ಮುಂಗಾರು ಆರ್ಭಟಿಸುತ್ತಿದ್ದಂತೆ ಬೆಟ್ಟ ಗುಡ್ಡಗಳಲ್ಲಿ ಭೂಕುಸಿತ ಉಂಟಾಗುತ್ತಿದೆ. ಉತ್ತರ ಕನ್ನಡದ ಶಿರೂರು , ಕೇರಳದ ವಯನಾಡು ಪ್ರಕರಣ ಬೆನ್ನಲ್ಲೇ ಶಿರಾಡಿ ಘಾಟಿಯಲ್ಲೂ ಈವರೆಗೆ 6 ಬಾರಿ ಕುಸಿತ ಕಂಡಿದೆ. ಇದೀಗ ಚಾರ್ಮಾಡಿ ಘಾಟಿಯಲ್ಲಿ ಕೂಡ ಇದೇ ಭೀತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಕಾಫಿನಾಡಿನಲ್ಲೂ ಜಿಲ್ಲಾಡಳಿತ ಹೈ ಅಲರ್ಟ್ ಆಗಿದೆ. ಚಾರ್ಮಾಡಿ ಘಾಟ್ ಆರಂಭದ ಸ್ಥಳವಾದ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಚೆಕ್ ಪೋಸ್ಟ್ ಬಳಿ ತಂಡವನ್ನು ನಿಯೋಜಿಸಿದೆ.
ನಿರಂತರ ಧಾರಾಕಾರ ಮಳೆಯಿಂದ ಚಿಕ್ಕಮಗಳೂರು-ಮಂಗಳೂರಿಗೆ ಸಂಪರ್ಕ ಕಲ್ಪಿಸುವ ಬೆಟ್ಟಗುಡ್ಡಗಳ ಮಾರ್ಗ ರಾಷ್ಟ್ರೀಯ ಹೆದ್ದಾರಿ 173 ರಲ್ಲಿ ಯಾವ ಕ್ಷಣದಲ್ಲಿ ಬೇಕಾದರೂ ಯಾವುದೇ ರೀತಿಯ ಅನಾಹುತ ಸಂಭವಿಸುವ ಸಾಧ್ಯತೆ ಇರುವುರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲಾಡಳಿತ ಈ ನಿರ್ಧಾರ ಕೈಗೊಂಡಿದೆ. ಡಿಆರ್ ವ್ಯಾನ್ನಲ್ಲಿ ಯಾವಾಗಲೂ ಓರ್ವ ಅಧಿಕಾರಿ ಸೇರಿ 7-8 ಸಿಬ್ಬಂದಿ ಇರುತ್ತಾರೆ. ಒಂದು ವೇಳೆ ಭಾರೀ ಮಳೆಯಿಂದ ಚಾರ್ಮಾಡಿ ಘಾಟಿಯಲ್ಲಿ ಏನಾದರೂ ಅನಾಹುತ ಸಂಭವಿಸದರೆ ತಕ್ಷಣ ಅಲ್ಲಿನವರ ಸಹಾಯಕ್ಕೆ ಪೊಲೀಸರು ಅಲರ್ಟ್ ಅಗಲಿದ್ದಾರೆ. ಈ ಕಾರಣಕ್ಕೆ ಕೊಟ್ಟಿಗೆಹಾರದಲ್ಲೇ ಒಂದು ವ್ಯಾನ್ ನಿಯೋಜಿಸಿದ್ದಾರೆ.
ಈ ಮಾರ್ಗ ಬೆಟ್ಟ-ಗುಡ್ಡಗಳ ನಡುವೆ 22 ಕಿ.ಮೀ. ಸಾಗಬೇಕಾಗಿದ್ದು, ಅತ್ಯಂತ ಅಪಾಯಕಾರಿಯಾಗಿದೆ. 2019 ರಿಂದಲೂ ಪ್ರತಿ ವರ್ಷ ಚಾರ್ಮಾಡಿ ಘಾಟಿ ಕುಸಿತಕ್ಕೊಳಗಾಗುತ್ತಲೇ ಇದೆ. ಚಾರ್ಮಾಡಿ ಘಾಟಿಯ ಒಂದು ಬದಿ ಬೆಟ್ಟ-ಗುಡ್ಡಗಳಿಂದ ಕೂಡಿದ್ರೆ ಮತ್ತೊಂದು ಬದಿ ಸಾವಿರಾರು ಅಡಿ ಪ್ರಪಾತ. ಹೀಗಾಗಿ ಇಲ್ಲಿ ಪೊಲೀಸರು ಯಾವಾಗಲೂ ಸರ್ವ ಸನ್ನದ್ಧರಾಗಿದ್ದಾರೆ.
ಕೇರಳದ ವಯನಾಡು ದುರಂತದ ಬಳಿಕ ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಆತಂಕ ಮನೆಮಾಡಿದೆ. ಶಿರಾಡಿಘಾಟ್ ರಸ್ತೆಯ ಸಂಚಾರ ಕೂಡ ಡೋಲಾಯಮಾನವಾಗಿರುವ ಹಿನ್ನಲೆ ಚಾರ್ಮಾಟಿ ಘಾಟಿಯಲ್ಲಿ ಚಾಲಕರು ಭಯದಿಂದಲೇ ವಾಹನ ಚಲಾಯಿಸುವಂತಾಗಿದೆ. ಚಾರ್ಮಾಡಿ ಘಾಟಿಯಲ್ಲಿ 2019ರಲ್ಲಿ ಭಾರೀ ಭೂ ಕುಸಿತದಿಂದ 6 ತಿಂಗಳು ಬಂದ್ ಆಗಿತ್ತು. ಈ ವರ್ಷ ಸುರಿಯುತ್ತಿರುವ ಭಾರೀ ಮಳೆಗೆ ಮರಗಳು, ಗುಡ್ಡಗಳಲ್ಲಿ ಭೂ ಕುಸಿತ ಕೂಡ ಉಂಟಾಗುತ್ತಿದೆ. 2019ರಲ್ಲಿ ಭೂಕುಸಿತದ ಜಾಗದಲ್ಲಿ ಆಗಿದ್ದ ದುರಸ್ಥಿ ಕಾಮಗಾರಿ ಕೂಡ ಬಿರುಕು ಬಿಟ್ಟಿದೆ.