ಕುರಿ ಕಾಯಕ್ಕೆ ಹೋಗು…. ಹೀಗೆನ್ನಬೇಡಿ…. | ಕುರಿಗಾಹಿಗಳು ಈಗ ಕೋಟಿ ಕುಳಗಳು….!

August 5, 2024
1:20 PM

ಕಳೆದ ಎರಡು ದಿನಗಳಿಂದ ಕುರಿ ಮೇಯಿಸಿ ಲಕ್ಷಾಂತರ ರೂಪಾಯಿ ವಾರ್ಷಿಕವಾಗಿ ದುಡಿಯುವ ಡಿಪ್ಲೊಮಾ ಪದವಿದರನ ಈ ವೀಡಿಯೋ ಭಾರೀ ವೈರಲ್ ಆಗ್ತಿದೆ. ನಿಜಕ್ಕೂ ಆ ಯುವಕನ ದುಡಿಮೆ ಅಮೋಘ. ಆದರೆ ……. ಕುರಿ ಕಾಯೋದು ದನ ಕಾಯೋದು ಅಷ್ಟು ಸುಲಭನಾ…‌?

ಆರು ತಿಂಗಳ ಕಾಲ ಮೂಲ ಊರಿನಿಂದ ಸುಮಾರು ನಾಲ್ಕುನೂರು ಕಿಲೋಮೀಟರ್ ದೂರ ಸಾವಿರಾರು ಕುರಿಗಳನ್ನು ತರಬಿಕೊಂಡು (ಒಟ್ಟು ಮಾಡಿ ಕೊಂಡು) ಮೇಯಿಸಿಕೊಂಡು ಮತ್ತೆ ಊರಿಗೆ ಮರಳುವುದು ಅತಿ ದೊಡ್ಡ ಸಾಹಸದ ಕೆಲಸವಾಗಿರುತ್ತದೆ. ಸಾವಿರಾರು ಕುರಿಗಳನ್ನು ರಸ್ತೆಯಲ್ಲಿ ವಾಹನಗಳ ಓಡಾಟದ ಮದ್ಯೆ ಹೊಡೆದು ಕೊಂಡು ಹೋಗುವುದೂ, ಅವುಗಳಿಗೆ ಮೇಯಲು ಜಾಗ ಹುಡುಕುವುದೂ, ಅವುಗಳಿಗೆ ಕುಡಿಯಲು ನೀರು ಒದಗಿಸುವುದು (ಎಲ್ಲಾ ಕಡೆಯಲ್ಲೂ ನದಿ ಕೆರೆಗಳು ಸಿಗದು) ಅನಾರೋಗ್ಯ ವಾದರೆ ಚಿಕಿತ್ಸೆ ಕೊಡಿಸುವುದು (ಪರ ಊರಿನಲ್ಲಿ) ಕುರಿಗಳು ಕಳ್ಳತನ ಆಗದಂತೆ ನೋಡಿ ಕೊಳ್ಳುವುದು ಸಾವಿರದ ಲೆಕ್ಕದಲ್ಲಿ ಇರುವಾಗ ಅದು ಬಹಳ ತ್ರಾಸದ ಕೆಲಸ.

ಲಕ್ಷ ಲಕ್ಷ ಆದಾಯವಿದ್ದರು ಕುರಿಗಾಹಿಗೆ ಎಲ್ಲೆಂದರಲ್ಲಿ ಮಲಗಿ ಆಹಾರ ಸ್ವೀಕರಿಸುವ ಯೋಗಿ ಮನಸ್ಥಿತಿ ಇರಬೇಕು. ಅದು ಅಷ್ಟು ಸುಲಭವಲ್ಲ..!! ಮತ್ತು ಇಷ್ಟು ಕುರಿಗಳಿಗೆ ಪ್ರತಿ ಊರಿನಲ್ಲೂ ಮೇವು ಹುಡುಕುವುದು ಬಹಳ ಕಷ್ಟ. ಈ ಒತ್ತುವರಿ ಕಾಲದಲ್ಲಿ ಕಾಲಿಜಾಗ, ಸರ್ಕಾರಿ ಜಾಗ ಬಹಳ ಕಡಿಮೆ. ತೋಟಗಾರಿಕೆ ಹೆಚ್ಚು ಇದ್ದ ಊರಿನಲ್ಲಿ ಎಲ್ಲ ತೋಟಗಾರರೂ ತಮ್ಮ ತೋಟದಲ್ಲಿ ಕುರಿಗಳನ್ನು ಬಿಟ್ಟು ಕೊಳ್ಳೋಲ್ಲ…!! ಕುರಿಗಳಿಗೆ ಅದರಲ್ಲೂ ಸಾವಿರಾರು ಕುರಿಗಳಿಗೆ ಆಹಾರ ಹೊಂದಿಸುವುದು ಬಹಳ ಒತ್ತಡ ಸಾಹಸದ ವಿಚಾರ..‌‌ ನಮ್ಮ ವ್ಯವಸ್ಥೆ ಹೇಳುವುದು ನೋಡುವುದು ಈ ಯುವಕನ ವಾರ್ಷಿಕ ಇಪ್ಪತ್ತೈದು ಮೂವತ್ತು ಲಕ್ಷದ ಆದಾಯ ಮಾತ್ರ…

ಈ ಇಪ್ಪತ್ತೈದು ಲಕ್ಷ ಆದಾಯಕ್ಕೆ ಕುರಿಗಾಹಿಯ ಶ್ರಮ ಹೋರಾಟದ ಬಗ್ಗೆ ಗಮನಿಸೋಲ್ಲ…!!! ನಮ್ಮ ಯುವಕರು ಉದ್ಯಮಗಳ ಸ್ಥಾಪನೆಯನ್ನು ಎಷ್ಟು ಲಾಭ ಬರುತ್ತದೆ ಎಂಬ ಆಧಾರದಲ್ಲೇ ಸ್ಥಾಪಿಸಲು ಹೋಗಿ ಆ ಆದಾಯ ಬರಲು ಪಡಬೇಕಾದ ಶ್ರಮದ ಬಗ್ಗೆ ಅಧ್ಯಯನ ಮಾಡದೇ ಒಮ್ಮೆಗೆ ಉದ್ಯಮ ಮಾಡಿ ನಿರೀಕ್ಷಿತ ಆದಾಯ ಗಳಿಸಲಾಗದೇ ಸೋತು ನೆಲಕಚ್ಚುತ್ತಾರೆ. ಯಾರಾದರೂ ಹೀಗೆ ಕುರಿ ಸಾಕಿ ಲಕ್ಷ ಲಕ್ಷ ಸಂಪಾದನೆ ಮಾಡಲಿಚ್ಚಿಸುವವರು ಒಂದು ಆರು ತಿಂಗಳ ಕಾಲ ಈ ಕುರಿಗಾಹಿ ಯುವಕನ ಜೊತೆಯಲ್ಲಿ ಇದ್ದು ಕುರಿ ಕಾದು ತರಬೇತಾಗಿ ನಂತರ ಕುರಿ ಸಾಕಿ ವರ್ಷಕ್ಕೆ ಇಪ್ಪತ್ತೈದು ಲಕ್ಷ ದುಡಿಯುವ ಕನಸು ಕಾಣಲಿ…‌

ಹೀಗೆ ಕುರಿ ಕೋಳಿ ಡೈರಿ ಫಾರ್ಮ್ ಮಾಡಿ ಲಕ್ಷ ಕೋಟಿ ದುಡಿಯಲು ಹೋಗಿ ಸೋತವರು ಲಕ್ಷ ಲಕ್ಷ ಜನರು. ಡೈರಿ ಫಾರ್ಮ್ ನಲ್ಲಿ ತಿಂಗಳಲ್ಲಿ ಲಕ್ಷ ಸಂಪಾದನೆ… ಎನ್ನುವ ಶೀರ್ಷಿಕೆಯ ಲೇಖನ ಯೂಟ್ಯೂಬ್ ಅವತರಣಿಕೆಯನ್ನು ನೋಡಿ ಪ್ರಭಾವಿತರಾಗಿ ಲಕ್ಷಾಂತರ ಸಾಲ ಮಾಡಿ ಕೊಟ್ಟಿಗೆ ಕಟ್ಟಿ ಲಕ್ಷ ಲಕ್ಷ ಕೊಟ್ಟು ಹಸುಗಳನ್ನು ಎಲ್ಲಿಂದಲೋ ತಂದು ಸಾಕಿ ಕೈ ಸೋತವರು ಸಾವಿರಾರು ಜನ ಇದ್ದಾರೆ.

“ಲಕ್ಷ” ಬಹಳ ದೊಡ್ಡ ಲಕ್ಷ್ಯ ಕೊಡಬೇಕು. ಅದೊಂದು ದೊಡ್ಡ ನಿರಂತರವಾದ ತಪಸ್ಸು… ‌ನಮ್ಮ ಯುವ ಪೀಳಿಗೆ ಯಾವುದಾದರೂ ಉದ್ಯಮ ಸ್ಥಾಪಿಸುವ ಮೊದಲು ಆ ಸಂಬಂಧಿಸಿದ ಉದ್ಯಮ ದಲ್ಲಿ ಚೆನ್ನಾಗಿ ತರಬೇತಾಗಿ ಪ್ರಯೋಗಿಕ ಜ್ಞಾನ ಪಡೆದು ಕೊಳ್ಳಬೇಕು . ಸುಮ್ಮನೆ ವಾಟ್ಸಾಪ್, ಯೂಟ್ಯೂಬ್, ಫೇಸ್ ಬುಕ್ ಪತ್ರಿಕೆ ಟಿವಿ ಮಾದ್ಯಮದ “ಲಕ್ಷ ಲಕ್ಷ ಸಂಪಾದನೆ” ಯ ವರದಿ ನೋಡಿ ಟೋಪಿ ಬೀಳಬಾರದು. ಕುರಿ, ದನ, ಕೋಳಿ, ಹಂದಿ ಯಾವುದೇ ಪ್ರಾಣಿ ಪಕ್ಷಿಗಳ ಸಾಕಣೆ ಖಂಡಿತವಾಗಿಯೂ ನೋಡಿ ಕೇಳಿದಷ್ಟು ಸುಲಭವಲ್ಲ. ಯುವಕರು ಎಚ್ಚರಿಕೆಯಿಂದ ಪ್ರೇರಣೆ ಪಡೆಯಲಿ…

ಬರಹ :
ಪ್ರಬಂಧ ಅಂಬುತೀರ್ಥ
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಪ್ರಬಂಧ ಅಂಬುತೀರ್ಥ

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಅಂಬುತೀರ್ಥದ ನಿವಾಸಿ ಪ್ರಬಂಧ. ಬಿ ಎ. ವಿಧ್ಯಾಭ್ಯಾಸ ಮುಗಿಸಿದ ಮೇಲೆ ಕೃಷಿ ಕೆಲಸ. ಕಥೆ , ಪರಿಸರ, ಕೃಷಿ , ವಿಜ್ಞಾನ , ಸಾಮಾಜಿಕ ಮತ್ತು ರಾಜಕೀಯ ವಿಚಾರಗಳ ಲೇಖನ ಬರೆಯುವ ಹವ್ಯಾಸ. ಮಲೆನಾಡು ಗಿಡ್ಡ ಗೋ ತಳಿ ಸಂವರ್ಧನೆ, ಜೀರಿಗೆ ಮೆಣಸಿನಕಾಯಿ ಬೆಳೆಯ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಣೆ. ಮಲೆನಾಡು ಗಿಡ್ಡ ತಳಿ ಹಸುಗಳ ಸೆಗಣಿಯನ್ನು ಮೌಲ್ಯ ವರ್ಧನೆ ಮಾಡಿ ಕೃಷಿ ಸ್ನೇಹಿ ಸೂಕ್ಷ್ಮಾಣು ಜೀವಿಯುಕ್ತ ಸಾವಯವ ಗೊಬ್ಬರ ತಯಾರಿಸಿ ಮಾರಾಟ ಮಾಡುವ ಕೆಲಸವನ್ನೂ ಮಾಡುತ್ತಿದ್ದಾರೆ.

ಇದನ್ನೂ ಓದಿ

ಹವಾಮಾನ ವರದಿ | 24-03-2026 | ಕರ್ನಾಟಕದಲ್ಲಿ ಮತ್ತೆ ಮಳೆ ಅಲರ್ಟ್‌ | ಈ ದಿನದಿಂದ ಮಳೆ ವ್ಯಾಪ್ತಿ ಹೆಚ್ಚಳ ಸಾಧ್ಯತೆ..!
March 24, 2026
12:24 PM
by: ಸಾಯಿಶೇಖರ್ ಕರಿಕಳ
ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ 4 ಸಾವಿರ ಹುದ್ದೆಗಳು ಖಾಲಿ – ಆರಂಭದಲ್ಲಿ 1 ಸಾವಿರ ಹುದ್ದೆಗಳ ಭರ್ತಿಗೆ ಕ್ರಮ
March 24, 2026
7:12 AM
by: ಮಿರರ್‌ ಡೆಸ್ಕ್
ಇನ್ಸ್ಪೈರ್ ಅವಾರ್ಡ್ ಗೆ ಅಜ್ಜಾವರ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಆಯ್ಕೆ
March 23, 2026
10:18 PM
by: ದ ರೂರಲ್ ಮಿರರ್.ಕಾಂ
ನೆಮ್ಮದಿಗಾಗಿ ಬದುಕಿ; ಹಣ-ಅಧಿಕಾರಕ್ಕಾಗಿ ಅಲ್ಲ
March 23, 2026
9:12 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror