ತೆಂಗಿನಕಾಯಿ ಬೆಲೆ ಏಕೆ ಇಳಿಯುತ್ತಿದೆ? ರೈತರಿಗೆ ಮುಂದೇನು?

January 9, 2026
10:08 PM
ತೆಂಗಿನಕಾಯಿ ಬೆಲೆ ಇಳಿಕೆ ಆತಂಕ ಹೆಚ್ಚಾಗಿದೆ. ಉತ್ಪಾದನೆ ಏರಿಕೆ ನಡುವೆಯೇ ರಫ್ತು ಮತ್ತು ಕೈಗಾರಿಕಾ ಬೇಡಿಕೆ ತೆಂಗು ರೈತರಿಗೆ ಭರವಸೆ ನೀಡುತ್ತಿದೆ.

ಕಳೆದ ಕೆಲವು ತಿಂಗಳಿಂದ ತೆಂಗಿನಕಾಯಿ ಉತ್ಪಾದನೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದಕ್ಷಿಣ ಭಾರತದ, ವಿಶೇಷವಾಗಿ ಕೇರಳದ ತೆಂಗು ರೈತರಲ್ಲಿ ಬೆಲೆ ಕುಸಿತದ ಆತಂಕ ಹೆಚ್ಚಾಗಿದೆ. ಸೆಪ್ಟೆಂಬರ್‌ನಲ್ಲಿ ಕಿಲೋಗೆ ₹90 ತಲುಪಿದ್ದ ತೆಂಗಿನಕಾಯಿ ಬೆಲೆ, ಜನವರಿ ಮೊದಲ ವಾರಕ್ಕೆ ₹55–60ಕ್ಕೆ ಇಳಿದಿದೆ. ಇತ್ತೀಚಿನ ಕ್ಷೇತ್ರ ಪರಿಶೀಲನೆಯ ಬಳಿಕ ತೆಂಗು ಅಭಿವೃದ್ಧಿ ಮಂಡಳಿ (CDB) ಮುಂದಿನ ತಿಂಗಳಲ್ಲಿ ಉತ್ಪಾದನೆ ಮತ್ತಷ್ಟು ಏರಿಕೆಯಾಗಲಿದೆ ಎಂದು ಅಂದಾಜಿಸಿದ್ದು, ಇದು ಬೆಲೆ ಕುಸಿತಕ್ಕೆ ಕಾರಣವಾಗಬಹುದೆಂಬ ಆತಂಕ ರೈತರಲ್ಲಿ ಮನೆ ಮಾಡಿದೆ.

ಆದರೆ, ರೈತರ ಮಾಹಿತಿ ಪ್ರಕಾರ, ಕಳೆದ ಎರಡು ತಿಂಗಳಿಂದ ಬೆಲೆ ಇಳಿಮುಖವಾಗಿದ್ದರೂ ಶಬರಿಮಲೆ ಯಾತ್ರೆಯ ಸಂದರ್ಭ  ಮಾರುಕಟ್ಟೆಗೆ ಬಲ ನೀಡಿದ್ದು, ದೊಡ್ಡ ಮಟ್ಟದ ಬೆಲೆ ಕುಸಿತವನ್ನು ತಡೆಯಿತು. ಜನವರಿ 20 ರಿಂದ ಯಾತ್ರೆಯ ಸಮಯ ಅಂತ್ಯವಾಗಲಿರುವುದರಿಂದ ಮುಂದಿನ ದಿನಗಳಲ್ಲಿ ಬೆಲೆ ಮತ್ತಷ್ಟು ಇಳಿಯುವ ಸಾಧ್ಯತೆ ಇದೆ. ಆದರೆ ಮಹಾಶಿವರಾತ್ರಿವರೆಗೆ ಬೇಡಿಕೆ ಮುಂದುವರಿಯಲಿದೆ ಎಂದು ಮಾರುಕಟ್ಟೆ ಮೂಲಗಳು ಭರವಸೆ ನೀಡುತ್ತವೆ.

ಇದರ ನಡುವೆಯೇ ಕೈಗಾರಿಕಾ ವಲಯದ ಬೇಡಿಕೆ ಹಾಗೂ ರಫ್ತು ಮಾರುಕಟ್ಟೆ ರೈತರಿಗೆ ಹೊಸ ನಿರೀಕ್ಷೆ ಮೂಡಿಸಿದೆ. ಡೆಸಿಕೇಟೆಡ್ ಕೊಬ್ಬರಿ ಮತ್ತು ತೆಂಗಿನ ಹಾಲು ಸೇರಿದಂತೆ ಮೌಲ್ಯವರ್ಧಿತ ಉತ್ಪನ್ನಗಳಿಗೆ ವಿದೇಶಗಳಲ್ಲಿ, ವಿಶೇಷವಾಗಿ ಯುರೋಪ್‌ನಲ್ಲಿ ಬೇಡಿಕೆ ವೇಗವಾಗಿ ಹೆಚ್ಚುತ್ತಿದೆ. ಆಹಾರ ಮಾತ್ರವಲ್ಲದೆ, ಸೌಂದರ್ಯೋಪಚಾರ, ವೈಯಕ್ತಿಕ ಆರೈಕೆ ಉತ್ಪನ್ನಗಳು ಹಾಗೂ ಔಷಧೋದ್ಯಮದಲ್ಲೂ ತೆಂಗಿನ ಉತ್ಪನ್ನಗಳ ಬಳಕೆ ಹೆಚ್ಚುತ್ತಿದೆ. ಆರೋಗ್ಯಕರ ಅಡುಗೆ ಎಣ್ಣೆಯಾಗಿ ತೆಂಗಿನ ಎಣ್ಣೆ ಯುರೋಪಿನ ಅಡುಗೆ ಮನೆಗಳಲ್ಲಿ ಜನಪ್ರಿಯವಾಗುತ್ತಿದೆ.

ಅಧ್ಯಯನಗಳ ಪ್ರಕಾರ, 2029ರ ವೇಳೆಗೆ ಯುರೋಪಿನ ತೆಂಗು ಉತ್ಪನ್ನ ಮಾರುಕಟ್ಟೆ ಮೌಲ್ಯವು ಸುಮಾರು 2 ಬಿಲಿಯನ್ ಡಾಲರ್ ಹೆಚ್ಚಾಗಲಿದೆ. ಸಸ್ಯಆಧಾರಿತ, ವೀಗನ್ ಮತ್ತು ಫ್ಲೆಕ್ಸಿಟೇರಿಯನ್ ಆಹಾರ ಪದ್ಧತಿಯತ್ತ ಗ್ರಾಹಕರ ಒಲವು ಇದಕ್ಕೆ ಪ್ರಮುಖ ಕಾರಣವಾಗಿದೆ. ಶೂನ್ಯ-ತ್ಯಾಜ್ಯ, ಜೈವಿಕವಾಗಿ ಕರಗುವ ಹಾಗೂ ಆರೋಗ್ಯಕರ ಉತ್ಪನ್ನಗಳಿಗೆ ಗ್ರಾಹಕರು ಹೆಚ್ಚಿನ ಮಹತ್ವ ನೀಡುತ್ತಿರುವುದು ಭಾರತೀಯ ತೆಂಗು ಉತ್ಪನ್ನಗಳಿಗೆ ಲಾಭದಾಯಕವಾಗಿದೆ.

2024ರಲ್ಲಿ ಎಲ್‌ ನಿನೋ ಪರಿಣಾಮದಿಂದ ಉಂಟಾದ ಬಿಸಿಲಿನ ತಾಪ, ಬರ ಮತ್ತು ಇತರ ಕಾರಣಗಳಿಂದ ದಕ್ಷಿಣ ಏಷ್ಯಾದಲ್ಲಿ ತೆಂಗಿನ ಉತ್ಪಾದನೆ ಕುಸಿದು ಮಾರುಕಟ್ಟೆಯಲ್ಲಿ ಕೊರತೆ ಉಂಟಾಗಿತ್ತು. ಇದರಿಂದ 2025ರ ಸೆಪ್ಟೆಂಬರ್‌ನಲ್ಲಿ ತೆಂಗಿನಕಾಯಿ ಬೆಲೆ ₹90/ಕಿಲೋ ತಲುಪಿತ್ತು. ಅದೇ ಅವಧಿಯಲ್ಲಿ ಕೆರಾಫೆಡ್ ತೆಂಗಿನ ಎಣ್ಣೆ ಬೆಲೆ ಲೀಟರ್‌ಗೆ ₹529 ಎಂಬ ದಾಖಲೆ ಮಟ್ಟಕ್ಕೇರಿತ್ತು. ಆದರೆ ಉತ್ಪಾದನೆ ಸಾಮಾನ್ಯ ಸ್ಥಿತಿಗೆ ಬಂದಂತೆ ಜನವರಿ 6ಕ್ಕೆ ಅದು ₹434ಕ್ಕೆ ಇಳಿದಿದೆ. ಕೆಲ ಖಾಸಗಿ ಬ್ರ್ಯಾಂಡ್‌ಗಳ ಬೆಲೆಯೂ ₹600 ದಾಟಿದ್ದರಿಂದ ಈಗ ₹350–450ರ ಮಟ್ಟಕ್ಕೆ ಇಳಿಕೆಯಾಗಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

ಇದೇ ವೇಳೆ ಕೇರಳದಲ್ಲಿ ತೆಂಗಿನೆಣ್ಣೆ ಬೆಲೆಗಳು ಮುಂದಿನ ದಿನಗಳಲ್ಲಿ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ತೆಂಗಿನೆಣ್ಣೆ ಉತ್ಪಾದನೆಗೆ ಪ್ರಮುಖವಾದ ಕೊಬ್ಬರಿ (ಒಣಗಿಸಿದ ತೆಂಗಿನಕಾಯಿ) ಸಂಗ್ರಹವನ್ನು ತಮಿಳುನಾಡಿನ ವ್ಯಾಪಾರಿಗಳು ಉದ್ದೇಶಪೂರ್ವಕವಾಗಿ ದಾಸ್ತಾನು ಮಾಡುತ್ತಿರುವುದರಿಂದ ಕೃತಕ ಕೊರತೆ ಉಂಟಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ.

ಕೇರಳದ ತೆಂಗಿನೆಣ್ಣೆ ವ್ಯಾಪಾರಿಗಳ ಪ್ರಕಾರ, ತಮಿಳುನಾಡಿನ ದೊಡ್ಡ ವ್ಯಾಪಾರಿಗಳು ಮತ್ತು ಎಣ್ಣೆ ಕಂಪನಿಗಳು ಕೊಬ್ಬರಿ ಮಾರುಕಟ್ಟೆಗೆ ಬಿಡದೆ ಸಂಗ್ರಹಿಸಿಟ್ಟುಕೊಳ್ಳುತ್ತಿದ್ದಾರೆ. ಇದರಿಂದ ಕೊಬ್ಬರಿ  ಪೂರೈಕೆ ಕಡಿಮೆಯಾಗಿದ್ದು, ಬೆಲೆಗಳನ್ನು ಕೃತಕವಾಗಿ ಹೆಚ್ಚಿಸಲಾಗುತ್ತಿದೆ ಎಂಬ ಆರೋಪ ಇದೆ.

ಕೇರಳವು ಕೊಬ್ಬರಿ ಅಗತ್ಯಕ್ಕೆ ಬಹುಪಾಲು ತಮಿಳುನಾಡಿನ ಮೇಲೆ ಅವಲಂಬಿತವಾಗಿರುವುದರಿಂದ, ಅಲ್ಲಿನ ವ್ಯಾಪಾರಿಗಳ ಈ ಕ್ರಮದಿಂದ ರಾಜ್ಯದ ತೆಂಗಿನೆಣ್ಣೆ ಮಾರುಕಟ್ಟೆ ಗಂಭೀರವಾಗಿ ಪ್ರಭಾವಿತವಾಗುತ್ತಿದೆ.  ತೆಂಗಿನೆಣ್ಣೆ ಬೆಲೆ ಏರಿಕೆಯ ಪರಿಣಾಮ ಗೃಹ ಬಳಕೆದಾರರಷ್ಟೇ ಅಲ್ಲದೆ, ಹೋಟೆಲ್‌ ಮತ್ತು ಆಹಾರೋದ್ಯಮಕ್ಕೂ ತೀವ್ರ ಹೊಡೆತ ಬಿದ್ದಿದ್ದು, ಹೆಚ್ಚಿದ ವೆಚ್ಚದ ಕಾರಣ ಕೆಲವೆಡೆ ತೆಂಗಿನೆಣ್ಣೆ ಬಳಸುವ ಆಹಾರ ಪದಾರ್ಥಗಳನ್ನು ಮೆನುವಿನಿಂದ ತೆಗೆದುಹಾಕಲಾಗುತ್ತಿದೆ ಎಂಬ ವರದಿಗಳೂ ಬಂದಿವೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 08-07-2026 | ರಾಜ್ಯದಲ್ಲಿ ಮುಂಗಾರು ಪರಿಸ್ಥಿತಿ ಹೇಗಿದೆ…? ಕರಾವಳಿಯಲ್ಲಿ ಮಳೆ ಕಡಿಮೆಯಾಗುತ್ತಿದೆಯೇ?
August 7, 2026
11:12 AM
by: ಸಾಯಿಶೇಖರ್ ಕರಿಕಳ
ಮ್ಯಾನ್ಮಾರ್‌ನಿಂದ ಭಾರತಕ್ಕೆ ಅಕ್ರಮ ಅಡಿಕೆ ಜಾಲ | ಮೂರು ಹಂತದ ಕಳ್ಳಸಾಗಣೆ ಜಾಲವನ್ನು ಬಯಲಿಗೆಳೆದ ಇಡಿ
August 7, 2026
7:34 AM
by: ದ ರೂರಲ್ ಮಿರರ್.ಕಾಂ
‘ಅನ್ನಂ ಬ್ರಹ್ಮ’ ಭಾವದಿಂದ ಆಹಾರ ಸೇವಿಸಿದರೆ ಮುಕ್ತಿಯ ಸಾಧನ – ರಾಘವೇಶ್ವರ ಶ್ರೀ
August 6, 2026
11:04 PM
by: ದ ರೂರಲ್ ಮಿರರ್.ಕಾಂ
ಕೃಷಿ ಅಧಿಕಾರಿ ನೇಮಕಾತಿ ಪರೀಕ್ಷೆ ತಾತ್ಕಾಲಿಕ ಮುಂದೂಡಿಕೆ | ಪ್ರತಿಭಟನಾನಿರತ ವಿದ್ಯಾರ್ಥಿಗಳಿಗೆ ಸಚಿವ ಪ್ರಿಯಾಂಕ್ ಖರ್ಗೆ ಭರವಸೆ
August 6, 2026
9:23 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror