ನಿಯಮಗಳು ಇದ್ದರೂ ಅಭದ್ರತೆ ಕಟ್ಟಿಟ್ಟದ್ದು….!

March 11, 2025
7:51 AM
ನಿಯಮಗಳು ಎಷ್ಟೇ ಇದ್ದರೂ ಹಲವು ಸಂದರ್ಭದಲ್ಲಿ ಅಭದ್ರತೆಯೂ ಅಷ್ಟೇ ಇದೆ...ಸಹಕಾರಿ ಸಂಘದಲ್ಲಿ ಇದೆಲ್ಲಾ ಬಹಳ ಎಚ್ಚರಿಕೆ ವಹಿಸಬೇಕಾದ ಅಂಶವಾಗಿದೆ.

ಶ್ರೀಯುತ ಸಾಲಪ್ಪನವರು ಸ್ಥಳೀಯ ಸಹಕಾರ ಸಂಘದಲ್ಲಿನ ಗೌರವಾನ್ವಿತ ಸಾಲಗಾರರು.ಕಷ್ಟ ಪಟ್ಟು ಅಲ್ಲಿನ ತನ್ನ ಸಾಲದ ಖಾತೆಗಳನ್ನೆಲ್ಲಾ ಸುಸ್ಥಿತಿಯಲ್ಲಿಟ್ಡು ಕೊಂಡಿದ್ದಾರೆ. ಸಾಲಕ್ಕೆ ಭದ್ರತೆಯಾಗಿ ತನ್ನ ಜಮೀನನ್ನು ಸಹಕಾರ ಸಂಘಕ್ಕೆ ಕಾನೂನುಬದ್ಧ ಅಡಮಾನವನ್ನೂ ಮಾಡಿಕೊಂಡಿದ್ದಾರೆ. ಅವರ ಜಮೀನಿನ ಪಹಣಿ ಪತ್ರಿಕೆಯಲ್ಲಿ ಇವರ ಸಾಲದ ವಿವರಗಳೂ ದಾಖಲಾಗಿವೆ.………ಮುಂದೆ ಓದಿ……..

ಸಾಲಪ್ಪನವರಿಗೆ ಹತ್ತಿರದ ಪಟ್ಟಣದಲ್ಲಿದ್ದ ಖಾಸಾಗಿ ಹಣಕಾಸು ಸಂಸ್ಥೆಯೂ ಸಾಲಕೊಡುತ್ತದೆ ಅಂತ ಗೊತ್ತಾಯ್ತು.ಹಾಗಾಗಿ ಹೋಗಿ ಸಾಲ ಕೇಳಿದರು.ಅವರು ಇವರ ಪಹಣಿ ಪತ್ರಿಕೆಯನ್ನು ಪರಿಶೀಲಿಸಿ ಅದರ ಆಧಾರದ ಮೇಲೆ ಐವತ್ತು ಸಾವಿರ ರುಪಾಯಿ ಸಾಲಕೊಟ್ಟರು.ಸಾಲಪ್ಪನವರಿಗೆ ಮರೆತು ಹೋಗಿ ಸಾಲ ತೀರಿಸಲಿಲ್ಲ.ವರ್ಷಗಳು ಒಂದಷ್ಟು ಉರುಳಿದವು. ಇದೀಗ ಆ ಖಾಸಾಗಿ ಹಣಕಾಸು ಸಂಸ್ಥೆಯಿಂದ ಸಾಲ ವಸೂಲಾತಿಗಾಗಿ ಜನ ಸಾಲಪ್ಪನವರ ಮನೆಗೆ ಬಂದರು.ಏನೇನೋ ಮಾತುಕತೆಯಾಯ್ತೇ ಹೊರತು ಸಾಲಪ್ಪನವರು ಸಾಲ ತೀರಿಸಲಿಲ್ಲ.ಖಾಸಾಗಿ ಹಣಕಾಸು ಸಂಸ್ಥೆ ಕೊಟ್ಟ ಐವತ್ತು ಸಾವಿರ ರುಪಾಯಿ ಸಾಲಕ್ಕೆ ಬಡ್ಡಿ ಲೆಕ್ಕಾಚಾರ ಎಲ್ಲ ಮಾಡಿ ಒಂದು ಲಕ್ಷ ರುಪಾಯಿಯ ವಸೂಲಾತಿಗಾಗಿ ಪ್ರಕರಣ ದಾಖಲಿಸಿದರು.

ಸಹಕಾರ ಸಂಘ ಮೊದಲು ಸಾಲ ಕೊಟ್ಟದ್ದು.ಭೂಮಿ ಅಡಮಾನ ಪಡಕೊಂಡದ್ದು.ಆದ್ದರಿಂದ ನಿಯಮ ಕೇಳ ಹೊರಟರೆ ಜಮೀನಿನ ಮೇಲಿನ ಪ್ರಥಮ ಅಧಿಕಾರ ಸಹಕಾರ ಸಂಘದ್ದು.ಆದರೆ ಅಲ್ಲಿನ ಸಾಲದ ಲೆಕ್ಕಾಚಾರ ಸುಸ್ಥಿತಿಯಲ್ಲಿ ಇತ್ತು.ಸುಸ್ತಿದಾರ ಆದದ್ದು ಖಾಸಾಗಿ ಸಹಕಾರ ಸಂಘದಲ್ಲಿ.
ಯಾರಿಗೂ ತನ್ನಿಷ್ಟ ಬಂದಂತೇ ಸಾಲ ವಸೂಲಾತಿಗಾಗಿ ಜಮೀನನ್ನು ಹರಾಜು ಹಾಕಲು ಸಾಧ್ಯ ಆಗುವುದಿಲ್ಲ.ಅದಕ್ಕಾಗಿ ಸಂಬಂಧಿತ ಇಲಾಖೆಗಳಿಂದ ಅನುಮತಿ ಪಡೆದುಕೊಳ್ಳ ಬೇಕು.ಅನುಮತಿ ಕೊಡ ಬೇಕಾದವರು ಜಮೀನಿನ ಮೇಲೆ ಯಾರ್ಯಾರೆಲ್ಲ ಸಾಲ ಕೊಟ್ಟಿದ್ದಾರೆ ಅಂತ ದಾಖಲೆಗಳ ಪರಿಶೀಲನೆ ಮಾಡಬೇಕು .ಮತ್ತು ಸಂಬಂಧಿತರಿಗೆಲ್ಲಾ ಈ ಬಗ್ಗೆ ತಿಳುವಳಿಕೆ ಕೊಡಬೇಕು.

ಆದರೆ, ಅವರಿಗೂ ಮರೆವು ಬಂತು.ಸಹಕಾರ ಸಂಘದ ಸಾಲದ ಉಲ್ಲೇಖ ಮಾಡದೇ ಜಮೀನು ಹರಾಜಿಗೆ ಅನುಮತಿ ಕೊಟ್ಟರು.ಮುಂದಿನ ಹಂತದಲ್ಲಿ ಖಾಸಾಗಿ ಸಹಕಾರ ಸಂಘ ಹರಾಜಿನ ಬಗ್ಗೆ ಪತ್ರಿಕೆಯಲ್ಲಿ ಜಾಹೀರಾತು ಕೊಡಬೇಕು.ಸಹಕಾರ ಸಂಘ ಇದ್ದ ಊರಿಗೆ ಬರದೇ ಇರುವ ಜಿಲ್ಲಾ ಮಟ್ಟದ ಪತ್ರಿಕೆಯೊಂದರಲ್ಲಿ ಈ ಬಗ್ಗೆ ಜಾಹೀರಾತೂ ಪ್ರಕಟಗೊಂಡಿತು.ಸಹಜವಾಗಿಯೇ ಸಹಕಾರ ಸಂಘದ ಗಮನಕ್ಕೆ ಪತ್ರಿಕಾ ಜಾಹೀರಾತು ಬಂದಿಲ್ಲ.
ಸ್ಥಳೀಯ ಗ್ರಾಮ ಪಂಚಾಯತಿಯಲ್ಲಿ ಹರಾಜಿನ ಬಗ್ಗೆ ಪ್ರಕಟಣೆ ನೀಡಬೇಕು.ಸಹಕಾರ ಸಂಘದಿಂದ ಗ್ರಾಮ‌ ಪಂಚಾಯತಿಗೆ ಹೋಗಬೇಕಾದ ಅಗತ್ಯವೇ ಬರಲಿಲ್ಲ.ಗ್ರಾಮಪಂಚಾಯತಿಗೆ ಹೋದವರು ಈ ವಿಷಯ ಸಹಕಾರ ಸಂಘಕ್ಕೂ ತಿಳಿಸ ಬೇಕು ಅಂತ ತಿಳಿದುಕೊಳ್ಳಲಿಲ್ಲ. ಹರಾಜಿನ ದಿನ ಜಮೀನು ಖರೀದಿಗೆ ಯಾರೂ ಬರಲಿಲ್ಲ.ಆದ್ದರಿಂದ ಸ್ವತಹ ಖಾಸಾಗಿ ಸಹಕಾರ ಸಂಘವೇ ಜಮೀನನ್ನು ಒಂದು ಲಕ್ಷ ರುಪಾಯಿಗೆ ಪಡೆದುಕೊಂಡಿತು.

ಭೂ ಒಡೆತನದ ಪರಿವರ್ತನೆಗೆ ಬೇಕಿರುವ ಎಲ್ಲ ಕೆಲಸಗಳೂ ಸಹಕಾರ ಸಂಘದ ಗಮನಕ್ಕೆ ಬರದೆಯೇ ಪೂರ್ಣ ಗೊಂಡಿತು. ಇದೀಗ ಖಾಸಾಗಿ ಸಹಕಾರ ಸಂಘದ ಆಡಳಿತ ಮಂಡಳಿ ಸಹಕಾರ ಸಂಘವನ್ನು ಸಂಪರ್ಕಿಸಿ ಘಟಿಸಿದ ಘಟನೆಗಳ ವಿವರ ನೀಡಿತು. ಸಹಕಾರ ಸಂಘದಲ್ಲಿ ಶ್ರೀಯುತ ಸಾಲಪ್ಪನವರು ಹೊಂದಿದ್ದ ಸಾಲದ ಹೊಣೆಗಾರಿಕೆ ಯಾರದ್ದು ಎಂಬ ಪ್ರಶ್ನೆ ಬಂತು.ಖಾಸಾಗಿ ಹಣಕಾಸು ಸಂಸ್ಥೆ ಸಂಧಾನ ಸೂತ್ರ ಮುಂದೆ ಇಟ್ಟಿತು.ಸಹಕಾರ ಸಂಘ ಎರಡು ಲಕ್ಷ ರುಪಾಯಿ ಕೊಟ್ಟು ಖಾಸಾಗಿ ಹಣಕಾಸು ಸಂಸ್ಥೆಯಿಂದ ಜಮೀನು ಖರೀದಿಸಿದರಾಯ್ತು ಅಂತ. ನಮ್ಮ ಗಮನಕ್ಕೆ ಬರದೇ ,ನಾವು ಪ್ರಥಮ ಹಕ್ಕು ಹೊಂದಿದ್ದ ಜಮೀನಿನ ಹರಾಜು ಹೇಗಾಯ್ತು ಮತ್ತು‌ ಒಡೆತನದ ಪರಿವರ್ತನೆ ಹೇಗಾಯ್ತು ಎಂಬ ಸಹಕಾರ ಸಂಘದ ಪ್ರಶ್ನೆಗೆ ಉತ್ತರ ಇಲ್ಲ.

ವಕೀಲರನ್ನು ಸಂಪರ್ಕಿಸಲಾಯ್ತು.ಆಗಷ್ಟೇ ಗಮನಕ್ಕೆ ಬಂದದ್ದು ಒಂದು ಎಡವಟ್ಟು.ಸಾಲಪ್ಪನವರಿಗೆ ಸಹಕಾರ ಸಂಘದಲ್ಲಿ ,ಎಲ್ಲರಿಗೂ ಇರುವಂತೆ,ಅಲ್ಪಾವಧಿ ಬೆಳೆ ಸಾಲ ಇತ್ತು.ಮತ್ತು ಪ್ರತಿ ವರ್ಷವೂ ನಿಯಮಾನುಸಾರ ಅದರ renewal ಕೂಡಾ ಆಗುತ್ತಿತ್ತು.renewal ಅಂದರೆ ತಾಂತ್ರಿಕವಾಗಿ ಹಳೆ ಸಾಲವನ್ನು ಚುಕ್ತಾ ಮಾಡುವುದು ಮತ್ತು ಹೊಸದಾಗಿ ಸಾಲ ಕೊಡುವುದು.ಈ ಹೊಸ ಸಾಲ ಕೊಡಬೇಕಾದಾಗ ಇತರೆಡೆ ಸಾಲಪ್ಪನವರಿಗೆ ಸುಸ್ತಿಯಾದ ಸಾಲ ಇಲ್ಲ ಎಂಬುದನ್ನು ಸಹಕಾರ ಸಂಘ ಖಾತ್ರಿಗೊಳಿಸಿಕೊಳ್ಳ ಬೇಕಾಗಿತ್ತು.ಅದಕ್ಕಾಗಿ no due certificate ಕೇಳಬೇಕಾಗಿತ್ತು.ಅದನ್ನು ಪಡೆದುಕೊಂಡಿರಲಿಲ್ಲ.

ಒಂದೆಡೆ ಸುಸ್ತಿದಾರನಾಗಿದ್ದವನಿಗೆ ನೀವು ಹೇಗೆ ಹೊಸ ಸಾಲ ಮಂಜೂರು ಮಾಡಿದಿರಿ ಎಂಬ ಪ್ರಶ್ನೆಗೆ ಉತ್ತರಿಸಲು ಅಸಾಧ್ಯವಾಗಿತ್ತು.ಜೊತೆಗೆ ನಮ್ಮ ನ್ಯಾಯಾಲಯಗಳು ಇಂತಹ ಪ್ರಕರಣ ಇತ್ಯರ್ಥ ಗೊಳಿಸಲು ತೆಗೆದುಕೊಳ್ಳುವ ಸಮಯ ದಶಕಗಳ ಕಾಲ ಇರ್ತದೆ ಎಂಬುದನ್ನೂ ವಕೀಲರು ಗಮನಕ್ಕೆ ತಂದರು.

ಸಹಕಾರ ಸಂಘಕ್ಕೆ ನಷ್ಟವಾಗದಂತೆ ಪ್ರಕರಣ ಮುಗಿಸಲು ಹೇಗೆ ಸಾಧ್ಯ ಎಂಬುದೇ ಅರ್ಥವಾಗದ ವಿಷಯ.ಕೊನೆಗೆ ಜಾಮೀನುದಾರರ ಮೇಲೆ ಒತ್ತಡ ಹೇರುವ ತಂತ್ರ ಬಳಸಬೇಕಾಯ್ತು.ಒಂದಷ್ಟು “ಯೋಗಿ ಮಾದರಿ” ಕ್ರಮಗಳನ್ಬೂ ಅನುಸರಿಸಲಾಯ್ತು.ಇವೆಲ್ಲದರ ಪರಿಣಾಮವಾಗಿ ಶ್ರೀಯುತ ಸಾಲಪ್ಪನವರು ಖಾಸಾಗಿ ಸಹಕಾರ ಸಂಘದಲ್ಲಿ ಸುಸ್ತಿಯಾಗಿದ್ದ ತಮ್ಮ ಸಾಲವನ್ನು ,ಸಂಧಾನದ ಮುಖಾಂತರ, ಮುಗಿಸಿದರು.

ಇತ್ತೀಚೆಗೆ ಒಂದು ಪ್ರಶ್ನೆ ಕೇಳಿದೆ.ಒಂದು ಕಡೆ ಸುಸ್ತಿದಾರ ಆಗಿದ್ದಾತನನ್ನು ಇನ್ನೊಂದೆಡೆಯ ಸಹಕಾರ ಸಂಘದಲ್ಲೂ ಸುಸ್ತಿದಾರನಂತೆಯೇ ನಡೆಸಿಕೊಳ್ಳ ಬೇಕಾ ಅಂತ.ನಡೆಸಿಕೊಳ್ಳಲೇ ಬೇಕಾಗ್ತದೆ ಎಂಬುದನ್ನು ತಿಳಿಸಲಿಕ್ಕಾಗಿ ಈ ನೈಜ ಘಟನೆಯನ್ನು ಪ್ರಸ್ತುತ ಪಡಿಸಿದ್ದು.ಇಲ್ಲದೇ ಹೋದರೆ ಭವಿಷ್ಯದಲ್ಲಿ ಸಹಕಾರ ಸಂಘ ನಷ್ಟ ಅನುಭವಿಸುವುದು ಬಹುತೇಕ ಖಾತರಿ.

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Rural Mirror Special | Subscribe Our Channel

ಲೇಖಕರ ಪರಿಚಯ​

ರಮೇಶ್‌ ದೇಲಂಪಾಡಿ

ರಮೇಶ್‌ ದೇಲಂಪಾಡಿ ಅವರು ಕೃಷಿಕರು. ಪ್ರಯೋಗಶೀಲ ಕೃಷಿಕರಾಗಿ ಗುರುತಿಸಿಕೊಂಡಿದ್ದಾರೆ. ಅಡಿಕೆ, ತೆಂಗು, ತಾಳೆ, ರಬ್ಬರ್‌ ಇವರ ಪ್ರಮುಖ ಕೃಷಿ. ಅಡಿಕೆ ಬೇರುಹುಳ, ಅಡಿಕೆ ಹಳದಿ ಎಲೆರೋಗ ಸೇರಿದಂತೆ ಕೃಷಿ ಸಂಬಂಧಿತ ವಿಚಾರಗಳಲ್ಲಿ ಹೆಚ್ಚು ಆಸಕ್ತಿಯಿಂದ ಕೆಲಸ ಮಾಡುತ್ತಿದ್ದಾರೆ.

ಇದನ್ನೂ ಓದಿ

ಕರಾವಳಿ ಜಿಲ್ಲೆಯಲ್ಲಿ ಬಿಸಿಗಾಳಿ | ಮುನ್ನೆಚ್ಚರಿಕೆ ವಹಿಸಲು ಸೂಚನೆ
March 11, 2025
9:47 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 11-03-2025 | ಮೋಡದ ವಾತಾವರಣ – ಕೆಲವು ಕಡೆ ತುಂತುರು ಮಳೆ ನಿರೀಕ್ಷೆ | ಮಾ.17 ರಿಂದ ಗುಡುಗು ಸಹಿತ ಮಳೆ ಸಾಧ್ಯತೆ |
March 11, 2025
2:39 PM
by: ಸಾಯಿಶೇಖರ್ ಕರಿಕಳ
ಕುಂಭಮೇಳದ ಪಯಣ ದೇಶದ ಇಣುಕುನೋಟ | ಭೌತಿಕ ಅಭಿವೃದ್ಧಿಯೊಂದಿಗೆ ಬೌದ್ಧಿಕ ಅಭಿವೃದ್ಧಿ ಕೂಡಾ ವೇಗ ಪಡೆಯಬೇಕಿದೆ |
March 11, 2025
7:00 AM
by: ಟಿ ಆರ್ ಸುರೇಶ್ಚಂದ್ರ ತೊಟ್ಟೆತ್ತೋಡಿ
3 ರಾಶಿಗಳಿಗೆ ಅದೃಷ್ಟ, ರಾಜಯೋಗ ಮತ್ತು ಸಂಪತ್ತಿನ ದೃಷ್ಟಿಯಿಂದ ಅತ್ಯುತ್ತಮ ಸಮಯ
March 11, 2025
6:33 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror