ಗೋಕರ್ಣದ ಅಶೋಕೆಯಲ್ಲಿ ರಾಘವೇಶ್ವರ ಶ್ರೀಗಳ 31ನೇ ಚಾತುರ್ಮಾಸ್ಯ ವ್ರತಾರಂಭ | ಅರಿವಿನ ಪ್ರಾಪ್ತಿಯೇ ಅನಾವರಣ: ರಾಘವೇಶ್ವರ ಸ್ವಾಮೀಜಿ

July 21, 2024
8:05 PM
ಇರುವುದನ್ನು ತೋರದಂತೆ ತಡೆಯುವ ತೆರೆಯನ್ನು ಸರಿಸುವುದೇ ಅನಾವರಣ. ಈ ತೆರೆ ಸರಿಸುವವನು ಗುರು. ಗೀತೆಗಿಂತ ದೊಡ್ಡ ಉಪದೇಶ ವಿಶ್ವದಲ್ಲಿ ಮತ್ತೊಂದಿಲ್ಲ. ಅದನ್ನು ನೀಡಿದ ಕೃಷ್ಣ ಜಗದ್ಗುರು. ಗುರುವಿಗೆ ವಿಶಿಷ್ಟ ಸ್ಥಾನವಿದೆ. ನಮ್ಮ ಆರಾಧ್ಯದೈವ ರಾಮ ಕೂಡಾ ಬೋಧಮುದ್ರೆಯೊಂದಿಗೆ ಗುರುವಾಗಿ ಗೋಚರಿಸಿದ್ದಾನೆ ಎಂದು ರಾಘವೇಶ್ವರ ಶ್ರೀ ಹೇಳಿದರು.

ಅಜ್ಞಾನವೇ ಆವರಣ. ಸುಜ್ಞಾನವೇ ಅನಾವರಣ. ಅರಿವಿನ ಪ್ರಾಪ್ತಿಯೇ ನಿಜವಾದ ಅನಾವರಣ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವಭಾರತೀ ಮಹಾಸ್ವಾಮೀಜಿ ನುಡಿದರು.

ಗೋಕರ್ಣದ ಅಶೋಕೆಯ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆವರಣದಲ್ಲಿ ಭಾನುವಾರ ಅನಾವರಣ ಚಾತುರ್ಮಾಸ್ಯ ಧರ್ಮಸಭೆಯಲ್ಲಿ ಶ್ರೀಗಳು ಆಶೀರ್ವಚನ ನೀಡಿದರು. ಪ್ರತಿಯೊಬ್ಬರ ಹೃದಯವೂ ಒಂದು ಅಮೂಲ್ಯ ರತ್ನ. ಆದರೆ ಅದರ ಕಲ್ಪನೆ ನಮಗಿಲ್ಲ. ರತ್ನಕ್ಕೆ ಮುಚ್ಚಿರುವ ಆವರಣವನ್ನು ಸುಜ್ಞಾನದ ಮೂಲಕ ಸರಿಸುವುದೇ ಅನಾವರಣ ಎಂದರು. ನಮ್ಮ ನಮ್ಮ ಆತ್ಮಗಳ ಅನಾವರಣಕ್ಕೆ ಈ ಚಾತುರ್ಮಾಸ್ಯ ವೇದಿಕೆಯಾಗಲಿ. ಆತ್ಮದ ಹಾದಿ ಶಿಷ್ಯರಿಗೆ ಕಾಣುವಂತಾಗಲಿ. ಸತ್ಯದ ಅನುಭೂತಿಯಾಗಿ ಪೂರ್ಣತೃಪ್ತಿ ಸಿಗುವಂಥ ಅನಾವರಣ ಆಗಲಿ ಎಂದು ಆಶಿಸಿದರು.

ನಮ್ಮ ಮಠದಲ್ಲೇ ಇರುವ ಅದ್ಭುತವಾದ ಸಂಗತಿಗಳೇ ಅನಾವರಣಗೊಳ್ಳಬೇಕು. ಇಂದು ಮಠ ಚಿರಪರಿಚಿತವಾದರೂ, ಗೊತ್ತಿಲ್ಲದ ಅನೇಕ ಸಂಗತಿಗಳು ಗರ್ಭದಲ್ಲಿ ಅಡಗಿವೆ. ಇವು ಹೊರಗೆ ಬರುವಂತಾಗಬೇಕು ಎನ್ನುವುದೇ ಈ ಚಾತುಮಾಸ್ಯದ ಆಶಯ ಎಂದು ಬಣ್ಣಿಸಿದರು. ಮಠವೆಂಬ ಸಮುದ್ರದ ಅನಾವರಣ. ಅಂತೆಯೇ ಸಮಾಜದಲ್ಲಿ ಅನೇಕಾನೇಕ ವ್ಯಕ್ತಿ-ವಿಷಯ-ವಸ್ತುಗಳು ಇರಬಹುದು. ಅವುಗಳ ಅನಾವರಣ ಈ ಚಾತುಮಾಸ್ಯದಲ್ಲಿ ನಡೆಯಬೇಕು. ಇಡೀ ಸಮಾಜಕ್ಕೆ ವಿಷ್ಣುಗುಪ್ತ ವಿಶ್ವವಿದ್ಯಾಪೀಠವನ್ನು ಅನಾವರಣಗೊಳಿಸಬೇಕು. ಇದರಿಂದ ಸಮಾಜಕ್ಕೆ ಉಪಯೋಗವಾಗಬೇಕು ಎಂದು ವಿವರಿಸಿದರು.

ಮನುಷ್ಯ ತನ್ನ ದಿವ್ಯತೆಯನ್ನು ದುರುಪಯೋಗ ಮಾಡದಂತೆ ಹುದುಗಿಸಿಡಲು ನಿರ್ಧರಿಸಿ ಬ್ರಹ್ಮದೇವರು ಅದನ್ನು ಮನುಷ್ಯನ ಹೃದಯದಲ್ಲೇ ಅಡಗಿಸುತ್ತಾನೆ. ಅದನ್ನು ಪ್ರಯತ್ನಪೂರ್ವಕವಾಗಿ ಅರಸುವವನಿಗೆ ಮಾತ್ರ ಅದು ಗೋಚರಿಸುತ್ತದೆ. ಭೂಮಿ, ಆಕಾಶ, ನೀರು ಹೀಗೆ ಎಲ್ಲ ಕ್ಷೇತ್ರಗಳಲ್ಲಿ ಹುಡುಕಿದರೂ ತನ್ನೊಳಗಿನ ದಿವ್ಯತೆಯನ್ನು ಮರೆತಿದ್ದಾನೆ. ಈ ತೆರೆಯನ್ನು ಸರಿಸಲು ಗುರು ಬೇಕು ಎಂದು ಅಭಿಪ್ರಾಯಪಟ್ಟರು.

ಒಂದು ನಿತ್ಯ ವಿಶೇಷ. ಇನ್ನೊಂದು ಅದ್ಯ ವಿಶೇಷ. ರಾಮ- ಕೃಷ್ಣರ ನಿತ್ಯೋತ್ಸವ, ಸತ್ಯೋತ್ಸವ ವ್ಯಾಸಪೂಜೆಯ ವಿಶೇಷ ಸಂದರ್ಭದಲ್ಲಿ ನಡೆಯುತ್ತದೆ. ದೇವವೃಂದ ಉಭಯ ಮಂಟಪಗಳಲ್ಲಿ ಸಾನ್ನಿಧ್ಯ ನೀಡಿವೆ. ನೃಸಿಂಹ, ರಾಮ ಹಾಗೂ ಕೃಷ್ಣಾವತಾರದ ಸಾನ್ನಿಧ್ಯ ಗುರುಪೂರ್ಣಿಮೆಯಂದು ವಿಶೇಷ. ಕೃಷ್ಣಪಂಚಕ ಹಾಗೂ ವ್ಯಾಸಪಂಚಕರ ಪೂಜೆ ನಡೆಯುತ್ತದೆ. ಜತೆಗೆ ಎಡಭಾಗದಲ್ಲಿ ಶಂಕರ ಪಂಚಕ, ಹಿಂದೆ ಸನಕ ಪಂಚಕ, ಆಚಾರ್ಯ ಪಂಚಕ, ಗುರುಪಂಚಕ, ಬ್ರಹ್ಮವಿದ್ಯಾ ಸಂಪ್ರದಾಯ ಕರ್ತೃಗಳ ಪೂಜೆ ವಿಧ್ಯುಕ್ತವಾಗಿ ನಡೆಯುತ್ತದೆ. ಅಷ್ಟದಿಕ್ಪಾಲಕರು ಸೇರಿದಂತೆ ಅರುವತ್ತನಾಲ್ಕು ದೇವತೆಗಳ ಪೂಜೆ ನಡೆಯುತ್ತದೆ ಎಂದು ಬಣ್ಣಿಸಿದರು.

ಶ್ರೀಮಠದ ಪ್ರಶಾಸನಾಧಿಕಾರಿ ಸಂತೋಷ್ ಹೆಗಡೆ, ವಿತ್ತಾಧ್ಯಕ್ಷ ಗಣೇಶ್ ಜೆ.ಎಲ್, ವಿವಿವಿ ಗೌರವಾಧ್ಯಕ್ಷ ಡಿ.ಡಿ.ಶರ್ಮಾ, ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ ಮಂಜುನಾಥ ಸುವರ್ಣಗದ್ದೆ, ಕಾರ್ಯದರ್ಶಿ ಶ್ರೀಕಾಂತ್ ಪಂಡಿತ್, ಕೋಶಾಧ್ಯಕ್ಷ ಸುಧಾಕರ್, ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು, ವಿವಿವಿ ಗೌರವಾಧ್ಯಕ್ಷ ಆರ್.ಎಸ್.ಹೆಗಡೆ ಹರಗಿ, ಅಧ್ಯಕ್ಷ ಎಸ್.ಎಸ್.ಹೆಗಡೆ, ಆಡಳಿತಾಧಿಕಾರಿ ಡಾ.ಪ್ರಸನ್ನ ಕುಮಾರ್, ಪಾರಂಪರಿಕ ವಿಭಾಗದ ವರಿಷ್ಠಾಚಾರ್ಯ ಸತ್ಯನಾರಾಯಣ ಶರ್ಮ, ಸಂಯೋಜಕಿ ಅಶ್ವಿನಿ ಉಡುಚೆ, ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ.ಹೆಗಡೆ, ಹರಿಪ್ರಸಾದ್ ಪೆರಿಯಾಪು, ಶ್ರೀಕಾರ್ಯದರ್ಶಿ ಮಧು ಜಿ.ಕೆ, ವ್ಯವಸ್ಥಾಪಕ ಪ್ರಮೋದ್ ಮುಡಾರೆ, ಮಹಾಮಂಡಲ ಪದಾಧಿಕಾರಿಗಳಾದ ನಾಗರಾಜ ಭಟ್ ಪೆದಮಲೆ, ಜಿ.ಎಸ್.ಹೆಗಡೆ, ಬಾಲಸುಬ್ರಹ್ಮಣ್ಯ ಸರ್ಪಮಲೆ, ವೇಣುಗೋಪಾಲ ಕೆದ್ಲ, ಈಶ್ವರಪ್ರಸಾದ್ ಕನ್ಯಾನ, ಕೇಶವ ಪ್ರಕಾಶ್ ಎಂ, ಪ್ರಸನ್ನ ಉಡುಚೆ, ಮಹೇಶ್ ಭಟ್ ಚೂಂತಾರು, ರುಕ್ಮಾವತಿ ಸಾಗರ, ರಾಜಗೋಪಾಲ ಜೋಶಿ, ವಿವಿಧ ಮಂಡಲಗಳ ಅಧ್ಯಕ್ಷರಾದ ಉದಯಶಂಕರ ನೀರ್ಪಾಜೆ, ಈಶ್ವರ ಪ್ರಸನ್ನ, ಕೃಷ್ಣಮೂರ್ತಿ ಮಾಡಾವು, ಮಹೇಶ್ ಚಟ್ನಳ್ಳಿ, ಎಲ್.ಆರ್.ಹೆಗಡೆ, ಆರ್.ಜಿ.ಹೆಗಡೆ, ಸುಬ್ರಾಯ ಭಟ್, ಪ್ರಕಾಶ್ ಬೇರಾಳ ಮತ್ತಿತರರು ಉಪಸ್ಥಿತರಿದ್ದರು.

ಮಂಜುನಾಥ ಸುವರ್ಣಗದ್ದೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಕಾಂತ್ ಹೆಗಡೆ ದಂಪತಿ ಸಭಾಪೂಜೆ ನೆರವೇರಿಸಿದರು. ರವೀಂದ್ರ ಭಟ್ ಸೂರಿ ಕಾರ್ಯಕ್ರಮ ನಿರೂಪಿಸಿದರು.

ಇದಕ್ಕೂ ಮುನ್ನ ಶ್ರೀಗಳು ಸಾಂಪ್ರದಾಯಿಕ ವ್ಯಾಸಪೂಜೆ ನೆರವೇರಿಸುವ ಮೂಲಕ ಚಾತುರ್ಮಾಸ್ಯ ವ್ರತಾರಂಭ ಮಾಡಿದರು. ಶ್ರೀಮಠದ ಶಾಸ್ತ್ರಿಗಳಾದ ಸುಬ್ರಾಯ ಅಗ್ನಿಹೋತ್ರಿ, ವಿನಾಯಕ ಶಾಸ್ತ್ರಿ, ಶ್ರೀಶ, ಅಮೃತೇಶ ಹಿರೇ, ಪರಮೇಶ್ವರ ಮಾರ್ಕಂಡೆ, ಸುಬ್ರಹ್ಮಣ್ಯ ಭಟ್, ಶೇಷಗಿರಿ ಭಟ್ ಮತ್ತಿತರರು ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಯುವಕರ ಮೊದಲ ಆದ್ಯತೆ ಏನಿರಬೇಕು? ರಾಜಕೀಯವಲ್ಲ, ಆರ್ಥಿಕ ಸ್ವಾವಲಂಬನೆ!
July 15, 2026
9:49 PM
by: ಅರುಣ್‌ ಕುಮಾರ್ ಕಾಂಚೋಡು
ಹವಾಮಾನ ವರದಿ | 15-07-2026 | ರಾಜ್ಯದಲ್ಲಿ ಮಳೆ ಯಾಕೆ ಕಡಿಮೆಯಾಗಿದೆ ? ಜುಲೈ 16 ರಿಂದ ಎಲ್ಲೆಲ್ಲಿ ಮಳೆ ಆರಂಭವಾಗಲಿದೆ?
July 15, 2026
2:10 PM
by: ಸಾಯಿಶೇಖರ್ ಕರಿಕಳ
ಕರ್ನಾಟಕದ ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್…! ಕಾರಣ..?
July 15, 2026
7:02 AM
by: ದ ರೂರಲ್ ಮಿರರ್.ಕಾಂ
ಕಸದ ತೆಂಗಿನಕಾಯಿಯೂ ಈಗ ರೈತರ ಸಂಪತ್ತು…! ಭುವನೇಶ್ವರದ ‘ವೇಸ್ಟ್ ಟು ವೆಲ್ತ್’ ಮಾದರಿ
July 14, 2026
7:12 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror