#CauveryWater | ರಾಜ್ಯದ ರೈತರು ಹೈರಾಣ | ತಮಿಳುನಾಡಿಗೆ ಭರಪೂರ ನೀರು | ಎಂದು ತೀರುವುದು ಕಾವೇರಿ ನೀರಿನ ಸಮಸ್ಯೆ..?

September 14, 2023
5:29 PM
ಹಿಂದೊಮ್ಮೆ ಹೀಗೇ ತಮಿಳುನಾಡಿಗೆ ನೀರು ಬಿಟ್ಟ ಪರಿಣಾಮ, ಸೆಪ್ಟೆಂಬರ್ ಹೊತ್ತಿಗೆ 64 ಅಡಿಗೆ ಇಳಿದಿದ್ದೂ ಉಂಟು. ನಾಲೆಗಳ ನೀರು ಬಂದ್ ಆಗಿತ್ತು, ಮೈಸೂರಿನ ಕುಡಿಯುವ ನೀರಿಗಾಗಿ ಡ್ಯಾಂನಲ್ಲಿ ಮೋಟಾರ್ ಇಟ್ಟು ಪಂಪ್‌ ಮಾಡೋ ದುಸ್ಥಿತಿ ಎದುರಾಗಿತ್ತು.

ಕೆಆರ್‌ಎಸ್‌ನ ಒಡಲು ಈಗಾಗಲೇ ಬರಿದಾಗಿದೆ. ಬಾಗಿನ ಅರ್ಪಿಸಬೇಕಿದ್ದ ಮುಖ್ಯಮಂತ್ರಿಗೆ ಅರ್ಧ ಡ್ಯಾಂಗೆ ಕೈ ಹಾಕಿದರೂ ನೀರು ಸಿಕ್ತಿಲ್ಲ. ಇಂತಹ ವ್ಯಥೆಯಲ್ಲೂ ನೀರು ಬಿಡಬೇಕೆಂಬುದು ಅನ್ಯಾಯ ಅನ್ನೋದಕ್ಕಿಂತಲೂ ವಾಸ್ತವತೆಯನ್ನು ಸಮಿತಿ, ಪ್ರಾಧಿಕಾರ ಮತ್ತು ಸುಪ್ರೀಂಗೆ ಮುಟ್ಟಿಸೋದರಲ್ಲಿನ ವಿಫಲತೆ ಎದ್ದು ಕಾಣುತ್ತಿದೆ.

ಡ್ಯಾಂ ಕಟ್ಟಿ, ಸಂರಕ್ಷಣೆ ಮಾಡಿರೋ ಕನ್ನಡಿಗರಿಗೇ ಇಲ್ಲವಾದ ನೀರು ತಮಿಳರ ಪಾಲಾಗೋದನ್ನು ಕಂಡ್ರೆ ಎಂಥವರ ಹೊಟ್ಟೆಯಲ್ಲೂ ಬೆಂಕಿ ಬೀಳುತ್ತೆ. ಕಾವೇರಿ ನೀರನ್ನೇ ನಂಬಿರೋ ಮಂಡ್ಯದ ರೈತರು ಎಡದಂಡೆ, ಬಲದಂಡೆ, ವಿಸಿ ನಾಲೆಗಳಿಗೆ ನೀರು ಹರಿಯೋದ್ಯಾವಾಗ ಎಂದು ಕಾದು ಕೂತಿದ್ದಾರೆ. ಸೆಪ್ಟೆಂಬರ್ 8ರಂದು ಕಟ್‌ ನೀರು ಕೊಡ್ತೀವಿ ಅಂದ್ರು, ಭತ್ತದ ನಾಟಿಗೆ ಎಲ್ಲಾ ತಯಾರಿ ಆದಾಗ, 8ರಂದು ಆಗಲ್ಲ ಸೆ. 23ರಂದು ಕೊಡ್ತೀವಿ ಅಂದಿದ್ದಾರೆ. ಸರ್ಕಾರ, ಅಧಿಕಾರಿಗಳು ಯೋಚನೆ ಮಾಡಿ ನೀರಿ ಬಿಡೋವರೆಗೂ ಪೈರು ಹಾಗೇ ಉಳಿಯುತ್ತಾ… ಇಂಥಾ ಸಾಮಾನ್ಯ ಸಮಸ್ಯೆ ಆಳೋರಿಗೆ ಯಾಕೆ ಕಾಣ್ತಿಲ್ಲ?  ಹಿಂದೊಮ್ಮೆ ಹೀಗೇ ತಮಿಳುನಾಡಿಗೆ ನೀರು ಬಿಟ್ಟ ಪರಿಣಾಮ, ಸೆಪ್ಟೆಂಬರ್ ಹೊತ್ತಿಗೆ 64 ಅಡಿಗೆ ಇಳಿದಿದ್ದೂ ಉಂಟು. ನಾಲೆಗಳ ನೀರು ಬಂದ್ ಆಗಿತ್ತು, ಮೈಸೂರಿನ ಕುಡಿಯುವ ನೀರಿಗಾಗಿ ಡ್ಯಾಂನಲ್ಲಿ ಮೋಟಾರ್ ಇಟ್ಟು ಪಂಪ್‌ ಮಾಡೋ ದುಸ್ಥಿತಿ ಎದುರಾಗಿತ್ತು. ಅಂತಹಾ ಸ್ಥಿತಿ ಬರಬಾರದು ಅಂದ್ರೆ, ಈಗಲೇ ಮುಂಜಾಗ್ರತೆ ಬೇಕೇಬೇಕು.

ಒಂದು ಕಡೆ ಮಳೆ ಇಲ್ಲದೆ ಬರಗಾಲ, ಇನ್ನೊಂದ್ಕಡೆ ಇರೋ ನೀರೂ ಖಾಲಿ. ಒಟ್ಟಿನಲ್ಲಿ ಊರಿಗೆ ಉಪಕಾರಿ ಮನೆಗೆ ಮಾರಿ ಅನ್ನೋ ಥರಾ ಆಗಿದೆ ನಮ್ಮ ಸರ್ಕಾರದ ನಿಲುವು, ನೀತಿ. ಒಂದು ಗಟ್ಟಿ ನಿರ್ಧಾರ ಕೈಗೊಳ್ಳೋದಕ್ಕೆ 135 ಶಾಸಕರ ಬಲ ಇರೋ ಸರ್ಕಾರಕ್ಕೂ ಯಾಕಿಷ್ಟು ಚಿಂತೆ ಅನ್ನೋದೇ ಅನ್ನದಾತರ ಯಕ್ಷಪ್ರಶ್ನೆ. ಎಸ್. ಬಂಗಾರಪ್ಪನವರು ಸಿಎಂ ಆಗಿದ್ದಾಗ ನೀರು ಬೀಡೋದಿಲ್ಲ ಎಂಬ ಗಟ್ಟಿ ನಿರ್ಧಾರ ಮಾಡಿದ ಹಾಗೆ, ಈ ಕಾಂಗ್ರೆಸ್ಸಿಗರ ‘ಕೈ’ನಲ್ಲೂ ಯಾಕೆ ಆಗ್ತಿಲ್ಲ ಅನ್ನೋದಕ್ಕೆ ನೂರೆಂಟು ಅನುಮಾನಗಳು ಎದುರಾಗ್ತವೆ.

ಲೋಕಸಭೆ ಚುನಾವಣೆಗಾಗಿ ಮೈತ್ರಿಕೂಟ ಪಕ್ಷವಾದ DMK ಸಿಎಂ ಎಂ ಕೆ ಸ್ಟಾಲಿನ್‌ ಓಲೈಕೆ, ವಿಶ್ವಾಸ ಗಳಿಸೋದಕ್ಕೆ ಕನ್ನಡಿಗರ ಅಸ್ಮಿತೆ, ಸ್ವಾಭಿಮಾನ, ಸ್ವಂತಿಕೆಯನ್ನು ಬೆಂಕಿಗೆ ಹಾಕಿ ಬಲಿಪಶು ಮಾಡುವುದು ಎಷ್ಟು ಸರಿ? ಹೀಗೆ ಕನ್ನಡಿಗರ ಒಡಲು ಖಾಲಿ ಮಾಡಿ ತನ್ನ ಒಡಲು ತುಂಬಿಕೊಳ್ಳುವ ತಮಿಳುನಾಡಿನ ಹುನ್ನಾರ ಬೇರೆಯದ್ದೇ ಇದೆ. ಮಂಡ್ಯದ ಜನರು ಮುಂಗಾರು ಬೆಳೆಯೊಂದಕ್ಕೇ ಕೆಆರ್‌‌ಎಸ್‌ನ ನೀರು ಅವಲಂಬಿಸಿದ್ದಾರೆ. ಆದರೆ, ಕಿರಿದಾದ ಕೆಆರ್‌ಎಸ್‌ನಿಂದ ವಿಶಾಲವಾದ ಮೆಟ್ಟೂರು ಡ್ಯಾಂಗೆ ಹೋಗುವ ನೀರು ತಮಿಳುನಾಡಿನಲ್ಲಿ ಎರಡು ಬೆಳೆಗಳಿಗೆ ಅನುಕೂಲವಾಗುತ್ತೆ.

ಮತ್ತೊಂದು ಪ್ರಮುಖ ವಿಚಾರ ಎಲ್ಲರೂ ತಿಳಿಯಲೇಬೇಕು. ಕರ್ನಾಟಕದಲ್ಲಿ ಮುಂಗಾರು ಮಳೆಯಷ್ಟೇ ಕೃಷಿಗೆ ಪೂರಕ. ಆದರೆ, ತಮಿಳುನಾಡಿನಲ್ಲಿ ಮುಂಗಾರು ಮಳೆ, ನಾವು ಕೆಆರ್‌ಎಸ್‌ನಿಂದ ಹರಿಸೋ ನೀರು ಅಷ್ಟೇ ಅಲ್ಲ, ಹಿಂಗಾರು ಮಳೆಯಿಂದಲೂ ಸಿಗೋ ನೀರು ಕೂಡ ತಮಿಳುನಾಡು ಕೃಷಿಗೆ ಪೂರಕ. ಸಾಂಬಾ ಬೆಳೆ ಬೆಳೆಯೋ ಕಾರಣಕ್ಕಾಗೇ ತಮಿಳುನಾಡಿನ ಈ ಕುತಂತ್ರ ಅನ್ನೋದು ಎಲ್ಲರಿಗೂ ಗೊತ್ತು, ಆದರೂ ಪದೇ ಪದೇ ಅನ್ಯಾಯ ಆಗೋದು ಕರ್ನಾಟಕಕ್ಕೆ, ಕನ್ನಡಿಗರಿಗೆ.

ಕರ್ನಾಟಕ ಮತ್ತು ತಮಿಳುನಾಡಿನ ಈ ಕಾವೇರಿ ಸಮಸ್ಯೆಗೆ ಪರಿಹಾರವೊಂದೇ ಮೇಕೆದಾಟು ಡ್ಯಾಂ ಕಟ್ಟೋದು. ನೀರಿನ ಅಭಾವ ಎದುರಾಗೋ ಇಂಥಾ ದಿನಗಳಲ್ಲಿ ಅನುಕೂಲ ಆಗುತ್ತೆ ಅನ್ನೋದು ಕರ್ನಾಟಕದ ವಾದ. ಆದರೆ, ಅದಕ್ಕೂ ತಕರಾರು ತೆಗೆದು ಅಡ್ಡಗಾಲು ಹಾಕ್ತಿದೆ ತಮಿಳುನಾಡು. ಹೀಗಾಗಿ ಕರ್ನಾಟಕ ಸರ್ಕಾರದ ಹೋರಾಟ ನಿಲ್ಲಬಾರದು, ಸಂಸದರೂ ದನಿಗೂಡಿಸಬೇಕು, ವಾಸ್ತವತೆ ಎಲ್ಲಾ ಕಡೆ ಅನಾವರಣ ಆಗಬೇಕು, ಎರಡೂ ರಾಜ್ಯಗಳ ಡ್ಯಾಂಗಳಿಗೆ ಹೋಗಿ ಇಂಚಿಂಚೂ ನೀರಿನ ಪರಿಶೀಲನೆ ಆಗ್ಬೇಕು. ಅದಕ್ಕಿಂತಲೂ ಹೆಚ್ಚಾಗಿ ‘ವಸುದೈವ ಕುಟುಂಬಕಂ’ ಎಂಬ ಮನೋಭಾವನೆ ಮೂಡಬೇಕು. ಆಗ ಮಾತ್ರ ಕಾವೇರಿಯಂಥಾ ‘ಜಲಬಾಧೆ’ಗೆ ಶಾಶ್ವತ ಮದ್ದು ಸಿಗೋದು..

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಆಮದು ಕಳಪೆ ಅಡಿಕೆ ಮಿಶ್ರಣದ ಎಚ್ಚರಿಕೆ- ಬೆಳೆಗಾರರಿಗೆ ಕ್ಯಾಂಪ್ಕೊ ಮನವಿ
July 21, 2026
11:55 PM
by: ದ ರೂರಲ್ ಮಿರರ್.ಕಾಂ
ಅಡಿಕೆ ರೋಗ ಸಂಕಷ್ಟಕ್ಕೆ ಸಂಸತ್ತಿನಲ್ಲಿ ಧ್ವನಿ : ನಿಯಮ 377ರಡಿ ಕ್ಯಾ. ಬ್ರಿಜೇಶ್ ಚೌಟ ಒತ್ತಾಯ
July 20, 2026
10:59 PM
by: ದ ರೂರಲ್ ಮಿರರ್.ಕಾಂ
ರಾಜ್ಯದಲ್ಲಿ ಬರದ ಛಾಯೆ | 178 ತಾಲ್ಲೂಕುಗಳಲ್ಲಿ ತೀವ್ರ ಮಳೆ ಕೊರತೆ, ಜಲಾಶಯಗಳ ನೀರಿನ ಮಟ್ಟ ಶೇ.40ಕ್ಕೆ ಕುಸಿತ
July 19, 2026
10:17 PM
by: ದ ರೂರಲ್ ಮಿರರ್.ಕಾಂ
ಪುತ್ತೂರಿಗೆ ಪುತ್ತಿಲ? ಪುತ್ತೂರಿನ ರಾಜಕೀಯದ ಹೊಸ ವ್ಯಾಕರಣ
July 19, 2026
9:41 PM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ

You cannot copy content of this page - Copyright -The Rural Mirror