ಮಳೆ ಮತ್ತು ಮಳೆ ನಕ್ಷತ್ರಗಳ ಲೆಕ್ಕಾಚಾರ | ಹಿರಿಯರು ಕಟ್ಟಿದ ಗಾದೆ ಮಾತುಗಳು ವಿಜ್ಞಾನಕ್ಕೂ ಸವಾಲು

June 25, 2024
1:56 PM

ಮಳೆಗೂ(Rain) ಗ್ರಹಗಳ ಸಂಚಾರಕ್ಕೂ ಸಂಬಂಧವಿದೆಯೇ? ಇದೆ ಎನ್ನುತ್ತದೆ ಜ್ಯೋತಿಷ್ಯಶಾಸ್ತ್ರ(Forecast). ಮಳೆ ನಕ್ಷತ್ರಗಳ ಲೆಕ್ಕಾಚಾರದ ಆಧಾರದ ಮೇಲೆ ಇಂತಿಷ್ಟೇ ಮಳೆ ಆಗಬಹುದು ಎಂದು ನಿರ್ಣಯಿಸಲು ಸಾಧ್ಯವಿದೆ. ನಮ್ಮ ಪಂಚಾಂಗಗಳಲ್ಲಿ ಮಳೆ ನಕ್ಷತ್ರಗಳ ಉಲ್ಲೇಖವಿದೆ. ಮಳೆ ನಕ್ಷತ್ರಗಳ ಲೆಕ್ಕಾಚಾರ ಹೇಗೆ?

ಜ್ಯೋತಿಷ್ಯಶಾಸ್ತ್ರವು 27 ನಕ್ಷತ್ರಗಳನ್ನು ಗುರುತಿಸಿದೆ. ಇದರಲ್ಲಿ 11 ನಕ್ಷತ್ರಗಳು (ಆರಿದ್ರಾ, ಪುನರ್ವಸು, ಪುಷ್ಯ, ಆಶ್ಲೇಷ, ಮಖ, ಪುಬ್ಬ, ಉತ್ತರ, ಹಸ್ತ, ಚಿತ್ತ, ಸ್ವಾತಿ ಹಾಗೂ ವಿಶಾಖ) ಮಳೆ ನಕ್ಷತ್ರಗಳೆಂದು ಗುರುತಿಸಲ್ಪಟ್ಟಿವೆ. ಉಳಿದ ನಕ್ಷತ್ರಗಳಲ್ಲಿ ಮಳೆ ಬರುವ ಸಾಧ್ಯತೆ ಅಷ್ಟಾಗಿ ಇರುವುದಿಲ್ಲ. ಪಂಚಾಂಗದ ಪ್ರಕಾರ ಜೂನ್‌ತಿಂಗಳ ಮೊದಲ ವಾರ ಮಳೆ ಆರಂಭವಾಗುತ್ತದೆ.

ಹಿಂದೆ ನಮ್ಮ ಪೂರ್ವಜರು ಮಳೆ ಮತ್ತು ಮಳೆ ನಕ್ಷತ್ರಗಳ ಮೇಲೆ ಕಟ್ಟಿದ ಗಾದೆಗಳ(Proverb) ಮಾಹಿತಿ ಇಲ್ಲಿದೆ. ಹಿಂದೆ ಪೂರ್ವಜರು(Elders) ಮಳೆಯ ನಕ್ಷತ್ರಗಳ ಮೇಲೆ ಹಲವಾರು ಗಾದೆಗಳನ್ನು ಕಟ್ಟಿದ್ದಾರೆ. ಅವು ಅಕ್ಷರಶಃ ಸತ್ಯವಾಗಿದೆ. ವಿಜ್ಞಾನಿಗಳನ್ನು(Scientist) ಮೀರಿ ತಮ್ಮ ಅನುಭವದ ಮೇಲೆ ಹಲವಾರು ಗಾದೆ ಮಾತುಗಳನ್ನು ಹೇಳಿದ್ದಾರೆ.
🔹ಅಶ್ವಿನಿ-
🌧 ಅಶ್ವಿನಿ ಮಳೆ ಬಿದ್ದರೆ ಅರಿಶಿಣಕ್ಕೆ ಮೇಲು,
🌧 ಅಶ್ವಿನಿ ಸಸ್ಯ ನಾಶಿನೀ,
🌧 ಅಶ್ವಿನಿ ಸನ್ಯಾಸಿಸಿ
🌧 ಅಶ್ವಿನಿ ಆದ್ರೆ ಶಿಶುವಿಗೆ ಹಾಲಿಲ್ಲ

🔹ಭರಣಿ –
🌧 ಭರಣಿ ಮಳೆ ಧರಣಿ ಬೆಳೆ
🌧 ಬರಿಣಿ ಬಂದ್ರ ದರಿಣಿ ಬೆಳೀತದ,
🌧 ಭರಣಿ ಸುರಿದರೆ ಧರಣಿ ಬದುಕೀತು,
🌧 ಭರಣೀ ಬಂದರೆ ಧರಣಿ ತಣಿಯುತ್ತೆ.
🌧 ಭರಣಿಯಲ್ಲಿ ಮಳೆಯಾದರೆ ಧರಣಿಯೆಲ್ಲಾ ಬೆಳೆ,
🌧 ಭರಣಿ ಬಂದ್ರೆ ಧರಣಿ ಎಲ್ಲಾ ಹಸಿರು.
🌧 ಭರಣಿ ಮಳೆ ಧರಣಿ ತಂಪು
🌧 ಭರಣಿ ಮಳೆ ಧರಣಿ ಎಲ್ಲಾ ಆಳ್ತು

🔹ಕೃತಿಕಾ-
🌧 ಕೃತಿಕ ನಕ್ಷತ್ರ ಕಾದರೆ ಗದ್ದೆಗೆ ಒಳ್ಳೆಯದು

🔹ರೋಹಿಣಿ-
🌧 ರೋಹಿಣಿ ಮಳೆ ಓಣಿಯೆಲ್ಲಾ ಕೆಸರು
🌧 ರೋಹಿಣಿ ಮಳೆಗೆ ಓಣ್ಯೆಲ್ಲಾ ಜೋಳ

🔹ಮೃಗಶಿರ –
🌧 ಮೃಗಶಿರೆಯಲ್ಲಿ ಮಿಸುಕಾಡದೆ ನೆರೆ ಬಂತು.
🌧 ಮೃಗಶಿರಾ ಮಳೆಯಲಿ ಗಿಡ ಮುರಿದು ನೆಟ್ಟರೂ ಬದುಕುವುದು.
🌧 ಮ್ರಗಶಿರ ಮಿಂಚಿದರೆ ಮೂರು ಮಳೆ ಇಲ್ಲ.

🔹ಆರಿದ್ರಾ-
🌧ಆರಿದ್ರಾ ಮಳೆ ಆಗದೆ ಗುಡುಗಿದರೆ ಆರು ಮಳೆ ಆಗಲ್ಲ,
🌧 ಆದರೆ ಆರಿದ್ರಾ, ಇಲ್ವಾದ್ರೆ ದರಿದ್ರ!
🌧 ಆರಿದ್ರಾ ಮಳೆ ಆರದೆ ಹುಯ್ಯುತ್ತೇ,
🌧 ಆರಿದ್ರಾ ಇಲ್ಲದಿದ್ದರೆ ದರಿದ್ರ ಖಂಡಿತ,
🌧 ಅಮ್ಮನ ಮನಸ್ಸು ಬೆಲ್ಲದ ಹಾಗೆ, ಆರಿದ್ರಾ ಹನಿ ಕಲ್ಲಿನ ಹಾಗೆ.
🌧 ಆರಿದ್ರೆಯಲಿ ಗಿಡ ಆದರೆ ಆದಿತು..

🔹 ಪುನರ್ವಸು –
ಪುನವ೯ಸು ಮಳೆ ಬಂದು ಪಂಚಾಂಗ ಓದಾಯ್ತು, ಎಳೆ ಕರು ರಾಸಾಯ್ತು.

🔹ಪುಷ್ಯ-
🌧 ಪುಷ್ಯ ಮಳೆ ಭಾಷೆ ಕೂಟ್ಟ ಮಳೆ (ತಪ್ಪಿಸುವುದಿಲ್ಲ)
🌧 ಪುಷ್ಯದಲಿ ನೆಟ್ಟ ಗಿಡ ಪುಟುಗೋಸಿ ಆದೀತು..

🔹ಆಶ್ಲೇಷ-
🌧 ಆಶ್ಲೆ ಮಳೆ ಭೂಮಿ ಹಸ್ರುಗಟ್ಟಂಗೆ ಹುಯ್ತದೆ,
🌧 ಅಸಲೆ ಮಳೆ ಕೈತುಂಬಾ ಬೆಳೆ,
🌧 ಆಶ್ಲೇಷ ಮಳೆ ಈಸಲಾರದ ಹೊಳೆ.
🌧 ಅಸಲೆ ಮಳೆ ಬಿದ್ದು ಸಸಿಲೆ(ಸಣ್ಣ ಮೀನು) ಬೆಟ್ಟಕ್ಕೇರಿತು.
🌧 ಅಸ್ಲೆ ಮಳೆಗೆ ಸಸ್ಲೆ ಬೆಟ್ಟಕ್ಕೆ ನೆಗೀತು
🌧 ಆಶ್ಲೇಷಾ ಮಳೆಗೆ ಅಂಗಾಲೂ ನೆನೆಯೊಲ್ಲವಂತೆ.
🌧 ಆಶ್ಲೇಷಾ ಗಿಡಗಳಿಗೆ ಕೊಳೆಬರಿಸುವ ನಂಜಿನ ಮಳೆ.
🌧 ಅಶ್ಲೆ ಮಳೆ ಹುಯ್ಶಾಲಿ, ಸೋಸಲು ಗಟ್ಟ ಹತ್ತಾಲಿ

🔹ಮಘ-
🌧 ಬಂದರೆ ಮಗೆ ಹೋದರೆ ಹೊಗೆ,
🌧 ಬಂದರೆ ಮಘೆ ಇಲ್ಲದಿದ್ದರೆ ಧಗೆ,
🌧 ಮಘೆ ಮಳೆ ಬಂದಷ್ಟು ಒಳ್ಳೇದು, ಮನೆಮಗ ಉಂಡಷ್ಟು ಒಳ್ಳೇದು.
🌧 ಮಗೆ ಮಳೆ ಮಗೆ ಗಾತ್ರ ಬೀಳ್ತದೆ.
🌧 ಮಘೇ ಮೊಗೆಬೆಳೆಯುವ ಮಳೆ..
🌧 ಮಘಮಳೆ ಮೊಗೆದು ಹೊಯ್ಯುವುದು.

🔹ಹುಬ್ಬ-
🌧 ಹುಬ್ಬೆ ಮಳೇಲಿ ಹುಬ್ಬೆತ್ತಕ್ಕೂ ಆಗಲ್ಲ.
🌧 ಹುಬ್ಬೆ ಮಳೆ ಅಬ್ಬೇ ಹಾಲು ಉಂಡಂತೆ..
🌧 ಹುಬ್ಬೆ ಮಳೆ ಅಬ್ಬೆ ಹಾಲು ಕುಡದ್ಹಾಂಗೆ.
🌧 ಹುಬ್ಬೆ ಮಳೆ ಉಬ್ಬುಬ್ಕೊಂಡು ಹೊಡೆ.
🌧 ಹುಬ್ಬೇ ಮಳೆ ಉಬ್ಬುಬ್ಬುಕೊಂಡು ಬಂದ್ರು ಗುಬ್ಬಚ್ಚಿ ಪುಕ್ಕ ನೆನಿಲಿಲ್ಲ.

🔹ಉತ್ತರೆ-
🌧 ಉತ್ತರಿ ಮಳೆ ಹುಯ್ದರೆ ಹೆತ್ತಮ್ಮನೂ ಆಗೋಲ್ಲ.
🌧 ಉತ್ತರ ಎದುರುತ್ತರದ ಮಳೆ.
🌧 ಉತ್ತರೆ ಮಳೆಗೆ ಹುತ್ತದಲ್ಲಿರುವ ಹಾವೆಲ್ಲಾ ಹೊರಗೆ.
🌧 ಉತ್ತರಿ ಬಿತ್ತಿರಿ ಅದು ಬರದಿದ್ದರೆ ನೀವು ಸತ್ತಿರಿ

🔹ಹಸ್ತ-
🌧 ಹಸ್ತ ಇಲ್ದಿದ್ರೆ ಒಕ್ಕಲಿಗ ಹಲ್ಲು ಕಿಸ್ದ
🌧 ಹಸ್ತಾ ಭಾರಿಸಿದರೆ ಅಷ್ಟೇ..
🌧 ಹಸ್ತ ಮಳೆ ಎತ್ಲಿಂದಾದ್ರೂ ಬರುತ್ತೆ

🔹ಚಿತ್ತ-
🌧 ಕುರುಡು ಚಿತ್ತೆ ಎರಚಿದತ್ತ ಬೆಳೆ.
🌧 ಚಿತ್ತಾ ಮಳೆ ವಿಚಿತ್ರ ಬೆಳೆ!
🌧 ಚಿತ್ತಾ ಚಿತ್ರವಿಚಿತ್ರ ಮಳೆ..
🌧 ಕುರ್ಡು ಚಿತ್ತೆ ಎತ್ಲಾಗ ಬಿದ್ದರೂ ಬರುತ್ತೆ.

🔹ಸ್ವಾತಿ-
🌧 ಸ್ವಾತಿ ಮಳೆ ಮುತ್ತಿನ ಬೆಳೆ.
🌧 ಸ್ವಾತಿ ಮಳೆ ಹೇತೆನೆಂದ್ರೂ ಬಿಡದು.
🌧 ಸ್ವಾತಿ ಮುತ್ತಿನ ಹನಿಯ ಮಳೆ..
🌧 ಸ್ವಾತಿ ಮಳೆ ಹೋದ್ರಾ ಇನ್ಯಾತರ ಮಳೆ

🔹ವಿಶಾಖ-
🌧 ವಿಶಾಖ ಮಳೆ ಪಿಶಾಚಿ ಹಿಡಿದ ಹಾಗೆ.
🌧 ವಿಶಾಖ ಹೊಯ್ದರೆ ವಿಷಜಂತುವಿನ ಉಪಟಳ.
🌧 ವಿಶಾಖೆ ಮಳೆಗೆ ಹುಳವೆಲ್ಲಾ ಸಾಯುತ್ತೆ.

🔹ಅನುರಾಧ-
🌧 ಅನುರಾಧ ಬಂದರೆ ನಮ್ಮ ರಾಗಿ ನಮ್ಮದು.
🌧 ಅನುರಾಧಾ ಹೊಯ್ದರೆ ರೋಗ ನಿವಾರಣೆ.

🔹 ಪೂರ್ವಾಷಾಢ, ಉತ್ತರಾಷಾಢ
🌧 ಪೂರ್ವಾಷಾಢ, ಉತ್ತರಾಷಾಢ ಬೇಡವೇ ಬೇಡ.

ಮೂಲ : ಸದ್ವಿಚಾರ ತರಂಗಿಣಿ

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹಿಮಾಲಯದಲ್ಲಿ ಹಿಮ ಕರಗಿದರೆ ಅದರ ಪರಿಣಾಮ ಎಲ್ಲಿಗೆ ತಲುಪುತ್ತದೆ? – ಹಿಮಾಲಯದ ದುರಂತದ ಬಳಿಕ ನೇಪಾಳದ ಪ್ರಧಾನಿ ಎಚ್ಚರಿಕೆ
September 3, 2026
7:08 AM
by: ದ ರೂರಲ್ ಮಿರರ್.ಕಾಂ
ಕಸ್ತೂರಿ ರಂಗನ್ ವರದಿ ಜಾರಿಗೆ ಅವಕಾಶವಿಲ್ಲ
August 30, 2026
10:09 PM
by: ದ ರೂರಲ್ ಮಿರರ್.ಕಾಂ
ಕರ್ನಾಟಕ–ತಮಿಳುನಾಡು ಗಡಿಯಲ್ಲಿ ಆನೆಗಳಿಗಾಗಿ 3 ಹೊಸ ಕಾರಿಡಾರ್‌
August 29, 2026
6:50 PM
by: ದ ರೂರಲ್ ಮಿರರ್.ಕಾಂ
ಕಸ್ತೂರಿ ರಂಗನ್ ವರದಿ ಜಾರಿಗೆ ಅವಕಾಶವಿಲ್ಲ: ಪಶ್ಚಿಮಘಟ್ಟದ 1,449 ಗ್ರಾಮಗಳ ಬಗ್ಗೆ ಆತಂಕ ಬೇಡ ಎಂದ ಪರಮೇಶ್ವರ್
August 28, 2026
9:16 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror