ಶಿವರಾತ್ರಿ ಅಂದರೆ ಪವಿತ್ರ ಹಾಗೂ ಮಂಗಳಕರ ರಾತ್ರಿ ಎಂದು ಅರ್ಥ. ಪರಿಶುದ್ಧ ಮನಸ್ಸಿನಿಂದ ಶಿವನ ಧ್ಯಾನ, ಉಪಾಸನೆ ಮಾಡಿದಾಗ ಸಕಲ ಪಾಪ ಕರ್ಮಗಳ ಕೊಳೆ ಕಳೆದು ಪುಣ್ಯ ಸಂಚಯವಾಗುತ್ತದೆ. ತ್ಯಾಗ ಮತ್ತು ವಿರಕ್ತಿಯಿಂದ ಶಾಂತಿ, ನೆಮ್ಮದಿ ಸಿಗುತ್ತದೆ. ಜಪ-ತಪ, ಧ್ಯಾನದೊಂದಿಗೆ ವೃತ ನಿಯಮಗಳ ಪಾಲನೆ ಮಾಡಿದಾಗ ಜೀವನ ಪಾವನವಾಗುತ್ತದೆ ಎಂದು ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.………ಮುಂದೆ ಓದಿ……..
ಅವರು ಬುಧವಾರ ಶಿವರಾತ್ರಿ ಸಂದರ್ಭ ಧರ್ಮಸ್ಥಳದಲ್ಲಿ ಪ್ರವಚನ ಮಂಟಪದಲ್ಲಿ ಶಿವಪಂಚಾಕ್ಷರಿ ಪಠಣದೊಂದಿಗೆ ಶಿವರಾತ್ರಿ ಜಾಗರಣೆಗೆ ಚಾಲನೆ ನೀಡಿ ಶುಭ ಹಾರೈಸಿದರು. ಮಾತು ಬಿಡ ಮಂಜುನಾಥ ಎಂಬ ಮಾತು ಪ್ರಚಲಿತವಿದೆ. ನಮ್ಮ ಮಾತು ಮತ್ತು ಕೃತಿಗೆ ಅಂತರವಿರಬಾರದು. ನುಡಿದಂತೆ ನಡೆಯಬೇಕು. ಆಗ ಸತ್ಯ, ಧರ್ಮ, ನ್ಯಾಯ, ನೀತಿಯ ಪಾಲನೆಯೊಂದಿಗೆ ಎಲ್ಲವೂ ಸುಗಮವಾಗಿ ಜೀವನ ಪಾವನವಾಗುತ್ತದೆ. ಮನದಲ್ಲಿರುವ ಕೆಟ್ಟ ಯೋಚನೆ, ಭಾವನೆಗಳನ್ನು ತ್ಯಜಿಸಿ ಎಲ್ಲರೂ ಸುಖಿಗಳಾಗಿರಲಿ ಎಂಬ ಉದಾತ್ತ ಭಾವನೆಯೊಂದಿಗೆ ಲೋಕಕಲ್ಯಾಣವಾಗಲಿ ಎಂದು ಶುಭ ಚಿಂತನೆ ಮಾಡಬೇಕು. ಆಗ ಕಾಲಕ್ಕೆ ಸರಿಯಾಗಿ ಮಳೆ, ಬೆಳೆ ಆಗಿ ಎಲ್ಲೆಲ್ಲೂ ಸುಖ-ಶಾಂತಿ ಮತ್ತು ನೆಮ್ಮದಿ ನೆಲೆಸುತ್ತದೆ ಎಂದು ಹೆಗ್ಗಡೆಯವರು ಹೇಳಿದರು.
ಬಳಿಕ ಸಾಮೂಹಿಕ ಶಿವ ಪಂಚಾಕ್ಷರಿ ಪಠಣ ಆರಂಭಗೊಂಡಿತು.
ದೇವಸ್ಥಾನದಲ್ಲಿ ನಾಲ್ಕು ಜಾವಗಳಲ್ಲಿ ಭಕ್ತರು ದೇವರಿಗೆ ಶತರುದ್ರಾಭಿಷೇಕ ಮತ್ತು ಸೀಯಾಳ ಅಭಿಷೇಕ ಸೇವೆ ಅರ್ಪಿಸಿ ಧನ್ಯತೆಯನ್ನು ಹೊಂದಿದರು.
ಹೇಮಾವತಿ ವಿ. ಹೆಗ್ಗಡೆಯವರು, ಸುಪ್ರಿಯಾ ಹರ್ಷೇಂದ್ರ ಕುಮಾರ್, ಬೆಂಗಳೂರಿನ ಹನುಮಂತಪ್ಪ ಗುರೂಜಿ ಮತ್ತು ಮರಿಯಪ್ಪ ಉಪಸ್ಥಿತರಿದ್ದರು.