ಸಾಹಿತಿ ಡಾ. ಎಂ.ಬಿ. ಮರಕಿಣಿ ನಿಧನ

August 18, 2021
3:32 PM
ಸಾಹಿತಿ, ವೈದ್ಯ, ಸಮಾಜಸೇವಕ ಡಾ. ಎಂ.ಬಿ. ಮರಕಿಣಿ( 90 ವರ್ಷ) ನಿಧನರಾಗಿದ್ದಾರೆ.  ಪುತ್ರ ನಾರಾಯಣ ಭಟ್‌, ಮಗಳು ಗೌರಿ, ಅಳಿಯ ಸಂಜಯ ಹಾವನೂರು, ಸೊಸೆ ಗಾಯತ್ರಿ ಮತ್ತು ಕುಟುಂಬದವರನ್ನು ಅಗಲಿದ್ದಾರೆ. ಅವರ ಪತ್ನಿ, ಲೇಖಕಿ ಡಾ. ಸಬಿತಾ ಮರಕಿಣಿ ಈ ಮೊದಲೇ ಮೃತರಾಗಿದ್ದರು.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಕೇಪು ಗ್ರಾಮದ ಮರಕಿಣಿಯಲ್ಲಿ ಜನಿಸಿದ್ದ ಮಹಾಲಿಂಗ ಭಟ್‌ ಅವರು ಮೈಸೂರು ಮೆಡಿಕಲ್ ಕಾಲೇಜಿನಲ್ಲಿ 1955ರಲ್ಲಿ ವೈದ್ಯ ಪದವಿ ಪಡೆದು ಕೆಲ ಕಾಲ ಸ್ವಗ್ರಾಮದಲ್ಲಿ ವೈದ್ಯರಾಗಿ ಕಾರ‌್ಯನಿರ್ವಹಿಸಿದರು. ಅನಂತರ ಜರ್ಮನಿಯಲ್ಲಿ ಉನ್ನತ ಶಿಕ್ಷಣನ್ನೂ  ಪಡೆದಿದ್ದರು.  ಪತ್ನಿ ಡಾ. ಸಬಿತಾ ಭಟ್ ಅವರೊಂದಿಗೆ 1972ರಲ್ಲಿ ಭೀಕರ ಬರಗಾಲದ ಸಂದರ್ಭ ಕಲಬುರ್ಗಿಯ ಚಿತ್ತಾಪುರದಲ್ಲಿ  ಆಸ್ಪತ್ರೆ, ಶಾಲೆಗಳನ್ನು ಸ್ಥಾಪಿಸುವುದರಲ್ಲಿ ಕೈಜೋಡಿಸಿದ್ದರು.
1977ರಲ್ಲಿ ಆಂಧ್ರಪ್ರದೇಶ ಭೀಕರ ಚಂಡಮಾರುತಕ್ಕೆ ತುತ್ತಾದಾಗ ಅವೇರ್‌ ಸಂಸ್ಥೆಯೊಂದಿಗೆ ವೈದ್ಯಕೀಯ ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿದ್ದರು. ಗೋದಾವರಿ ನದಿಯ ಎರಡೂ ದಡದ ಜನರಿಗಾಗಿ ಬೋಟ್‌ನಲ್ಲಿ ಚಿಕಿತ್ಸಾ ಕೇಂದ್ರ ತೆರೆದು ಬೋಟ್ ಡಾಕ್ಟರ್ ಎಂದೇ ಪ್ರಸಿದ್ಧರಾಗಿದ್ದರು. 1980ರಲ್ಲಿ ಮೈಸೂರಿನ ಎಚ್ ಡಿ   ಕೋಟೆಯಲ್ಲಿ ಮೈರಾಡದ ಸಹಯೋಗದಿಂದ ಆದಿವಾಸಿಗಳಿಗೆ ಆರೋಗ್ಯ ಸೌಲಭ್ಯ ಒದಗಿಸಿಕೊಟ್ಟಿದ್ದರು. ಬಿಹಾರದ ನಕ್ಸಲ್‌ ಪೀಡಿತ ಪ್ರದೇಶದಲ್ಲೂ ಆರೋಗ್ಯ ಕಾರ್ಯಕರ್ತರಾಗಿ ಕಾರ‌್ಯನಿರ್ವಹಿಸಿದ್ದರು. ಉಡುಪಿಯಲ್ಲಿ 2002ರಲ್ಲಿ ಉಡುಪಿ  ಏಡ್ಸ್ ಪೀಡಿತರಿಗಾಗಿ ಸಲಹೆ, ಚಿಕಿತ್ಸೆ ಮತ್ತು ಸಾರ್ವಜನಿಕರಿಗೆ ಮಾಹಿತಿ, ಅರಿವು ಕೇಂದ್ರವನ್ನು ಸ್ಥಾಪಿಸಿದ್ದರು.
ಕರ್ನಾಟಕ ಸರ್ಕಾರವು 2004ರಲ್ಲಿ ರಾಜ್ಯಪ್ರಶಸ್ತಿಯನ್ನು ನೀಡಿ ಇವರನ್ನು ಗೌರವಿಸಿತ್ತು. ದಿವಂಗತ ಕವಿ ಕಲ್ಮಡ್ಕ ರಾಮಚಂದ್ರರ ಸಹಪಾಠಿಯಾಗಿದ್ದ ಮರಕಿಣಿಯವರು, ರಾಮಚಂದ್ರರ ಬಿದ್ದಗರಿ ಕವನಸಂಕಲನವನ್ನು ಕೆಲವು ವರ್ಷಗಳ ಹಿಂದೆ ಪುತ್ತೂರಿನ ಕರ್ನಾಟಕ ಸಂಘದ ಮೂಲಕ ಮರುಮುದ್ರಣ ಮಾಡಿಸಿದ್ದರು.
1960ರಲ್ಲೇ ಪುತ್ತೂರಿನಿಂದ ವಿಚಾರವಾಣಿ ಸಾಹಿತ್ಯ ಪತ್ರಿಕೆ ಹೊರತಂದು, ಯುವ ಲೇಖಕರನ್ನು ಪ್ರೋತ್ಸಾಹಿಸಿದ್ದರು. ಅವರು ಸಂಪಾದಿಸಿದ್ದ ಕಥಾ ಸಂಕಲನ “ಮುಂಗಾರು ಮುಗಿಲು” ಯುವ ಕಥೆಗಾರನ್ನು ಬೆಳಕಿಗೆ ತಂದ ಅತ್ಯುತ್ತಮ ಪುಸ್ತಕವಾಗಿತ್ತು. ವಿವಿಧ ಪತ್ರಿಕೆಗಳಲ್ಲಿ ಅವರ ಲೇಖನಗಳು ಪ್ರಕಟವಾಗಿವೆ.  ಸುಧಾ ವಾರಪತ್ರಿಕೆಯಲ್ಲಿ ಪತ್ನಿ ಸಬಿತಾ ಅವರೊಂದಿಗೆ ಅಜ್ಜಿ ಮದ್ದು ಅಂಕಣ ಬರೆಯುತ್ತಿದ್ದರು. ಅವರ “ವಿಷಚಿಕಿತ್ಸೆ” ಅತ್ಯುತ್ತಮ ವಿಜ್ಞಾನ ಪರಿಕರ ಪುಸ್ತಕ. ಡಾ. ಭಟ್ ಅವರ ಇತರ ಪುಸ್ತಕಗಳು- “ಅಲೆಮಾರಿಯ ಆತ್ಮಕಥೆ”, “ಬರಗಾಲದಲ್ಲಿ ಧನ್ವಂತರಿ”, “ಮೊಗಲಾಯರ ಮಧ್ಯೆ ಧನ್ವಂತರಿ”, ಹೈದರಾಬಾದ್ ವಿಮೋಚನಾ ಚಳವಳಿಯ ಅಂತಿಮ ಅಧ್ಯಾಯದ ನೆನಪು “ನೂರು ಘಟನೆ ಸಾವಿರ ನೆನಪು”.
ಮೂರ್ನಾಲ್ಕು ವರ್ಷಗಳ ಹಿಂದೆ ಅವರು ಅಮೇರಿಕಕ್ಕೆ ತೆರಳಿ, ಅಲ್ಲೇ ತಮ್ಮ ಪುತ್ರಿಯೊಂದಿಗೆ ವಾಸವಿದ್ದರು. ಅವರ ಅಂತ್ಯಕ್ರಿಯೆ ಅಮೇರಿಕದಲ್ಲೇ ನಡೆಯಲಿದೆ ಎಂದು ಅವರ ಕುಟುಂಬ ವರ್ಗದವರು ತಿಳಿಸಿದ್ದಾರೆ.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಅತಿವೃಷ್ಟಿ, ಬರ, ಹೀಟ್‌ ವೇವ್‌ಗಳಿಗೆ ಯಾರು ಕಾರಣ? ಐಐಟಿ ದೆಹಲಿ ಅಧ್ಯಯನದಿಂದ ಕುತೂಹಲಕಾರಿ ಮಾಹಿತಿ!
June 18, 2026
10:15 AM
by: ದ ರೂರಲ್ ಮಿರರ್.ಕಾಂ
ದಕ್ಷಿಣ ಕನ್ನಡಕ್ಕೆ ಕೈಗಾರಿಕಾ ಬಲ : ಗಂಜಿಮಠ ಪ್ಲಾಸ್ಟಿಕ್ ಪಾರ್ಕ್ ಕಾಮಗಾರಿ ಪರಿಶೀಲಿಸಿದ ಸಂಸದ ಬ್ರಿಜೇಶ್ ಚೌಟ
June 17, 2026
8:43 PM
by: ದ ರೂರಲ್ ಮಿರರ್.ಕಾಂ
Gen Z ಮತದಾರರತ್ತ ಬಿಜೆಪಿ ಕಣ್ಣು- 18-25 ವಯೋಮಾನದ ಯುವಕರಿಗಾಗಿ ‘ತರುಣ ಮೋರ್ಚಾ’ ರಚನೆಗೆ ಚಿಂತನೆ
June 17, 2026
8:21 PM
by: ದ ರೂರಲ್ ಮಿರರ್.ಕಾಂ
ವಿಯೆಟ್ನಾಂನಲ್ಲಿ ಅಡಿಕೆ ಬೆಲೆ ಕುಸಿತ – ಚೀನಾದ ಬೇಡಿಕೆ ಇಳಿಕೆಯಿಂದ ರೈತರಿಗೆ ಸಂಕಷ್ಟ! – ಭಾರತದ ಅಡಿಕೆ ಮಾರುಕಟ್ಟೆಗೆ ಏನು ಎಚ್ಚರಿಕೆ..?
June 17, 2026
7:50 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror