ಮರುವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆವಿಮೆ ಯೋಜನೆಯಡಿ ನೋಂದಾವಣೆಗೊಂಡ ರೈತರ ತಾಲೂಕಿನಲ್ಲಿ ವಿಮೆ ಮಾಡಿಸಲಾಗಿರುವ ಬೆಳೆಯು ಆಯಾ ಹಂಗಾಮಿನ ಬೆಳೆ ಸಮೀಕ್ಷೆಯಲ್ಲಿ ಕಡ್ಡಾಯವಾಗಿ ದಾಖಲಾಗಿರಬೇಕಿರುತ್ತದೆ. ಈ ಯೋಜನೆಯಡಿ ನೋಂದಾವಣೆಗೊಂಡ ಫಲಾನುಭವಿಗಳ ಸರ್ವೆ ನಂಬರ್ ಗಳಲ್ಲಿನ ಬೆಳೆಯ ಮಾಹಿತಿಯು ಬೆಳೆ ಸಮೀಕ್ಷೆಯ ದತ್ತಾಂಶದೊಂದಿಗೆ ತಾಳೆ ಹೊಂದದೇ ಇರುವ ಸಂದರ್ಭದಲ್ಲಿ ಬೆಳೆ ವಿಮೆ ಪರಿಹಾರ ಮೊತ್ತವನ್ನು ಪಾವತಿಸುವ ಮುನ್ನ ಬೆಳೆ ಸಮೀಕ್ಷೆ ಕೈಗೊಂಡು ತದನಂತರ ಪ್ರಕರಣವನ್ನು ಇತ್ಯರ್ಥಪಡಿಸಲಾಗುತ್ತದೆ.
2023-24 ನೇ ಸಾಲಿನ ಹವಾಮಾನ ಆಧಾರಿತ ಬೆಳೆವಿಮೆ ಯೋಜನೆಯಡಿ ನೋಂದಾವಣೆಗೊಂಡು ಬೆಳೆ ಸಮೀಕ್ಷೆಯ ದತ್ತಾಂಶದೊಂದಿಗೆ ತಾಳೆ ಹೊಂದದೇ ಇರುವ ಪ್ರಕರಣಗಳನ್ನು ಇತ್ಯರ್ಥಪಡಿಸಲು ಮೇ 31 ಕೊನೆಯ ದಿನ. ಈ ಕುರಿತು ಸಂಬಂಧಿಸಿದ ರೈತರಿಗೆ ಈಗಾಗಲೇ ಮೊಬೈಲ್ ಸಂದೇಶವನ್ನು ಕಳುಹಿಸಲಾಗಿರುತ್ತದೆ. 2023-24 ನೇ ಸಾಲಿನಲ್ಲಿ ಯೋಜನೆಯಡಿ ನೋಂದಾವಣೆಗೊಂಡ ಯಾವುದೇ ರೈತರು ಈ ರೀತಿಯ ಸಂದೇಶವನ್ನು ಸ್ವೀಕರಿಸಿದಲ್ಲಿ, ಬೆಳೆ ಸಾಲ ಹೊಂದಿರುವ ರೈತರು ತಾವು ನೋಂದಾವಣೆಗೊಂಡ ಬ್ಯಾಂಕ್ ಶಾಖೆಯನ್ನು ಹಾಗೂ ಬೆಳೆ ಸಾಲ ಹೊಂದಿಲ್ಲದ ರೈತರು ತಾಲೂಕು ತೋಟಗಾರಿಕೆ ಇಲಾಖೆಯನ್ನು ಸಂಪರ್ಕಿಸಬಹುದು ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.