ಹವಾಮಾನ ಬದಲಾವಣೆಯು ಜಾಗತಿಕ ಆರ್ಥಿಕತೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಹೀಗಾಗಿ ಹವಾಮಾನ ಸಂಬಂಧಿತ ಆರ್ಥಿಕ ಅಪಾಯಗಳನ್ನು ತಗ್ಗಿಸುವ ಬಗ್ಗೆ ತುರ್ತು ಕ್ರಮಗಳ ಅಗತ್ಯ ಇದೆ ಎಂದು ಆರ್ಬಿಐ ಡೆಪ್ಯುಟಿ ಗವರ್ನರ್ ಎಂ. ರಾಜೇಶ್ವರ್ ರಾವ್ ಹೇಳಿದ್ದಾರೆ.
ನ್ಯಾಷನಲ್ ಯೂನಿವರ್ಸಿಟಿ ಆಫ್ ಸಿಂಗಾಪುರದಲ್ಲಿ (ಎನ್ಯುಎಸ್) ಸೌತ್ ಏಷ್ಯನ್ ಸ್ಟಡೀಸ್ ಸಂಸ್ಥೆ (ಐಎಸ್ಎಎಸ್) ಆಯೋಜಿಸಿದ್ದ ಅಂತರರಾಷ್ಟ್ರೀಯ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ಅವರು ಹವಾಮಾನ ಬದಲಾವಣೆಯಿಂದ ಉಂಟಾಗುವ ಅಪಾಯಗಳ ಬಗ್ಗೆ ಅವರು ಎಚ್ಚರಿಕೆ ನೀಡಿದರು, ಇತ್ತೀಚಿನ ಪ್ರಾಕೃತಿಕ ದುರಂತಗಳ ಬಗ್ಗೆ ಮಾತನಾಡಿದ ಅವರು ಸುಸ್ಥಿರ ಬೆಳವಣಿಗೆ ಮತ್ತು ಸುರಕ್ಷಿತ ಭವಿಷ್ಯಕ್ಕಾಗಿ ಪಾರದರ್ಶಕತೆ ಮತ್ತು ಪರಿಸರ ಸಾಮರ್ಥ್ಯ ನಿರ್ಮಾಣದ ಪ್ರಾಮುಖ್ಯತೆಯನ್ನು ಹೇಳಿದರು. 2024 ರಲ್ಲಿ ದಾಖಲೆಯ ತಾಪಮಾನ ಹಾಗೂ ಆ ಬಳಿಕದ ಹವಾಮಾನ, ಕೃಷಿ ಮತ್ತು ಪ್ರಾಕೃತಿಕ ಬದಲಾವಣೆಗಳ ಬಗ್ಗೆ ವಿಶ್ಲೇಷಿಸಿದ ಅವರು ಇಂತಹ ಹವಾಮಾನ ಬದಲಾವಣೆಗಳು ಆರ್ಥಿಕ ವ್ಯವಸ್ಥೆಯ ಮೇಲೆ ಪರಿಣಾಮ ಬೀರಲು ಪ್ರಾರಂಭಿಸಿವೆ. ಹೀಗಾಗಿ ಆರ್ಥಿಕತೆ ಮತ್ತು ಹಣಕಾಸು ವಲಯವು ಹವಾಮಾನದ ಮೇಲೂ ಹೊಂದಿಕೊಂಡಿದೆ, ಈ ಪರಸ್ಪರ ಹೊಂದಾಣಿಕೆಯ ಕ್ರಿಯೆಯು ಭವಿಷ್ಯದಲ್ಲಿ ಹಣಕಾಸಿನ ಸ್ಥಿರತೆಯ ಅಪಾಯಗಳಿಗೆ ಕಾರಣವಾಗಬಹುದು. ಈಗಾಗಲೇ ಜಾಗತಿಕ ಆರ್ಥಿಕತೆಯ ಮೇಲೆ ಹವಾಮಾನ ಬದಲಾವಣೆಯ ಗಂಭೀರ ಪರಿಣಾಮ ಬೀರಿದೆ. ಹವಾಮಾನ ಬದಲಾವಣೆಯು ಹಣಕಾಸು ವ್ಯವಸ್ಥೆಗೆ ಪ್ರಮುಖ ಅಪಾಯವಾಗಿದೆ ಎಂಬುದರಲ್ಲಿ ಸಂದೇಹವಿಲ್ಲ ಎಂದು ರಾವ್ ಎಚ್ಚರಿಸಿದರು.
ಹೀಗಾಗಿ ಈಗಲೇ ಈ ಅಪಾಯಗಳ ಸರಿಯಾದ ರೀತಿಯಲ್ಲಿ ಗಮನಿಸಿಕೊಂಡು ಎಲ್ಲಾ ಕ್ಷೇತ್ರವನ್ನೂ ಸರಿಪಡಿಸಿಕೊಂಡು ಸಾಮರ್ಥ್ಯಗಳನ್ನು ಹೆಚ್ಚಿಸುವುದು ಅತ್ಯಗತ್ಯ , ಈ ದಿಕ್ಕಿನಲ್ಲಿ ಒಟ್ಟಾಗಿ ಸಾಗಬೇಕಾಗಿದೆ. ಈ ನಿಟ್ಟಿನಲ್ಲಿ ನಮ್ಮ ಮುಂದೆ ದೊಡ್ಡ ಜವಾಬ್ದಾರಿ ಇದೆ. ಭವಿಷ್ಯದ ಪೀಳಿಗೆಗೆ ಸುಸ್ಥಿರ ಬೆಳವಣಿಗೆ ಮತ್ತು ಪರಿಸರಕ್ಕಾಗಿ ನಾವು ಒಂದಾಗಿ ನಿರ್ಣಾಯಕ ಮಾರ್ಗಸೂಚಿಯನ್ನು ಒದಗಿಸಬೇಕಿದೆ ಎಂದು ಎಂದು ರಾವ್ ಹೇಳಿದರು.