ಅನುಕ್ರಮ

ಬದುಕು ಪುರಾಣ | ಅಂದು ಒಬ್ಬ ಬಕಾಸುರ.. ಇಂದು?

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail
ಅದೊಂದು ಮದುವೆ ಸಮಾರಂಭ. ನನ್ನದೇ ಹೆಸರಿನವರೊಬ್ಬರು ಭೋಜನದ ಪಂಕ್ತಿಯಲ್ಲಿ ಕುಳಿತಿದ್ದರು. ಸಾರು, ಸಾಂಬಾರು, ಬೋಳುಹುಳಿ, ಗಸಿ, ಮೆಣಸ್ಕಾಯಿ, ಅವಿಲು, ಕಾಯಿಹುಳಿ.. ಹೀಗೆ ವಿವಿಧ ಖಾದ್ಯಗಳನ್ನು ಸ್ವಲ್ಪ ಸ್ವಲ್ಪವೇ ಅನ್ನದಲ್ಲಿ ಕಲಸಿ ಉಣ್ಣುವುದು ಕಲೆ. ಈ ಕಾರಂತರು ಹಾಗಲ್ಲ. ಆರಂಭಕ್ಕೆ ಎಲೆಗೆ ಹಾಕಿದ ಅನ್ನವು ಸಾರಿಗೆ ಸರಿಹೋಯಿತು. ಅನ್ನ ವಿಚಾರಣೆ ಬಂದಾಗಲೂ ಬೇಡ ಅನ್ನಲಿಲ್ಲ. ಎಲ್ಲಾ ಖಾದ್ಯಗಳನ್ನು ಬಡಿಸಿದಾಗಲೂ ಅಷ್ಟಿಷ್ಟು ಅನ್ನವನ್ನು ಕೇಳಿ ಬಡಿಸಿಕೊಳ್ಳುತ್ತಿದ್ದರು. ಹೋಳಿಗೆ, ಪಾಯಸ, ಸಿಹಿಗಳು ಎಲೆಗೆ ಬಿದ್ದಾಗ ಅವರ ಮುಖ ಖುಷಿಯಿಂದ ಅರಳುತ್ತಿತ್ತು. ಬಡಿಸುವವರಿಗೆ ಪರಿಚಯವಿದ್ದುದರಿಂದ ಸ್ವಲ್ಪ ಹೆಚ್ಚೇ ಇಕ್ಕುತ್ತಿದ್ದರು. ಇಷ್ಟು ಉಣ್ಣುವಾಗ ಹೆಚ್ಚೆಂದರೆ ಹತ್ತು-ಹದಿನೈದು ಹೋಳಿಗೆ ಉದರಕ್ಕಿಳಿಸಿದ ಬಳಿಕವೇ ಮಜ್ಜಿಗೆಯಲ್ಲಿ ಉಂಡು ಏಳುತ್ತಿದ್ದರು. ಉಂಡ ಎಲೆಯಲ್ಲಿ ಒಂದೇ ಒಂದು ಅಗುಳು ಬಿಟ್ಟವರಲ್ಲ. ಇಷ್ಟು ಹೇಳುವಾಗ ಅವರೊಬ್ಬ ದೃಢಕಾಯನಿರಬಹುದೆಂದು ಯೋಚಿಸಿದ್ದೀರಾ. ಇಲ್ಲವೇ ಇಲ್ಲ. ಕಾರಂತರದು ಸಣಕಲು ಜೀವ. ಬಹುಶಃ ಆರೇಳು ಮಂದಿಗೆ ಆಗುವಷ್ಟನ್ನು ಅವರೊಬ್ಬರೇ ಉಣ್ಣುತ್ತಿದ್ದರು. ಇವರದು ಅಸಹಜ ಭೋಜನ.
ಇನ್ನೊಬ್ಬರ ರೀತಿಯೇ ಭಿನ್ನ. ಬೆಳಗ್ಗಿನ ಉಪಾಹಾರಕ್ಕೆ ಮೂವತ್ತರಿಂದ ನಲವತ್ತು ಇಡ್ಲಿ, ಇಪ್ಪತ್ತೈದು ಹೋಳಿಗೆ, ಐವತ್ತಕ್ಕಿಂತಲೂ ಹೆಚ್ಚು ಬಾಳೆಹಣ್ಣು ತಿನ್ನುವುದನ್ನು ನೋಡಿಯೇ ದಂಗಾಗಿದ್ದೆ. ಸಿಹಿಗೆ ಲಾಡು ಇದ್ದರಂತೂ ಅವರ ಬ್ಯಾಟಿಂಗಿನ ಅಬ್ಬರವನ್ನು ನೋಡಿಯೇ ಅನುಭವಿಸಬೇಕು. ಇವರು ಉಪಾಹಾರಕ್ಕೆ ಕುಳಿತರೆ ಸಾಕು, ಬಡಿಸುವವರಿಗೂ ಉಮೇದು ಹೆಚ್ಚುತ್ತದೆ. ಎಲೆಗೆ ಬಡಿಸಿದಷ್ಟೂ ಖಾಲಿ ಖಾಲಿ.
ಇಷ್ಟು ಹೇಳುವಾಗ ನನ್ನ ಬಾಲ್ಯ ನೆನಪಾಯಿತು. ಸಮಾರಂಭ ಯಾವುದೆಂದು ತಿಳಿಯದು. ಉಳ್ಳವರ ಮನೆಯಲ್ಲಿ ಅದ್ದೂರಿ ಭೋಜನ. ಪಂಕ್ತಿಯಲ್ಲಿ ಕುಳಿತವರೆಲ್ಲಾ ಪರಿಚಿತರೇ ಆಗಿದ್ದರು. ಹೋಳಿಗೆಯ ಒಂದು ಸರದಿ ಹೋಗಿ ಇನ್ನೊಂದು ಸರದಿ ಬಂದಾಗ ಪಂಕ್ತಿಯಲ್ಲಿದ್ದ ಒಬ್ಬರಿಗೆ ‘ಬೇಡ’ವೆಂದರೂ ಬಡಿಸಿದರು. ಅವರಿಗೆ ರೇಗಿತು. ‘ನಾನು ತಿನ್ನುವಷ್ಟು ಬಡಿಸಲು ನಿಮಗೆ ಸಾಧ್ಯವೇ’ ಎಂದು ಪಂಥಾಹ್ವಾನ ಕೊಟ್ಟಾಗ, ‘ಆಗದೆ ಏನು’ ಎಂದು ಬಡಿಸಿದ್ದೇ ಬಡಿಸಿದ್ದು. ಕೊನೆಗೆ ಯಜಮಾನರು ಬಂದು, ‘ಮಾಡಿದ್ದೆಲ್ಲಾ ಮುಗಿಯಿತು.’ ಎಂದು ಕೈಮುಗಿದರು! ಊಟದ ಪಂಕ್ತಿಯಲ್ಲಿ ಸವಾಲನ್ನು ಎದುರಿಸಿದ ಆ ವ್ಯಕ್ತಿ ನಿತ್ಯದ ಭೋಜನದಲ್ಲಿ ಅಷ್ಟು ಉಂಡವರಲ್ಲ, ತಿಂದವರಲ್ಲ. ಸವಾಲು ತಂದ ತಿನ್ನುವಿಕೆ, ಬಕಾಸುರನ ಆವೇಶ! ಹೋಳಿಗೆಯಂತೆ ಒಂದು ‘ಕವಂಗ’ (ಸ್ವಲ್ಪ ಅಗಲ ಪಾತ್ರೆಯ, ಏನಿಲ್ಲವೆಂದರೂ ದೊಡ್ಡ ಸೌಟಿಯಲ್ಲಿ ಇಪ್ಪತ್ತು-ಮೂವತ್ತು ಸೌಟು ಹಿಡಿಯುವಷ್ಟು) ಪಾಯಸ ಉಂಡವರನ್ನೂ ನೋಡಿದ್ದೇನೆ.
ಅಸಹಜ ಭೋಜನಕ್ಕೆ ಇವೆಲ್ಲಾ ಉದಾಹರಣೆಗಳು. ಹೋಟೆಲ್ ಒಂದರಲ್ಲಿ ಕುಳಿತಿದ್ದೆ. ಆಚೆ ಪ್ಯಾಂಟೂ ಅಲ್ಲದ, ಈಚೆ ಚಡ್ಡಿಯೂ ಅಲ್ಲದ ವಿಚಿತ್ರ ಡ್ರೆಸ್ ಕೋಡ್, ಕಿವಿಯಲ್ಲಿ ಇಯರ್ ಫೋನ್. ಕೈಯಲ್ಲೆರಡು ಮೊಬೈಲ್. ಆರಂಭಕ್ಕೆ ಲೆಮನ್ ಜ್ಯೂಸಿಗೆ ಆರ್ಡರ್ ಮಾಡಿದ. ಸ್ವಲ್ಪ ಹೊತ್ತಲ್ಲಿ ಚಿಕ್ಕು ಜ್ಯೂಸ್. ಮತ್ತೆ ಸ್ವಲ್ಪ ಹೊತ್ತಲ್ಲಿ ಆಪಲ್, ಆರೇಂಜ್ ಜ್ಯೂಸ್‍ಗಳು ಉದರ ಸೇರಿದುವು. ಜತೆಗೆ ಮಸಾಲೆ ದೋಸೆ, ತುಪ್ಪ ದೋಸೆ, ಸಾದಾ ದೋಸೆಗಳ ಸೇವೆ. ಇವನ ಸಾಮಥ್ರ್ಯವನ್ನು ನೋಡಿ ಹೆದರಿಬಿಟ್ಟಿದ್ದೆ! ಹೊಟ್ಟೆಯೂ ಅವನದೇ, ದುಡ್ಡು ಅವನದೇ. ಈ ದೃಶ್ಯವನ್ನು ನೋಡಿದಾಗ ಮಹಾಭಾರತದ ‘ಬಕಾಸುರ’ ನೆನಪಾದ! ಬಕಾಸುರನಿಗಾಗಿರುವ ಅನ್ನವನ್ನು ಉಂಡ ‘ಭೀಮಸೇನ’ ಚಿತ್ತದಲ್ಲಿ ಹಾದು ಹೋದ.
ಉಣ್ಣುವ ಅನ್ನ ಹೇಗಿರಬೇಕು? ಮೂಲಿಕಾ ತಜ್ಞ ಪಾಣಾಜೆಯ ವೆಂಕಟರಾಮ ದೈತೋಟ ಹೇಳುತ್ತಿದ್ದರು. “ನಮ್ಮ ಹೊಟ್ಟೆ/ಜಠರವು ತ್ಯಾಜ್ಯ ತುಂಬುವ ಚೀಲವಲ್ಲ. ಶರೀರಿದ ಅತಿ ಪ್ರಮುಖ ಅಂಗ. ಜಠರದ ಆರೋಗ್ಯ ಸರಿಯಿದ್ದರೆ ಮಾತ್ರ ದೇಹಕ್ಕೆ ಬೇಕಾದ – ಅದು ಕೊಡುವ – ಚೈತನ್ಯದಿಂದ ಆರೋಗ್ಯ ಹಾಗೂ ಧರ್ಮ ಸಾಧನೆ ನಡೆಯಬಹುದು. ಮನಸ್ಸು ಶಾಂತವಾಗಿರಬಹುದು. ಅಗತ್ಯಕ್ಕಿಂತ ಪ್ರಮಾಣದಲ್ಲಿ, ವಿಷ ಕಲ್ಮಷಗಳೊಂದಿಗೆ ಸೇರಿದ, ನಾಲಿಗೆಗೆ ರುಚಿಯೆಂದು ಕೊಳ್ಳಲು ಸಿಗುವ ಸಿದ್ಧಾಹಾರಗಳ ಮೊತ್ತಗಳನ್ನು, ನಿಯಮ ರಾಹಿತ್ಯವೂ ಸೇರಿದಂತೆ ತಿಂದರೆ (ಹೊಟ್ಟೆಗೆ ತುಂಬಿದರೆ) ಊಟವಾಗದು. ಬದಲು ‘ಮೇವು’ ಆಗಬಹುದು. ಹೊಟ್ಟೆಯು ರಸ್ತೆ ಬದಿಯಲ್ಲಿರಿಸುವ ಕೊಳೆ ತುಂಬವ ಡಬ್ಬದಂತಾಗಬಹುದು. ರೋಗಗಳ ಮೊತ್ತವನ್ನೇ ಬೆಲೆ ಕೊಟ್ಟು ಪಡೆದಂತಾಗಬಹುದು. ನಮ್ಮ ಸಮಾಜ ಇಂದು ಇದನ್ನು ಅಕ್ಷರಶಃ ಅನುಭವಿಸುತ್ತಿದೆ.”
“ಒಮ್ಮೆ ಸೇವಿಸಿದ ಆಹಾರವು ಪೂರ್ತಿ ಜೀರ್ಣವಾಗಿ ‘ರಸ’ವಾಗಿ ಕರುಳಿನ ಸಂಚಾರ ಆರಂಭಿಸಬೆಕು. ಆಹಾರ ರಸವು ರಕ್ತವಾಗಿ ಬದಲಾಗಲು ಇದು ಅವಶ್ಯ. ಆಹಾರವನ್ನು ಚೆನ್ನಾಗಿ ಜಗಿದು – (ಸಿಹಿರುಚಿ ಅನುಭವವಾಗುವ ತನಕ) ನಂತರ ನುಂಗುವುದು ಇದಕ್ಕೆ ಸಹಾಯಕ. ಉಂಡ ಆಹಾರವು ಹೊಟ್ಟೆಯೊಳಗೆ ಒಂದು ಜಾಮ ಹೊತ್ತು ಪಚನಗೊಂಡು, ಜೀರ್ಣರಸಗಳೊಂದಿಗೆ ಸಮ್ಮಿಶ್ರವಾಗಿ ಹಾಲಿನಂತೆ ಮಾರ್ಪಟ್ಟು ಸಣ್ಣ ಕರುಳಿಗೆ ಸಾಗುವಲ್ಲಿಗೆ ಜಠರದ ಕೆಲಸ ಮುಗಿದಂತೆ. ಈ ಕಾಲಾವಧಿಯಲ್ಲಿನ ನಮ್ಮ ಚಟುವಟಿಕೆಗಳೆಲ್ಲವೂ ಜೀರ್ಣಕ್ರಿಯೆ ಮೇಲೆ ಪರಿಣಾಮ ಬೀರುತ್ತದೆ.”
ಇದು ಆಹಾರದ ವಿಷಯ. ಇನ್ನು ರಾಜಕೀಯ ಜೀವನದಲ್ಲಿ ‘ಬಕಾಸುರ’ರು ವಿಭಿನ್ನ ವೇಷಗಳಲ್ಲಿ ಕಾಣುತ್ತಾರೆ. ಸರಕಾರಿ ವ್ಯವಸ್ಥೆಗಳ ಕಚೇರಿಗಳಲ್ಲಿ ಒಬ್ಬರಾದರೂ ಇದ್ದೇ ಇರುತ್ತಾರೆ. ಇರದಿದ್ದರೆ ಆಶ್ಚರ್ಯ! ಹಾಗಾಗಲಿ. ಕಡತದಲ್ಲಿ ಮಾತ್ರ ರಸ್ತೆಗೆ ಡಾಮರು ಹಾಕಿಸುವ, ಹೊಸ ರಸ್ತೆಯನ್ನು ನಿರ್ಮಿಸುವ, ನೀರಿನ ವ್ಯವಸ್ಥೆಯನ್ನು ಮಾಡುವ, ವಿದ್ಯುಚ್ಛಕ್ತಿಯನ್ನು ಒದಗಿಸುವಲ್ಲಿ ಮತ್ತು ಎಲ್ಲೆಲ್ಲಾ ‘ಉಚಿತ’ಗಳು ವಿತರಣೆಯಾಗುವುದೋ ಅಲ್ಲೆಲ್ಲಾ ‘ಬಕಾಸುರ’ರ ಪ್ರವೇಶವಾಗುತ್ತದೆ. ಭೀಮನಂತೆ ‘ಪ್ರತಿಭಟನೆಯ ಮನಸ್ಸು’ ಇದ್ದರೂ ಮೌನಕ್ಕೆ ಜಾರಿ ಬಿಡುತ್ತೇವೆ. ನಮ್ಮಲ್ಲಿನ ಈ ದೌರ್ಬಲ್ಯವು ‘ಬಕಾಸುರ’ರಿಗೆ ಸಂಜೀವಿನಿ!
ಸರಕಾರದ ಕಾಮಗಾರಿಗಳು ನಡೆಯುವಾಗ ಸಹಜವಾಗಿ ‘ಬಕಾಸುರರ ಹೊಟ್ಟೆ ತುಂಬಬೇಕಲ್ಲಾ’ ಎನ್ನುವ ಗೊಣಗಾಟ ಕೇಳುತ್ತೇವೆ. ಅಂದರೆ ಆ ಕೆಲಸಕ್ಕೆ ಮಂಜೂರು ಆದ ಮೊತ್ತವೆಲ್ಲವೂ ಕಾಮಗಾರಿಗೆ ವ್ಯಯ ಆದೀತೆನ್ನಲಾಗದು. ಒಂದಷ್ಟು ಮಂದಿಯನ್ನು ಹಾದು ಬರುವಾಗ ಹಣವು ಕರಗಿರುತ್ತದೆ. ಜನರಿಗೆ ಇಂತಹ ಮನಃಸ್ಥಿತಿಯನ್ನು ನೋಡಿ ಜಿಗುಪ್ಸೆ ಮೂಡಿರುತ್ತದೆ. ಹಾಗೆಂದು ಎಲ್ಲರನ್ನೂ ಒಂದೇ ತಕ್ಕಡಿಯಲ್ಲಿ ತೂಗುವಂತಿಲ್ಲ. ಕೆಲವು ಅಧಿಕಾರಿಗಳು ಪ್ರಾಮಾಣಿಕವಾಗಿರುತ್ತಾರೆ. ಅಂತಹವರ ಸೇವೆ ದಾಖಲಾಗುವುದಿಲ್ಲ. ಮತ್ತು ಅಂತಹವರು ಎತ್ತಂಗಡಿ ಆಗುವುದು ಬಹುಬೇಗ!
ಮಹಾಭಾರತದ ಬಕಾಸುರನು ‘ತಿಂದು ತೇಗುವುದು’ ಮಾತ್ರವಲ್ಲ ತನಗೆ ಭೋಜನ ತಂದವನನ್ನೂ ಮುಕ್ಕುತ್ತಿದ್ದ. ವರ್ತಮಾನದ ರಾಜಕೀಯ ವ್ಯವಸ್ಥೆಗಳು ಅಣ್ಣ, ತಮ್ಮ, ತಂದೆ, ತಾಯಿ, ತಂಗಿ, ಬಾಂಧವರು.. ಇವರೊಳಗಿನ ಸಂಬಂಧಗಳನ್ನು ನುಂಗಿ ನೊಣೆದಿವೆ. ಅಂದು ಒಬ್ಬ ಬಕಾಸುರನಿದ್ದ. ಭೀಮನಿಂದ ಆತನ ವಧೆಯಾಗಿದೆ. ಇಂದು ಅಸಂಖ್ಯ ಬಕಾಸುರರಿರುವಾಗ ಒಬ್ಬ ಭೀಮನಾದರೂ ಸಿದ್ಧನಾಗಬೇಕಲ್ವಾ!   ಕೆಲವೊಂದು ವ್ಯಕ್ತಿ, ವ್ಯವಸ್ಥೆ, ಸನ್ನಿವೇಶಗಳಲ್ಲಿ ‘ಬಕಾಸುರ’ ಪ್ರವೇಶ ಮಾಡಿಬಿಡುತ್ತಾನೆ. ನಮಗೆ ಆತನ ನೇರ ಪರಿಚಯವಿಲ್ಲದಿದ್ದರೂ ಪುರಾಣವು ಮರೆಯಲಾಗದ ಚಿತ್ರವನ್ನು ಕಣ್ಣೆದುರು ನಿಲ್ಲಿಸಿದೆ.
ಬಕಾಸುರ ಯಾರು: ವಾರಣಾವತದಲ್ಲಿ ಕುಂತಿ ಸಹಿತ ಪಾಂಡವರ ವಾಸ. ಪಾಂಡವರನ್ನು ನಾಶ ಮಾಡುವ ಹುನ್ನಾರದಿಂದ ‘ಅರಗಿನ ಮನೆ’ಯು ನಿರ್ಮಾಣವಾಗಿತ್ತು. ವಿಷಯ ತಿಳಿದ ಅವರು ‘ಅರಗಿನ ಮನೆ’ಗೆ ತಾವೇ ಬೆಂಕಿಯಿಟ್ಟು ಬಿಲ ಮಾರ್ಗದಿಂದ ಕಾಡು ಸೇರಿದರು. ಹಸ್ತಿನಾವತಿಯಲ್ಲಿ ‘ಪಾಂಡವರು ಮಡಿದರು’ ಎಂಬ ಸುದ್ದಿಯಿಂದ ಕೌರವ ಪಾಳೆಯ ನಲಿದಾಡಿತು.
ಬಸವಳಿದ ಪಾಂಡವರು ಒಂದೆಡೆ ವಿಶ್ರಮಿಸಿಕೊಳ್ಳುತ್ತಿರುವಾಗ ‘ಹಿಡಿಂಬಿ’ಯ (ರಾಕ್ಷಸಿ) ಪ್ರವೇಶವಾಗುತ್ತದೆ. ಕಟ್ಟಾಳು ಭೀಮನನ್ನು ನೋಡಿ ಅನುರಕ್ತಗೊಳ್ಳುತ್ತಾಳೆ. ಭೀಮನ ಮನಸ್ಸೂ ಮಿಡಿದು, ವಿವಾಹವಾಗುತ್ತಾರೆ. ಘಟೋತ್ಕಚನೆಂಬ ಪುತ್ರನು ಜನಿಸುತ್ತಾನೆ. ಮುಂದೆ ಪಾಂಡವರು ಬ್ರಾಹ್ಮಣರಂತೆ ವೇಷ ಧರಿಸಿ ಏಕಚಕ್ರ ನಗರದಲ್ಲಿ ವಾಸ ಮಾಡುತ್ತಾರೆ. ಓರ್ವ ಸಂಸಾರಿ ಬ್ರಾಹ್ಮಣನೊಬ್ಬನ ಮನೆಯ ಪಾಶ್ರ್ವದಲ್ಲಿ ಬದುಕು ಆರಂಭ. ಬ್ರಾಹ್ಮಣ ವೇಷಕ್ಕೆ ಅನುಸಾರವಾಗಿ ಭಿಕ್ಷಾಟನೆಯಿಂದ ಹೊಟ್ಟೆ ತಂಪಾಗುತ್ತದೆ.
ಒಂದು ದಿನ ಬ್ರಾಹ್ಮಣನ ಮನೆಯಿಂದ ಆರ್ತನಾದ. ಕುಂತಿಯು ವಿಚಾರಿಸಲಾಗಿ, ದುಃಖಕ್ಕೆ ಕಾರಣವಾದ ಸಂಗತಿಯನ್ನು ಅರುಹುತ್ತಾಳೆ – “ಇಲ್ಲಿಗೆ ಸಮೀಪದಲ್ಲಿ ಬಕವನವಿದೆ. ನರಮಾಂಸ ಭಕ್ಷಕನಾದ ‘ಬಕ’ನೆಂಬ ರಾಕ್ಷಸನ ಉಪಟಳದಿಂದ ನಾಗರಿಕರಿಗೆ ತೊಂದರೆಯಾಗುತ್ತಿದೆ. ಸಿಕ್ಕ ಸಿಕ್ಕವರನ್ನು ಹಿಡಿದು ತಿನ್ನುತ್ತಿದ್ದ. ಕೊನೆಗೆ ಆತನೊಂದಿಗೆ ಊರವರೆಲ್ಲಾ ಸೇರಿಕೊಂಡು ಒಪ್ಪಂದ ಮಾಡಿಕೊಂಡರು. ಪ್ರತಿದಿನ ಓರ್ವ ಎತ್ತಿನ ಗಾಡಿಯಲ್ಲಿ ಒಂದು ಖಂಡುಗ ಅಕ್ಕಿಯ ಅನ್ನ, ವಿವಿಧ ಖಾದ್ಯಗಳು, ಭಕ್ಷ್ಯ ಭೋಜ್ಯಗಳನ್ನು ಒದಗಿಸಬೇಕು. ಎತ್ತು, ಮನುಷ್ಯ ಸೇರಿದಂತೆ ಎಲ್ಲವನ್ನೂ ಆತ ಮೆಲ್ಲುತ್ತಾನೆ. ದಿನಕ್ಕೊಂದು ಮನೆಯಂತೆ ಈ ವ್ಯವಸ್ಥೆ. ಇಂದಿನ ಪಾಳಿ ನಮ್ಮದು. ನಾವು ರಾಕ್ಷಸನಿಗೆ ಆಹಾರವಾಗಲೇ ಬೇಕು.”
ಕುಂತಿಯು ಧೈರ್ಯವನ್ನು ಹೇಳಿ, ‘ಎಲ್ಲಾ ಪಾಕಗಳನ್ನು, ಗಾಡಿಯನ್ನು ಸಜ್ಜುಗೊಳಿಸಿ’ ಎಂದು ವಿಜ್ಞಾಪಿಸಿ, ಭೀಮಸೇನನನ್ನು ಬಕನೆದುರಿಗೆ ಕಳುಹಿಸಿಕೊಟ್ಟಳು. ಬಕನನ್ನು ದೀರ್ಘ ಸ್ವರದಲ್ಲಿ ಭೀಮನು ಕರೆದಾಗ ಅಟ್ಟಹಾಸಗೈಯುತ್ತಾ ಬಂದಾಗ ನೋಡುವುದೇನು? ಭೀಮಸೇನನು ಗಾಡಿಯಲ್ಲಿ ಪೇರಿಸಿಕೊಂಡು ಬಂದಿದ್ದ ಎಲ್ಲಾ ಖಾದ್ಯಗಳನ್ನು ‘ಸ್ವಲ್ಪವೂ ಬಿಡದೆ’ ಉಂಡು ತೇಗುತ್ತಿದ್ದಾನೆ. ಸಿಟ್ಟುಗೊಂಡ ಬಕಾಸುರನು ಭೀಮನ ಮೇಲೆ ಎರಗಿದಾಗ ಕಾಳಗ ನಡೆದು ಬಕಾಸುರನು ಅಸು ನೀಗುತ್ತಾನೆ. ಬಕನ ಕಳೇಬರವನ್ನು ಗಾಡಿಗೇರಿಸಿ ತರುತ್ತಾನೆ. ಊರಿನಲ್ಲಿ ಸುದ್ದಿ ಹಬ್ಬುತ್ತದೆ. ಊರವರಿಗೆ ‘ಊರಿಗೆ ಬಂದ ಮಾರಿ ತೊಲಗಿತು’ ಎಂಬ ಖುಷಿ ಒಂದೆಡೆಯಾದರೆ, ಮತ್ತೊಂದೆಡೆ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿದಿತ್ತು, ‘ಬಕನನ್ನು ಕೊಂದವರು ಯಾರು?’
ಭೀಮಸೇನನ ‘ಬಕ ಬೋಜನ’ಕ್ಕೆ ಸಹೋದರರು ಗೇಲಿ ಮಾಡಿದ್ದೇ ಮಾಡಿದ್ದು. ಅಸಹಜವಾಗಿ ಉಣ್ಣುವವರಿಗೆ ‘ಬಕಾಸುರ’ ಎನ್ನುವ ಅಡ್ಡ ಹೆಸರೂ ಬಂತು. ತುಂಬಾ ಸ್ಥೂಲಕಾಯ ಪುರುಷರಿಗೆ ‘ಹಿಡಿಂಬ’ನೆಂದೂ, ಮಹಿಳೆಗೆ ‘ಹಿಡಿಂಬಿ’ ಎಂಬ ಅಡ್ಡ ಹೆಸರಿನಿಂದ ಕರೆಯುವುದನ್ನು ಕೇಳುತ್ತೇವೆ. ಅಂದರೆ ಅವರಂತೆ ಆಗಬೇಡಿ. ಸ್ಥೂಲಕಾಯವು ಆರೋಗ್ಯಕ್ಕೆ ಹಾನಿಯೆಂಬ ಸಂದೇಶವೇ ಹೊರತು ಬೇರೆ ಯಾವ ಅರ್ಥವೂ ಇಲ್ಲ.
Advertisement
/**/
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ನಾ.ಕಾರಂತ ಪೆರಾಜೆ

ಪತ್ರಕರ್ತ , ಕಲಾವಿದ , ಅಂಕಣಕಾರ ನಾ.ಕಾರಂತ ಪೆರಾಜೆ ಅವರು ಪ್ರಸ್ತುತ ಅಡಿಕೆ ಪತ್ರಿಕೆಯ ಸಹಾಯಕ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಕರ್ತರಾಗಿ, ಕಲಾವಿದರಾಗಿ, ಅಂಕಣಕಾರರಾಗಿ ಗುರುತಿಸಿಕೊಂಡಿರುವ ನಾ.ಕಾರಂತ ಅವರು ತಾಳಮದ್ದಳೆಯಲ್ಲಿ ಅರ್ಥದಾರಿಯಾಗಿ ಹಾಗೂ ವಿವಿಧ ಮೇಳಗಳಲ್ಲಿ ವೇಷಧಾರಿಯೂ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಪುತ್ತೂರು ತಾಲೂಕಿನ 17ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

Published by
ನಾ.ಕಾರಂತ ಪೆರಾಜೆ

Recent Posts

ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಆಪ್‌ನಲ್ಲಿ ವಿವರ ದಾಖಲಿಸಲು ರೈತರಿಗೆ ಮನವಿ

2025-26ನೇ ಸಾಲಿನ ಪೂರ್ವ ಮುಂಗಾರು ಮತ್ತು ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆಗೆ ರೈತರ…

6 hours ago

ನಾರಾಯಣಪುರ ಅಣೆಕಟ್ಟೆಯ ನೀರಿನ ಮಟ್ಟ ಹೆಚ್ಚಳ | ನದಿ ಪಾತ್ರದ ಜನರಿಗೆ ಜಾಗ್ರತೆಯಿಂದ ಇರಲು ಎಚ್ಚರಿಕೆ

ಯಾದಗಿರಿ ಜಿಲ್ಲೆಯ, ನಾರಾಯಣಪುರ ಅಣೆಕಟ್ಟೆ ಜಲಾನಯನ ಪ್ರದೇಶದಲ್ಲಿ ಉಂಟಾಗುತ್ತಿರುವ ಮಳೆಯಿಂದಾಗಿ ಮತ್ತು ಆಲಮಟ್ಟಿ…

7 hours ago

ಹಳ್ಳಿಗಳು ಅಭಿವೃದ್ಧಿ ಹೊಂದಿದರೆ ಮಾತ್ರ ದೇಶದ ಅಭಿವೃದ್ಧಿ

ಮಹಾತ್ಮ ಗಾಂಧೀಜಿ ಅವರು ಹೇಳಿದಂತೆ  ಹಳ್ಳಿಗಳು ಅಭಿವೃದ್ಧಿ ಹೊಂದಿದರೆ ಮಾತ್ರ ದೇಶದ ಅಭಿವೃದ್ಧಿ…

7 hours ago

ಕೃಷಿ ಕೂಡಾ ಅತಿ ಹೆಚ್ಚು ಉದ್ಯೋಗ ಒದಗಿಸುವ ಕ್ಷೇತ್ರ

ದೇಶದ ಆರ್ಥಿಕ ಪ್ರಗತಿಯಲ್ಲಿ ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಕೈಗಾರಿಕಾ ವಲಯ ಎಂಎಸ್ಎಂಇ…

7 hours ago

ಹವಾಮಾನ ವರದಿ | 28-06-2025 | ಕರಾವಳಿ ಜಿಲ್ಲೆಯಲ್ಲಿ ಮಳೆ ಏನಾಯ್ತು..? | ಜುಲೈ 6 ನಂತರ ಮಳೆ ಕಡಿಮೆ..?

ಅರಬ್ಬಿ ಸಮುದ್ರದ ದಕ್ಷಿಣ ಭಾಗದಲ್ಲಿ ಮುಂಗಾರು ದುರ್ಬಲಗೊಳ್ಳುವ ಲಕ್ಷಣಗಳಿವೆ. ಇದರಿಂದ ಜುಲೈ ತಿಂಗಳ…

13 hours ago

ಮುಂಗಾರು ಮಳೆ ಸುದ್ದಿ | ಕೇರಳದಲ್ಲಿ ತೀವ್ರಗೊಳ್ಳಲಿದೆ ಮಳೆ | ದೆಹಲಿಯಲ್ಲೂ ಮಳೆ ಎಚ್ಚರಿಕೆ | ಹಿಮಾಚಲದಲ್ಲಿ 20 ಕ್ಕೂ ಹೆಚ್ಚು ಜೀವಹಾನಿ |

ಮುಂದಿನ 24 ಗಂಟೆಗಳಲ್ಲಿ ದೆಹಲಿಯನ್ನು ಮುಂಗಾರು ಆವರಿಸುವ ಸಾಧ್ಯತೆಯಿದೆ. ಎರಡು ದಿನಗಳ ಹಿಂದೆ…

20 hours ago