ತೆಂಗಿನ ಕಾಯಿ ಸಿಪ್ಪೆಯಿಂದ ತಯಾರಾಗುತ್ತೆ ಉತ್ಕೃಷ್ಟ ಗೊಬ್ಬರ | ಸುಮ್ಮನೆ ಕಸ ಎಂದು ಸುಟ್ಟು ಬಿಡಬೇಡಿ | ತ್ಯಾಜ್ಯ ನೀಡುತ್ತೆ ಉತ್ತಮ ಪೋಷಕಾಂಶ

February 18, 2023
11:58 AM

ಕರಾವಳಿ ಜನರ ಜೀವನ ಶೈಲಿಯೇ ವಿಶೇಷ. ಇಲ್ಲಿನ ಸಂಸ್ಕೃತಿ, ಜೀವನ ಕ್ರಮ, ಭಾಷೆ ಎಲ್ಲವೂ ವೈವಿಧ್ಯತೆಯಿಂದ ಕೂಡಿದೆ. ಇನ್ನು ಕೃಷಿ ಕಡೆ ಬಂದ್ರೆ ಭತ್ತ ಪ್ರಧಾನ ಬೆಳೆಯಾಗಿತ್ತು. ಕಾಲ ಸರಿದಂತೆ ಅಡಿಕೆ ವಾಣಿಜ್ಯ ಬೆಳೆಯಾಗಿ ಇಡೀ ಕರಾವಳಿಯನ್ನು ಪಸರಿಸಿತು. ಅದರ ಜೊತೆಗೆ ತೆಂಗು, ರಬ್ಬರ್, ಕಾಳು ಮೆಣಸು, ಬಾಳೆ, ಕೋಕೋ.. ಹೀಗೆ ಒಂದಾ… ಎರಡ…. ಅಡಿಕೆ ಇಲ್ಲದೆ ಜೀವನ ಸಾಗಬಹುದು.. ಆದರೆ ಮನೆಗೆ ಎರಡಾದ್ರು ತೆಂಗಿನ ಮರ ಇಲ್ಲಾಂದ್ರೆ ಭಾರಿ ಕಷ್ಟ. ಮಾರಟಕ್ಕೆ ಅಲ್ಲದಿದ್ರು ಅಡುಗೆಗೆ ತೆಂಗಿನಕಾಯಿ ಬೇಕೇ ಬೇಕು. ಒಂದು ಗಡಿ ತೆಂಗಿನ ಕಾಯಿ ತುರಿ ಇದ್ರೆನೆ ನಮ್ಮ ಮನೆಯಲ್ಲೆಲ್ಲ ಸಾರು, ಗಸಿ, ಪಲ್ಯ..

ತೆಂಗಿನ ಕಾಯಿ ಸಿಪ್ಪೆ, ಗೆರಟೆ, ದಂಡು, ಗರಿ ಇಲ್ಲಾಂದ್ರೆ ಅಂಡೆ ಒಲೆನೂ ಹೊಗೆಯಡ್ತಾ ಇರ್ತದೆ. ಒಲೆಗೆ ಎರಡು ತೆಂಗಿನ ಸಿಪ್ಪೆ, ಗೆರಟೆ ಹಾಕಿದ್ರೆನೆ ನೀರು ಕಾಯೋದು. ಎಷ್ಟೇ ತೆಂಗಿನ ಮರ ಇರ್ಲಿ. ಹೆಚ್ಚಿನವರ ಮನೆಯಲ್ಲಿ ಅದರ ಕಸ ಸೇರೋದು ಒಲೆ ಉರಿಗೆ. ಇತ್ತೀಚೆಗೆ ಕೆಲವರು ತೆಂಗಿನ ಮರದ ತ್ಯಾಜ್ಯದಿಂದ ಗೊಬ್ಬರ ಮಾಡುವುದನ್ನು ಕಲಿತಿದ್ದಾರೆ. ಇಲ್ಲದಿದ್ರೆ ಬಹುಪಾಲು ಸೇರ್ತಿದ್ದಿದ್ದು ಒಲೆ ಉರಿಸಲು.. ಇಲ್ಲಾಂದ್ರೆ ಸುಡು ಮಣ್ಣು ಮಾಡಲು.

ತೆಂಗಿನ ಸಿಪ್ಪೆಯಿಂದ ಬಹಳ ಮೌಲ್ಯವರ್ಧಿತವಾದ ಗೊಬ್ಬರ ಮಾಡಲು ಸಾಧ್ಯ. ಇದು ಗಿಡಗಳಿಗೆ ಬಹಳ ಪೋಷಾಕಾಂಶವನ್ನು ನೀಡುತ್ತದೆ. ಈ ಬಗ್ಗೆ ಕೃಷಿ ತಜ್ಞರಾದ ಎಲ್ ಸಿ ನಾಗರಾಜ್ ಅವರು ಬಹಳ ಸಂಕ್ಷಿಪ್ತವಾಗಿ ವಿವರಿಸುತ್ತಾರೆ.

ತೆಂಗಿನಕಾಯಿ ಸುಲಿದುಕೊಂಡ ಮೇಲೆ ಉಳಿಯುವ ಜುಂಗನ್ನು ಸಾಮಾನ್ಯವಾಗಿ ಸುಟ್ಟು ಹಾಕಲಾಗುತ್ತದೆ ಇಲ್ಲವೇ ತೆಂಗಿನ ಬೆಳೆಗಾರರು ಇದನ್ನು ಬೇಕರಿಗಳಿಗೆ ಮಾರಿಬಿಡುತ್ತಾರೆ. ಬೇಕರಿ ಇಲ್ಲದ ಕಡೆ ಸುಮ್ಮನೆ ಕಸ ಎಂದು  ಬೆಂಕಿ ಹಚ್ಚಿ ಬಿಡುವ ಚಾಳಿ ಚಾಲ್ತಿಯಲ್ಲಿದೆ. ಸುಟ್ಟಾಗ ಬಿಡುಗಡೆಯಾಗುವ ಕಾರ್ಬನ್ ಡಯಾಕ್ಸೈಡು ವಾತಾವರಣದ ತಾಪಮಾನವನ್ನು ಹೆಚ್ಚಿಸುತ್ತಿರುವ ಗ್ರೀನ್ ಹೌಸ್ ಗ್ಯಾಸುಗಳ ಪೈಕಿ ಒಂದು.

ಆದರೆ ತೆಂಗಿನ ಕಾಯಿಯ ಜುಂಗಿನಿಂದ ತಯಾರಿಸಲಾಗುವ ಗೊಬ್ಬರ ಸಸ್ಯಗಳಿಗೆ ಬೇಕಾಗಿರುವ ಪೋಷಕಗಳ ಅಗರ, ತೆಂಗಿನ ಜುಂಗಿನಿಂದ ತಯಾರಿಸುವ ಗೊಬ್ಬರದಲ್ಲಿರುವ ತಾಮ್ರ ಸಸ್ಯಗಳ ಪೋಷಕಾಂಶ ಸಂಯೋಜ‌ನೆಯಲ್ಲಿ ಪ್ರೊಟೀನು  ವೇಗವರ್ಧಕವಾಗಿ ವರ್ತಿಸುತ್ತದೆ. ಎಲೆಕ್ಟ್ರಾನುಗಳ ವರ್ಗಾವಣೆ, ವಿನಿಮಯ ಕ್ರಿಯೆಯಲ್ಲಿ ಮುಖ್ಯ ಪಾತ್ರ ವಹಿಸುವ ತಾಮ್ರವು ಪೋಷಕಾಂಶ ಬಹುಪಟಲದಲ್ಲಿ(Broad spectrum of Soil nutrients) ಕಿರು ಪೋಷಕಾಂಶಗಳ ಗುಂಪಿಗೆ ಸೇರಿದ್ದು, ಆಮ್ಲೀಯವಾದ ಮಣ್ಣುಗಳಲ್ಲಿ, ಅಂದರೆ ಮಣ್ಣಿನ ರಸಸಾರ 7.2 ಗಿಂತ ಕಡಿಮೆ ಇರುವ ಮಣ್ಣುಗಳಲ್ಲಿ ಉಂಟಾಗುವ ತಾಮ್ರದ ಕೊರತೆಯ ದೆಸೆಯಿಂದ ಸಸ್ಯದ ಎಲೆಗಳ ಒಳಗಿನ ನಾರಿನಂತ ನಾಳಗಳು ಹಳದಿ ಬಿಳುಚಿಕೊಂಡು ಕ್ಲೋರೊಸಿಸ್ ರೋಗ ಕಾಣಿಸಿಕೊಳ್ಳುತ್ತದೆ.

ತೆಂಗಿನ ಕಾಯಿ ಸುಲಿದ ಮೇಲೆ ಉಳಿಯುವ ಜುಂಗನ್ನು ನೆರಳಿನಲ್ಲಿ ರಾಶಿ ಹಾಕಿ ಅದರ ಮೇಲೆ ಜಾನುವಾರುಗಳ ಸಗಣಿ ಮತ್ತು ಗಂಜಲದ ತೆಳು ಬಗ್ಗಡವನ್ನು 15 ದಿನಕ್ಕೆ ಒಮ್ಮೆ ಸಿಂಪಡಿಸಿದರೆ, ನಾಲ್ಕು ಸಿಂಪಡಣೆ ಮುಗಿಯುವಾಗ್ಗೆ, ಅಂದರೆ 60 ದಿನಗಳಲ್ಲಿ ಪೋಷಕ ಸಮೃದ್ದವಾದ ಜುಂಗಿನ ಗೊಬ್ಬರ ಸಿಗುತ್ತದೆ. ಈ ಗೊಬ್ಬರವನ್ನು ಆಮ್ಲೀಯ ಮಣ್ಣನ್ನು ಸುಧಾರಿಸಲು ಬಳಸಬಹುದು.

ತೆಂಗಿನ ಜುಂಗು ಗೊಬ್ಬರದ ಇತರೆ ಪ್ರಯೋಜನ ಎಂದರೆ ಇದು ಮಣ್ಣಿನ ತೇವಾಂಶ ಧಾರಣ ಚೈತನ್ಯವನ್ನು ಹೆಚ್ಚಿಸಿ ಬೇಸಗೆಯಲ್ಲಿ ನೀರಾವರಿಯ ಆವರ್ತನೆ (Irrigation frequency) ಯನ್ನು ಗಣನೀಯವಾಗಿ ತಗ್ಗಿಸುತ್ತದೆ. ಈ ತೆಂಗಿನ ಜುಂಗನ್ನು ಗಿಡಗಳ ಬುಡದಲ್ಲಿ ಹರಡಿ ಅದರ ಮೇಲೆ ಆಗಾಗ ಜಾನುವಾರುಗಳ ತೆಳು ಸಗಣಿ ಹರಡಿದರೂ ಸಸ್ಯಗಳ ಕ್ಲೋರೋಸಿಸ್ ರೋಗ ಗುಣವಾಗುತ್ತದೆ.

ಮನೆಯ ಮುಂಭಾಗದಲ್ಲಿ ಬೆಳೆದಿರುವ ಗಿಡಗಳ ಪಾತಿಯಲ್ಲಿ   ತೆಂಗಿನ ಜುಂಗನ್ನು ಕಂತೆ ಕಟ್ಟಿ ಇಟ್ಟು ನೀರು ಹಾಕಿದರೆ 5 ದಿನಗಳ ಕಾಲ ತೇವ ಆರದಂತಿರುತ್ತದೆ. ತೆಂಗಿನ ಒತ್ತೊತ್ತಾದ ಜುಂಗಿನಲ್ಲಿ ಮೈಲ್ಮೈ ಒತ್ತಡ (Surface tension) ಇರುವುದರಿಂದ ವಾತಾವರಣದ ತಾಪಮಾನಕ್ಕೆ ತೇವ ಆವಿಯಾಗದಂತೆ ಉಳಿಯುತ್ತದೆ.

ಮೈಲ್ಮೈ ಒತ್ತಡ(Surface tension)   ಎಂದರೆ :

ಹಸಿಯಾದ ಹಂಚಿಕಡ್ಡಿಯನ್ನು ತೆಗೆದುಕೊಂಡ ಅದನ್ನು ಮೂರು ಮೂಲೆಗಳಿರುವಂತೆ ತ್ರಿಕೋನಾಕಾರವಾಗಿ ಮಡಿಚಿ, ಮಡಿಕೆಯ ನಡುವಿನ ತೆರವು ಸಂಕುಚಿತವಾದಷ್ಟೂ ಮೇಲ್ಮೈ ಒತ್ತಡ ಜಾಸ್ತಿ , ಎಷ್ಟು ಸಂಕುಚಿತವಾಗಿ ಸಾಧ್ಯವೋ ಅಷ್ಟು ತೆರವು ಇರುವಂತೆ ಮಡಿಚಿ ನೀರಿನಲ್ಲಿ ಅದ್ದಿ ಹೊರತೆಗೆಯಿರಿ; ನೀರಿನ ತೆಳುಪೊರೆಯೊಂದು ತ್ರಿಕೋನದ ನಡುವೆ ಬಂಧಿಯಾಗುತ್ತದೆ ; ಇದೇ ಮೇಲ್ಮೈ ಒತ್ತಡ. ತೆಂಗಿನ ಜುಂಗು ಒತ್ತೊತ್ತಾಗಿ ಹೆಣಿಗೆಯಾಗಿರುವುದರಿಂದ ಇದನ್ನು ಮಣ್ಣಿಗೆ ಬೆರೆಸಿದಾಗ ಮಣ್ಣಿನ ತೇವಾಂಶ ಧಾರಣೆ ಚೈತನ್ಯ ಸುಧಾರಿಸುತ್ತದೆ . ತೆಂಗಿನ ಜುಂಗನ್ನು ಸುಡಬೇಡಿ, ಸುಡುವವರಿಗೆ ಮಾರಿಬಿಡಬೇಡಿ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

“ಮೇ 26ಕ್ಕೇ ಮುಂಗಾರು ಎಂಟ್ರಿ!” ಕರ್ನಾಟಕದಲ್ಲಿ ಭಾರೀ ಮಳೆ ಅಲರ್ಟ್‌, ಮೀನುಗಾರರಿಗೆ ಎಚ್ಚರಿಕೆ
May 18, 2026
10:14 PM
by: ದ ರೂರಲ್ ಮಿರರ್.ಕಾಂ
ಕರ್ನಾಟಕಕ್ಕೆ ಭಾರೀ ಮಳೆ ಅಲರ್ಟ್‌ | ಬೆಂಗಳೂರಿನಲ್ಲಿ ಮಳೆ ಸಂಕಷ್ಟ, ಜಿಲ್ಲೆಗಳಲ್ಲಿ ಬೆಳೆಗಳು ಕೊಚ್ಚಿ ಹೋದವು…!
May 18, 2026
8:11 PM
by: ಮಿರರ್‌ ಡೆಸ್ಕ್
ಹವಾಮಾನ ವರದಿ | 18-05-2026 | ಮೇ 26ರಿಂದ ಕರ್ನಾಟಕದಲ್ಲಿ ಮುಂಗಾರು ಚಟುವಟಿಕೆ ಚುರುಕು..? ಕರಾವಳಿ-ಮಲೆನಾಡಿನಲ್ಲಿ ಮಳೆ ಹೆಚ್ಚಳದ ಸೂಚನೆ
May 18, 2026
2:51 PM
by: ಸಾಯಿಶೇಖರ್ ಕರಿಕಳ
ಅಡಿಕೆ ಮಾರುಕಟ್ಟೆ ಏಕೆ ನಿಂತಿತು..? ಸವಾಲು ಮತ್ತು ರೈತರ ಭವಿಷ್ಯದ ಪ್ರಶ್ನೆಗಳು ಏನು…?
May 18, 2026
9:44 AM
by: ಮಹೇಶ್ ಪುಚ್ಚಪ್ಪಾಡಿ

You cannot copy content of this page - Copyright -The Rural Mirror