ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಮಾನೋತ್ಸವ ಹಿನ್ನಲೆ ವರ್ಷವಿಡೀ ಹಲವು ರಚನಾತ್ಮಕ ಕಾರ್ಯಕ್ರಮಗಳ ಆಯೋಜನೆಗೆ ಸಿದ್ದತೆ ನಡೆದಿದ್ದು, ಬರುವ ವಿಜಯದಶಮಿಯಂದು ಸಂಘದ ಸಂಸ್ಥಾಪನಾ ದಿನಾಚರಣೆ ನಡೆಯಲಿದೆ ಎಂದು ಆರ್ಎಸ್ಎಸ್ನ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ತಿಳಿಸಿದರು.………ಮುಂದೆ ಓದಿ……..
ಬೆಂಗಳೂರಿನಲ್ಲಿ ಆಯೋಜಿಸಲಾಗಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಖಿಲ ಭಾರತ ಪ್ರತಿನಿಧಿ ಸಭಾ ಕುರಿತು ಸುದ್ದಿಗೋಷ್ಟಿಯಲ್ಲಿ ಅವರು, ಹೊಸ ಕಾರ್ಯಕರ್ತರ ಸೇರ್ಪಡೆಗೆ ಸಂಪರ್ಕ ಅಭಿಯಾನ, ಸಾಮಾಜಿಕ ಸೇವಾ ಕಾರ್ಯಗಳ ಹೆಚ್ಚಳಕ್ಕೆ ವಿವಿಧ ಕಾರ್ಯಯೋಜನೆಗಳನ್ನು ರೂಪಿಸಲಾಗಿದೆ ಎಂದು ತಿಳಿಸಿದರು. ಸಾಮಾಜಿಕ-ಸದ್ಭಾವದ ಆಲೋಚನೆಗಳ ಜೊತೆಗೆ ಸಾಮಾಜಿಕ ಸಾಮರಸ್ಯದ ಚಿಂತನೆಗಳನ್ನೂ ಸಂಘವು ಗೌರವಿಸುತ್ತದೆ. ಶತಮಾನೋತ್ಸವ ವರ್ಷದಲ್ಲಿ ದೇಶದ ಕೋಟ್ಯಂತರ ಮನೆ ಮನೆಗಳಿಗೆ ಔಟ್ರಿಚ್ ಕಾರ್ಯಕ್ರಮ ನಡೆಯಲಿದೆ. ಬೆಂಗಳೂರಿನಲ್ಲಿ 4 ವರ್ಷಗಳ ಬಳಿಕ ನಡೆದ ಅಖಿಲ ಭಾರತ ಪ್ರತಿನಿಧಿ ಸಭಾ ಹಲವು ಮುಖ್ಯ ವಿಷಯಗಳ ಬಗ್ಗೆ ಚರ್ಚಿಸಿ ಮಹತ್ವದ ನಿರ್ಧಾರಗಳನ್ನು ಕೈಗೊಂಡಿದೆ ಎಂದರು. ರಾಷ್ಟ್ರ ನಿರ್ಮಾಣ ಮತ್ತು ವ್ಯಕ್ತಿತ್ವ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, 1 ಲಕ್ಷ ಸ್ಥಳಗಳಲ್ಲಿ ವಿಜಯದಶಮಿ ಉತ್ಸವ, ಪಂಚ ಪರಿವರ್ತನಾ ಕಾರ್ಯಕ್ರಮ, ಹಿಂದು ಸಮ್ಮೇಳನಗಳನ್ನು ಗ್ರಾಮ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಆಯೋಜನೆ, ನಗರಗಳಲ್ಲಿ ಸಾಮಾಜಿಕ ಸದ್ಭಾವನಾ ಬೈಠಕ್ಗಳು ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ರಾಷ್ಟ್ರೀಯ ವಿಚಾರಧಾರೆ, ಹಿಂದುತ್ವ ಸಿದ್ದಾಂತ, ಒಂದು ರಾಷ್ಟ್ರ-ಒಂದು ಸಂಸ್ಕೃತಿ ಬಗ್ಗೆ ಚರ್ಚೆ ಹಾಗೂ ವಿಮರ್ಶೆಗಳನ್ನು ಆಯೋಜಿಸಲು ತೀರ್ಮಾನಿಸಲಾಗಿದೆ ಎಂದರು. ರಾಷ್ಟ್ರಹಿತದ ಚಿಂತನೆಗಳನ್ನು ಜಾಗೃತಗೊಳಿಸುವ ಸಂಕಲ್ಪದೊಂದಿಗೆ ಗ್ರಾಮೀಣ ಪ್ರದೇಶಗಳಲ್ಲಿ ಸಂಘದ ಚಟುವಟಿಕೆಗಳನ್ನು ವಿಸ್ತಾರಗೊಳಿಸಲು ಕ್ರಮ ಕೈಗೊಳ್ಳಲಾಗಿದೆ. ಕಾಲೇಜು ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ಆಯೋಜನೆ ಮಾಡಿ ಹೊಸ ತಲೆಮಾರಿನ ಮಕ್ಕಳನ್ನು ದೇಶಸೇವೆಗೆ ಅಣಿಗೊಳಿಸಲು ಮಹತ್ವದ ಸಂಕಲ್ಪ ಕೈಗೊಳ್ಳಲಾಗಿದ ಎಂದು ತಿಳಿಸಿದರು.