Advertisement
ಅನುಕ್ರಮ

ಕಾಲದ ದೋಷವೇ..? ನಮ್ಮ ಮನಸ್ಸಿನ ದೋಷವೇ..?

Share

ಒಂದು ಖಾಸಗಿ ಕಾರ್ಯಕ್ರಮ. ಮೂರು ಪತ್ರಕರ್ತರು. ಪಕ್ಕದಲ್ಲೇ ಸಾಮಾಜಿಕ ಕಾರ್ಯಕರ್ತರು, ಸಹಕಾರಿಗಳು, ಯುವಕರು, ಕೃಷಿಕರು… ಮಾತುಗಳು ವಿಭಿನ್ನ. ವಿಷಯಗಳು ವಿಭಿನ್ನ.

ಪತ್ರಿಕಾ ಕ್ಷೇತ್ರದ ಸದ್ಯದ ಸ್ಥಿತಿ, ಕೃಷಿ ಬರಹದ ಭವಿಷ್ಯ, ರಾಜಕೀಯ ಸನ್ನಿವೇಶ, ಪತ್ರಿಕಾ ಉದ್ಯಮ, ಸಹಕಾರಿ ಸಂಘಗಳ ಬದಲಾವಣೆ, ಸಾಮಾಜಿಕ ಕ್ಷೇತ್ರದಲ್ಲಿನ ಸ್ವಾರ್ಥ, ಅಧಿಕಾರದ ದಾಹ, ಯುವಕರ ಉದ್ಯೋಗ, ಕೃಷಿ ಸಂಕಷ್ಟ… ಹೀಗೇ ಮಾತುಗಳು ಸಾಗುತ್ತವೆ. ಆದರೆ, ಪ್ರತಿಯೊಂದು ಚರ್ಚೆಯ ಕೊನೆಯಲ್ಲಿ ಒಂದೇ ನಿಟ್ಟುಸಿರು, “ಈಗ ಸರಿ ಇಲ್ಲಪ… ಆವತ್ತಿನ ಹಾಗಿಲ್ಲ…”. ಆ ಮಾತಿನೊಳಗೆ ನಿರಾಸೆ ಇತ್ತು. ಅಸಮಾಧಾನ ಇತ್ತು. ಅಸಹಾಯತೆಯ ಸಣ್ಣ ಛಾಯೆ ಕೂಡಾ.

ಆದರೆ, ಅಲ್ಲಿ ಗಮನ ಸೆಳೆದದ್ದು, ಗಮನ ಸೆಳೆಯುವುದು ಮತ್ತೊಂದು ಸಂಗತಿ. ಇಂದಿನ ಯುವಕರು ಮಾತನಾಡುವ ರೀತಿ. ಅಳತೆ ಮಾಡಿಕೊಂಡು. ಪರಿಸ್ಥಿತಿಗೆ ತಕ್ಕಂತೆ. ನಾಜೂಕಾಗಿ.

ಹಿಂದಿನ ಪೀಳಿಗೆಯಂತೆ ಭಾವನೆಗೆ ಬಿದ್ದು ಮಾತಾಡುವುದಿಲ್ಲ. ಕಾಲದ ಪರಿಸ್ಥಿತಿಯನ್ನು ಅಳೆಯುತ್ತಾ ಮಾತನಾಡುವ ಜಾಣ್ಮೆ ಕಾಣಿಸುತ್ತದೆ. ಇದು ಸಂಯಮವೇ? ಅಥವಾ ಬದುಕು ಕಲಿಸಿದ ಎಚ್ಚರಿಕೆಯೇ..?

ಕೊರೋನಾ ನಂತರ ಲೋಕವೇ ಬದಲಾಗಿದೆ. ಸಂಬಂಧಗಳು ಬದಲಾಗಿದೆ. ಉದ್ಯೋಗದ ದೃಷ್ಟಿಕೋನ ಬದಲಾಗಿದೆ. ಮೌಲ್ಯಗಳು ಸಡಿಲಗೊಂಡಿವೆ. ಮಾತಿನ ಧೋರಣೆ ಬದಲಾಗಿದೆ. ಇದು ನಿಜ. ಯಾಕೆ ಹೀಗೆ..? ಯೋಚಿಸಿದರೇ ಅರಿವಾಗುತ್ತದೆ.

ಇಂದು ಬಹುತೇಕ ಕ್ಷೇತ್ರಗಳಲ್ಲಿ ಒಂದು ಮನೋಭಾವ ಗಟ್ಟಿಯಾಗುತ್ತಿದೆ, “ತನ್ನ ಕೆಲಸವಾದರೆ ಸಾಕು. ತನಗೆ ಲಾಭವಾದರೆ ಸಾಕು. ತಾನು ಬದುಕಿದರೆ ಆಯಿತು.” ಪರಿಸ್ಥಿತಿಯ ಲಾಭವನ್ನು ಹೇಗೆ ತನ್ನದಾಗಿಸಿಕೊಳ್ಳುವುದು ಎಂಬ ಲೆಕ್ಕಾಚಾರ ಹೆಚ್ಚಾಗಿದೆ. ಸಾಮಾಜಿಕ ಬದ್ಧತೆಯಿಗಿಂತ ವೈಯಕ್ತಿಕ ಲಾಭಕ್ಕೆ ಹೆಚ್ಚು ಬೆಲೆ.

ಇಡೀ ಸಮಯ, ಶ್ರಮ, ಪರೋಪಕಾರ ಎಲ್ಲವೂ ಸೇವೆಯ ರೂಪದಲ್ಲಿ ಮಾಡಿದರೂ , ವ್ಯಕ್ತಿಯ ಅರ್ಥ ಮಾಡಿಕೊಂಡರೂ, ಇನ್ನೊಬ್ಬ ಹೇಳುವ ಮಾತುಗಳೇ ಇಂದು ಯಾಕೆ ಪರಮ ಸತ್ಯವಾಗಿಬಿಡುತ್ತದೆ..?. ಮೌಲ್ಯಗಳ ಬಗ್ಗೆಯೇ ಮಾತನಾಡುವ ವ್ಯಕ್ತಿ, ಮೌಲ್ಯವನ್ನೇ ಕಳೆದುಕೊಂಡು ಬಿಡುವುದು ಹೇಗೆ..? ಸಾಮಾಜಿಕ ಬದ್ಧತೆಗಳ ಬಗ್ಗೆಯೇ ಮಾತನಾಡುವ ವ್ಯಕ್ತಿಯಲ್ಲೇ ಬದ್ಧತೆ ಕಾಣದಿರುವುದು ಏಕೆ..? ಭ್ರಷ್ಟಾಚಾರದ ಬಗ್ಗೆಯೇ ಮಾತನಾಡುವ ವ್ಯಕ್ತಿಯೇ ತನ್ನ ಲಾಭಕ್ಕಾಗಿ ಭ್ರಷ್ಟತೆಗೆ ಬೆಂಬಲ ನೀಡುವುದು ಏಕೆ..? ದೇವಸ್ಥಾನದ ಬ್ರಹ್ಮಕಲಶೋತ್ಸವಗಳೂ ಕೂಡಾ ವೈಯಕ್ತಿಕ ಲಾಭಕ್ಕಾಗಿ ಬಳಸಿಕೊಳ್ಳುವುದು ಹೇಗೆ ಸಾಧ್ಯ..? ಹೀಗೇ ಹತ್ತಾರು ಪ್ರಶ್ನೆಗಳು ಈ ಕಾಲದ ಮುಂದೆ ಬರುತ್ತವೆ.

ಈಚೆಗೆ ಒಬ್ಬರು ಮಾತನಾಡುತ್ತಾ ಹೇಳಿದರು,”ಒಂದು ಒಳ್ಳೆಯ ಕಾರ್ಯಕ್ರಮ ಆಯೋಜನೆ ಮಾಡಿದಿರೆಂದರೆ 4 ಜನ ವಿರೋಧಿಗಳು ಹೆಚ್ಚಾದರು ಎಂದೇ ಅರ್ಥ”. ನಿಮ್ಮ ಜೊತೆಗೇ ಇಡೀ ದಿನ ಇದ್ದು ನಾಳೆ ಕಾಲೆಳೆಯುವ, ನೀವು ಆಯೋಜಿಸುವ ಕಾರ್ಯಕ್ರಮದ ಬಗ್ಗೆಯೇ ನೆಗೆಟಿವ್‌ ಹರಡುವವರು ಹೆಚ್ಚಾಗಿದ್ದಾರೆ ಎಂದು ಅಭಿಪ್ರಾಯ ಹಂಚಿಕೊಳ್ಳುತ್ತಿದ್ದರು. ಹೀಗಾಗಿ ಮೌನವೇ ಈಗ ಹೆಚ್ಚು ಸೂಕ್ತ ಎಂಬ ನಿರ್ಧಾರಕ್ಕೆ ಬಂದಂತಿತ್ತು.  ಹಾಗಂತ ಈ ಕಾಲದ ಸ್ಥಿತಿ ನೋಡಿ ಮೌನ ಇರುವುದಾದರೂ ಹೇಗೆ..?

ಹೀಗಾದರೆ ಇದು ಕಾಲದ ದೋಷವೇ? ಅಥವಾ ನಾವು ಬೆಳೆಸಿಕೊಂಡ ಮನೋಭಾವದ ಪರಿಣಾಮವೇ?

ಇದಕ್ಕೆ ಹೊಂದಿಕೊಳ್ಳದಿದ್ದರೆ ಏನಾಗುತ್ತದೆ? ನಾವು ಕಾಲವನ್ನೇ ದೂರುತ್ತಾ ಕುಳಿತುಕೊಳ್ಳಬೇಕಾಗುತ್ತದೆ.  “ನಮ್ಮ ಕಾಲವೇ ಬೇರೆ” ಎಂದು ಹೇಳುತ್ತಾ ಹಳೆಯ ನೆನಪುಗಳ ನೆರಳಲ್ಲಿ ಬದುಕಬೇಕಾಗುತ್ತದೆ. ಇಂದಿನ ಸಮಾಜದಲ್ಲಿ ಸಲ್ಲದವರಂತೆ ಅನಿಸಿಕೊಳ್ಳಬೇಕಾಗುತ್ತದೆ.

ಆದರೆ,  ಹೊಂದಿಕೊಳ್ಳುವುದೇ ಪರಿಹಾರವೇ? ಹೊಂದಿಕೊಳ್ಳುವ ಹೆಸರಿನಲ್ಲಿ ಮೌಲ್ಯಗಳನ್ನು ಬಿಟ್ಟುಬಿಡಬೇಕೇ?

ಹಾಗಾದರೆ ಬದಲಾಗಬೇಕಾದದ್ದು ಏನು? ಪ್ರಶ್ನೆ ಸರಳವಾದರೂ ಉತ್ತರ ಕಠಿಣ.  ಬದಲಾಗಬೇಕಾದದ್ದು ಪರಿಸ್ಥಿತಿಯಾ? ಅಥವಾ ನಮ್ಮ ಮಾನಸಿಕತೆಯಾ?
ನಮ್ಮ ನಿಲುವುಗಳಾ? ಪರಿಸ್ಥಿತಿ ಎಂದೂ ಬದಲಾಗುತ್ತಲೇ ಇರುತ್ತದೆ. ಕಾಲದ ಸ್ವಭಾವವೇ ಅದು.

ಆದರೆ ಮಾನಸಿಕತೆ? ಅದು ನಮ್ಮ ಆಯ್ಕೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

ಬದಲಾವಣೆಗೆ ವಿರೋಧವಾಗಿ ನಿಲ್ಲುವುದು ಮೂರ್ಖತನ.  ಬದಲಾವಣೆಯ ಹೆಸರಿನಲ್ಲಿ ಮೌಲ್ಯಗಳನ್ನು ತ್ಯಜಿಸುವುದು ಅಪಾಯ. ಬಹುಶಃ ನಾವು ಮಾಡಬೇಕಾದದ್ದು, ಪರಿಸ್ಥಿತಿಗೆ ಹೊಂದಿಕೊಳ್ಳುವ ಜಾಣ್ಮೆ ಮತ್ತು ಮೌಲ್ಯಗಳನ್ನು ಕಾಪಾಡುವ ಧೈರ್ಯ – ಈ ಎರಡರ ಸಮತೋಲನ.

ಆ ದಿನ ತಡವಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ, ಒಂದೆರಡು ಗಂಟೆ ಮಾತನಾಡಿದರೂ, ಊಟ ಮಾಡಿ ಬಂದ ಬಳಿಕವೂ ಆ ಪ್ರಶ್ನೆ ಇನ್ನೂ ಮನಸ್ಸಿನೊಳಗೆ ಗುನುಗುತ್ತಿದೆ…  ನಾವು ಬದಲಾಗಬೇಕಾ? ಅಥವಾ ಕಾಲವೇ ಬದಲಾಗಬೇಕಾ? ನಿಜವಾದ ತಿರುವು ಕಾಲದಲ್ಲಲ್ಲ.ಅದು ನಮ್ಮೊಳಗೆ ಆರಂಭವಾಗಬೇಕಾದದ್ದು…

ಇದನ್ನೂ ಓದಿ…

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

Published by
ಮಹೇಶ್ ಪುಚ್ಚಪ್ಪಾಡಿ

Recent Posts

ವನ್ಯಜೀವಿಗಳಿಗೆ ಸಂತಾನಹರಣ ಚಿಂತನೆಗೆ ವಿರೋಧ

ವನ್ಯಜೀವಿಗಳಿಗೆ ಸಂತಾನಹರಣ ಚಿಂತನೆಗೆ ವಿರೋಧಿಸಿ ಚಾಮರಾಜನಗರದಲ್ಲಿ ರೈತರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು.…

5 minutes ago

ಬಾಳೆಬರೆ ಘಾಟಿಯಲ್ಲಿ ವಾಹನ ಸಂಚಾರ ತಾತ್ಕಾಲಿಕ ನಿಷೇಧ

ಬಾಳೆಬರೆ ಘಾಟಿಯಲ್ಲಿ ಕಾಮಗಾರಿ ಹಿನ್ನೆಲೆ ವಾಹನ ಸಂಚಾರ ತಾತ್ಕಾಲಿಕ ನಿಷೇಧಿಸಲಾಗಿದೆ. ಪ್ರಯಾಣಿಕರು ಪರ್ಯಾಯ…

12 minutes ago

ಅಡಿಕೆ ಮಾರುಕಟ್ಟೆಯ ಸ್ಥಿತಿಗತಿ ಮತ್ತು ಬೆಳೆಗಾರರ ಅಭಿಪ್ರಾಯ : ಸಮೀಕ್ಷಾ ವರದಿ

ಅಡಿಕೆ ಮಾರುಕಟ್ಟೆಯಲ್ಲಿ ವರ್ತಕರ ಸಿಂಡಿಕೇಟ್ ಮತ್ತು ವಿದೇಶಿ ಆಮದು ಬೆಲೆ ಅಸ್ಥಿರತೆಗೆ ಕಾರಣವಾಗಿವೆ.…

15 hours ago

ಭಾರತದಲ್ಲಿ ವಿದ್ಯುತ್ ಉತ್ಪಾದನೆಗೆ ಐತಿಹಾಸಿಕ ಏರಿಕೆ : 55 ಗಿಗಾವ್ಯಾಟ್ ಹೆಚ್ಚಳ – ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ

ಭಾರತದಲ್ಲಿ ವಿದ್ಯುತ್ ಉತ್ಪಾದನೆ ಸಾಮರ್ಥ್ಯದಲ್ಲಿ ಐತಿಹಾಸಿಕವಾಗಿ 55 ಗಿಗಾವ್ಯಾಟ್ ಹೆಚ್ಚಳವಾಗಿದೆ. ನವೀಕರಿಸಬಹುದಾದ ಇಂಧನ…

15 hours ago

ದೇಶದಲ್ಲಿ LPG ವಿತರಣೆ ಸಾಮಾನ್ಯ ಹಂತಕ್ಕೆ : ಒಂದೇ ದಿನ 51.5 ಲಕ್ಷ ಸಿಲಿಂಡರ್ ವಿತರಣೆ

ದೇಶದಲ್ಲಿ LPG ವಿತರಣೆ ಸಾಮಾನ್ಯವಾಗಿದ್ದು, ಒಂದೇ ದಿನ 51.5 ಲಕ್ಷ ಸಿಲಿಂಡರ್ ವಿತರಿಸಲಾಗಿದೆ.…

15 hours ago

ರೈತರ ಪಂಪ್‌ಸೆಟ್‌ಗಳಿಗೆ ದಿನಕ್ಕೆ 7 ಗಂಟೆ ವಿದ್ಯುತ್ ಭರವಸೆ

ರೈತರ ಪಂಪ್‌ಸೆಟ್‌ಗಳಿಗೆ ದಿನಕ್ಕೆ 7 ಗಂಟೆ ವಿದ್ಯುತ್ ನೀಡಲು ಸರ್ಕಾರ ಕ್ರಮ ಕೈಗೊಳ್ಳುತ್ತಿದೆ.…

16 hours ago