳನ್ನು ಲಿಪೀಕರಿಸುವ, ತನ್ನ ವಿಚಾರಗಳೇ ಅಂತಿಮವೆಂದು ಜನರ ಮೇಲೆ ಹೇರುವ ಸಾಹಿತಿಗಳನ್ನು ಮಂದಿ ಸ್ವೀಕರಿಸುವುದಿಲ್ಲ. ಇಂತಹವರ ಸಾಹಿತ್ಯ ಎಷ್ಟು ಉತ್ಕೃಷ್ಟವಾದರೂ ಅದು ಕೆಂಪುಪಟ್ಟಿಯಲ್ಲಿರುತ್ತದೆ. ನಮ್ಮ ಸಮಾಜವು ನಂಬುಗೆ ಮತ್ತು ವಿಶ್ವಾಸಗಳ ಅಡಿಗಟ್ಟಿಯಲ್ಲಿ ನಿಂತಿದೆ. ಅಂತಹ ನಂಬುಗೆ, ವಿಶ್ವಾಸಗಳನ್ನು ಅವಮಾನಿಸಿದರೆ ಒಟ್ಟೂ ಸಮಾಜದ ವ್ಯವಸ್ಥೆಗಳು ಬುಡಮೇಲಾಗುತ್ತದೆ. ಈ ಎಚ್ಚರ ಸಾಹಿತಿಗಳಿಗೆ ಇಲ್ಲದಿರುವುದು ವಿಷಾದಕರ.
ವರ್ತಮಾನದ ಜಗತ್ತಿನಲ್ಲಿ ಸಾಹಿತಿಯ ಸ್ಥಾನವೇನು? ಯಾರು ಸಾಹಿತಿ? ಯಾವುದು ಸಾಹಿತ್ಯ? ಸಾಹಿತ್ಯಕ್ಕೆ ಸಮಾಜದ ಹಿತವನ್ನು ಸಾಧಿಸುವ ಹೊಣೆಯಿದೆ. ಅದು ಬದುಕಿಗೆ ದೂರದೃಷ್ಟಿಯನ್ನು ನೀಡುತ್ತದೆ. ಯಾರದ್ದೋ ಕೈಗೊಂಬೆಯಾಗಿ, ರಾಜಕೀಯ ಕೃಪಾಶ್ರಯದಿಂದ ಮತ್ತು ‘ಅಡ್ಡ ಸಾಹಿತ್ಯ’ದಿಂದ ದಿಢೀರ್ ಪ್ರಸಿದ್ಧಿಗೆ ಬರುವ, ಪ್ರಶಸ್ತಿಗಳಿಗೆ ಲಾಬಿ ಮಾಡುವವರು ಎಷ್ಟು ಮಂದಿ ಬೇಕು?
ಈಚೆಗೆ ಗಮನಿಸುತ್ತಿದ್ದೇನೆ. ಸಾಹಿತ್ಯ, ಯಕ್ಷಗಾನ, ಬ್ರಹ್ಮಕಲಶ, ಜಾತ್ರೆಯ ಸಂದರ್ಭಗಳಲ್ಲಿ ‘ಸಭಾ ಕಾರ್ಯಕ್ರಮ’ ನಡೆಯುತ್ತಿದೆ. ಎರಡು ಮೂರು ಗಂಟೆಗಳಷ್ಟು ಲಂಬಿಸುವ ಕಲಾಪದಲ್ಲಿ ಸಾಧಕರಿಗೆ ಸಂಮಾನವೂ ವ್ಯವಸ್ಥೆಯಾಗಿರುತ್ತದೆ. ಇಂತಹ ಸಂಮಾನದಲ್ಲಿ ಕೆಲವೊಮ್ಮೆ ‘ಬಿರುದು’ ನೀಡಿ ಗೌರವಿಸುವುದು ಇದೆ. ಸಂತೋಷದ ವಿಚಾರ. ಆದರೆ ಸಂಮಾನ ಪಡೆಯುವ ವ್ಯಕ್ತಿಯ ಸಾಧನೆಗೂ, ನೀಡುವ ಬಿರುದಿಗೂ ಸಂಬಂಧವೇ ಇರುವುದಿಲ್ಲ! ದೊಡ್ಡ ಮೊತ್ತ ನೀಡಿದ ದಾನಿಗಳನ್ನು ಗೌರವಿಸುವುದು ಸಂಘಟಕರ ಕರ್ತವ್ಯ. ಇಲ್ಲೂ ಕೂಡಾ ಮುಜುಗರವಾಗುವಷ್ಟು ಹೊಗಳಿಕೆಯ ಹೊನ್ನಶೂಲ. ಅಕ್ಷರಗಳೇ ನಾಚುವಷ್ಟು ಪದವೈಭವ. ಯಕ್ಷಗಾನ ಕ್ಷೇತ್ರಕ್ಕೆ ಬಂದಾಗ ಸಂಮಾನ, ಪ್ರಶಸ್ತಿಗಳ ಸಂಖ್ಯೆ ಅಧಿಕ. ಈಚೆಗೆ ಜಾಲತಾಣದಲ್ಲಿ ಹರಿದು ಬಂದ ಒಂದು ವಾಕ್ಯ ವರ್ತಮಾನಕ್ಕೆ ಕನ್ನಡಿ. “ಯಕ್ಷಗಾನದಲ್ಲಿ ಇನ್ನು ಬಿರುದುಗಳಿಲ್ಲ. ಎಲ್ಲವನ್ನೂ ಪ್ರದಾನಿಸಿ ಆಗಿದೆ.” ಇಲ್ಲಿ ಶಬ್ದಾರ್ಥವಲ್ಲ. ಭಾವವನ್ನು ಗಮನಿಸಿ. ಈ ಭಾವದಲ್ಲಿ ಕೊಂಕಿಲ್ಲ. ವಾಸ್ತವವಿದೆ.
ಸಾಹಿತ್ಯ ಎಂದರೆ ಸರಸ್ವತಿಯ ಆವಾಸ ಸ್ಥಾನ. ಅಂತಹ ಪವಿತ್ರ ತಾಣವನ್ನು ಅಪವಿತ್ರಗೊಳಿಸುವ ವ್ಯವಸ್ಥಿತ ಹುನ್ನಾರಗಳು ದೇಶವ್ಯಾಪಿ ಹಬ್ಬಿವೆ. ಆದರೆ ಉತ್ತಮ ಸಾಹಿತ್ಯವು ಅವಿನಾಶಿ. ಅದಕ್ಕೆ ಕಾರಣನಾದ ಸಾಹಿತಿಯು ನಿಜಾರ್ಥದ ‘ವಾಲ್ಮೀಕಿ’. ಹೊಸ ಸಾಹಿತ್ಯದ ಸೃಷ್ಟಿಕರ್ತನಿಗೆ ‘ಆಧುನಿಕ ವಾಲ್ಮೀಕಿ’ ಎಂದು ಬಿರುದು ಕೊಟ್ಟರೂ, ಅದು ಎಂತಹ ಸಾಹಿತ್ಯ ಎನ್ನುವುದರ ಮೇಲೆ ಬಿರುದಿಗೆ ಸ್ಥಾನ-ಮಾನ.
ಅಶ್ವಿನಿ ಮಾಸದ ಹುಣ್ಣಿಮೆಯಂದು ‘ವಾಲ್ಮೀಕಿ ಜಯಂತಿ’ ಆಚರಣೆ. ಸರಕಾರಿ ಮಟ್ಟದಲ್ಲಿ ಕನ್ನಾಡಿನಾದ್ಯಂತ ಮಹಿರ್ಷಿಗಳ ನೆನಪು. ಭಾಷಣ, ಉಪನ್ಯಾಸಗಳ ಆಧಿಕ್ಯ. ಈ ಸಂದರ್ಭದಲ್ಲಿ ವಾಲ್ಮೀಕಿ ರಚಿತ ರಾಮಾಯಣಗಳ ಪ್ರಕಟಣೆ, ಅವುಗಳನ್ನು ಶಾಲೆಗಳಿಗೆ ವಿತರಿಸುವಂತಹ ‘ಪುಣ್ಯದ ಕೆಲಸ’ವನ್ನು ಸರಕಾರ ಮಾಡಬಹುದು.
ವಾಲ್ಮೀಕಿ ಮಾತನಾಡಿದಾಗ : ಯಕ್ಷಗಾನ ತಾಳಮದ್ದಳೆಯು ಮಾತಿನ ಮಂಟಪ. ಕೀರ್ತಿಶೇಷ ಡಾ. ಶೇಣಿ ಗೋಪಾಲಕೃಷ್ಣ ಭಟ್ಟರು ‘ವಾಲ್ಮೀಕಿ’ ಪಾತ್ರದ ಮೂಲಕ ಚಿಂತನೆಗೆ ಮರುಹುಟ್ಟು ನೀಡಿದ್ದರು. ನಾರದರಲ್ಲಿ ಸಂಭಾಷಣೆಯೊಂದು ಹೀಗಿದೆ:
“ಹುತ್ತರೂಪವಾದಂತಹ ಮೃಣ್ಮಯತ್ವ, ಅದು ನನ್ನ ಒಳಗಿತ್ತು. ಪ್ರಾಕೃತ ಮನುಷ್ಯನಾಗಿದ್ದೆ. ನನ್ನ ಅಂತಃಕರಣದಲ್ಲಿದ್ದ ಪ್ರಕೃತಿ ಸಹಜವಾದಂತಹ ಶಬ್ದಾದಿ ವಿಷಯಗಳ ಕಡೆಗೆ ಇದ್ದಂತಹ ವಾಸನೆ, ಸ್ಪಂದನಗಳು ಪಶುವೃತ್ತಿಯಲ್ಲಿತ್ತು. ಈಗ ಅದೆಲ್ಲವೂ ತಮ್ಮ ಅನುಗ್ರಹ ಮಾತ್ರಕ್ಕೆ ಹೊರತಳ್ಳಲ್ಪಟ್ಟು ಅದು ನನ್ನ ಮೈಯ ಸುತ್ತಲೂ ಆವರಣವಾಗಿ ನಿಂತಿತು. ಅಂದರೆ ಆ ಮೃಣ್ಮಯತ್ವದಿಂದ ನಾನು ಪ್ರತ್ಯೇಕವಾದೆ. ಚಿನ್ಮಯತ್ವದ ಮಹಾ, ಮಹಾ ಸನ್ನಿಧಾನದ ಎತ್ತರಕ್ಕೆ ಏರಿದ್ದೇನೆ ಅಂತ ತಿಳಿದುಕೊಂಡೆ. ಪರುಷಮಣಿಯ ಸ್ಪರ್ಶದಿಂದ, ಲೋಹ ಯಾವುದಾದರೇನು, ಕಟುಕನ ಕತ್ತಿಯಾದರೇನು, ದೇವಾಲಯದ ಸಂಕಲೆಯಾದರೇನು, ಚಿನ್ನವಾಗುವಂತೆ, ನಿಮ್ಮಿಂದ ಉಪದಿಷ್ಟನಾಗಿ ವಾಲ್ಮಿಕಿ ಎನಿಸಿದೆ. ಆದರೆ, ನಿಗ್ರಹಾನುಗ್ರಹ ಶಕ್ತಿ ನನಗೆ ಬಂದಿರಬೇಕು. ಬಹುಶಃ ಇದು ಎರಡಕ್ಕೂ ನನ್ನ ಮನಸ್ಸು ಒಪ್ಪುವುದಿಲ್ಲ. ಯಾಕೆಂದರೆ ಇದೂ ಬಂಧನಕಾರಕವೇ. ಪುಣ್ಯ ಮಾಡಿದವ ಸ್ವರ್ಗಕ್ಕೆ ಹೋಗ್ತಾನೆ, ಮುಗಿಯುವಾಗ ಪುನಃ ಹುಟ್ಟುತ್ತಾನೆ. ಹೀಗೆ ಹುಟ್ಟಿ ಸತ್ತು, ಹುಟ್ಟುವ ಈ ಬಂಧನದಲ್ಲಿ ಸಿಕ್ಕಿ ತೊಳಲಾಡುತ್ತಾನೆ. ಆವಾಗ ನನಗೆ ನೆನಪಾಗ್ತದೆ. ಇದಕ್ಕೆಲ್ಲಾ ಮನಸ್ಸೇ ಕಾರಣ..”
ತನ್ನ ಶಿಷ್ಯ ಭಾರದ್ವಾಜನಲ್ಲಿ ಸಂವಾದದ ಒಂದು ಗುಚ್ಚ. “ಶಿಷ್ಯ.. ‘ಸರ್ವಂ ಖಲ್ವಿದಂ ಬ್ರಹ್ಮ’. ನೋಡಬೇಕಾದ ಕಣ್ಣಿನಿಂದ ನೋಡು. ಆವಾಗ ಕಣ್ಣಿಗೆ ಬೀಳುವುದು ದರ್ಶನ. ಸ್ಥೂಲವಾದಂತಹ ಕಣ್ಣಿನಿಂದ ನೋಡುವಾಗ ಕಾಣುವುದು ದರ್ಶನವಲ್ಲ. ಅದು ಪ್ರಕೃತಿ ಸಹಜವಾದಂತಹ ಒಂದು ದೃಶ್ಯ. ಇದು ಅಂತರಂಗದಲ್ಲಿ ಕಾಣುವುದು. ಎಲ್ಲವೂ ‘ಸತ್ಯಂ ಶಿವಂ ಸುಂದರಂ’. ನವಿಲನ್ನು ಕಂಡಾಗ ನಿನಗೆ ಏನು ಕಾಣುತ್ತದೆ? ಸೌಂದರ್ಯ ಕಾಣುತ್ತದೆ. ಕೋಗಿಲೆಯ ನಾದ ಕೇಳುವಾಗ ಏನು ಕೇಳಿಸ್ತದೆ? ಸೌಂದರ್ಯ. ಈ ಸೌಂದರ್ಯದ ನಿಜವಾದಂತಹ ಹಿನ್ನೆಲೆ ಏನು? ಆನಂದ. ರಸ ಎಂದರೆ ಯಾವುದು? ಆನಂದ. ಈ ಆನಂದವನ್ನು ಯಾವುದು ಯಾವುದು ಉಂಟು ಮಾಡುತ್ತವೆಯೋ ಅವೆಲ್ಲಾ ರಸಗಳೇ. ಅದಕ್ಕೊಂದೊಂದು ಹೆಸರುಂಟು. ಶೃಂಗಾರ, ವೀರ, ಕರುಣ.. ಯಾವ ರಸವನ್ನು ನಾವು ಆಸ್ವಾದಿಸಿದರೂ ಅನುಭವದಲ್ಲಿ ಏನು? ಶಾಂತಿ; ಶಾಂತಿ, ನೆಮ್ಮದಿ. ಚೆನ್ನಾಗಿ ಒಬ್ಬ ದುಃಖರಸವನ್ನು ಅನುಭವಿಸಿದಾ ಅಂತಾದರೆ, ನೋಟಕನಿಗೆ ಆಗುವುದೇನು? ಆನಂದ. ಆದ್ದರಿಂದ ನಿಜವಾದ ಸ್ಥಾಯಿಭಾವ ಆನಂದ. ಆದ್ದರಿಂದ ಕವಿವಾಣಿ ಏನು ಹೇಳ್ತದೆ? ‘ಆನಂದಂ ಬ್ರಹ್ಮ ಇತಿ ವ್ಯಜನಾತ್’, ‘ಸತ್ಯಂ ಶಿವಂ ಸುಂದರಂ’. ಈ ದರ್ಶನದಿಂದ ಆಗುವುದೇನು? ಆನಂದ. ಆನಂದವೇ ‘ಪರಬ್ರಹ್ಮ’. ಈ ಆನಂದವನ್ನು ಕಾಣುತ್ತಾ ಇದ್ದೇನೆ. ಈ ಪ್ರಪಂಚ ಅನ್ನೋದು ಒಂದು ಕಾವ್ಯ..”
ವಾಲ್ಮೀಕಿ ಯಾರು? : ದಶಪ್ರಚೇತಸರ ಕಿರಿಯ ಪುತ್ರ ರೂಕ್ಷ. ಈತನ ಅಗ್ರಜ ದಕ್ಷ. ಗುರು ವಿಕ್ಷಿಪ್ತರಲ್ಲಿ ವಿದ್ಯಾಭ್ಯಾಸ. ವಿದ್ಯೆಯ ಮದವೋ, ಅಂತಸ್ತಿನ ಅಮಲಿನಿಂದ, ಗುರುವನ್ನು ನಿಂದಿಸಿ ಶಾಪಕ್ಕೆ ಒಳಗಾಗಿ ನಿಷಾಧನಾಗುತ್ತಾನೆ. ಅಧರ್ಮ ಕಾರ್ಯವನ್ನೇ ಧರ್ಮವೆಂದು ಗ್ರಹಿಸಿದ ಕಾಲಕ್ಕೆ ಸಪ್ತರ್ಷಿಗಳ ದರ್ಶನವಾಗುತ್ತದೆ. ಅವರಿಂದ ರಾಮ ತಾರಕ ಮಂತ್ರದ ಉಪದೇಶ.
ರಾಮ ನಾಮವನ್ನು ಉಚ್ಚರಿಸುತ್ತಾ ತಪಸ್ಸಿನಲ್ಲಿ ಲೀನವಾಗುತ್ತಾನೆ. ಅತನ ಮೈಮೇಲೆ ವಲ್ಮೀಕ (ಹುತ್ತ) ಆವರಿಸಿದರೂ ಅರಿವಾಗದಷ್ಟು ಗಾಢ ತಪಸ್ಸು. ಕಾಲಾಂತರದಲ್ಲಿ ಸಪ್ತರ್ಷಿಗಳಿಂದಲೇ ‘ವಾಲ್ಮೀಕಿ’ ಎಂಬ ನಾಮಕರಣ. ತಪೋಬಲದಿಂದ ಮಹರ್ಷಿಯಾದ. ಒಮ್ಮೆ ನಾರದನಲ್ಲಿ “ಈ ಕಾಲದಲ್ಲಿ ಭೂಲೋಕದಲ್ಲಿ ಸಮಸ್ತ ಸದ್ಗುಣ ಸಂಪನ್ನನಾದ ವ್ಯಕ್ತಿ ಯಾರಿದ್ದಾನೆ?” ಎಂದು ಪ್ರಶ್ನಿಸಿದಾಗ ಶ್ರೀ ರಾಮನ ಆಯನವನ್ನು ಅರುಹುತ್ತಾನೆ.
ಅಂದು ಮಧ್ಯಾಹ್ನ ವಾಲ್ಮೀಕಿ ಮಹಾಋಷಿಗಳು ತಮಸಾ ನದಿಗೆ ಶಿಷ್ಯರೊಡನೆ ಸ್ನಾನವನ್ನು ಪೂರೈಸಲು ತೆರಳಿದರು. ಆಗ ವ್ಯಾಧನೋರ್ವನಿಂದ ಕ್ರೌಂಚಮಿಥುನದಲ್ಲಿರುವ ಗಂಡುಹಕ್ಕಿಯು ಕೊಲ್ಲಲ್ಪಟ್ಟಿತು. ಹೆಣ್ಣು ಹಕ್ಕಿಯ ವಿಲಾಪದಿಂದ ಮರುಕಗೊಂಡರು. ಆಗ “ಮಾ ನಿಷಾದ ಪ್ರತಿಷ್ಠಾಂ ತ್ವಮಗಮ ಶಾಶ್ವತೀ ಸ್ಸಮಾ: | ಯತ್ಕ್ರೌಂಚ ಮಿಥುನಾದೇಕ ಮವಧೀಃ ಕಾಮಮೋಹಿತಂ|| (ಎಲೈ ನಿಷಾಧನೇ, ಮೋಹದಿಂದ ಮೈಮರೆತಿದ್ದ ಈ ಪಕ್ಷಿದಂಪತಿಗಳಲ್ಲಿ ಒಂದನ್ನು ನೀನು ಕೊಂದುದರಿಂದ ಅನೇಕ ಸಂವತ್ಸರಗಳ ವರೆಗೆ ಸ್ಥಿರವಾಗಿ ಬದುಕಲಾರೆ” ಎಂದರು. ಶ್ಲೋಕರೂಪವಾದ ಈ ಶಾಪವು ವಾಲ್ಮೀಕಿಯ ಚಿತ್ತವನ್ನು ಕಲಕಿತು. ಅರ್ಥಚಿಂತನೆ ಮಾಡುತ್ತಾ ಆಶ್ರಮಕ್ಕೆ ಮರಳಿದರು.
ಆಗ ಋಷಿಗಳ ಮನಸ್ಥಿತಿಯನ್ನರಿತ ಬ್ರಹ್ಮದೇವ “ಶ್ರೀ ರಾಮನ ಚರಿತ್ರೆಯ ‘ರಾಮಾಯಣ’ವನ್ನು ಶ್ಲೋಕರೂಪದಲ್ಲಿ ರಚಿಸುವಂತೆ” ನಿರೂಪಿಸಿದರು. ಬ್ರಹ್ಮನ ವಾಣಿಯಿಂದ ಉತ್ತೇಜಿತರಾದ ವಾಲ್ಮೀಕಿ ಮಹರ್ಷಿ ರಾಮಾಯಣವನ್ನು ಲಿಪೀಕರಿಸಿದರು. ಶ್ರೀರಾಮನ ಪೂರ್ಣ ಇತಿಹಾಸದ ಆಧಾರದಲ್ಲಿ ವಿಶಿಷ್ಟ ಪದಗಳಿಂದಲೂ, ಅರ್ಥದಿಂದಲೂ ಕೂಡಿದ ರಾಮಾಯಣ ಕಾವ್ಯವನ್ನು ರಚಿಸಿದರು. ಇದರಲ್ಲಿ ಇಪ್ಪತ್ತನಾಲ್ಕು ಸಾವಿರ ಶ್ಲೋಕಗಳು, ಐನೂರು ಸರ್ಗಗಳು ಹಾಗೂ ಏಳು ಕಾಂಡಗಳಿವೆ.
ಮುಂದೆ ರಾಮಾಯಣದ ಉತ್ತರ ಭಾಗ: ಶ್ರೀರಾಮನು ಜನಾಪವಾದದಿಂದಾಗಿ ಗರ್ಭಿಣಿಯಾದ ಸೀತೆಯನ್ನು ಕಾಡಿಗೆ ಬಿಡುವ ನಿರ್ಧಾರಕ್ಕೆ ಬರುತ್ತಾನೆ. ತಮಸಾ ನದಿಯ ಸರಹದ್ದಿನಲ್ಲಿ ಲಕ್ಷ್ಮಣನು ಅತ್ತಿಗೆಯನ್ನು ಬಿಟ್ಟು ಬರುತ್ತಾನೆ. ಸೀತೆಗೆ ವಾಲ್ಮೀಕಿ ಮಹರ್ಷಿಗಳು ತಮ್ಮ ಆಶ್ರಮದಲ್ಲಿ ಆಶ್ರಯ ನೀಡುತ್ತಾರೆ. ಸೀತೆ ಕುಶ-ಲವ ಎನ್ನುವ ಅವಳಿ ಮಕ್ಕಳನ್ನು ಪ್ರಸವಿಸುತ್ತಾಳೆ. ಋಷಿಗಳಿಂದಲೇ ವಿದ್ಯಾಭ್ಯಾಸ. ವಾಲ್ಮೀಕಿ ರಚಿತ ರಾಮಾಯಣವನ್ನು ಕುಶ ಲವರು ಅಯೋಧ್ಯೆಯಲ್ಲಿ ಶ್ರೀರಾಮನ ಮುಂದೆ ಹಾಡುತ್ತಾರೆ.
ಶ್ರೀ ರಾಮನ ಪೂರ್ವ ಹಾಗೂ ಉತ್ತರ ಬದುಕಿನ ಸಂಪೂರ್ಣ ಗಾಥೆಗಳನ್ನೊಳಗೊಂಡ ‘ರಾಮಾಯಣ’ ಸರ್ವಮಾನ್ಯವಾಗುತ್ತದೆ. ವಾಲ್ಮೀಕಿ ‘ಆದಿಕವಿ’ಯಾಗಿ ಜನಮಾನಸದಲ್ಲಿ ಸ್ಥಾನ ಪಡೆಯುತ್ತಾರೆ. (ವಾಲ್ಮೀಕಿ ಮಹರ್ಷಿಯ ಜನ್ಮ, ಬದುಕಿನ ಕುರಿತು ವಿಭಿನ್ನ ವ್ಯಾಖ್ಯಾನಗಳಿವೆ.)
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel