ಬಂಡಿಪುರ ಹಾಗೂ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಸಫಾರಿಯನ್ನು ಮತ್ತೆ ಆರಂಭಿಸಲು ಅನುಮತಿ ನೀಡಲಾಗಿದೆ ಎಂದು ಅರಣ್ಯ, ಪರಿಸರ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.
ಹುಲಿ ದಾಳಿಯಿಂದ ಸರಣಿ ಸಾವುಗಳು ಸಂಭವಿಸಿದ ಹಿನ್ನೆಲೆಯಲ್ಲಿ ಕಳೆದ ನವೆಂಬರ್ 7ರಿಂದ ಈ ಪ್ರದೇಶಗಳಲ್ಲಿ ಸಫಾರಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಈ ಘಟನೆಗಳ ಪರಿಣಾಮಗಳ ಅಧ್ಯಯನಕ್ಕಾಗಿ ರಚಿಸಲಾಗಿದ್ದ ತಾಂತ್ರಿಕ ಸಮಿತಿ ತನ್ನ ವರದಿಯನ್ನು ಸಲ್ಲಿಸಿದ್ದು, ಅದರ ಆಧಾರದಲ್ಲಿ ಸಫಾರಿ ಪುನರಾರಂಭಿಸಲು ನಿರ್ಧಾರ ಕೈಗೊಳ್ಳಲಾಗಿದೆ.
ಪ್ರಥಮ ಹಂತದಲ್ಲಿ ಬಂಡಿಪುರದಲ್ಲಿ ದಿನಕ್ಕೆ 8 ಗಂಟೆಗಳ ಬದಲಾಗಿ 5 ಗಂಟೆ, ಸುಂಕದಕಟ್ಟೆಯಲ್ಲಿ 6 ಗಂಟೆ ಹಾಗೂ ನಾಗರಹೊಳೆ ಪ್ರದೇಶದಲ್ಲಿ 4 ಗಂಟೆಗಳ ಕಾಲ ಮಾತ್ರ ಸಫಾರಿಗೆ ಅನುಮತಿ ನೀಡಲಾಗಿದೆ. ಜೊತೆಗೆ, ಹಿಂದಿನಂತೆ ಸಂಪೂರ್ಣ ವಾಹನಗಳಿಗೆ ಅವಕಾಶ ನೀಡದೇ, ಕೇವಲ ಶೇಕಡ 50ರಷ್ಟು ಸಫಾರಿ ವಾಹನಗಳಿಗೆ ಮಾತ್ರ ಅವಕಾಶ ನೀಡಲಾಗಿದೆ.
ಮುಂದಿನ ಎರಡು ತಿಂಗಳ ಒಳಗಾಗಿ ಸಫಾರಿ ವಾಹನಗಳಿಗೆ ಇಂಜಿನ್ ಸಂಪರ್ಕಿತ GPS ವ್ಯವಸ್ಥೆ ಹಾಗೂ ಡ್ಯಾಶ್ ಕ್ಯಾಮ್ ಅಳವಡಿಸುವುದು ಕಡ್ಡಾಯಗೊಳಿಸಲಾಗಿದೆ. ಇದರಿಂದ ವಾಹನಗಳ ಚಲನವಲನವನ್ನು ನಿಗಾ ವಹಿಸಿ ಸುರಕ್ಷತೆ ಹೆಚ್ಚಿಸುವ ಉದ್ದೇಶವಿದೆ.
ಸ್ಥಳೀಯ ರೈತರು ಹಾಗೂ ಜನರ ಒತ್ತಾಯದ ಮೇರೆಗೆ ಸಫಾರಿ ಪುನರಾರಂಭಕ್ಕೆ ಅನುಮತಿ ನೀಡಲಾಗಿದೆ. ಸಫಾರಿ ಚಟುವಟಿಕೆಗಳ ಕಾರಣದಿಂದ ಹುಲಿಗಳು ಕಾಡಿನಿಂದ ನಾಡಿಗೆ ಬರುತ್ತಿವೆ ಎಂಬುದಕ್ಕೆ ಯಾವುದೇ ವೈಜ್ಞಾನಿಕ ಆಧಾರ ಇಲ್ಲ ಎಂದು ಸಚಿವ ಈಶ್ವರ್ ಖಂಡ್ರೆ ಸ್ಪಷ್ಟಪಡಿಸಿದರು.
ಅರಣ್ಯ ಸಂರಕ್ಷಣೆ ಹಾಗೂ ಸಾರ್ವಜನಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ನಿಯಮಾವಳಿ ಬದಲಾವಣೆಗಳೊಂದಿಗೆ ಸಫಾರಿಯನ್ನು ಪುನರಾರಂಭಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ
Safari operations in Bandipur and Nagarhole tiger reserves have been permitted to restart with restrictions, including reduced safari hours, only 50% vehicle usage, and mandatory GPS and dash cams. Forest Minister Eshwar Khandre said the decision was based on expert committee recommendations following earlier tiger attack incidents.


