ಅಕ್ರಮ ಹಾಗೂ ಭ್ರಷ್ಟಾಚಾರದ ಗಳಿಕೆಯ ಪ್ರಕರಣವೊಂದರಲ್ಲಿ ಆರೋಪಿಗಳಿಗೆ ಶಿಕ್ಷೆಯನ್ನು ನ್ಯಾಯಾಲಯ ವಿಧಿಸಿದೆ. ಆರೋಪಿಗಳಿಗೆ 3 ವರ್ಷ ಸಜೆ, 10,000 ದಂಡ ಮತ್ತು ಅವರು ಅಕ್ರಮವಾಗಿ ಗಳಿಸಿದ ಸುಮಾರು 70 ಲಕ್ಷಕ್ಕೂ ಮಿಗಿಲಾದ ಆಸ್ತಿಯನ್ನು ಕೇಂದ್ರ ಸರ್ಕಾರ ಮುಟ್ಟುಗೋಲು ಮಾಡಿಕೊಳ್ಳಬೇಕು ಎಂಬ ಆದೇಶವನ್ನು ನ್ಯಾಯಾಲಯ ಮಾಡಿದೆ. ಈ ಪ್ರಕರಣದಲ್ಲಿ ನ್ಯಾಯವಾದಿ, ಜಾರಿ ನಿರ್ದೇಶನಾಲಯದ ಪರವಾಗಿ ಇತ್ತೀಚೆಗಷ್ಟೇ ವಿಶೇಷ ಅಭಿಯೋಜಕರಾಗಿ ನೇಮಕಗೊಂಡ ಪುತ್ತೂರಿನ ಕಜೆ ಲಾ ಚೇಂಬರ್ಸ್ ನ ಮುಖ್ಯಸ್ಥರಾದ ಮಹೇಶ್ ಕಜೆಯವರು ವಾದವನ್ನು ಮಂಡಿಸಿದ್ದರು.
ಬೆಂಗಳೂರಿನ 34 ನೇ ಸಿ ಬಿ ಐ ವಿಶೇಷ ನ್ಯಾಯಾಲಯವು ಪ್ರಸ್ತುತ ಬೆಂಗಳೂರಿನಲ್ಲಿ ವಾಸವಾಗಿರುವ ಸಾರಿಗೆ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿದ ಜೆ. ವಿ. ರಾಮಯ್ಯ ಎಂಬವರು 1978 ರಿಂದ 2009ರ ಅವಧಿಯಲ್ಲಿ ತಮ್ಮ ಆದಾಯದ ಉತ್ಪತ್ತಿಯ ಮಿತಿಗಿಂತ ಹೆಚ್ಚಿನ ಸಂಪಾದನೆಯನ್ನು ಗಳಿಸಿರುತ್ತಾರೆ ಮತ್ತು ಸುಮಾರು ಒಂದು ಕೋಟಿಗೂ ಮಿಗಿಲಾದ ಹೆಚ್ಚುವರಿ ಗಳಿಕೆಯನ್ನು ಮಾಡಿರುತ್ತಾರೆ ಎಂಬ ಆರೋಪವಿತ್ತು. ಕೋಲಾರದ ಲೋಕಾಯುಕ್ತ ಕಚೇರಿಯವರು 2009 ರಲ್ಲಿ ಆರೋಪಿಗಳ ವಿರುದ್ಧ ಎಫ್.ಐ.ಆರ್. ದಾಖಲಿಸಿಕೊಂಡಿದ್ದರು. ತನಿಖೆಯನ್ನು ಪೂರ್ಣಗೊಳಿಸಿ 2012 ರಲ್ಲಿ ಆರೋಪಿಗಳ ವಿರುದ್ಧ ಮಾನ್ಯ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ನ್ನೂ ಕೂಡ ಸಲ್ಲಿಸಿದ್ದರು.ಈ ನಡುವೆ ಲೋಕಾಯುಕ್ತ ಇಲಾಖೆಯವರು ಜೆ.ವಿ. ರಾಮಯ್ಯ ಅವರು ಪಿ. ಎಂ. ಎಲ್. ಎ. (ಪ್ರಿವೆನ್ಷನ್ ಆಫ್ ಮನಿ ಲಾಂಡ್ರಿಂಗ್ ಆಕ್ಟ್ )ನ ಅನ್ವಯವೂ ತಪ್ಪು ಎಸಗಿರುತ್ತಾರೆ ಎಂಬ ಹಿನ್ನೆಲೆಯಲ್ಲಿ ಅವರ ವಿರುದ್ಧ ಜಾರಿ ನಿರ್ದೇಶನಾಲಯಕ್ಕೆ ಮಾಹಿತಿಯನ್ನು ನೀಡಿದ್ದರು. ಲೋಕಾಯುಕ್ತ ಪೊಲೀಸರು ನೀಡಿದ ಮಾಹಿತಿಯನ್ವಯ ಜಾರಿ ನಿರ್ದೇಶನಾಲಯದವರು ಜೆ. ವಿ. ರಾಮಯ್ಯ ಮತ್ತು ಅವರ ಮಡದಿ ಲಲಿತಮ್ಮ ಅವರ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡು, ಕೂಲಂಕುಶವಾದ ತನಿಖೆಯನ್ನು ಮುಂದುವರಿಸಿ ಆರೋಪಿಗಳ ಹೇಳಿಕೆಯನ್ನು ದಾಖಲಿಸಿಕೊಂಡಿದ್ದರು.
ನಂತರ ಆರೋಪಿ ಅಕ್ರಮವಾಗಿ ತನ್ನ ಆದಾಯದ ಮಿತಿಗಿಂತ ಹೆಚ್ಚಿನ ಗಳಿಕೆಯನ್ನು ಮಾಡಿ ಅದನ್ನು ತನ್ನ ಹೆಂಡತಿ ಲಲಿತಮ್ಮನ ಮುಖಾಂತರ ವಿನಿಯೋಗಿಸಿ ಖರೀದಿಸಿದ ಸುಮಾರು ಆರು ಆಸ್ತಿಗಳನ್ನು ಜಪ್ತಿ ಮಾಡಿ ತನಿಖೆಯನ್ನು ಮುಂದುವರಿಸಿ ಜಾರಿ ಮನಿ ಲಾಂಡ್ರಿಂಗ್ ಕಾಯ್ದೆಯ ಅನ್ವಯ ಅಪರಾಧ ಎಸಗಿದ್ದಾರೆ ಹೀಗಾಗಿ ಆರೋಪಿಗಳು ಅಕ್ರಮವಾಗಿ ಗಳಿಸಿದ ಆಸ್ತಿಯನ್ನು ಕೇಂದ್ರ ಸರಕಾರಕ್ಕೆ ಮುಟ್ಟುಗೋಲು ಹಾಕಬೇಕೆಂದು ಕೋರಿ ಬೆಂಗಳೂರಿನ ಸಿ.ಬಿ.ಐ. ವಿಶೇಷ ನ್ಯಾಯಾಲಯಕ್ಕೆ ದೂರನ್ನು ಸಲ್ಲಿಸಿದ್ದರು.
ಪ್ರಕರಣದಲ್ಲಿ ತನಿಖೆಯನ್ನು ನಡೆಸಿದಂತಹ ನ್ಯಾಯಾಲಯ ಅಂತಿಮವಾಗಿ ಜಾರಿ ನಿರ್ದೇಶನಾಲಯದ ಪರವಾದ ವಾದವನ್ನು ಮತ್ತು ಆರೋಪಿಗಳ ಪರ ವಕೀಲರ ವಾದವನ್ನು ಸವಿವರವಾಗಿ ಕೇಳಿತ್ತು. ಆರೋಪಿಗಳು ಮತ್ತು ಜಾರಿ ನಿರ್ದೇಶನಾಲಯದ ವಕೀಲರ ವಾದವನ್ನು ಆಲಿಸಿ ಆರೋಪಿಗಳಿಗೆ 3 ವರ್ಷ ಸಜೆ, 10,000 ದಂಡ ಮತ್ತು ಅವರು ಅಕ್ರಮವಾಗಿ ಗಳಿಸಿದ ಸುಮಾರು 70 ಲಕ್ಷಕ್ಕೂ ಮಿಗಿಲಾದ ಬೆಲೆಬಾಳುವ ಆಸ್ತಿಯನ್ನು ಕೇಂದ್ರ ಸರಕಾರಕ್ಕೆ ಮುಟ್ಟುಗೋಲು ಮಾಡಿಕೊಳ್ಳಬೇಕು ಎಂಬ ಆದೇಶವನ್ನು ಮಾಡಿರುತ್ತಾರೆ. ಇದೊಂದು ಬಹಳ ಅಪರೂಪವಾದ ಪ್ರಕರಣವಾಗಿದ್ದು, ಕರಪ್ಶನ್ ಆಕ್ಟಿನಲ್ಲಿ ದಾಖಲಿಸಿದ ಕೇಸಿನಲ್ಲಿ ಜಾರಿ ನಿರ್ದೇಶನಾಲಯದವರ ದೂರಿನ್ವಯ ಶಿಕ್ಷೆಗೊಳಪಟ್ಟ ಕರ್ನಾಟಕದ ಪ್ರಪ್ರಥಮ ಕೇಸು ಇದಾಗಿರುತ್ತದೆ.
ಕರ್ನಾಟಕದಲ್ಲಿ ಈ ಕಾಯಿದೆ ಜಾರಿಗೆ ಬಂದ 17 ವರ್ಷದ ಅವಧಿಯಲ್ಲಿ ಆರೋಪಿಗಳ ವಿರುದ್ಧದ ದೂರು ಸಾಬೀತಾದ ಮೂರನೆಯ ಪ್ರಕರಣವಾಗಿರುತ್ತದೆ. ದೇಶದಲ್ಲಿ 24ನೇ ಪ್ರಕರಣವಾಗಿರುತ್ತದೆ. ಈ ರೀತಿಯಾಗಿ ಆದೇಶವನ್ನು ನೀಡುವ ಮೂಲಕ ಭ್ರಷ್ಟಾಚಾರಿಗಳಿಗೆ ಒಂದು ಎಚ್ಚರಿಕೆಯ ಕರೆಗಂಟೆಯನ್ನು ವಿಶೇಷ ನ್ಯಾಯಾಲಯ ಶಿಕ್ಷೆಯನ್ನು ವಿಧಿಸುವ ಮುಖಾಂತರ ನೀಡಿರುತ್ತದೆ.

