ಉತ್ತರಾಖಂಡ ರಾಜ್ಯದ ಉತ್ತರ ಕಾಶಿ ಜಿಲ್ಲೆಯಲ್ಲಿ ಮತ್ತೆ ಮೇಘಸ್ಫೋಟ ಸಂಭವಿಸಿದೆ. ಈ ಹಿನ್ನಲೆಯಲ್ಲಿ ನೌಗೋನ್ ಪ್ರದೇಶದಲ್ಲಿ ದೀಡೀರ್ ಪ್ರವಾಹ ಉಂಟಾಗಿದ್ದು, ಪರ್ವತ ಪ್ರಾಂತ್ಯದಿಂದ ಭಾರಿ ಪ್ರಮಾಣದಲ್ಲಿ ಕೆಸರು ಮಿಶ್ರಿತ ನೀರು ಜನವಸತಿ ಪ್ರದೇಶಗಳಿಗೆ ನುಗ್ಗಿದೆ. ಇದರಿಂದಾಗಿ ಉತ್ತರ ಕಾಶಿಯಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ನೌಗೋನ್ ನ ಮಾರುಕಟ್ಟೆ ಹಾಗೂ ಹಲವಾರು ಮನೆಗಳು ನೀರಿನಲ್ಲಿ ಮುಳುಗಿವೆ. ಪ್ರವಾಹದ ನೀರಿನಲ್ಲಿ ರಸ್ತೆ , ಸೇತುವೆಗಳು ಕೊಚ್ಚಿ ಹೋಗಿದ್ದು, ರಸ್ತೆಯಲ್ಲಿ ನಿಲ್ಲಿಸಲಾಗಿದ್ದ ವಾಹನಗಳು ಸಹ ಪ್ರವಾಹದಲ್ಲಿ ತೇಲಿ ಹೋಗಿವೆ.
ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಜಿಲ್ಲಾಡಳಿತದೊಂದಿಗೆ ಮಾತುಕತೆ ನಡೆಸಿದ್ದು, ತುರ್ತು ಪರಿಹಾರ ಕಾರ್ಯಗಳನ್ನು ಕೈಗೊಳ್ಳುವಂತೆ ಸೂಚಿಸಿದ್ದಾರೆ. ಎಸ್ ಡಿ ಆರ್ ಎಫ್ ಮತ್ತು ಎನ್ ಡಿ ಆರ್ ಎಫ್ ತಂಡಗಳು ಸ್ಥಳಕ್ಕೆ ಧಾವಿಸಿದ್ದು, ನೆರೆ ಸಂತ್ರಸ್ಥರ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿವೆ. ಅಗತ್ಯವಾದಲ್ಲಿ ಸೇನಾ ಪಡೆಯನ್ನು ಬಳಕೆ ಮಾಡಿಕೊಳ್ಳುವುದಾಗಿಯೂ ಜಿಲ್ಲಾಡಳಿತ ತಿಳಿಸಿದೆ. ಇದೇ ವೇಳೆ ಅತಿವೃಷ್ಟಿಯಿಂದಾಗಿ ಯಮುನಾ ನದಿಯಲ್ಲೂ ನೀರಿನ ಮಟ್ಟ ತೀವ್ರಗತಿಯಲ್ಲಿ ಏರಿಕೆಯಾಗಿದ್ದು, ದೆಹಲಿ ಸಮೀಪದಲ್ಲಿ ಯಮುನಾ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿದೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ಜನರನ್ನು ಸುರಕ್ಷಿತಾ ಸ್ಥಳಗಳಿಗೆ ಸ್ಥಳಾಂತರಿಸಲು ದೆಹಲಿ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಈ ನಡುವೆ ಪಂಜಾಬ್ ನಲ್ಲೂ ಸಹ ಅತಿವೃಷ್ಟಿಯಿಂದಾಗಿ ಜನಜೀವನ ತೊಂದರೆಗೊಳಗಾಗಿದೆ. ಕಳೆದ 24 ಗಂಟೆಗಳಲ್ಲಿ ಅಮೃತಸರ ಮತ್ತು ರೂಪಾ ನಗರಗಳಲ್ಲಿ ಮತ್ತೆ ಮೂವರು ಅತಿವೃಷ್ಟಿಗೆ ಬಲಿಯಾಗಿದ್ದಾರೆ. ಇದರಿಂದ ಪಂಜಾಬ್ ನ 14 ಜಿಲ್ಲೆಗಳಲ್ಲಿ ಅತಿವೃಷ್ಟಿಯಿಂದಾಗಿ ಮೃತಪಟ್ಟವರ ಸಂಖ್ಯೆ 46 ಕ್ಕೆ ಏರಿಕೆಯಾಗಿದೆ. ಪಂಜಾಬ್ ನ 1996 ಕ್ಕೂ ಹೆಚ್ಚು ಗ್ರಾಮಗಳು ಅತಿವೃಷ್ಟಿಯಿಂದಾಗಿ ಹಾನಿಗೊಳಲಾಗಿದೆ. 13 ಸಾವಿರ ಕೋಟಿ ರೂಪಾಯಿಗಿಂತ ಹೆಚ್ಚಿನ ಹಾನಿಯಾಗಿದೆ ಎಂದು ಪಂಜಾಬ್ ಸರ್ಕಾರ ಅಂದಾಜಿಸಿದೆ. ಎನ್ ಡಿಆರ್ ಎಫ್, ಬಿಎಸ್ ಎಫ್, ಭಾರತೀಯ ಸೇನೆಯು ರಕ್ಷಣಾ ಕಾರ್ಯಾಚರಣೆಗಳನ್ನು ಮುಂದುವರೆಸಿದೆ. ಸುಮಾರು 23 ಸಾವಿರ ಸಂತ್ರಸ್ಥರನ್ನು ಸುರಕ್ಷಿತಾ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ. ಗುರುದಾಸ್ ಪುರ, ಅಮೃತಸರ, ಕಪುರ್ತಲಾ , ತರನ್-ತರಣ್ ಜಿಲ್ಲೆಗಳಲ್ಲಿ ಅತಿಹೆಚ್ಚು ಹಾನಿಯಾಗಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ..

