ಗಣೇಶ ಹಬ್ಬ | ಶ್ರೀ ಗಣೇಶನ ವಿಡಂಬನೆಯನ್ನು ತಡೆಗಟ್ಟಿರಿ | ಹಿಂದೂ ಜನಜಾಗೃತಿ ಸಮಿತಿ ಮನವಿ |

September 9, 2021
11:01 AM

ಶ್ರೀ ಗಣೇಶ ಚತುರ್ಥಿಯ ನಿಮಿತ್ತ ಚಿತ್ರಕಾರರು ಮತ್ತು ಮೂರ್ತಿಕಾರರು ತಮ್ಮ ಕಲೆಯ ಮೂಲಕ ಶ್ರೀ ಗಣೇಶನ ಚಿತ್ರ ಮತ್ತು ಮೂರ್ತಿಗಳಲ್ಲಿ ಹೊಸ ಹೊಸ ಆವಿಷ್ಕಾರಗಳನ್ನು ಮಾಡುತ್ತಾರೆ. ಬಿಸ್ಕಿಟ್, ಬೆಣ್ಣೆ, ಕ್ಯಾಡ್‌ಬರಿ, ಜೆಮ್ಸ್, ಚಾಕಲೇಟ್, ಚಿಕ್ಕಿ, ಕುರ್‌ಕುರೆ, ಮಸಾಲೆ, ಹೂವು, ಮಣ್ಣಿನ ಹಣತೆಗಳು, ಚಾಕ್, ಪೆನ್ಸಿಲ್, ಪ್ಲಾಸ್ಟಿಕ್ ತಟ್ಟೆ, ಇತ್ಯಾದಿ ವಿವಿಧ ವಸ್ತುಗಳಿಂದ ಮಾಡಿದ ಗಣೇಶಮೂರ್ತಿ ಹಾಗೂ ಬಾಹುಬಲಿ ಚಲನಚಿತ್ರದ ನಾಯಕ ಶಿವಲಿಂಗವನ್ನು ಹೆಗಲ ಮೇಲಿಟ್ಟುಕೊಂಡು ನಿಂತಿರುವ, ಕ್ರಿಕೇಟ್ ಆಡುವ, ನರ್ತಿಸುವ, ಇತ್ಯಾದಿ ಆಕಾರಗಳ ಗಣೇಶಮೂರ್ತಿಗಳಿಂದಾಗಿ ಗಣೇಶನನ್ನು ಪೂಜಿಸುವವರ ಮುಂದೆ ಅನೇಕ ಪ್ರಶ್ನೆಗಳು ಉದ್ಭವಿಸಿವೆ !

ಚಿತ್ರವಿಚಿತ್ರ ಪದ್ಧತಿಯಲ್ಲಿ ಹಾಗೂ ಈ ಮೇಲಿನ ವಿವಿಧ ವಸ್ತುಗಳಿಂದ ತಯಾರಿಸಿದ ಗಣೇಶಮೂರ್ತಿ, ಇದಕ್ಕೆ ಕಲೆಯ ಪ್ರದರ್ಶನವೆಂದು ಹೇಳಬಹುದೇ?
ಭಾರತೀಯ ಸಂಸ್ಕೃತಿಯು ಕಲೆಯನ್ನು ಹಣ ಸಂಪಾದಿಸುವ ಅಥವಾ ಪ್ರಸಿದ್ಧಿ ಗಳಿಸುವ ಸಾಧನ ಎಂಬ ಸಂಕುಚಿತ ದೃಷ್ಟಿಕೋನದಿಂದ ನೋಡದೆ, ಅದನ್ನು ತನಗಾಗಿ ಹಾಗೂ ಇತರರಿಗಾಗಿ ಈಶ್ವರಪ್ರಾಪ್ತಿಯ ಸಾಧನವೆಂಬ ವ್ಯಾಪಕ ದೃಷ್ಟಿಕೋನದಿಂದ ನೋಡುತ್ತದೆ. ಕಲೆಯನ್ನು ಕೇವಲ ಕಲಾತ್ಮಕತೆಗಾಗಿ ಉಪಯೋಗಿಸಿದಾಗ ಆ ಕಲಾಕೃತಿಯಲ್ಲಿ ದೈವೀ ಸ್ಪಂದನವನ್ನು ಆಕರ್ಷಿಸುವ ಪ್ರಮಾಣ ಕಡಿಮೆಯಿರುತ್ತದೆ. ಅದರಿಂದಲೆ ವಿಕೃತಿ ಜನ್ಮ ತಾಳುತ್ತದೆ. ಇಂತಹ ಕಲಾಕೃತಿಗಳಲ್ಲಿ ಅಹಂಭಾವದ ಸ್ಪಂದನಗಳ ಪ್ರಮಾಣ ಹೆಚ್ಚು ಪ್ರಮಾಣದಲ್ಲಿರುವುದರಿಂದ ಆ ಕಲಾಕೃತಿಗಳತ್ತ ತೊಂದರೆದಾಯಕ ಶಕ್ತಿಯ ಸ್ಪಂದನವನ್ನು ಆಕರ್ಷಿಸುವ ಪ್ರಮಾಣ ಹೆಚ್ಚು ಇರುತ್ತದೆ. ಆದ್ದರಿಂದ ಇಂತಹ ದೇವತೆಗಳ ಚಿತ್ರಗಳಲ್ಲಿ ಸಾತ್ತ್ವಿಕೃತೆಯ ಪ್ರಮಾಣ ಕಡಿಮೆಯಿರುತ್ತದೆ. ತದ್ವಿರುದ್ಧ ಕಲಾತ್ಮಕತೆಗೆ ಸಾತ್ತ್ವಿಕತೆಯನ್ನು ಜೋಡಿಸಿದರೆ ಆ ಕಲಾಕೃತಿಯಲ್ಲಿ ದೇವತ್ವ ನಿರ್ಮಾಣವಾಗುತ್ತದೆ.

ಆಹಾರಗಳಿಂದ ಗಣೇಶಮೂರ್ತಿ ತಯಾರಿಸಿದ ನಂತರ ಆ ಆಹಾರವನ್ನು ಏನು ಮಾಡುವುದು ?:

ಬೆಣ್ಣೆ, ಚಾಕಲೇಟ್ ಇತ್ಯಾದಿ ದುಬಾರಿ ಆಹಾರ ಸಾಮಗ್ರಿಗಳಿಂದ ಗಣೇಶಮೂರ್ತಿ ತಯಾರಿಸಿದ ನಂತರ ಆ ಆಹಾರ ಪದಾರ್ಥಗಳನ್ನು ಏನು ಮಾಡುವುದು ? ನಾವು ಒಮ್ಮೆ ಆ ಕಲಾಕೃತಿಯನ್ನು ದೇವತೆಯ ದೃಷ್ಟಿಯಿಂದ ನೋಡಿರುವುದರಿಂದ ನಂತರ ಆ ಆಹಾರ ಪದಾರ್ಥವನ್ನು ತಿನ್ನಬಹುದೆ ? ಅಷ್ಟು ಮಾತ್ರವಲ್ಲ, ಅದು ಅನೇಕ ದಿನಗಳ ವರೆಗೆ ಹೊರಗಿನ ವಾತಾವರಣದಲ್ಲಿದ್ದ ಕಾರಣ ಅದನ್ನು ತಿನ್ನುವುದು ಹೇಗೆ ? ತಿನ್ನದಿದ್ದರೆ ಆ ಆಹಾರ ವ್ಯರ್ಥವಾಗುವುದು ! ಯಾವಾಗಲೂ ಯಜ್ಞಯಾಗಗಳಲ್ಲಿ ಹಣ ವ್ಯರ್ಥವಾಗುತ್ತದೆ, ಎಂದು ಬೊಬ್ಬೆ ಹೊಡೆಯುವವರಿಗೆ ಹೀಗೆ ಹಣ ವ್ಯರ್ಥವಾಗುವ ಬಗ್ಗೆ ಏನು ಹೇಳಲಿಕ್ಕಿದೆ ?

ದೇವತೆಗಳಿಗೆ ಇಂತಹ ಸ್ಥಾನಮಾನ ನೀಡುವಿರಾ ?:

ನಮ್ಮ ತಾಯಿ-ತಂದೆಯನ್ನು ಯಾರಾದರೂ ಹೀಗೆ ವ್ಯಂಗ್ಯಚಿತ್ರದ ರೂಪದಲ್ಲಿ ಅಥವಾ ಇತರ ಚಿತ್ರ-ವಿಚಿತ್ರ ರೂಪದಲ್ಲಿ ಅಥವಾ ವೇಷದಲ್ಲಿ ತೋರಿಸಿದರೆ, ನಮಗೆ ಕೋಪ ಬರುತ್ತದೆ. ಹೀಗಿರುವಾಗ ನಮ್ಮ ದೇವತೆಗಳನ್ನು ನಾವು ಅವರ ಪಾರಂಪರಿಕ ರೂಪದಲ್ಲಿ ಅಥವಾ ವೇಷದಲ್ಲಿ ತೋರಿಸದೆ ಬೇರೆಯೆ ರೂಪದಲ್ಲಿ ಹೇಗೆ ತೋರಿಸುತ್ತೇವೆ ಅಥವಾ ಬೇರೆಯವರು ತೋರಿಸುವಾಗ ನಾವು ಹೇಗೆ ಮೂಕಸಮ್ಮತಿ ಸೂಚಿಸುತ್ತೇವೆ ?

ದೇವತೆಗಳ ಚಿತ್ರ ಮತ್ತು ಮೂರ್ತಿ ಶಾಸ್ತ್ರಕ್ಕನುಸಾರ ಇರುವುದರ ಮಹತ್ವ ! :

ಪ್ರತಿಯೊಂದು ದೇವತೆಯು ಒಂದು ವಿಶಿಷ್ಟ ತತ್ತ್ವ ಆಗಿದೆ. ದೇವತೆಯ ದ್ವಿಮಿತಿಯ-ರೂಪ (ಚಿತ್ರ) ಅಥವಾ ತ್ರಿಮಿತಿಯ ರೂಪ (ಮೂರ್ತಿ) ಇದು ಎಷ್ಟು ಆ ದೇವತೆಯ ಮೂಲ ರೂಪದೊಂದಿಗೆ ಹೋಲಿಕೆಯಾಗುತ್ತದೆಯೋ, ಅಷ್ಟು ಅದರಲ್ಲಿ ಆ ದೇವತೆಯ ತತ್ತ್ವ ಹೆಚ್ಚು ಪ್ರಮಾಣದಲ್ಲಿ ಆಕರ್ಷಿಸುತ್ತದೆ. ದೇವತೆಯ ತತ್ತ್ವ ಎಷ್ಟು ಹೆಚ್ಚಿರುತ್ತದೆಯೋ, ಅಷ್ಟು ಪೂಜಿಸುವವರಲ್ಲಿ ಭಕ್ತಿಭಾವ ಬೇಗನೆ ಜಾಗೃತವಾಗಲು ಸಹಾಯವಾಗುತ್ತದೆ ಹಾಗೂ ಇಂತಹ ರೂಪದಿಂದ ದೇವತೆಯ ಸ್ಪಂದನ ಹೆಚ್ಚು ಪ್ರಕ್ಷೇಪಣೆಯಾಗುತ್ತಿರುವುದರಿಂದ ವಾತಾವರಣವೂ ಸಾತ್ತ್ವಿಕವಾಗುತ್ತದೆ. ಶಬ್ದ, ಸ್ಪರ್ಷ, ರೂಪ, ರಸ, ಗಂಧ ಮತ್ತು ಅವುಗಳಿಗೆ ಸಂಬಂಧಿಸಿದ ಶಕ್ತಿ ಯಾವಾಗಲೂ ಒಟ್ಟಿಗಿರುತ್ತದೆ, ಎಂಬುದು ಅಧ್ಯಾತ್ಮದಲ್ಲಿನ ಒಂದು ಸಿದ್ಧಾಂತವಾಗಿದೆ. ಆದ್ದರಿಂದ ದೇವತೆಯ ರೂಪವಿದ್ದಲ್ಲಿ ಅದರ ಶಕ್ತಿಯೂ ಇರುತ್ತದೆ. ಋಷಿಮುನಿಗಳು ಧರ್ಮಶಾಸ್ತ್ರದಲ್ಲಿ ಪ್ರತಿಯೊಂದು ದೇವತೆಯ ರೂಪದ ವರ್ಣನೆಯನ್ನು ಬರೆದಿಟ್ಟಿದ್ದಾರೆ. ಆದ್ದರಿಂದ ಕಲಾವಿದನು ತನ್ನ ಕಲ್ಪನೆಯಿಂದ ತಯಾರಿಸಿದ ಚಿತ್ರ ಅಥವಾ ಮೂರ್ತಿಗಳಿಗಿಂತ ಧರ್ಮಶಾಸ್ತ್ರದಲ್ಲಿ ಬಣ್ಣಿಸಿದ ಚಿತ್ರ ಅಥವಾ ಮೂರ್ತಿಗಳಲ್ಲಿ ಆಯಾ ದೇವತೆಯ ತತ್ತ್ವ ಹೆಚ್ಚು ಪ್ರಮಾಣದಲ್ಲಿ ಇರುತ್ತದೆ. ಧರ್ಮಶಾಸ್ತ್ರದಲ್ಲಿ ಒಂದೇ ದೇವತೆಯ ಅನೇಕ ಹೆಸರುಗಳು ಮತ್ತು ಅದಕ್ಕನುಸಾರ ಇರುವ ರೂಪಗಳ ಉಲ್ಲೇಖವಿದೆ. ಆಗ ಉಪಾಸಕರು ಕಾಲಾನುಸಾರ ದೇವತೆಯ ಯಾವ ರೂಪದ ಉಪಾಸನೆಯನ್ನು ಮಾಡಿದರೆ ಆಧ್ಯಾತ್ಮಿಕ ದೃಷ್ಟಿಯಿಂದ ಲಾಭವಾಗುತ್ತದೆ?, ಎಂಬುದನ್ನು ಕೇವಲ ಅಧ್ಯಾತ್ಮಿಕ ಜ್ಞಾನವಿರುವವರು, ಅಂದರೆ ಸಂತರೆ ಹೇಳಲು ಸಾಧ್ಯ. ಈ ವಿಷಯವನ್ನು ಗಮನಿಸಿ ಧರ್ಮಶಾಸ್ತ್ರಕ್ಕನುಸಾರ ಶ್ರೀ ಗಣೇಶನ ಚಿತ್ರ ಮತ್ತು ಮೂರ್ತಿಗಳನ್ನು ತಯಾರಿಸುವ ಅವಶ್ಯಕತೆಯಿದೆ.

ಶ್ರೀ ಗಣೇಶನ ಮೂರ್ತಿಯನ್ನು ಆವೆ ಮಣ್ಣಿನಿಂದ ಅಥವಾ ಜೇಡಿಮಣ್ಣಿನಿಂದ ತಯಾರಿಸಬೇಕೆಂದು ಧರ್ಮಶಾಸ್ತ್ರದಲ್ಲಿದೆ. ಇದನ್ನು ಬಿಟ್ಟು ಇತರ ವಸ್ತುಗಳಿಂದ ಮೂರ್ತಿಗಳನ್ನು ತಯಾರಿಸುವುದು ಧರ್ಮಶಾಸ್ತ್ರದ ವಿರುದ್ಧವಾಗಿದೆ. ಇಂತಹ ಧರ್ಮಶಾಸ್ತ್ರವಿರೋಧಿ ಮೂರ್ತಿಯ ಕಡೆಗೆ ಶ್ರೀ ಗಣೇಶನ ಪವಿತ್ರಕಗಳು ಆಕರ್ಷಿಸಲ್ಪಡುವುದಿಲ್ಲ.

ಇತರ ದೇವತೆಗಳನ್ನು ಹೋಲಿಸಿದರೆ ಶ್ರೀ ಗಣೇಶನ ವಿಡಂಬನೆ ಹೆಚ್ಚು ಪ್ರಮಾಣದಲ್ಲಿ ಆಗುತ್ತಿರುವುದು ಕಂಡು ಬರುತ್ತದೆ !:

ಶ್ರೀ ಗಣೇಶ ಎಲ್ಲ ಸಂಪ್ರದಾಯದವರಿಗೆ ಪೂಜನೀಯ ಹಾಗೂ ಸಂತರು ಗೌರವಿಸಿದ ದೇವತೆ. ಪ್ರತಿಯೊಂದು ಸಂಪ್ರದಾಯದಲ್ಲಿ ಗಣೇಶಪೂಜೆ ಇದೆ. ಅನೇಕರ ನಿತ್ಯಪೂಜೆಯಲ್ಲಿಯೂ ಗಣೇಶಮೂರ್ತಿ ಇರುತ್ತದೆ. ಈ ಹಿನ್ನೆಲೆಯಲ್ಲಿ ದೇವರ ವಿಡಂಬನೆಯಲ್ಲಿ ಶ್ರೀ ಗಣೇಶನ ವಿಡಂಬನೆ ಅತೀ ಹೆಚ್ಚು ಇರುವುದು ಖೇದಕರ. ಎಲ್ಲರಿಗೂ ಪೂಜನೀಯ ಮತ್ತು ಎಲ್ಲರಿಗಿಂತ ಮೊದಲು ಪೂಜೆಯಾಗುವ ದೇವತೆಯನ್ನು ಹೀಗೆ ವಿಕೃತ ರೂಪದಲ್ಲಿ ಪದೇ ಪದೇ ತೋರಿಸುವುದರಿಂದ ಆ ದೇವತೆಯ ಕಡೆಗೆ ನೋಡುವ ಭಕ್ತಿಭಾವ ಹಾಗೂ ವಂದನೀಯ ದೃಷ್ಟಿ ಇಲ್ಲವಾಗುತ್ತದೆ. ಇದು ಹಿಂದೂ ವಿರೋಧಿಗಳ ತಂತ್ರ ಆಗಿರಬಹುದೇ ? ಎಂಬ ಸಂಶಯ ಬರದೇ ಇರುವುದಿಲ್ಲ.

ದೇವತೆಗಳ ವಿಡಂಬನೆಯನ್ನು ತಡೆಗಟ್ಟುವ ಮಹತ್ವ !:

ಹಿಂದೂಗಳ ದೇವತೆ, ಧರ್ಮಗ್ರಂಥ, ಸಂತರ ಮತ್ತು ರಾಷ್ಟ್ರಪುರುಷರ ವಿಡಂಬನೆ ಅಥವಾ ಅವರ ತೀವ್ರ ಟೀಕೆ ಮಾಡಿ ಹಿಂದೂಗಳ ಧಾರ್ಮಿಕಶ್ರದ್ಧೆಯನ್ನು ನಾಶಗೊಳಿಸಲು ಹಿಂದೂ ಧರ್ಮದ ಕೆಲವು ಹಿಂದೂ ವಿರೋಧಿಗಳು ಮತ್ತು ಇತರ ಪಂಥದಲ್ಲಿನ ಹಿಂದೂದ್ವೇಷಿಗಳು ಕುತಂತ್ರವನ್ನು ರಚಿಸಿದ್ದಾರೆ. ಚಿತ್ರಕಾರ ಮ.ಫಿ. ಹುಸೇನ ಹಿಂದೂ ದೇವತೆಗಳ ಮತ್ತು ಭಾರತಮಾತೆಯ ನಗ್ನ ಹಾಗೂ ಅಶ್ಲೀಲ ಚಿತ್ರಗಳನ್ನು ಬಿಡಿಸಿರುವುದು ನಮಗೆಲ್ಲರಿಗೂ ತಿಳಿದಿದೆ. ಕೆಲವೊಮ್ಮೆ ಧರ್ಮಶಿಕ್ಷಣವಿಲ್ಲದೆ ಸಾಮಾನ್ಯ ಹಿಂದೂಗಳಿಂದಲೂ ತಿಳಿಯದೆ ದೇವತೆಗಳ ವಿಡಂಬನೆಯಾಗುತ್ತದೆ. ಈ ಹಿಂದೆ ಟಿ.ವಿ.ಎಸ್. ಸ್ಕೂಟಿ ತನ್ನ ಜಾಹೀರಾತಿನಲ್ಲಿ ಶ್ರೀ ಗಣೇಶನನ್ನು ಮೂಶಕವಾಹನದ ಬದಲು ಸ್ಕೂಟಿಯ ಮೇಲೆ ಕೂರಿಸಿ ‘ಈ ವರ್ಷ ಶ್ರೀ ಗಣೇಶ ತನ್ನ ವಾಹನವನ್ನು ಬದಲಾಯಿಸಿದ್ದಾನೆ’, ಎಂದು ಹೇಳುವ ಜಾಹೀರಾತನ್ನು ಗಣೇಶೋತ್ಸವದ ಸಮಯದಲ್ಲಿ ಪ್ರಕಟಿಸಿತ್ತು. ದೇವತೆಗಳ ವಿಡಂಬನೆ ಅಥವಾ ದೇವತೆ, ಧರ್ಮಗ್ರಂಥ, ಸಂತರು ಇತ್ಯಾದಿ ಶ್ರದ್ಧಾಸ್ಥಾನಗಳನ್ನು ಟೀಕಿಸುವವರಿಗೆ ಧರ್ಮದ್ರೋಹದ ಪಾಪ ತಗಲುತ್ತದೆ. ಇಂತಹ ಧರ್ಮದ್ರೋಹವು ನಡೆಯುವಾಗ ಅದನ್ನು ನೋಡುತ್ತಾ ಇರುವುದು ಅಥವಾ ಅದಕ್ಕೆ ಮೂಕಸಮ್ಮತಿ ಸೂಚಿಸುವುದು ಸಹ ಧರ್ಮದ್ರೋಹವೇ ಆಗಿದ್ದು ಅದಕ್ಕೂ ಅಷ್ಟೇ ಪಾಪ ತಗಲುತ್ತದೆ.

ದೇವತೆಗಳ ವಿಡಂಬನೆಯನ್ನು ತಡೆಗಟ್ಟುವುದು ಸಹ ಧರ್ಮಪಾಲನೆಯೇ ಆಗಿದೆ !:

ಧರ್ಮದ ಬಗ್ಗೆ ಕರ್ತವ್ಯವನ್ನು ನಿರ್ವಹಿಸುವುದು ಹೇಗೆ ಧರ್ಮಪಾಲನೆಯಾಗಿದೆಯೋ, ಹಾಗೆಯೇ ದೇವರ ಮತ್ತು ಧರ್ಮದ ವಿಡಂಬನೆಯನ್ನು ನಿಲ್ಲಿಸುವುದು ಸಹ ಧರ್ಮಪಾಲನೆಯೇ ಆಗಿದೆ. ನಾವು ಧರ್ಮವನ್ನು ರಕ್ಷಿಸಿದರೆ, ಧರ್ಮ (ಈಶ್ವರ) ನಮ್ಮನ್ನು ರಕ್ಷಿಸುತ್ತದೆ, ಅಂದರೆ ದೇವತೆಗಳ ವಿಡಂಬನೆಯನ್ನು ನಿಲ್ಲಿಸಲು ಪ್ರಯತ್ನಿಸಿದರೆ, ನಮ್ಮ ಕಾರ್ಯದಲ್ಲಿ ದೇವತೆಗಳ ಆಶೀರ್ವಾದ ಲಭಿಸುತ್ತದೆ; ಆ ಕಾರ್ಯವು ಆಗುವ ಸಲುವಾಗಿ ಈಶ್ವರನೇ ನಮಗೆ ಶಾರೀರಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಶಕ್ತಿಯನ್ನು ನೀಡುತ್ತಾನೆ. ಅದಕ್ಕಾಗಿ ಹಿಂದುತ್ವನಿಷ್ಠ ಸಂಘಟನೆಗಳು ನಿಯಮಿತವಾಗಿ ನಡೆಯುವ ದೇವತೆಗಳ ವಿಡಂಬನೆಗಳನ್ನು ತಡೆಗಟ್ಟಿ ಧರ್ಮಕರ್ತವ್ಯವನ್ನು ನಿರ್ವಹಿಸಬೇಕು.

ದೇವತೆಗಳ ವಿಡಂಬನೆಯನ್ನು ತಡೆಗಟ್ಟುವುದು ಸಮಷ್ಟಿ ಸ್ತರದ ಉಪಾಸನೆಯಾಗಿದೆ:

ದೇವತೆಗಳ ಉಪಾಸನೆಯ ಮೂಲ ಶ್ರದ್ಧೆ. ದೇವತೆಗಳ ಯಾವುದೇ ಪ್ರಕಾರದ ವಿಡಂಬನೆಯು ಶ್ರದ್ಧೆಯ ಮೇಲೆ ಆಘಾತ ಮಾಡುತ್ತದೆ. ಇದರಿಂದ ಇದು ಧರ್ಮಹಾನಿಯೇ ಆಗಿರುತ್ತದೆ. ಧರ್ಮಹಾನಿಯನ್ನು ತಡೆಗಟ್ಟುವುದು ಕಾಲಾನುಸಾರ ಆವಶ್ಯಕವಿರುವ ಧರ್ಮಪಾಲನೆಯಾಗಿದೆ. ಅದು ದೇವತೆಯ ಸಮಷ್ಟಿ ಸ್ತರದಲ್ಲಿನ ಉಪಾಸನೆಯಾಗಿದೆ. ಈ ಉಪಾಸನೆಯನ್ನು ಮಾಡದೆ ದೇವತೆಯ ಉಪಾಸನೆಯು ಪೂರ್ಣವಾಗಲು ಸಾಧ್ಯವಿಲ್ಲ. ಆದ್ದರಿಂದ ಗಣೇಶಭಕ್ತರು ಕೂಡಾ ಈ ವಿಷಯದಲ್ಲಿ ಜಾಗರೂಕರಾಗಿ ಧರ್ಮಹಾನಿಯನ್ನು ತಡೆಗಟ್ಟಬೇಕು.

ಧರ್ಮರಕ್ಷಣೆಗಾಗಿ ಹಿಂದೂ ಜನಜಾಗೃತಿ ಸಮಿತಿಯ ಕಾರ್ಯದಲ್ಲಿ ಭಾಗವಹಿಸಿರಿ !:

ಹಿಂದೂ ಜನಜಾಗೃತಿ ಸಮಿತಿ ಕಳೆದ ಅನೇಕ ವರ್ಷಗಳಿಂದ ದೇವತೆಗಳ ಮತ್ತು ಸಂತರ ವಿಡಂಬನೆ, ಉತ್ಸವಗಳಲ್ಲಿನ ಅನುಚಿತ ಪ್ರಕಾರಗಳು, ದೇವಸ್ಥಾನಗಳ ಸರಕಾರೀಕರಣ ಇತ್ಯಾದಿಗಳ ವಿರುದ್ಧ ಕಾನೂನು ಮಾರ್ಗದಲ್ಲಿ ಜನಜಾಗೃತಿ ಆಂದೋಲನಗಳನ್ನು ಹಮ್ಮಿಕೊಳ್ಳುತ್ತಿವೆ. ಗಣೇಶಭಕ್ತರೇ, ತಾವು ಕೂಡ ಅದರಲ್ಲಿ ಭಾಗವಹಿಸಿ ಧರ್ಮದ ವಿಷಯದಲ್ಲಿ ತಮ್ಮ ಕರ್ತವ್ಯವನ್ನು ನಿರ್ವಹಿಸಿ ದೇವತೆಗಳಿಂದ ಹೆಚ್ಚೆಚ್ಚು ಕೃಪೆಯನ್ನು ಸಂಪಾದಿಸಿ ! ನಾವು ಧರ್ಮವನ್ನು ರಕ್ಷಿಸಿದರೆ ಮಾತ್ರ ಧರ್ಮ (ಈಶ್ವರ) ನಮ್ಮನ್ನು ರಕ್ಷಿಸುವುದು !

(ಈ ಲೇಖನದಲ್ಲಿ ಚಿತ್ರಗಳನ್ನು ಪ್ರಸಿದ್ಧಪಡಿಸುವುದರ ಹಿಂದೆ ಯಾವುದೇ ಧಾರ್ಮಿಕ ಭಾವನೆಯನ್ನು ನೋಯಿಸುವ ಉದ್ದೇಶವಿಲ್ಲದೇ ಕೇವಲ ಪ್ರಬೋಧನೆಗಾಗಿ ಪ್ರಸಿದ್ಧಪಡಿಸುತಿದ್ದೇವೆ. – ಲೇಖಕ)

 ಸಂಗ್ರಹ :

# ಚಂದ್ರ ಮೊಗೇರ, ಸಮನ್ವಯಕರು

ಹಿಂದೂ ಜನಜಾಗೃತಿ ಸಮಿತಿ, ದಕ್ಷಿಣ ಕನ್ನಡ ಜಿಲ್ಲೆ.
ಸಂಪರ್ಕ : 7204082652

(ಆಧಾರ : ಸನಾತನ ಸಂಸ್ಥೆ ನಿರ್ಮಿಸಿದ ಕಿರುಗ್ರಂಥ ‘ಶ್ರೀ ಗಣೇಶಮೂರ್ತಿ ಶಾಸ್ತ್ರಾನುಸಾರ ಇರಬೇಕು’)
(ಶ್ರೀ ಗಣೇಶ ಚತುರ್ಥಿಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಓದಿ ಸನಾತನ ನಿರ್ಮಿತ ಗ್ರಂಥ “ಶ್ರೀ ಗಣಪತಿ”)

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಕೃಷಿಗೆ ಹವಾಮಾನ ಅಪಾಯ ಹೆಚ್ಚಳ | ರೈತರಿಗೆ ಕಠಿಣ ಕಾಲ ಬರುವ ಸೂಚನೆ ? ದೇಶದ 310 ಜಿಲ್ಲೆಗಳು ಅಪಾಯ ವಲಯದಲ್ಲಿ..!
March 26, 2026
7:04 AM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 25.03.2026 | ಕರಾವಳಿಯಲ್ಲಿ ಇಂದು ಸಂಜೆ ಮಳೆ ಸಾಧ್ಯತೆ | ಏಪ್ರಿಲ್‌ 5ರವರೆಗೆ ಬೇಸಿಗೆ ಮಳೆ ಸಕ್ರಿಯ!
March 25, 2026
12:30 PM
by: ಸಾಯಿಶೇಖರ್ ಕರಿಕಳ
ಹವಾಮಾನ ವರದಿ | 24-03-2026 | ಕರ್ನಾಟಕದಲ್ಲಿ ಮತ್ತೆ ಮಳೆ ಅಲರ್ಟ್‌ | ಈ ದಿನದಿಂದ ಮಳೆ ವ್ಯಾಪ್ತಿ ಹೆಚ್ಚಳ ಸಾಧ್ಯತೆ..!
March 24, 2026
12:24 PM
by: ಸಾಯಿಶೇಖರ್ ಕರಿಕಳ
ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ 4 ಸಾವಿರ ಹುದ್ದೆಗಳು ಖಾಲಿ – ಆರಂಭದಲ್ಲಿ 1 ಸಾವಿರ ಹುದ್ದೆಗಳ ಭರ್ತಿಗೆ ಕ್ರಮ
March 24, 2026
7:12 AM
by: ಮಿರರ್‌ ಡೆಸ್ಕ್

You cannot copy content of this page - Copyright -The Rural Mirror