ಅಡಿಕೆ ಕೃಷಿಕನಿಗೆ ವರವಾದ ದೋಟಿ….. ಅಡಿಕೆ ಕೊಳೆರೋಗವೂ… ಪರಿಶ್ರಮವೂ…..ಸವಾಲುಗಳೂ….! | ಕೃಷಿಕ ಎ ಪಿ ಸದಾಶಿವ ಅನುಭವ ಬರೆದಿದ್ದಾರೆ |

July 23, 2022
3:32 PM
ಸಂಕ್ಷಿಪ್ತ ಮಾಹಿತಿ :
ಕೃಷಿಕರಿಗೆ ನಿತ್ಯವೂ ಸವಾಲುಗಳೇ. ಹಾಗೆಂದು ಸವಾಲುಗಳು ಬಗ್ಗೆ , ಸಮಸ್ಯೆಗಳ ಬಗ್ಗೆ ಮಾತನಾಡುತ್ತಾ ಕುಳಿತರೆ ಪರಿಹಾರ ಹೇಗೆ ಸಾಧ್ಯ. ನಿರಂತರ ಪ್ರಯತ್ನಗಳ ಮೂಲಕ ಪರಿಹಾರ ಸಾಧ್ಯವಿದೆ. ಸವಾಲುಗಳನ್ನು ಮೆಟ್ಟಿ ನಿಲ್ಲಲು ಸಾಧ್ಯವಿದೆ. ಈ ಸವಾಲುಗಳನ್ನು ದಾಟಿದ ಬಗ್ಗೆ ಕೃಷಿಕ ಎ ಪಿ ಸದಾಶಿವ ಮರಿಕೆ ತಮ್ಮ ಅನುಭವ ಇಲ್ಲಿ  ಬರೆದಿದ್ದಾರೆ.

ನಮ್ಮ ಮನೆಯಲ್ಲಿ ಔಷಧಿ ಬಿಡಲು ಅನಾದಿಕಾಲದಿಂದಲೂ ನಿಲಯದ ಕಲಾವಿದರಿದ್ದರು. ಹಾಗಾಗಿ ಮಳೆಗಾಲದ ಮಧ್ಯದಲ್ಲಿ ಬಿಸಿಲು ಕಾದಿದ್ದರೆ ನಮ್ಮ ತೋಟಕ್ಕೆ ರೋಗ ಇಲ್ಲ ಎಂದೇ ಹೇಳಬಹುದು. ಸುಮಾರು 30 ವರುಷದ ಹಿಂದೊಮ್ಮೆ, ಬಿಸಿಲು ಕಾಣದ ಮಳೆಗಾಲದಲ್ಲಿ ಭಾರಿ ರೋಗ ಬಂದಿತ್ತು. ಆ ನಂತರದಲ್ಲಿ ಮಹಾಳಿ ಸಮಸ್ಯೆಯಾಗುವಷ್ಟು ಬಂದದ್ದು 2018ರಲ್ಲಿ. ಕಾರಣ ನಿಲಯದ ಕಲಾವಿದರು ಸಾರ್ವಜನಿಕ ಕಲಾವಿದರಾದದ್ದು. ಹಾಗಾಗಿ ಅವರ ಬರುವಿಕೆಯನ್ನೇ ಕಾದು ಅಸಹಾಯಕರಾದದ್ದು.

Advertisement
Advertisement

ಮೊದಲ ಸಲ ಔಷಧಿ ಹೊಡೆಯುವ ಸಂದರ್ಭದಲ್ಲಿ ಕಲಾವಿದನೋರ್ವನ ಕಾಲಿಗೆ ಕತ್ತಿ ತಾಗಿದುದರಿಂದ ಆತ ಅಸಹಾಯಕನಾಗಿದ್ದ. ಹಾಗಾಗಿ ಹೊಸದಾಗಿ ತಂದ ದೋಟಿಯನ್ನು ವಲಸೆ ಕಾರ್ಮಿಕನೊಬ್ಬನಿಗೆ ಅಭ್ಯಾಸ ಮಾಡಿಸಿದೆ. ಹೆಚ್ಚಿನ ಆದಾಯದ ಆಸೆಯಿಂದ ಅವನಿಗೆ ಅದು ಬಹುವಾಗಿ ಹಿಡಿಸಿತು. ಇನ್ನೊಬ್ಬನ ಮನಸ್ಸಿಗೆ ತನಗೂ ದೋಟಿ ಒಂದು ಸಿಕ್ಕಿದರೆ ಆಗಬಹುದೆಂಬ ಆಸೆಯೂ ಹುಟ್ಟಿತು. ನಾನು ಮೊದಲ ಸಲ ತಂದದ್ದು ಹಾಸನದ ದೋಟಿ. ಅಂತಹುದೇ ಇನ್ನೊಂದು ದೋಟಿಯನ್ನು ಸಮೀಪದಲ್ಲೇ ತೆಗೆಯೋಣವೆಂದು ಹುಡುಕಾಡಿದೆ. ಆದರೆ ಗಮನಾರ್ಹವಾಗಿ ತೂಕದ ವ್ಯತ್ಯಾಸ, ಸ್ಪ್ರೇ ಪೈಪು ದೋಟಿಯ ಒಳಗಡೆಯಿಂದ ಚಲಿಸುವಾಗ ಹೊರತೆಗೆಯಲು ಮತ್ತು ಒಳ ಸೇರಿಸಲು ಇನ್ನೊಂದು ವ್ಯಕ್ತಿಯ ಸಹಾಯ ಅನಿವಾರ್ಯ ಎಂಬ ಕಾರಣದಿಂದ ಮತ್ತೆ ಪುನಃ ಹಾಸನದಿಂದಲೇ ತರಿಸಿದೆ.

ಹವಾಮಾನ ತಜ್ಞರಾದ ಮಿತ್ರರಿಬ್ಬರ ಪದೇ ಪದೇ ಎಚ್ಚರಿಕೆ, ( 21 ರಿಂದ 28ರ ಒಳಗಡೆ ಸದವಕಾಶ) ಅನಪೇಕ್ಷಿತ ಅತಿಥಿ ಮಹಾಳಿಯ ಒಂದೆರಡು ಮರದ ಪಾದಾರ್ಪಣೆ ನನ್ನನ್ನು ಮತ್ತೆ ಎರಡು ಸಾವಿರದ ಹದಿನೆಂಟರ ನೆನಪಿನಂಗಳಕ್ಕೆ ತಂದಿತು. ಕಲಾವಿದನೋರ್ವನ ಆರೋಗ್ಯ ಇನ್ನೂ ಸುಧಾರಿಸದೆ ಇರುವುದರಿಂದ, ಒಬ್ಬನನ್ನೇ ನಂಬಿ ಕುಳಿತರೆ ಈ ವರ್ಷದ ಅಡಿಕೆ ಫಸಲು ಗಗನ ಕುಸುಮವೇ ಆಗಬಹುದೆಂದು ಎರಡೂ ದೋಟಿಯನ್ನು ವಲಸೆ ಕಾರ್ಮಿಕರ ಕೈಗಿತ್ತು ಅಭ್ಯಾಸಕ್ಕೆ ಮುಂದಾದೆ. ಆರಂಭದಲ್ಲಿ ಹೊಸಬ ಸ್ವಲ್ಪ ಚಡಪಡಿಸಿದರೂ ಅಭ್ಯಾಸವಾಯಿತು.

ನಮ್ಮ ತೋಟ ಹಳೆಯದೋ ಹಳೆಯದು. ಪ್ರತಿಸರ್ತಿಯು ಮೂರು ಅಂತರದಲ್ಲಿ ದೋಟಿಯನ್ನು ಏರಿಳಿಸಬೇಕಾಗುತ್ತದೆ. ದೋಟಿ ತೆಗೆದುಕೊಂಡು ಹೋಗುವ ಸಾಲಲ್ಲಿ ಬಾಳೆ ಇದ್ದರೆ, ಕಾರ್ತವೀರ್ಯನ ಕೈಗಳನ್ನು ಕಡಿದಂತೆ ಕೊಕ್ಕೋ ಕೊಯ್ಯುವ ಕತ್ತಿಯಲ್ಲಿ ಕೈಗಳನ್ನು ತುಂಡರಿಸುವುದು ಬಲು ಅನುಕೂಲ. ಕೋಕೋ ಮರಗಳು ತುಂಬಾ ಇರುವ ತೋಟದಲ್ಲಿ ಸ್ವಲ್ಪ ಅನಾನುಕೂಲವೇ ಆಗಬಹುದು. 5 ಅಡಿಯ ಮನುಷ್ಯರಿಗೆ 15 ಅಡಿಯ ಮೇಲಿರುವ ಕೊಕ್ಕೋ ಮರಗಳಿಂದಾಗಿ, ಎತ್ತರದ ಅಡಿಕೆ ಗೊನೆಗಳ ಅಗೋಚರವೇ ಬಲು ದೊಡ್ಡ ಸಮಸ್ಯೆ. ದೂರ ದೂರದಲ್ಲಿ ಕೊಕ್ಕೋ ಮರದ ಸಾಲಿದ್ದರೆ ಸುದಾರಿಸಬಹುದು. 60 ಅಡಿಯ ಒಳಗಿನ ಮರಗಳಿಗೆ ಆರಾಮ. ಅದರಿಂದ ಮೇಲಿನ ಮರಗಳಿಗೆ ಸ್ವಲ್ಪ ಬಳುಕುವಿಕೆಯಿಂದಾಗಿ ಔಷಧಿ ಖರ್ಚು ಜಾಸ್ತಿ ಬರಬಹುದು. ಮಹಾಳಿಯಿಂದಾಗಿ ಅಡಿಕೆ ಉದುರುವಾಗ ತಲೆ ಮೇಲೆ ಕೈಯಿಟ್ಟು ಕುಳಿತು ನೋಡುವುದರ ಎದುರು ಇದು ನಗಣ್ಯ. ಆರು ಗಂಟೆಯ ಹೊತ್ತಿನಲ್ಲಿ ಒಬ್ಬ ಮುನ್ನೂರ ಐವತ್ತು ಮರಗಳಿಗೆ ಔಷಧಿ ಹೊಡೆಯುತ್ತಾನೆ. ಇದು ಹೆಚ್ಹೋ ಕಡಿಮೆಯೋ ಅನುಭವಿಗಳೇ ಹೇಳಬೇಕಷ್ಟೆ. ಈ ವರ್ಷದ ದೋಟಿ ತರಬೇತಿ ಶಿಬಿರಗಳು ಅಡಿಕೆ ಕೃಷಿಕರ ಮನದಲ್ಲಂತೂ ಉತ್ಸಾಹ ತುಂಬಿದ್ದು ನಿಶ್ಚಯ. ದೋಟಿ ಅಡಿಕೆ ಕೃಷಿಕನ ಪಾಲಿಗಂತೂ ವರ. ಪ್ರತಿ ಕೃಷಿಕನ ಮನೆಯಲ್ಲಿ ಇರಲೇ ಬೇಕಾದ ಒಂದು ವಸ್ತು ಎಂಬುದರಲ್ಲಿ ಎರಡು ಮಾತಿಲ್ಲ. 

ಬರಹ :
ಎ.ಪಿ. ಸದಾಶಿವ. ಮರಿಕೆ.
Advertisement

Advertisement

Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಆಪ್‌ನಲ್ಲಿ ವಿವರ ದಾಖಲಿಸಲು ರೈತರಿಗೆ ಮನವಿ
June 28, 2025
9:16 PM
by: The Rural Mirror ಸುದ್ದಿಜಾಲ
ಹಳ್ಳಿಗಳು ಅಭಿವೃದ್ಧಿ ಹೊಂದಿದರೆ ಮಾತ್ರ ದೇಶದ ಅಭಿವೃದ್ಧಿ
June 28, 2025
8:29 PM
by: The Rural Mirror ಸುದ್ದಿಜಾಲ
ಕೃಷಿ ಕೂಡಾ ಅತಿ ಹೆಚ್ಚು ಉದ್ಯೋಗ ಒದಗಿಸುವ ಕ್ಷೇತ್ರ
June 28, 2025
8:14 PM
by: The Rural Mirror ಸುದ್ದಿಜಾಲ
ಮುಂಗಾರು ಮಳೆ ಸುದ್ದಿ | ಕೇರಳದಲ್ಲಿ ತೀವ್ರಗೊಳ್ಳಲಿದೆ ಮಳೆ | ದೆಹಲಿಯಲ್ಲೂ ಮಳೆ ಎಚ್ಚರಿಕೆ | ಹಿಮಾಚಲದಲ್ಲಿ 20 ಕ್ಕೂ ಹೆಚ್ಚು ಜೀವಹಾನಿ |
June 28, 2025
7:14 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group