ಸುತ್ತಲೂ ಕಾಡು. ಆ ಕಾಡಿನೊಳಗೆ ಕಾರು. ಆ ಕಾರಿನಲ್ಲಿ ಮನೆ..!, ಆ ಮನೆಯಲ್ಲಿ ಒಂಟಿ ಬದುಕು….!. ಇಂತಹದ್ದೊಂದು ಅಚ್ಚರಿಯ ಬದುಕು ಕಳೆದ 18 ವರ್ಷಗಳಿಂದ ನಡೆಸುತ್ತಿದ್ದಾರೆ ಚಂದ್ರಶೇಖರ್.
ಸುಳ್ಯ ತಾಲೂಕಿನ ಅರಂತೋಡು ಬಳಿಯ ಅಡ್ತಲೆಯ ಬೆದ್ರಪಣೆ ಎಂಬ ಪ್ರದೇಶದಲ್ಲಿ ಕಾಡು ದಾರಿಯ ಪಕ್ಕದಲ್ಲಿ ಕಾರಿನ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ ಚಂದ್ರಶೇಖರ್. ವೃತ್ತಿಯಲ್ಲಿ ಚಾಲಕನಾಗಿದ್ದು ಕೃಷಿಕನೂ ಆಗಿದ್ದ ಚಂದ್ರಶೇಖರ್ ಅರಂತೋಡಿನ ಪಕ್ಕದ ಗ್ರಾಮದ ನೆಲ್ಲೂರು ಕೆಮ್ರಾಜೆಯವರು. ಅಲ್ಲಿ ಕೃಷಿ ಭೂಮಿಯನ್ನೂ ಹೊಂದಿದ್ದರು. ಸುಮಾರು 18 ವರ್ಷಗಳ ಹಿಂದೆ ಕೃಷಿ ಭೂಮಿ ಏಲಂ ಆದ ಬಳಿಕ ಈ ಸ್ಥಿತಿಗೆ ಬಂದಿದ್ದಾರೆ.
ನೆಲ್ಲೂರು ಕೆಮ್ರಾಜೆಯಲ್ಲಿ ಕೃಷಿ ಭೂಮಿ ಹೊಂದಿದ್ದ ಚಂದ್ರಶೇಖರ್ ಅವರು ಕೃಷಿ ಸಾಲ ಪಡೆದು ಸಾಲ ಮರುಪಾವತಿ ಮಾಡಲಾಗದೆ ಎಂದು ಕೃಷಿ ಭೂಮಿ ಹರಾಜು ನಡೆದಿತ್ತು. ಅದಾದ ಬಳಿಕ ಕಾರೊಂದು ಖರೀದಿ ಮಾಡಿ ಬಾಡಿಗೆ ಮಾಡಿ ಬದುಕು ಸಾಗಿಸುತ್ತಿದ್ದರು. ಕ್ರಮೇಣ ಕಾರು ಹಳೆಯದಾದ್ದರಿಂದ ಆಗಾ ಕೈಕೊಡುತ್ತಿತ್ತು. ಒಂದು ಸಂದರ್ಭ ತನ್ನ ಸಹೋದರಿ ಮನೆ ಇರುವ ಅಡ್ತಲೆ ಬಳಿಯ ಬೆದ್ರಪಣೆಗೆ ಹೋದಾಗ ಕಾರು ಬಾಕಿಯಾಯಿತು. ದುರಸ್ತಿಗೆ ಪ್ರಯತ್ನಿಸಿ ಆಗಿರಲಿಲ್ಲ. ಅದಾದ ಬಳಿಕ ಅದೇ ಕಾರಿನಲ್ಲಿ ವಾಸ ಮಾಡಿದರು. ಕಾರಿನ ಮೇಲೆ ಛಾವಣಿ ಮಾಡಿ ರಸ್ತೆ ಬದಿಯೇ ಕಾರಿನಲ್ಲಿಯೇ ಮಲಗಿ ಅದನ್ನೇ ಮನೆಯಾಗಿಸಿದರು. 18 ವರ್ಷಗಳಿಂದ ಈ ರೀತಿ ಬದುಕು ಸಾಗಿಸುತ್ತಿದ್ದಾರೆ.
ಜೀವನೋಪಾಯಕ್ಕಾಗಿ ಸಮೀಪದ ಕಾಡಿನಿಂದ ಬಳ್ಳಿಗಳನ್ನು ತಂದು ಬುಟ್ಟಿ ಹೆಣೆದು ಸಮೀಪದ ಪೇಟೆಗೆ ಅಥವಾ ಸುಳ್ಯದ ಅಂಗಡಿಗೆ ಸೈಕಲ್ ಮೂಲಕ ತೆರಳಿ ಬುಟ್ಟಿ ಮಾರಾಟ ಮಾಡುತ್ತಾರೆ. ಈ ಮೂಲಕ ದಿನಸಿ ಸಾಮಾಗ್ರಿ ತಂದು ತಾವೇ ಅಡುಗೆ ಮಾಡಿ ಬದುಕು ಸಾಗಿಸುತ್ತಿದ್ದಾರೆ. ಇದುವರೆಗೆ ಯಾವ ಸಮಸ್ಯೆ ಆಗಿಲ್ಲ, ತನಗೆ ನ್ಯಾಯ ಸಿಗಬೇಕು ಎಂದು ಆಗಾಗ ಮಾತಿನ ನಡುವೆ ಹೇಳುತ್ತಾರೆ. ಕಡಿಮೆ ದರದಲ್ಲಿ ಕಾರು ಸಿಗಬಹುದೇ ಎಂದು ಪ್ರಶ್ನೆ ಮಾಡುವ ಚಂದ್ರಶೇಖರ್ , ಭೂಮಿ, ಕಾರು ಬಗ್ಗೆ ಆಗಾಗ ಮಾತನಾಡುತ್ತಾ, ಭೂಮಿ ನನಗೆ ಖರೀದಿ ಮಾಡಬಹುದು, ನನಗೆ ಸರಿಯಾದ ಮೊತ್ತ ಸಿಗಲಿ ಎಂದು ಹೇಳುತ್ತಾರೆ.