ನೀರಿನ ಕೊರತೆ, ಹೆಚ್ಚುತ್ತಿರುವ ತಾಪಮಾನ ಮತ್ತು ಬದಲಾಗುತ್ತಿರುವ ಮಳೆಯ ಮಾದರಿಗಳ ನಡುವೆ ಭಾರತದಲ್ಲಿ ರೈತರ ಆದಾಯವನ್ನು ಒಂದೇ ಬೆಳೆಯ ಮೇಲೆ ಅವಲಂಬಿಸುವ ಬದಲು ಬೆಳೆ ವೈವಿಧ್ಯೀಕರಣ ಹಾಗೂ ಕೃಷಿ ಸಂಬಂಧಿತ ಇತರ ಚಟುವಟಿಕೆಗಳ ಮೂಲಕ ಹಲವು ಆದಾಯ ಮೂಲಗಳನ್ನು ಸೃಷ್ಟಿಸುವ ಅಗತ್ಯ ಹೆಚ್ಚಾಗಿದೆ. 2026–27ರ ಕೃಷಿ ವರ್ಷದಲ್ಲಿ ಹವಾಮಾನ ವೈಪರೀತ್ಯದ ಅಪಾಯ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಂಪನ್ಮೂಲ ಕಡಿಮೆ ಬಳಸುವ ಬೆಳೆಗಳತ್ತ ಕೃಷಿಯನ್ನು ತಿರುಗಿಸುವ ಅಗತ್ಯವಿದೆ ಎಂದು ಇದೀಗ ಹಲವು ವಿಶ್ಲೇಷಣಾ ವರದಿಗಳು ಹೇಳುತ್ತಿವೆ.
ಭತ್ತ–ಗೋಧಿ ಕೃಷಿಯಿಂದ ಸಂಪನ್ಮೂಲಗಳ ಮೇಲಿನ ಒತ್ತಡ : ಭಾರತದ ಕೃಷಿಯಲ್ಲಿ ಭತ್ತ ಮತ್ತು ಗೋಧಿಯ ಏಕಬೆಳೆ ಪದ್ಧತಿ ಇನ್ನೂ ಪ್ರಬಲವಾಗಿದೆ. ಇವುಗಳಿಗೆ ಹೆಚ್ಚಿನ ಪ್ರಮಾಣದ ನೀರು, ರಸಗೊಬ್ಬರ ಮತ್ತು ಇತರ ಕೃಷಿ ಒಳಸುರಿಗಳು ಬೇಕಾಗುತ್ತವೆ. ಪರಿಣಾಮವಾಗಿ ಅಂತರ್ಜಲದ ಕುಸಿತ, ನೀರಿನ ಮಾಲಿನ್ಯ ಮತ್ತು ಮಣ್ಣಿನ ಗುಣಮಟ್ಟ ಕುಸಿತದಂತಹ ಸಮಸ್ಯೆಗಳು ಹೆಚ್ಚುತ್ತಿವೆ. ಮತ್ತೊಂದೆಡೆ, ಬೇಳೆ ಮತ್ತು ಎಣ್ಣೆಕಾಳುಗಳ ಉತ್ಪಾದನೆ ದೇಶದ ಬೇಡಿಕೆಗೆ ಇನ್ನೂ ಸಾಕಾಗುತ್ತಿಲ್ಲ. ಸಿರಿಧಾನ್ಯಗಳು, ಬೇಳೆಕಾಳುಗಳು ಮತ್ತು ಎಣ್ಣೆಕಾಳುಗಳಂತಹ ಕಡಿಮೆ ಸಂಪನ್ಮೂಲ ಬಳಸುವ ಬೆಳೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುವುದು ಅಗತ್ಯ ಎಂದು ಅಧ್ಯಯನಗಳು ಹೇಳುತ್ತವೆ.
2 ಹೆಕ್ಟೇರ್ಗಿಂತ ಕಡಿಮೆ ಭೂಮಿ ಹೊಂದಿರುವ ರೈತರೇ ಶೇ.89 : 2018–19ರ ಕೃಷಿ ಕುಟುಂಬಗಳ ಪರಿಸ್ಥಿತಿ ಮೌಲ್ಯಮಾಪನದ ಆಧಾರದಲ್ಲಿ, ದೇಶದ ರೈತರ ಪೈಕಿ ಸುಮಾರು ಶೇ.89ರಷ್ಟು ರೈತರು 2 ಹೆಕ್ಟೇರ್ಗಿಂತ ಕಡಿಮೆ ಭೂಮಿ ಹೊಂದಿರುವ ಸಣ್ಣ ಮತ್ತು ಅತಿಸಣ್ಣ ರೈತರು. ಇಂತಹ ರೈತರಿಗೆ ಕೇವಲ ಬೆಳೆ ಕೃಷಿಯಿಂದ ಆದಾಯ ಹೆಚ್ಚಿಸುವ ಅವಕಾಶ ಸೀಮಿತವಾಗಿರುವುದರಿಂದ ಕೃಷಿ ಸಂಬಂಧಿತ ಇತರ ಚಟುವಟಿಕೆಗಳನ್ನು ಸೇರಿಸುವುದು ಪ್ರಮುಖ ಪರಿಹಾರವಾಗಬಹುದು.
ಒಂದೇ ಜಮೀನಿನಿಂದ ಹಲವು ಆದಾಯ ಮೂಲ : ಪಶುಸಂಗೋಪನೆ, ಜೇನು ಸಾಕಣೆ, ಮೀನುಗಾರಿಕೆ ಮತ್ತು ಕೋಳಿ ಸಾಕಣೆಯಂತಹ ಚಟುವಟಿಕೆಗಳು ರೈತರ ಆದಾಯವನ್ನು ವೈವಿಧ್ಯಗೊಳಿಸಬಹುದು. ಸಾಂಪ್ರದಾಯಿಕ ಕೃಷಿಯಲ್ಲಿದ್ದ ಬೆಳೆ–ಜಾನುವಾರು–ಕೋಳಿ ಪರಸ್ಪರ ಅವಲಂಬಿತ ಪದ್ಧತಿಯನ್ನು ಮತ್ತೆ ಬಲಪಡಿಸುವುದರಿಂದ ಕೃಷಿ ತ್ಯಾಜ್ಯವನ್ನು ಮರುಬಳಕೆ ಮಾಡುವುದರ ಜೊತೆಗೆ ಮಣ್ಣಿನ ಆರೋಗ್ಯವನ್ನೂ ಸುಧಾರಿಸಬಹುದು.
ಭತ್ತದ ಜೊತೆ ಮೀನು; ಗದ್ದೆಯ ಬದಿಯಲ್ಲಿ ಹಣ್ಣಿನ ಮರ : ಭತ್ತ–ಮೀನು ಸಂಯೋಜಿತ ಕೃಷಿಯೂ ಮತ್ತೊಂದು ಸಾಧ್ಯತೆ. ಅಧ್ಯಯನಗಳ ಪ್ರಕಾರ, ಇಂಡೋನೇಷ್ಯಾದಲ್ಲಿ ಭತ್ತ–ಮೀನು ಪದ್ಧತಿಯು ಸುಮಾರು ಶೇ.27ರಷ್ಟು ಹೆಚ್ಚಿನ ಆದಾಯ ನೀಡಿದೆ. ಬಾಂಗ್ಲಾದೇಶದ ಅಧ್ಯಯನಗಳಲ್ಲಿ ಇದೇ ವ್ಯವಸ್ಥೆಯಿಂದ ಭತ್ತದ ಇಳುವರಿ ಶೇ.10–26ರಷ್ಟು ಹೆಚ್ಚಿರುವುದು ಕಂಡುಬಂದಿದೆ. ಜಮೀನಿನ ಬದುಗಳಲ್ಲಿ ಹಣ್ಣಿನ ಮರಗಳನ್ನು ಬೆಳೆಸುವುದರಿಂದ ಹೆಚ್ಚುವರಿ ಆದಾಯ ಪಡೆಯಬಹುದು.
ಇದರ ಜೊತೆಗೆ ಜೇನು ಸಾಕಣೆ ಮತ್ತು ಅಣಬೆ ಕೃಷಿಯಂತಹ ಚಟುವಟಿಕೆಗಳನ್ನು ಸಣ್ಣ ರೈತರೂ ಅಳವಡಿಸಿಕೊಳ್ಳಬಹುದು. ವಿಶೇಷವಾಗಿ ಕೃಷಿ ಕೆಲಸ ಕಡಿಮೆ ಇರುವ ಅವಧಿಯಲ್ಲಿ ಇವು ಹೆಚ್ಚುವರಿ ಉದ್ಯೋಗ ಮತ್ತು ಆದಾಯ ನೀಡುವ ಅವಕಾಶ ಹೊಂದಿವೆ.
ರೈತರಿಗೆ ಮಾರುಕಟ್ಟೆ ಸಂಪರ್ಕವೂ ಬೇಕು : ಬೆಳೆ ಬದಲಾವಣೆಯನ್ನು ಮಾತ್ರ ಹೇಳುವುದರಿಂದ ರೈತರ ಆದಾಯ ಹೆಚ್ಚುವುದಿಲ್ಲ. FPOಗಳು ಮತ್ತು ಸ್ವಸಹಾಯ ಗುಂಪುಗಳ ಮೂಲಕ ರೈತರನ್ನು ಮೌಲ್ಯ ಸರಪಳಿಗೆ ನೇರವಾಗಿ ಸಂಪರ್ಕಿಸುವುದು, ಮಾರುಕಟ್ಟೆ ಮೂಲಸೌಕರ್ಯ ಬಲಪಡಿಸುವುದು ಮತ್ತು ಗ್ರಾಮೀಣ ಉದ್ಯೋಗ ಸೃಷ್ಟಿಸುವುದು ಅಗತ್ಯ ಎಂದೂ ಅಧ್ಯಯನ ಹೇಳುತ್ತದೆ.
ಹವಾಮಾನ ಮುನ್ಸೂಚನೆಗಳನ್ನು ಆಧರಿಸಿದ ಮುನ್ನೆಚ್ಚರಿಕೆ ವ್ಯವಸ್ಥೆ, ಬೆಳೆ ಸಲಹೆ, ಬರ–ಬಿಸಿಗಾಳಿಯನ್ನು ಸಹಿಸಬಲ್ಲ ತಳಿಗಳ ಅಭಿವೃದ್ಧಿ ಮತ್ತು ಸಂಶೋಧನಾ ಫಲಿತಾಂಶಗಳನ್ನು ತ್ವರಿತವಾಗಿ ರೈತರ ಜಮೀನಿಗೆ ತಲುಪಿಸುವ ವ್ಯವಸ್ಥೆಯೂ ಅಗತ್ಯವಾಗಿದೆ.
ಭಾರತದ ಕೃಷಿಯ ಮುಂದಿನ ಸವಾಲು ‘ಹೆಚ್ಚು ಉತ್ಪಾದನೆ’ ಮಾತ್ರವಲ್ಲ, ‘ಹೆಚ್ಚು ಸ್ಥಿರ ಆದಾಯ’ ಎನ್ನುವುದನ್ನು ಈ ಅಧ್ಯಯನ ತೋರಿಸುತ್ತದೆ. ಒಂದೇ ಬೆಳೆಯನ್ನು ನಂಬಿದ ರೈತನಿಗೆ ಹವಾಮಾನ, ಬೆಲೆ ಕುಸಿತ ಅಥವಾ ರೋಗ–ಕೀಟದ ಹೊಡೆತ ಬಂದರೆ ಇಡೀ ವರ್ಷದ ಆದಾಯಕ್ಕೆ ಹೊಡೆತ ಬೀಳುತ್ತದೆ. ಆದರೆ ಬಹು ಆದಾಯದ ಮಾದರಿ ಹೆಚ್ಚು ಸುಸ್ಥಿರತೆ ಕಾರಣವಾಗುತ್ತದೆ.
ಇದು ಕರ್ನಾಟಕದಂತಹ ರಾಜ್ಯಗಳಿಗೂ ಇದು ಬಹಳ ಪ್ರಸ್ತುತ. ವಿಶೇಷವಾಗಿ ಅಡಿಕೆ, ತೆಂಗು, ರಬ್ಬರ್ನಂತಹ ದೀರ್ಘಾವಧಿಯ ವಾಣಿಜ್ಯ ಬೆಳೆಗಳ ಪ್ರದೇಶಗಳಲ್ಲೂ ಏಕಬೆಳೆ ಅವಲಂಬನೆ ಕಡಿಮೆ ಮಾಡಿ ಅಂತರಬೆಳೆ ಮತ್ತು ಕೃಷಿ ಸಂಬಂಧಿತ ಆದಾಯ ಮೂಲಗಳನ್ನು ರೂಪಿಸುವುದು ರೈತರ ಹವಾಮಾನ ಮತ್ತು ಮಾರುಕಟ್ಟೆ ಅಪಾಯವನ್ನು ತಗ್ಗಿಸಬಹುದು. ಬರಗಾಲದಂತಹ ಸಂದರ್ಭದಲ್ಲಿ ರಾಜ್ಯದಲ್ಲಿ ಬೇಳೆ ಕಾಳುಗಳ, ಭತ್ತ, ಜೋಳದಂತಹ ಕೃಷಿಯಲ್ಲೂ ನೀರಿಲ್ಲದೆ ಒಣಗುವ ವೇಳೆ ಕಡಿಮೆ ನೀರು ಬಯಸುವ ಬೆಳೆಯತ್ತಲೂ ಗಮನಹರಿಸಬೇಕಿದೆ. ಅಂದರೆ ಬೆಳೆ ವೈವಿಧ್ಯೀಕರಣ ರೈತನಿಗೆ ಬೆಳೆ ಬದಲಾಯಿಸುವ ಸಲಹೆ ಮಾತ್ರವಲ್ಲ; ಆದಾಯದ ಅಪಾಯವನ್ನು ವೈವಿಧ್ಯಗೊಳಿಸುವ ತಂತ್ರವಾಗಬೇಕು.
India needs to diversify farm incomes as water scarcity, rising temperatures and erratic rainfall increase agricultural risks. The analysis recommends shifting from water- and input-intensive rice and wheat towards millets, pulses and oilseeds while expanding allied activities such as livestock, fisheries, poultry, beekeeping and mushroom cultivation.


