ದೇವಸ್ಥಾನಗಳ ಪ್ರವೇಶಕ್ಕೆ ವಸ್ತ್ರ ಸಂಹಿತೆ | ದೇವರೆಂಬುದು ನಂಬಿಕೆ, ಬಟ್ಟೆ ಎಂಬುದು ಹೊದಿಕೆ |

February 7, 2024
12:49 PM

ದೇವಸ್ಥಾನಗಳ(Temple) ಪ್ರವೇಶಕ್ಕೆ ವಸ್ತ್ರ ಸಂಹಿತೆ(Dress code)….. ದೇವರಿಗಾಗಿಯೋ(God), ಮನುಷ್ಯರಿಗಾಗಿಯೋ(Human), ಧರ್ಮಕ್ಕಾಗಿಯೋ(Religion), ಪ್ರದರ್ಶನಕ್ಕಾಗಿಯೋ(Exhibition), ರಾಜಕೀಯಕ್ಕಾಗಿಯೋ(Political), ಶಿಸ್ತಿಗಾಗಿಯೋ, ಭಕ್ತಿಗಾಗಿಯೋ, ಸೌಜನ್ಯಕ್ಕಾಗಿಯೋ, ಸಂಪ್ರದಾಯಕ್ಕಾಗಿಯೋ…..

ಇದು, ನಾಗರಿಕತೆಯೇ, ಮೌಡ್ಯವೇ, ಸಂಸ್ಕೃತಿಯೇ, ವೈಚಾರಿಕತೆಯೇ, ಆಚರಣೆಯೇ, ಆಶಯವೇ, ಅನವಶ್ಯಕ ಒತ್ತಡವೇ,….
ಇದನ್ನು ಒಪ್ಪಿಕೊಳ್ಳಬೇಕೆ, ತಿರಸ್ಕರಿಸಬೇಕೆ, ನಿರ್ಲಕ್ಷಿಸಬೇಕೆ, ಪ್ರತಿಭಟಿಸಬೇಕೆ,… ಚರ್ಚೆ ಮಾಡುವುದಾದರೆ ಎಲ್ಲವನ್ನೂ ಸಮರ್ಥಿಸಿಕೊಳ್ಳಬಹುದು ಅಥವಾ ವಿರೋಧಿಸಬಹುದು ಅಥವಾ ವ್ಯಂಗ್ಯ ಮಾಡಬಹುದು. ಆದರೆ ವಾಸ್ತವ‌ ಏನಿರಬಹುದು…..

Advertisement

ಪ್ರಕೃತಿಯ ಮೂಲದಿಂದ ಯೋಚಿಸಿದಾಗ : ಮೂಲತಃ ಮನುಷ್ಯ ಬೆತ್ತಲೆ ಜೀವಿ ಎಲ್ಲಾ ಪ್ರಾಣಿ ಪಕ್ಷಿ ಕೀಟಗಳ ರೀತಿಯಲ್ಲಿ. ಆದರೆ ಮುಂದೆ ಬಹುಶಃ ಸೂಕ್ಷ್ಮ ಅಂಗಗಳ ‌ಸುರಕ್ಷತೆಯ ಕಾರಣಕ್ಕಾಗಿ ಎಲೆ ತೊಗಟೆ ನಾರುಗಳನ್ನು ರಕ್ಷಣೆಗಾಗಿ ಉಪಯೋಗಿಸಿರಬೇಕು. ಮುಂದೆ ಪ್ರಾಣಿಗಳ ಚರ್ಮ ಅತ್ಯಂತ ಬಲಿಷ್ಠ ಉಡುಗೆಯಾಯಿತು. ಋತುಮಾನಗಳ ಹವಾಮಾನ ವೈಪರೀತ್ಯಗಳನ್ನು ತಡೆಯಲು ಬಹುದೊಡ್ಡ ಕವಚವಾಯಿತು.

ಮುಂದೆ ಹತ್ತಿ, ನಾರು, ಉಣ್ಣೆ, ಪ್ಲಾಸ್ಟಿಕ್ ಮುಂತಾದ ಕಚ್ಚಾ ವಸ್ತುಗಳನ್ನು ಉಪಯೋಗಿಸಿ ವಿವಿಧ ಗುಣಮಟ್ಟದ ಬಟ್ಟೆಗಳ ಸಂಶೋಧನೆಯಾಯಿತು. ಇಂದು ಟೆಕ್ಸ್ ಟೈಲ್ ಉದ್ಯಮ ವಿಶ್ವದ ಕೆಲವೇ ಬೃಹತ್ ಉದ್ಯಮಗಳಲ್ಲಿ ಒಂದಾಗಿದೆ. ಕೋಟ್ಯಾಂತರ ಜನರಿಗೆ ಉದ್ಯೋಗ ನೀಡಿದೆ. ಇದು ವಿಶ್ವದ ಎಲ್ಲಾ ನಾಗರಿಕತೆಗಳಲ್ಲಿ ಉಡುಗೆ ಬೆಳೆದು ಬಂದ ರೀತಿ…

Advertisement

ದಪ್ಪ ಬಟ್ಟೆ, ತೆಳುವಾದ ಬಟ್ಟೆ, ನುಣುಪಾದ ಬಟ್ಟೆ, ಚಳಿಗಾಲಕ್ಕೊಂದು ರೀತಿ, ಮಳೆಗಾಲಕ್ಕೊಂದು ರೀತಿ, ಬೇಸಿಗೆಗೊಂದು ರೀತಿ, ಹಾಗೆಯೇ ವೃತ್ತಿಗೊಂದು ರೀತಿ ಉದಾಹರಣೆ ವೈದ್ಯರು, ಚಾಲಕರು, ಕಾರ್ಮಿಕರು, ವಕೀಲರು, ಸೈನಿಕರು ಹೀಗೆ ನಾನಾ ರೀತಿಯ ಬಟ್ಟೆಗಳ ಗುರುತಿಸುವಿಕೆ, ನಂತರ ಉದ್ಯೋಗದ ಅನುಕೂಲತೆ ಅವಲಂಬಿಸಿ ವಿವಿಧ ಮಾದರಿಗಳು, ತದನಂತರ ಬಿಳಿ, ಕೆಂಪು, ಕೇಸರಿ, ನೀಲಿ, ಹಸಿರು ಮುಂತಾದ ಬಣ್ಣಗಳ ಗುರುತಿಸುವಿಕೆ, ಆ ಬಣ್ಣಗಳು ವಿವಿಧ ಜಾತಿ ಧರ್ಮ ಭಾಷೆ ಪಕ್ಷ ಪ್ರದೇಶ ಸಿದ್ದಾಂತಗಳ ಪ್ರತಿಬಿಂಬಿಸುವಿಕೆ, ಕೊನೆಗೆ ಬಣ್ಣದ ಬಾವುಟಗಳಿಗಾಗಿಯೇ ಹೊಡೆದಾಟ, ರಕ್ತಪಾತ ದ್ವೇಷ ಅಸೂಯೆ,….

ಇನ್ನೂ ಮುಂದೆ, ಫ್ಯಾಷನ್ ಡಿಸೈನರ್ ಎಂಬ ಶಿಕ್ಷಣ, ಕಲೆ ಮತ್ತು ಮನೋರಂಜನೆಯೇ ಮತ್ತೊಂದು ದೊಡ್ಡ ಉದ್ಯಮವಾಯಿತು. ಸಿನೆಮಾ, ಧಾರವಾಹಿ, ಮಾಡೆಲಿಂಗ್ ಮುಂತಾದ ಕ್ಷೇತ್ರಗಳಲ್ಲಿ ಉಡುಪೇ ಒಂದು ದೊಡ್ಡ ವ್ಯವಹಾರ ಮತ್ತು ಆಕರ್ಷಣೆಯಾಯಿತು. ಅದರ ಅನುಕರಣೆ ಜನಸಾಮಾನ್ಯರಿಗೆ ತಲುಪಿ ಮದುವೆ ಮುಂತಾದ ಸಮಾರಂಭಗಳು ಬಟ್ಟೆ ಉದ್ಯಮ ಮತ್ತಷ್ಟು ಬೃಹತ್ ಆಗಿ ಬೆಳೆಯಲು ಕಾರಣವಾಯಿತು…..

Advertisement

ಈ ಬೆಳವಣಿಗೆಯವರೆಗೂ ಯಾವುದೇ ಸಮಸ್ಯೆ ಇರಲಿಲ್ಲ. ಆದರೆ ನಿಜವಾದ ಬಟ್ಟೆ ಅಥವಾ ಉಡುಪಿನ‌ ಸಮಸ್ಯೆ ಭಾರತದಲ್ಲಿ ಪ್ರಾರಂಭವಾಗಿದ್ದು ಮಹಿಳಾ ಸ್ವಾತಂತ್ರ್ಯ ಮತ್ತು ಸಮಾನತೆ ಹೆಚ್ಚು ಸಾರ್ವಜನಿಕವಾದ ನಂತರ. ಮಹಿಳೆಯರು ದೇಹ ಪ್ರದರ್ಶನದ ಉಡುಗೆಗಳನ್ನು ತೊಡುವುದು ಸಾಂಪ್ರದಾಯಿಕ ಮನಸ್ಥಿತಿಯವರಿಗೆ ನಿಧಾನವಾಗಿ ಕಸಿವಿಸಿಯಾಗತೊಡಗಿತು. ಒಂದು ಕಾಲದಲ್ಲಿ ಅನೇಕ ಸಮುದಾಯಗಳಲ್ಲಿ ಹೆಣ್ಣು ಮಕ್ಕಳಿಗೆ ಮೇಲುಡುಗೆ ತೊಡುವುದೇ ನಿಷೇಧಿಸಲಾಗಿತ್ತು. ಆದರೆ ಧಾರ್ಮಿಕ ನಂಬುಗೆಗಳು ಧಾರ್ಮಿಕ ನಾಯಕರುಗಳ ಹಿಡಿತಕ್ಕೆ ಬಂದ ನಂತರ ಹೆಣ್ಣಿನ ಉಡುಗೆ ತೊಡುಗೆಗಳಲ್ಲಿ ನಿಯಂತ್ರಣ ಹೇರಲಾಯಿತು.

ಈ ಆಧುನಿಕ ಕಾಲದಲ್ಲಿ ‌ಮತ್ತೊಂದು ವಿಚಿತ್ರ ವೈರುದ್ಯವು ಇದೆ. ಸಿನಿಮಾಗಳಲ್ಲಿ ಕ್ಯಾಬರೆ, ತುಂಡುಡುಗೆ, ನರ್ತನ ಮುಂತಾದ ದೃಶ್ಯಗಳನ್ನು ಆಸ್ವಾದಿಸುವ, ಮಹಿಳೆಯರನ್ನು ಭೋಗದ ವಸ್ತುವಿನಂತೆ ಉಪಯೋಗಿಸುವ ಕ್ರಮವನ್ನು ಮನರಂಜನೆ ನೆಪದಲ್ಲಿ ಪ್ರಶ್ನಿಸದ ಜನ ಸಹಜ ಕೌಟುಂಬಿಕ ವ್ಯವಸ್ಥೆಯಲ್ಲಿ ಅದನ್ನು ಅಷ್ಟಾಗಿ ಇಷ್ಟಪಡುವುದಿಲ್ಲ. ಈ ದ್ವಂದ್ವ ಈಗಲೂ ಇದೆ…

Advertisement

ಈಗ ದೇವಸ್ಥಾನಗಳಲ್ಲಿ ವಸ್ತ್ರ ಸಂಹಿತೆಯ ವಿಷಯಕ್ಕೆ ಬರುವುದಾದರೆ ಮೊದಲಿನಿಂದಲೂ ಭಕ್ತಿ ಭಾವದ ಕಾರಣಕ್ಕಾಗಿ ಸಾಮಾನ್ಯವಾಗಿ ಎಲ್ಲಾ ದೇವಸ್ಥಾನಗಳಲ್ಲಿ ಸಾಂಪ್ರದಾಯಿಕ ಉಡುಗೆಗಳಿಗೇ ಪ್ರಾಧಾನ್ಯತೆ ಇತ್ತು. ಕೆಲವು ಕಡೆ ಗಂಡಸರಿಗೆ ಮೇಲುಡುಗೆ ತೆಗೆಯುವಂತೆ ಹೇಳಲಾಗುತ್ತದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ರಾಜಕೀಯ ಕಾರಣಕ್ಕಾಗಿ ವಸ್ತ್ರ ಸಂಹಿತೆ ಒಂದು ವಿವಾದವಾಗಿದೆ.

ಈ ಮೇಲಿನ ಎಲ್ಲಾ ‌ಅನುಭವಗಳ ಆಧಾರದ ಮೇಲೆ ದೇವಸ್ಥಾನಗಳಲ್ಲಿ ವಸ್ತ್ರ ಸಂಹಿತೆ ಬೇಕೆ ಎಂಬ ಪ್ರಶ್ನೆಗೆ ಉತ್ತರ ಹುಡುಕಬೇಕಿದೆ. ಎಂದಿನಂತೆ ಸಂಪ್ರದಾಯವಾದಿಗಳು ಶೀಲ ಅಶ್ಲೀಲದ ಕಾರಣ ಹೇಳಿ ವಸ್ತ್ರ ಸಂಹಿತೆ ಬೇಕೆ ಬೇಕು ಎಂದು ಹೇಳಿದರೆ, ಪ್ರಗತಿಪರರು ಊಟ ಬಟ್ಟೆ ಅವರವರ ಸ್ವಾತಂತ್ರ್ಯ, ಅಶ್ಲೀಲ ಇರುವುದು ಬಟ್ಟೆಯಲ್ಲಿ ಅಲ್ಲ, ಮನುಷ್ಯರ ಮನಸ್ಸಿನಲ್ಲಿ ಎಂದು ಇದನ್ನು ವಿರೋಧಿಸುತ್ತಾರೆ….

Advertisement

ಕೊನೆಯದಾಗಿ,
ದೇವರೆಂಬುದು ನಂಬಿಕೆ,
ಬಟ್ಟೆ ಎಂಬುದು ಹೊದಿಕೆ,
ದೇವಸ್ಥಾನವೆಂಬುದು ವೇದಿಕೆ, ನಿಮಗೆ ದೇವರ ಮೇಲೆ ನಂಬಿಕೆ ಇದ್ದು, ದೇವಸ್ಥಾನ ಮಾತ್ರವೇ ಆತನ ವಾಸಸ್ಥಾನವಲ್ಲ, ಆತ ಸರ್ವಾಂತರ್ಯಾಮಿ, ಸರ್ವ ಶಕ್ತ ಎಂಬ ಭರವಸೆ ನಿಮಗಿದ್ದರೆ ಇತರರ ಬಟ್ಟೆಯ ಬಗ್ಗೆ ತಲೆಕೆಡಿಸಿಕೊಳ್ಳದೇ, ನಿಮ್ಮ ‌ಬಟ್ಟೆ ಮತ್ತು ಭಕ್ತಿ ಮಾತ್ರ ನಿಮ್ಮಷ್ಟದಂತೆ ನಿರ್ವಹಿಸಿ. ಉಳಿದದ್ದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಆರಾಮವಾಗಿರಿ. ಕಡಿಮೆ ಬಟ್ಟೆ ತೊಟ್ಟ ಮಾತ್ರಕ್ಕೆ ಅವರು ಕೆಟ್ಟವರು ಅಲ್ಲ ಅಥವಾ ಅಶ್ಲೀಲವೂ ಅಲ್ಲ ಹಾಗೆಯೇ ಪೂರ್ತಿ ಬಟ್ಟೆ ತೊಟ್ಟ ಮಾತ್ರಕ್ಕೆ ಅವರು ಒಳ್ಳೆಯವರು ಎಂದೂ ಪರಿಗಣಿಸಬೇಕಾಗಿಲ್ಲ. ಅಸಲಿಗೆ ಬಟ್ಟೆ ಒಂದು ಮಾನದಂಡವೇ ಅಲ್ಲ….

ಸಮಯ, ಸಂದರ್ಭ, ಮನಸ್ಥಿತಿ, ಪರಿಸ್ಥಿತಿ ನೋಡಿ ಜನರೇ ವೈಯಕ್ತಿಕವಾಗಿ ನಿರ್ಧರಿಸಲಿ. ಯಾರೋ ಅಪರೂಪಕ್ಕೆ ಸ್ವಲ್ಪ ವಿಚಿತ್ರ ಬಟ್ಟೆ ಹಾಕಿದರೆ ನಿರ್ಲಕ್ಷಿಸಿ. ಅದನ್ನು ವಿವಾದ ಮಾಡುವ ಅವಶ್ಯಕತೆ ಇಲ್ಲ ಮತ್ತು ಎಲ್ಲರೂ ಹಾಗೆಯೇ ವಿಚಿತ್ರ ಬಟ್ಟೆ ಹಾಕುವುದಾದರೇ ಅದೇ ಜನರ ಆಧುನಿಕ ವೇಷಭೂಷಣ ಎಂದು ಭಾವಿಸಬೇಕಾಗುತ್ತದೆ. ಆದ್ದರಿಂದ ವಸ್ತ್ರ ಸಂಹಿತೆ ಒಂದು ವಿವಾದವೇ ಅಲ್ಲ. ಅದಕ್ಕಿಂತ ಪರಿಸರ ನಾಶ ಮತ್ತು ಬೆಲೆ ಏರಿಕೆ ಇಂದಿನ ಅತ್ಯಂತ ಮಹತ್ವದ ವಿಷಯಗಳು. ದಯವಿಟ್ಟು ಆ ಬಗ್ಗೆ ಯೋಚಿಸಿ ಮತ್ತು ಚರ್ಚಿಸಿ……

Advertisement

ಬರಹ – ವಿವೇಕಾನಂದ ಎಚ್ ಕೆ,
9844013068………

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹಲಸಿನ ಹಾಲಿನಿಂದ ವಸಡು ರೋಗಕ್ಕೆ ಚಿಕಿತ್ಸೆ…? ಬ್ರೆಜಿಲ್‌ ವಿಜ್ಞಾನಿಗಳ ಹೊಸ ಸಂಶೋಧನೆ ಆಶಾಭರವಸೆ ಮೂಡಿಸಿದೆ
June 28, 2026
10:21 AM
by: ದ ರೂರಲ್ ಮಿರರ್.ಕಾಂ
ಅಡಿಕೆಗೆ ಬ್ಯಾನ್ ಅಲ್ಲ… ಕಲಬೆರಕೆ ಅಡಿಕೆಗೆ ಬ್ಯಾನ್ ಆಗಬೇಕು..! – ಮಲೆನಾಡಿನ ಅಡಿಕೆಗೆ ಪ್ರತ್ಯೇಕ ಮಾರುಕಟ್ಟೆ ಅಗತ್ಯ
June 28, 2026
7:21 AM
by: ಪ್ರಬಂಧ ಅಂಬುತೀರ್ಥ
ಬೆಲೆ ಕುಸಿದಾಗ ನಷ್ಟ ಬೇಡ – ರಂಬುಟಾನ್‌ ಫ್ರೀಜ್‌ ಮಾಡಿ, ನಂತರ ಮಾರಾಟ ಮಾಡಿ..! ಕೃಷಿಕನ ಹೊಸ ಪ್ರಯೋಗ
June 28, 2026
6:57 AM
by: ದ ರೂರಲ್ ಮಿರರ್.ಕಾಂ
ಚೆಸ್‌ ಬೋರ್ಡ್‌ನ ಆಚೆಗೂ ಗೆಲುವು – ಕಾಪುವಿನಲ್ಲಿ ಚೆಸ್ ಹಬ್ಬ, ವಿದ್ಯಾರ್ಥಿಗಳ ಕನಸುಗಳಿಗೆ ವೇದಿಕೆ | ಗ್ರಾಮೀಣ ಕರ್ನಾಟಕದಲ್ಲಿಯೂ ಬೆಳೆಯುತ್ತಿರುವ ಹೊಸ ಕ್ರೀಡಾ ಸಂಸ್ಕೃತಿ
June 27, 2026
11:20 PM
by: ವಿಶೇಷ ಪ್ರತಿನಿಧಿ

You cannot copy content of this page - Copyright -The Rural Mirror