ರಾಜ್ಯದಲ್ಲಿ ಎರಡು ಕೆಮ್ಮಿನ ಸಿರಪ್ ಮಾದರಿಗಳಲ್ಲಿ ಅಸಾಮಾನ್ಯ ಅಂಶಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಎಚ್ಚರಿಕೆ ಕ್ರಮ ಕೈಗೊಂಡಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲೂ ಈಗ ಎರಡು ಸಿರಫ್ ಮಾದರಿಗಳು ಪತ್ತೆಯಾಗಿವೆ. ಇಂದು ಸಾರ್ವಜನಿಕರಿಗೆ ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಬಿಡುಗಡೆ ಮಾಡಲಾಗುತ್ತಿದ್ದು, ಯಾವ ರೀತಿ ಎಚ್ಚರಿಕೆ ವಹಿಸಬೇಕು ಎಂಬುದರ ಕುರಿತು ಸ್ಪಷ್ಟ ಸೂಚನೆ ನೀಡಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ. ಕೆಮ್ಮಿನ ಸಿರಫ್ ತಯಾರಿಕಾ ಘಟಕಗಳು ಮತ್ತು ಸರಬರಾಜುದಾರರ ನಡುವೆ ಸಂವಹನದ ಕೊರತೆ ಹಾಗೂ ನಿರ್ಲಕ್ಷ್ಯದಿಂದ ಈ ರೀತಿಯ ಘಟನೆಗಳು ನಡೆಯುತ್ತಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ಕೆಮ್ಮಿನ ಸಿರಪ್ ಕರ್ನಾಟಕದಲ್ಲಿ ಸರಬರಾಜಾಗಿಲ್ಲ. ಆದರೆ ತಮಿಳುನಾಡು, ಮಧ್ಯಪ್ರದೇಶ, ಪುದುಚೇರಿ, ರಾಜಸ್ಥಾನ ಹಾಗೂ ಒಡಿಶಾದಲ್ಲಿ ಬಳಕೆಯಾಗಿರುವ ಮಾಹಿತಿ ಲಭ್ಯವಾಗಿದೆ. ಈ ಸಿರಫ್ಗಳಲ್ಲಿ ಡೈ ಎಥಿಲಿನ್ ಕಾಲ್ ಎಂಬ ಹಾನಿಕರ ರಾಸಾಯನಿಕ ಅಂಶ ಬಳಕೆಯಾಗಿದೆ. ಮಕ್ಕಳಿಗೆ ಕೆಮ್ಮಿನ ಸಿರಪ್ ನೀಡುವಾಗ ಪಾಲಕರು ಎಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದ್ದಾರೆ.
ಮಧ್ಯಪ್ರದೇಶದಲ್ಲಿ ಮಕ್ಕಳ ಸಾವಿಗೆ ಕಾರಣವಾದ ಕೆಮ್ಮಿನ ಔಷಧಿ ರಾಜ್ಯದಲ್ಲಿ ಸರಬರಾಜು ಆಗಿಲ್ಲ. ಆದರೆ, ಮಧ್ಯ ಪ್ರದೇಶ ಪ್ರಕರಣದ ಬಳಿಕ ರಾಜ್ಯದಲ್ಲಿಯೂ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಮಕ್ಕಳಿಗೆ ಔಷಧ ಕೊಡುವಾಗ ಎಚ್ಚರಿಕೆ ವಹಿಸಬೇಕು. ಕೆಮ್ಮಿನ ಔಷಧಿ ರಾಜ್ಯದಲ್ಲಿ ಎಲ್ಲೂ ಸರಬರಾಜು ಆಗಿಲ್ಲ. ತಮಿಳುನಾಡು, ಮಧ್ಯಪ್ರದೇಶ, ಪುದುಚೇರಿ, ರಾಜಸ್ಥಾನ, ಒಡಿಶಾದಲ್ಲಿ ಉಪಯೋಗ ಮಾಡಿದ್ದಾರೆ. ಐದು ವರ್ಷಕ್ಕಿಂತ ಕಡಿಮೆ ಇರುವ ಮಕ್ಕಳಿಗೆ ಯಾವುದೇ ಕೆಮ್ಮಿನ ಔಷಧಿ ಕೊಡುವಾಗ ಎಚ್ಚರಿಕೆ ವಹಿಸಬೇಕು ಎಂದು ಸಚಿವರು ತಿಳಿಸಿದರು. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ.
ಈ ಬಗ್ಗೆ ಸಭೆ ನಡೆಸಿ ಕೆಮ್ಮಿನ ಸಿರಪ್ ಬಳಕೆಗೆ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಆರೋಗ್ಯ ಇಲಾಖೆ ಮಾರ್ಗಸೂಚಿಯ ಪ್ರಕಾರ, 2 ವರ್ಷದೊಳಗಿನ ಮಕ್ಕಳಿಗೆ ಕೆಮ್ಮು ಮತ್ತು ಶೀತದ ಸಿರಪ್ ನೀಡುವಂತಿಲ್ಲ. 2 ರಿಂದ 5 ವರ್ಷದ ಮಕ್ಕಳಿಗೆ ತಜ್ಞರ ಸಲಹೆ ಮೇರೆಗೆ ಔಷಧಿ ನೀಡಬೇಕು. 5 ವರ್ಷ ಮೇಲ್ಪಟ್ಟ ಮಕ್ಕಳಿಗೆ ವೈದ್ಯರ ಸಲಹೆ ಮೇರೆಗೆ ಔಷಧಿ ನೀಡಬೇಕು. ಕಡಿಮೆ ಅವಧಿಗೆ ಕನಿಷ್ಠ ಅಗತ್ಯವಿರುವ ಡೋಸ್ ಬಳಸಬೇಕು. ಮಲ್ಟಿಮೆಡಿಸನ್ ಒಳಗೊಂಡ ಸಿರಪ್ಗಳನ್ನ ಬಳಸಬಾರದು ಎಂದು ಸೂಚಿಸಿದೆ. ವೈದ್ಯರ ಸಲಹೆ ಇಲ್ಲದೆ ಕೆಮ್ಮಿನ ಸಿರಪ್ಗಳನ್ನ ಖರೀದಿಸಬಾರದು ಹಾಗೂ ಬಳಸಬಾರದು. ಈ ಹಿಂದೆ ಬಳಸಿದ ಔಷಧಿಗಳನ್ನ ಮರುಬಳಕೆ ಮಾಡಬಾರದು. ಕೆಮ್ಮು ಉಲ್ಬಣಗೊಂಡರೆ ವೈದ್ಯರನ್ನ ಸಂಪರ್ಕಿಸುವಂತೆ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ಸೂಚನೆಗಳಿಲ್ಲದೆ ನಾಲ್ಕು ವರ್ಷದೊಳಗಿನ ಮಕ್ಕಳಿಗೆ ಕೆಮ್ಮಿನ ಔಷಧವನ್ನು ನೀಡದಂತೆ ಕೇಂದ್ರ ಆರೋಗ್ಯ ಇಲಾಖೆ ಕೂಡಾ ಸ್ಪಷ್ಟ ಸೂಚನೆ ನೀಡಿದೆ. ರಾಜಸ್ತಾನದಲ್ಲಿ ಕೆಮ್ಮು ನಿವಾರಕ ಸಿರಪ್ ಸೇವಿಸಿ, 11 ಮಕ್ಕಳು ಸಾವನ್ನಪ್ಪಿರುವ ಘಟನೆಯ ಹಿನ್ನೆಲೆಯಲ್ಲಿ ಕೇಂದ್ರ ಔಷಧ ನಿಯಂತ್ರಕರು ಆರು ರಾಜ್ಯಗಳಲ್ಲಿ ಕೆಮ್ಮು ನಿವಾರಕ ಸಿರಪ್ ಮತ್ತು ರೋಗನಿರೋಧಕ ಔಷಧಗಳನ್ನು ಉತ್ಪಾದಿಸುತ್ತಿರುವ 19ಕ್ಕೂ ಹೆಚ್ಚು ಘಟಕಗಳಲ್ಲಿ ತಪಾಸಣೆ ನಡೆಸಿದ್ದಾರೆ.
ಇದೇ ವೇಳೆ ತಮಿಳುನಾಡು, ಮಧ್ಯಪ್ರದೇಶ ಮತ್ತು ಕೇರಳ ಸರ್ಕಾರಗಳು ಕೋಲ್ಡ್ ಡ್ರಿಫ್ ಸಿರಪ್ ಅನ್ನು ನಿಷೇಧಿಸಿವೆ. ಕೋಲ್ಡ್ ಡ್ರಿಫ್ ಸಿರಪ್ ನ ಮಾದರಿಯ ಪರೀಕ್ಷೆಯ ವರದಿ ಬಂದಿರುವ ಹಿನ್ನೆಲೆಯಲ್ಲಿ ಕಾಂಚಿಪುರಂನಲ್ಲಿರುವ ಕೋಲ್ಡ್ ಡ್ರಿಫ್ ಉತ್ಪಾದನಾ ಸಂಸ್ಥೆಯು ತಯಾರಿಸಿರುವ ಎಲ್ಲ ಉತ್ಪನ್ನಗಳನ್ನು ನಿಷೇಧಿಸಿರುವುದಾಗಿ ಮಧ್ಯಪ್ರದೇಶ ಸರ್ಕಾರ ತಿಳಿಸಿದೆ.
ಕೇರಳದಲ್ಲೂ ಕೋಲ್ಡ್ ಡ್ರಿಫ್ ಸಿರಪ್ ಮಾರಾಟವನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ನಿಷೇಧಿಸಿರುವುದಾಗಿ ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ. ಇತ್ತೀಚೆಗಷ್ಟೇ ಕೆಮ್ಮು ನಿವಾರಕ ಸಿರಪ್ ಸೇವಿಸಿ, ಮಧ್ಯಪ್ರದೇಶದ 9 ಹಾಗೂ ರಾಜಸ್ತಾನದ ಇಬ್ಬರು ಮಕ್ಕಳು ಮೂತ್ರಪಿಂಡ ವೈಫಲ್ಯದಿಂದ ಮೃತಪಟ್ಟಿದ್ದರು. ಆ ಬಗ್ಗೆ ತನಿಖೆ ನಡೆಸುವಂತೆ ಸರ್ಕಾರ ಆದೇಶಿಸಿತ್ತು. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ.


