ರಾಜಧಾನಿ ಬೆಂಗಳೂರು ಸೇರಿದಂತೆ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಜನರು ಹೈರಾಣರಾಗಿದ್ದು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸಿಬ್ಬಂದಿ , ರಾಜ್ಯ ವಿಪತ್ತು ನಿರ್ವಹಣಾ ಪಡೆ ಸೇರಿದಂತೆ ಇನ್ನಿತರ ತಂಡಗಳು ರಕ್ಷಣಾ ಕಾರ್ಯದಲ್ಲಿ ನಿರತವಾಗಿವೆ.
ಬೆಂಗಳೂರಿನಲ್ಲಿ ನಿನ್ನೆ ರಾತ್ರಿ ಸುರಿದ ಧಾರಾಕಾರ ಮಳೆಯಿಂದ ಮಹದೇಪುರದ ವಲಯ ವ್ಯಾಪ್ತಿಯ ಸಾಯಿ ಬಡವಾಣೆ ಸಂಪೂರ್ಣ ಜಲಾವೃತವಾದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ರಾಜಕಾಲುವೆ ತುಂಬಿ ಹರಿದಿದ್ದರಿಂದಾಗಿ ನೀರು ಬಡಾವಣೆಗೆ ನುಗ್ಗಿದೆ. ಈ ವೇಳೆ ಮನೆಯ ಸರಂಜಾಮುಗಳು ನೀರು ಪಾಲಾಗಿವೆ. ಚರಂಡಿಗಳು ಉಕ್ಕಿಹರಿಯುತ್ತಿದ್ದು, ವಾಹನ ಸವಾರರ ಸಂಚಾರಕ್ಕೂ ತೊಂದರೆಯಾಗಿದೆ. ಸ್ಥಳಕ್ಕೆ ಎಸ್ಡಿಆರ್ ಎಫ್ ಸಿಬ್ಬಂದಿ ಭೇಟಿ ನೀಡಿ ರಕ್ಷಣಾ ಕಾರ್ಯಕದಲ್ಲಿ ನಿರತರಾಗಿದ್ದು,ದೋಣಿಗಳ ಮೂಲಕ ಮಹಿಳೆಯರು, ಹಿರಿಯ ನಾಗರಿಕರನ್ನು ಸುರಕ್ಷಿತ ಜಾಗಗಳಿಗೆ ಸ್ಥಳಾಂತರಿಸುವ ಕೆಲಸದಲ್ಲಿ ನಿರತವಾಗಿದೆ ಕೆರೆಯಂತಾಗಿರುವ ಬಡಾವಣೆಯ ನೀರನ್ನು ಹೊರ ತೆಗೆಯಲು ರಕ್ಷಣಾ ಸಿಬ್ಬಂದಿ ಜೆಸಿಬಿಗಳನ್ನು ಬಳಸಿಕೊಂಡಿವೆ. ಕಟ್ಟಿಕೊಂಡಿರುವ ಚರಂಡಿಗಳನ್ನು ಸ್ವಚ್ಛಗೊಳಿಸಿ ನೀರನ್ನು ಹೊರಹಾಕಲು ಕೆಲಸದಲ್ಲಿ ನಿರತರಾಗಿದ್ದಾರೆ.
ಇನ್ನೊಂದೆಡೆ ನಗರದ ಹೃದಯ ಭಾಗದಲ್ಲಿರುವ ಕಂಠೀರವ ಕ್ರೀಡಾಂಗಣ ಜಲಾವೃತಗೊಂಡಿದ್ದು, ಕ್ರೀಡಾಪಟುಗಳ ಅಭ್ಯಾಸಕ್ಕೆ ಅಡಚಣೆ ಉಂಟಾಯಿತು. ಜನದಟ್ಟಣೆ ಪ್ರದೇಶವಾದ ಸಿಲ್ಕ್ ಬೋರ್ಡ್ ಮೆಟ್ರೋ ನಿಲ್ದಾಣದಕ್ಕೂ ಮಳೆಯ ನೀರು ನುಗ್ಗಿದ ಪರಿಣಾಮ ಪ್ರಯಾಣಿಕರು ಪರದಾಡುವಂತಾಯಿತು. ಪಾಲಿಕೆ ಸಿಬ್ಬಂದಿ ಸಾಕಷ್ಟು ಪೂರ್ವ ಸಿದ್ಧತೆ ವಹಿಸುವ ಮೂಲಕ ನಗರ ಮಳೆಯ ಸಮಸ್ಯೆಗಳಿಗೆ ಒಳಗಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಜನರು ಒತ್ತಾಯಿಸಿದರು. ಇಂದಿನಿಂದ ಮೇ 22ರ ವರೆಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದ್ದು, ಗಂಟೆಗೆ 40ರಿಂದ 50 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುವ ಸಂಭವವಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.