ಹಸಿರು ತುಂಬಿದ ಮನ

April 22, 2024
11:14 PM
ಶುಭ ಸಮಾರಂಭದಲ್ಲಿ ಐಸ್‌ಕ್ರೀಂ, ಹಣ್ಣುಗಳ ಜೊತೆ ಎಲ್ಲರಿಗೂ ಒಂದೊಂದು ಗಿಡ. ಇಂತಹದೊಂದು ವಿಶೇಷ ಕಾರ್ಯಕ್ರಮದ ಬಗ್ಗೆ ಇಲ್ಲಿದೆ ಮಾಹಿತಿ..
12-4-2024. ಮಂಗಳೂರು ಸನಿಹದ ಕಾವೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಚಿ.ಸುಧನ್ವನಿಗೆ ಉಪನಯನ. ಬಂಧುಗಳು, ಇಷ್ಟ-ಮಿತ್ರರ ಸಮಾಗಮ. ಲೋಕಾಭಿರಾಮ ಮಾತುಕತೆ. ಮೃಷ್ಟಾನ್ನ ಭೋಜನ. ಓಟಿನ ಸಮಯವಲ್ವಾ… ಒಂದಷ್ಟು ಓಟು-ಗೀಟು ಚರ್ಚೆ. ರಣ ಬಿಸಿಲು ಬೇರೆ. ಹೊಟ್ಟೆ ತಂಪು ಮಾಡಿಕೊಳ್ಳಲು ತಂಪಿನ ಪಾನೀಯಗಳು.ಇದರಲ್ಲೇನು ವಿಶೇಷ? ಊಟದ ಪಂಕ್ತಿಯ ಮಧ್ಯೆ ವಟುವಿನ ಹೆತ್ತವರಾದ ಶ್ರೀಮತಿ ಅಂಬಿಕಾ – ಗಿರೀಶ್ ಹೊಳ್ಳರು ಉಪಚಾರ ಮಾಡುತ್ತಾ, ಎಲ್ಲರನ್ನೂ ಪರಿಚಯಿಸುತ್ತಾ ಹೋದರು. ಸ್ವಲ್ಪ ಹೊತ್ತಲ್ಲಿ ಪುನಃ ಬಂದು ‘ತಾವು ತೆರಳುವಾಗ ಒಂದೊಂದು ಗಿಡವನ್ನೂ ಕೊಂಡೊಯ್ಯಬೇಕು’ ವಿನಂತಿಸಿದರು. 
ಊಟ ಮಾಡಿದ ಬಳಿಕ ಸಿಹಿ ಪೊಟ್ಟಣ, ಐಸ್‍ಕ್ರೀಮ್, ಐಸ್‍ಕ್ಯಾಂಡಿ.. ಇತ್ಯಾದಿಗಳೊಂದಿಗೆ ಕಲಾಪ ಪೂರ್ಣಗೊಳ್ಳುತ್ತದೆ. ಆದರೆ ಉಪನಯನಕ್ಕೆ ಆಗಮಿಸಿದವರೆಲ್ಲರ ಕೈಗೆ ಗಿರೀಶ್ ದಂಪತಿ ಹಣ್ಣಿನ ಕಸಿ ಗಿಡಗಳನ್ನು ನೀಡಿದ್ದರು. ಅಂದು ಮ್ಯಾಂಗೋಸ್ಟಿನ್, ವಿಯೆಟ್ನಾಂ ಹಲಸು, ಮೇಣ ರಹಿತ ಹಲಸು, ಜಂಬೂ ನೇರಳೆ, ಮೈಸೂರು ನೇರಳೆ, ಡ್ರ್ಯಾಗನ್ ಹಣ್ಣು, ಪವಾಡ ಹಣ್ಣು, ಲಕ್ಷ್ಮಣ ಫಲ.. ಹೀಗೆ ವೈವಿಧ್ಯ ಕಸಿಗಿಡಗಳನ್ನು  ಗಿರೀಶ್ ಆಯ್ಕೆ ಮಾಡಿದ್ದರು.
ಅನೇಕರು ‘ಜಾಗ ಇಲ್ಲ, ಎಲ್ಲಿ ನೆಡಲಿ’ ಎನ್ನುವ ಅಸಹಾಯಕತೆಯನ್ನು ತೋರಿದರೂ, ‘ಒಂದು ಗಿಡ ಇರಲಿ, ಇದ್ದ ಜಾಗದಲ್ಲಿ ನೆಡೋಣ’ ಎಂದು ತಮ್ಮನ್ನು ತಾವೇ ಸಮಾಧಾನ ಪಡಿಸಿಕೊಂಡು ಗಿಡವನ್ನು ಒಯ್ದಿದ್ದರು. ‘ಮ್ಯಾಂಗೋಸ್ಟೀನ್.. ಹಾಗೆಂದರೇನು’ ಎನ್ನುವ ಚೋದ್ಯವನ್ನು ‘ಗೂಗಲ್ ಮಾಮ’ ಉತ್ತರ ನೀಡುತ್ತಿದ್ದ! ‘ಎರಡು ವರುಷದಲ್ಲೇ ಹಣ್ಣು ಬಿಡುತ್ತಂತೆ’ ಎಂದು ಇನ್ನಷ್ಟು ಮಂದಿಯ ವಿಸ್ಮಯ.
ಎಲ್ಲರಿಗೂ ಒಂದೊಂದು ಗಿಡ. ಆದರೆ ಒಂದಿಬ್ಬರು ‘ನನಗೆರಡು ಬೇಕು, ಮೂರು ಇರಲಿ’ ಎಂದು ಅಲ್ಲಿನ ಸಹಾಯಕರನ್ನು ವಿನಂತಿ ಮಾಡುತ್ತಿದ್ದರು. ‘ನೀವು ಗಿಡ ಕೊಂಡೋಗುವುದು ಮಾತ್ರ. ನಾನೇ ನೆಟ್ಟು ಆರೈಕೆ ಮಾಡಬೇಕಷ್ಟೇ.” ಗಂಡನನ್ನು ಛೇಡಿಸುವ ಪತ್ನಿ… ಹೀಗೆ ಕಸಿ ಗಿಡಗಳ ಉಡುಗೊರೆಗಳ ಸುತ್ತ ಮಾತುಗಳ ಸರಮಾಲೆಗಳು.
ಗಿರೀಶ್ ದಂಪತಿಯ ಹಿರಿಯ ಪುತ್ರನ ಉಪನಯನದ ಸಂದರ್ಭದಲ್ಲೂ ಗಿಡಗಳನ್ನು ಉಡುಗೊರೆಯಾಗಿ ನೀಡಿದ್ದರು. “ಅಂದು ಒಯ್ದ ಹಲಸಿನ ಗಿಡದಲ್ಲಿ ಕಳೆದ ವರುಷವೇ ಕಾಯಿ ಬಂದಿದೆ.”, “ಮಾವು ಚೆನ್ನಾಗಿ ರುಚಿಯಾಗಿತ್ತು.” ಹೀಗೆ ಹಿಮ್ಮಾಹಿತಿ ನೀಡುವಾಗ ಗಿರೀಶ್ ಮುಖ ಅರಳಿತ್ತು. ಅಂದು ಸಿಹಿ ಪೊಟ್ಟಣವನ್ನು ನೀಡಲು ಸಹ ಸೆಣಬಿನ ಚೀಲ ವ್ಯವಸ್ಥೆ ಮಾಡಿದ್ದರು. ಊಟದ ಎರಡನೇ ಪಂಕ್ತಿ ಮುಗಿಯುವಾಗ ಗಿಡಗಳೆಲ್ಲಾ ಖಾಲಿ ಖಾಲಿ! ಯಾರೋ ಒಬ್ಬರು ತೆಗೆದಿರಿಸಿದ್ದ ಗಿಡವೂ ನಾಪತ್ತೆ!
ಉಪನಯನ ಮುಗಿಸಿ ಹೊರಡುವಾಗ ‘ಗಿರೀಶ ಹೊಳ್ಳ ದಂಪತಿಯ ಹಸಿರು ಕಾಳಜಿ’ ಮನತುಂಬಿತ್ತು. ಅವರೊಳಗಿನ ‘ಸಾರ್ಥಕ್ಯ ಭಾವ’ದ ಖುಷಿ ಆಗಾಗ್ಗೆ ಇಣುಕುತ್ತಿದ್ದುವು.
 ನಮ್ಮ ನಡುವೆ ಅದೆಷ್ಟೋ ಅದ್ದೂರಿ ಕಾರ್ಯಕ್ರಮಗಳು ನಡೆಯುತ್ತವೆ. ನಡೆಯಲಿ, ಅವೆಲ್ಲಾ ಅವರವರ ಸಾಮಥ್ರ್ಯಕ್ಕೆ ಅನುಸಾರವಾಗಿ ಏರ್ಪಡುತ್ತವೆ. ಇದರ ಮಧ್ಯೆ ಹಸಿರಿಗೂ ಜಾಗ ಇರಲಿ.
Advertisement
Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ನಾ.ಕಾರಂತ ಪೆರಾಜೆ

ಪತ್ರಕರ್ತ , ಕಲಾವಿದ , ಅಂಕಣಕಾರ ನಾ.ಕಾರಂತ ಪೆರಾಜೆ ಅವರು ಪ್ರಸ್ತುತ ಅಡಿಕೆ ಪತ್ರಿಕೆಯ ಸಹಾಯಕ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಕರ್ತರಾಗಿ, ಕಲಾವಿದರಾಗಿ, ಅಂಕಣಕಾರರಾಗಿ ಗುರುತಿಸಿಕೊಂಡಿರುವ ನಾ.ಕಾರಂತ ಅವರು ತಾಳಮದ್ದಳೆಯಲ್ಲಿ ಅರ್ಥದಾರಿಯಾಗಿ ಹಾಗೂ ವಿವಿಧ ಮೇಳಗಳಲ್ಲಿ ವೇಷಧಾರಿಯೂ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಪುತ್ತೂರು ತಾಲೂಕಿನ 17ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

ಇದನ್ನೂ ಓದಿ

ಹವಾಮಾನ ವರದಿ | 11-01-2026| ಇಂದು ಕೆಲವೆಡೆ ಮಳೆ ನಿರೀಕ್ಷೆ | ಎಲ್ಲೆಲ್ಲಿ ಮಳೆ ಇರಬಹುದು..?
January 11, 2026
2:11 PM
by: ಸಾಯಿಶೇಖರ್ ಕರಿಕಳ
ಬರ ಪ್ರದೇಶ ಕೃಷಿಗೆ ಕಡಿಮೆ ವೆಚ್ಚದ ಪರಿಹಾರ | ಬೀಜ ಸಂಸ್ಕರಣೆಯಲ್ಲಿ ಒಂಟೆ ಮೂತ್ರ ಬಳಕೆ ಪರಿಣಾಮಕಾರಿ – ICAR ಅಧ್ಯಯನ
January 11, 2026
9:58 AM
by: ದ ರೂರಲ್ ಮಿರರ್.ಕಾಂ
ಗ್ರಾಮೀಣ ಉದ್ಯಮಿಗಳಿಂದ ಆರ್ಗ್ಯಾನಿಕ್ ಮಾದರಿ | ‘ಗ್ರೀನ್ ವಿಷನ್’ ವರ್ಮಿ ಕಾಂಪೋಸ್ಟ್ ಯಶೋಗಾಥೆ
January 11, 2026
8:30 AM
by: ದ ರೂರಲ್ ಮಿರರ್.ಕಾಂ
ಬಾಯಿಯ ಕ್ಯಾನ್ಸರ್ ಭೀತಿ ಕಡಿಮೆ ಮಾಡಲಿದೆಯೇ ‘ಇ-ಬೀಮ್’ ತಂತ್ರಜ್ಞಾನ? ಅಡಿಕೆ ಸಂಸ್ಕರಣೆಯಲ್ಲಿ ಹೊಸ ಮನ್ವಂತರ!
January 11, 2026
7:36 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror