ಒಂದೆರಡಲ್ಲ…! ಬರೋಬ್ಬರಿ 65 ವರ್ಷಗಳಿಂದ ಭಜನೆ ನಡೆಯುತ್ತಿದೆ ಇಲ್ಲಿ..!, ಈ ಮೂಲಕ ಜನರು ಒಂದಾಗುತ್ತಿದ್ದಾರೆ. ಜಾತಿಯ ಬೇಧವಿಲ್ಲದೆ ಒಂದಾಗಿಸುವ ಈ ಭಜನೆ ಇಲ್ಲಿ ಒಂದು ಉತ್ಸವ..!. ಇಂತಹ ಸಂಭ್ರಮ ನಡೆಯುತ್ತಿರುವುದು ಕೊಕ್ಕಡದಲ್ಲಿ.
ವಿಶ್ವ ಹಿಂದೂ ಪರಿಷದ್ ಕೊಕ್ಕಡ ಮತ್ತು ಶ್ರೀರಾಮ ಸೇವಾ ಟ್ರಸ್ಟ್ ಕೊಕ್ಕಡ ಇದರ ವತಿಯಿಂದ ನಡೆಯುತ್ತಿರುವ 65ನೇ ವರ್ಷದ ಸಾರ್ವಜನಿಕ ಭಜನಾ ಸಂಕೀರ್ತನೆ ನಡೆಯಿತು. ಸುಮಾರು 65 ವರ್ಷಗಳ ಹಿಂದೆ ಆರಂಭವಾದ ಈ ನಗರ ಭಜನೆಯು ಕೊಕ್ಕಡದ ಒಂದು ದೊಡ್ಡ ಉತ್ಸವ.
ಸುಮಾರು 60 ರ ದಶಕದಲ್ಲಿ, ಕೊಕ್ಕಡದಲ್ಲಿ ಹಿಂದೂ ಸಂಘಟನೆಯನ್ನು ಬಲಪಡಿಸುವ ಉದ್ದೇಶದಿಂದ ಶಿಶಿಲದ ಬರ್ಗುಲ ನಿವಾಸಿ ದಿವಂಗತ ಪುರುಷೋತ್ತಮ ನಾಯಕ್ ಅವರ ಮುಂದಾಳತ್ವದಲ್ಲಿ ಹುಟ್ಟಿಕೊಂಡ ನಗರ ಭಜನೆಯೂ ಇವರ ಸಮಕಾಲೀನರ ಉತ್ಸಾಹದೊಂದಿಗೆ ಇದೀಗ ಭಜನಾ ಸಪ್ತಾಹದ ಮೂಲಕ ಮುಂದುವರೆದುಕೊಂಡು ಬಂದಿದೆ.
ಕೊಕ್ಕಡದಲ್ಲಿ ನಗರ ಭಜನಾ ಸಂಕೀರ್ತನೆ ನಡೆಯಿತು. #ಭಜನೆ pic.twitter.com/rAaHzUk1Cf
— theruralmirror (@ruralmirror) November 17, 2021
ದೀಪಾವಳಿ ನಂತರದ ಮೊದಲ ಷಷ್ಠಿಯಂದು ಸಂಜೆ ಶ್ರೀ ಕ್ಷೇತ್ರ ಸೌತಡ್ಕ ಮಹಾಗಣಪತಿ ದೇವರಿಗೆ ರಂಗಪೂಜೆ ಯನ್ನು ಅರ್ಪಿಸಿ ಭಜನೆ ಆರಂಭಗೊಳ್ಳುತ್ತದೆ. ಬಳಿಕ ಎರಡನೆಯ ದಿನ ಸಂಜೆ ಶಿಶಿಲದ ಬರ್ಗುಲದಲ್ಲಿರುವ ದಿವಂಗತ ಪುರುಷೋತ್ತಮ ನಾಯಕರ ಮನೆಯಲ್ಲಿರುವ ರಾಮ ಸೀತೆ ಲಕ್ಷ್ಮಣ ಮತ್ತು ಹನುಮಂತರ ಬೆಳ್ಳಿಯ ಭಾವಚಿತ್ರದೊಂದಿಗೆ ಮನೆಯಿಂದ ಕೊಕ್ಕಡದವರೆಗೆ ಶೋಭ ಯಾತ್ರೆಯ ಮೂಲಕ ವೈಭವಪೂರಿತವಾಗಿ ಕೊಕ್ಕಡ ಶ್ರೀ ವೈದ್ಯನಾಥೇಶ್ವರ ವಿಷ್ಣುಮೂರ್ತಿ ದೇವಳಕ್ಕೆ ಪ್ರವೇಶಿಸುತ್ತದೆ.
ಪ್ರಾರ್ಥನೆಯ ಬಳಿಕ ಅಲ್ಲಿ ಭಜನೆಗಳನ್ನು ನಡೆಸಿ ಬೆಳ್ಳಿಯ ರಥದಲ್ಲಿ ದೇವರು ಸಮೇತ ಅಶ್ವತ್ಥಕಟ್ಟೆ ವರೆಗೆ ಕುಣಿತ ಭಜನೆಯ ಮೂಲಕ ಸಾಗಿ ಬಳಿಕ ಅಲ್ಲಿ ಪೂಜೆ ನೆರವೇರಿಸಿ ಕಾರ್ತಿಕ ಕಟ್ಟೆಯವರೆಗೆ ಭಜನೆಯು ಸಾಗುತ್ತದೆ. ನಂತರ ಅಲ್ಲಿಂದ ಹರಿಹರ ಕಟ್ಟೆಗೆ ಭಜನಾರ್ಥಿಗಳು ಸಾಗಿ ಮತ್ತೆ ಭಜನಾ ಮಂದಿರಕ್ಕೆ ಬಂದು ಅಲ್ಲಿ ದೇವರನ್ನು ಇರಿಸಿ, ದೇವರ ಸುತ್ತಲೂ ಕುಣಿತ ಭಜನೆ ಯನ್ನು ಆರಂಭಿಸುತ್ತಾರೆ. ಹೀಗೆ ಸುಮಾರು 3 ಗಂಟೆಗಳಿಗಿಂತ ಹೆಚ್ಚು ಕಾಲ ಭಜನೆ ಮುಂದುವರೆಯುತ್ತದೆ.
ವಾರಗಳ ಕಾಲ ನಡೆಯುವ ಭಜನಾ ಸಂಕೀರ್ತನೆಯಲ್ಲಿ ಪ್ರತಿನಿತ್ಯ ಇನ್ನೂರರಿಂದ ಮುನ್ನೂರು ಜನರು ಭಾಗವಹಿಸುತ್ತಾರೆ. ಈ ಭಜನಾ ಕಾರ್ಯಕ್ರಮದ ಮೂಲಕ ಊರ ಜನರೆಲ್ಲಾ ಒಂದಾಗುತ್ತಾರೆ. ಸಂಘಟನೆಯ ದೃಷ್ಟಿಯಿಂದ ಆರಂಭವಾದ ಭಜನಾ ಕಾರ್ಯಕ್ರಮ ಇಂದಿಗೂ ಮಹತ್ವ ಪಡೆದಿದೆ. ಜನರು ಸಂಭ್ರಮದಿಂದ ಭಾಗವಹಿಸುತ್ತಾರೆ.