ಪ್ರಥಮ ಚಿಕಿತ್ಸೆ ಮಾಡುವ ಸಂದರ್ಭದಲ್ಲಿ ನಾವು ಮೊಬೈಲ್ ಬಳಸಬಾರದು. ಅಲ್ಲದೇ ಅಪಘಾತಗೊಂಡಿರುವ ವ್ಯಕ್ತಿಯ ಜೀವ ಉಳಿಸುವ ಕಾರ್ಯವಾಗಬೇಕೆ ವಿನಃ ಅನ್ಯ ಕಾರ್ಯಗಳ ಬಗೆಗೆ ಆಲೋಚನೆಗಳು ಇರಬಾರದು ಎಂದು ಪುತ್ತೂರಿನ ರೋಟರಿ ಕ್ಲಬ್ ನ ಅಧ್ಯಕ್ಷ ರೋ.ಕ್ಸೇವಿಯರ್ ಡಿಸೋಜಾ ಹೇಳಿದರು.
ಇವರು ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ನಡೆದ ಪ್ರಥಮ ಚಿಕಿತ್ಸಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ ಮನುಷ್ಯ ಎಷ್ಟೇ ಮುಂದುವರಿದರೂ ಕೂಡಾ ಎಂದೆಂದಿಗೂ ಮಾನವೀಯತೆಯನ್ನು ಮರೆಯಬಾರದು. ಯಾರಿಗಾದರೂ ಪ್ರಥಮ ಚಿಕಿತ್ಸೆಯ ಅವಶ್ಯಕತೆ ಇದ್ದರೆ ಆ ಕೂಡಲೇ ತಕ್ಷಣ ಕಾರ್ಯ ಪ್ರವೃತ್ತರಾಗಬೇಕು ಎಂದರು.
ಇದೇ ಸಂದರ್ಭದಲ್ಲಿ ಪುತ್ತೂರಿನ ರೋಟರಿ ಬ್ಲಡ್ ಬ್ಯಾಂಕಿನ ಡಾ.ರಾಮಚಂದ್ರ ಭಟ್ ಮಾತನಾಡಿ ಪ್ರಥಮ ಚಿಕಿತ್ಸೆ ಎಂದರೆ ಗಾಯ ಅಥವಾ ಅವಘಡಗಳಾದಾಗ ನೀಡುವ ಆರಂಭಿಕ ಆರೈಕೆ, ಹಾಗಾಗಿ ನಾವೆಲ್ಲರೂ ಪ್ರಥಮ ಚಿಕಿತ್ಸೆಯ ಬಗ್ಗೆ ನಮ್ಮೊಳಗೆ ಅರಿವನ್ನು ಮೂಡಿಸಿಕೊಳ್ಳಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ವಿ.ಜಿ.ಭಟ್ ಹಾಗೂ ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೆಶಕ ವಾಮನ ಪೈ ಹಾಗೂ ಪುತ್ತೂರು ರೋಟರಿ ಕ್ಲಬ್ ನ ಕಾರ್ಯದರ್ಶಿ ಪ್ರೊ.ದತ್ತಾತ್ರೇಯ ಉಪಸ್ಥಿತರಿದ್ದರು. ಜೊತೆಗೆ ಕಾಲೇಜಿನ ಎನ್ಸಿಸಿ, ಎನ್ಎಸ್ಎಸ್, ರೋವರ್ ರೇಂಜರ್ಸ್ ಹಾಗೂ ರೆಡ್ಕ್ರಾಸ್ ನ ವಿದ್ಯಾರ್ಥಿಗಳು ಭಾಗವಹಿಸಿದರು. ಕಾಲೇಜಿನ ಎನ್ಎಸ್ಎಸ್ ಅಧಿಕಾರಿ ಶ್ರೀನಾಥ್ ಕಾರ್ಯಕ್ರಮವನ್ನು ನಿರ್ವಹಿಸಿ ಎನ್ಸಿಸಿ ಅಧಿಕಾರಿ ಲೆ.ಅತುಲ್ ಶೆಣೈ ವಂದಿಸಿದರು.