Advertisement
ಅನುಕ್ರಮ

ಗಾವೋ ಮೇ ಮಾತರಃ ಸಂತು….

Share

ಮನುಷ್ಯನು ಗೋವನ್ನು ಸಾಕುಪ್ರಾಣಿಯಾಗಿಸಿ  ಗೋವಿನ ಅವಲಂಬನೆಯಿಂದ ಜೀವಿಸಲು ಪ್ರಾರಂಬಿಸಿದ್ದು ಅನಾದಿಕಾಲದಿಂದ.  ಸಾಕುಪ್ರಾಣಿಗಳ ವರ್ಗದಲ್ಲಿ ಹಲವಾರು ಇದ್ದರೂ ಗೋವಿನಷ್ಟು ಅನನ್ಯವಾದ ಬಹೂಪಯೋಗಿ ಸಾಕುಪ್ರಾಣಿ ಇನ್ನೊಂದಿಲ್ಲ. ಭಾರತದ ದೇಶದ ಹಲವಾರು ರಾಜ್ಯಗಳಲ್ಲಿ ಕಂಡುಬರುವ ವಿವಿಧ ದೇಶೀ ಜಾನುವಾರುಗಳು ಅಲ್ಲಿನ ವಾತಾವರಣ,ಪ್ರಾಕೃತಿಕ ಸ್ಥಿತಿಗತಿಗಳಿಗೆ ಅನುಗುಣವಾಗಿ ಬೆಳೆದುಬಂದಿರುವುದು ಕಂಡುಬರುತ್ತದೆ. ಕಾಲಕ್ರಮೇಣ ರಾಜ್ಯದಿಂದ ರಾಜ್ಯಕ್ಕೆ ದೇಶವಿದೇಶಗಳಿಗೆ ವಿನಿಮಯಗೊಂಡಿರುವ ಉಲ್ಲೇಖಗಳೂ ಸಿಗ್ತವೆ. ಹೀಗೆ ಸಾಗಿಸಲ್ಪಟ್ಟು ಒಂದು ತಳಿ ಇನ್ನೊಂದು ತಳಿಯೊಂದಿಗೆ ಸಂಕರಗೊಂಡು ಹೊಸದಾದ ಲಕ್ಷಣಗಳ ತಳಿಗಳು ಉಗಮಿಸಿದ ಸಂಗತಿಗಳೂ ಆಗಿವೆ.

Advertisement
Advertisement

ದೇಶೀ ತಳಿಗಳಲ್ಲಿ ಒಂದಾದ ಮಲೆನಾಡಗಿಡ್ಡ ತಳಿಯು ಸಹ್ಯಾದ್ರಿ ಪರ್ವತ ಶ್ರೇಣಿಯ ತಪ್ಪಲುಪ್ರದೇಶದಲ್ಲಿ ವ್ಯಾಪಕವಾಗಿ ಹರಡಿಕೊಂಡಿದ್ದ ತಳಿ. ಇವುಗಳೂ ಕೂಡ ದಕ್ಷಿಣದ ರಾಜ್ಯಗಳ ವಿವಿಧ ಪ್ರದೇಶಗಳಲ್ಲಿ, ಬೇರೆ ಬೇರೆ ಸ್ವರೂಪದಲ್ಲಿದ್ದರೂ, ಹಾಗೂ ಪ್ರದೇಶಾನುಸಾರ ವಿವಿಧ ಹೆಸರುಗಳಲ್ಲಿ ಇದ್ದರೂ,ಕೆಲವು ಸಾಮ್ಯತೆಗಳಿಂದ ಕಂಡುಬರುವ ಕಾರಣ ಸಾಮಾನ್ಯವಾಗಿ ಗಿಡ್ಡ ದೇಹದ ಇವು ಮೂಲದಲ್ಲಿ ಬಹುಶಃ ಒಂದೇ ಕುಟುಂಬದಿಂದ ಉಗಮಿಸಿ, ಕಾಲಕ್ರಮೇಣ ಪ್ರದೇಶವಾರು ಹರಡುತ್ತಾ ಹೋದಂತೆ ಅಲ್ಲಲ್ಲಿ ಆಹಾರ ನೀರು,ಹವಾಗುಣ ಗಳಿಗೆ ಅನುಸಾರವಾಗಿ ಸ್ವಲ್ಪಮಟ್ಟಿನ ವ್ಯತ್ಯಾಸಗಳನ್ನು ಪಡೆದುಕೊಂಡು ಸ್ಥಳೀಯ ಹೆಸರುಗಳಿಂದ ಗುರುತಿಸಿರುವುದು ಕಾಣ್ತದೆ. ಆದ್ದರಿಂದ ಗಿಡ್ಡಶರೀರದ ಮಲೆನಾಡಗಿಡ್ಡ,ಕಾಸರಗೋಡುಗಿಡ್ಡ,ವೆಚ್ಚೂರ್,ಕುಳ್ಳನ್,ಪುಂಗನೂರ್ ಇತ್ಯಾದಿ ಜಾನುವಾರುಗಳು ಮೂಲದಲ್ಲಿ ಒಂದೇ ತಳಿಯಿಂದ ಕವಲೊಡೆದ ಸಂತತಿಯಾಗಿರುವ ಸಾಧ್ಯತೆ ಇದೆ.

ಹಿಂದೂಧರ್ಮದ ವೈದಿಕ ಇತಿಹಾಸದ ಪ್ರಕಾರ ಎಲ್ಲ ಭಾರತೀಯ ಗೋವುಗಳೂ ಕೂಡ ಸ್ವರ್ಗದ ಹಸುವಾದ ಕಾಮಧೇನುವಿನ ಸಂತತಿ. ಇಲ್ಲಿ ಭಾರತೀಯ ಗೋ ಸಂತತಿ ಮಾತ್ರವೇ ಕಾಮಧೇನುವಿನ ಮಕ್ಕಳೇ? ವಿದೇಶೀ ಹಸುಗಳು ಅಲ್ಲವೇ? ಎಂಬ ಪ್ರಶ್ನೆ ಬರಬಹುದು. ಹೌದು ಭಾರತೀಯ ಗೋ ಸಂತತಿ ಮಾತ್ರವೇ ಕಾಮಧೇನುವಿನ ಸಂತತಿ. ಯಾಕೆಂದರೆ ವೈದಿಕ ಶಾಸ್ತ್ರಪುರಾಣಗಳು ಕೂಡ ಹುಟ್ಟಿದ್ದು ಭಾರತದಲ್ಲಿಯೇ, ವೇದ ಪುರಾಣಗಳ ಇತಿಹಾಸದಪ್ರಕಾರ ಭಾರತ ಮಾತ್ರವೇ ಕರ್ಮಭೂಮಿ.

ದೇವಾನುದೇವತೆಗಳೂ ಕೂಡ ತಮ್ಮ ಪುಣ್ಯಕ್ಷೀಣವಾದಾಗ ಭಾರತದೇಶದಲ್ಲಿ ಹುಟ್ಟಿ ಪುಣ್ಯಸಂಪಾದನೆ ಮಾಡಿ ಪುನಃ ಸ್ವರ್ಗಕ್ಕೆ ಹೋಗಲು ಸಾಧ್ಯವಿದೆ ಹೊರತು ಅನ್ಯ ದೇಶಗಳ ಭೂಮಿಯಲ್ಲಿ ಅಲ್ಲ ಎಂಬುದು ಪುರಾಣ ನಿರ್ಣಯ.  ಪ್ರಪಂಚವೇ ಭಗವಂತನ ಸೃಷ್ಟಿ. ಅದರಲ್ಲಿ ವಿಶೇಷವಾದದ್ದು ಜಂಬೂದ್ವೀಪದಲ್ಲಿರುವ ಭಾರತ ದೇಶ ಹಾಗೂ ಇಲ್ಲಿರುವ ಎಲ್ಲವಿಧದ ಸಂಪತ್ತು. ಆದ್ದರಿಂದ ಭಾರತೀಯ ಗೋ ಸಂಪತ್ತು ಇತರ ದೇಶಗಳ ಗೋವುಗಳಿಗಿಂತ ಭಿನ್ನವೇ ಆಗಿದೆ. ಅದಕ್ಕೆ ಕಾರಣ ಸ್ವರ್ಗಧೇನುವಾದ ಕಾಮಧೇನುವೇ ಕಾರಣ ಎಂಬುದು ಸನಾತನ ನಂಬಿಕೆ ಹಾಗೂ ಗೋವಿನ ಶರೀರದಲ್ಲೇ ದೇವತೆಗಳ ಸಾನ್ನಿಧ್ಯವಿದೆ ಎಂಬ ಕಾರಣಕ್ಕಾಗಿಯೇ ಅದು ಪೂಜನೀಯ.ಜೊತೆಗೆ ಅವುಗಳು ಯಾವ ಪರಿಯಲ್ಲಿ ಮನುಷ್ಯನನ್ನು ಸಲಹಿವೆ ಎಂದು ಅರ್ಥಮಾಡಿಕೊಂಡರೆ ಮತ್ತಷ್ಟು ಅಭಿವಂದನೀಯ. ಆ ನಿಟ್ಥಿನಲ್ಲಿ ಮಲೆನಾಡಗಿಡ್ಡಗಳ ಇತಿಹಾಸವನ್ನು ಸ್ಥೂಲವಾಗಿ ಅವಲೋಕಿಸಿದರೆ ಅರ್ಥವಾದೀತು.

ಇಂದು ದೈಹಿಕ ರಚನೆ ಹಾಗೂ ವಂಶವಾಹಿಗಳ ಭಿನ್ನತೆಯ ಆಧಾರದಲ್ಲಿ ಭಾರತೀಯ ತಳಿಗಳೆಂದು ಗುರುತಿಸಲ್ಪಟ್ಟವುಗಳಲ್ಲಿ ಮಲೆನಾಡ ಗಿಡ್ಡಗಳು ಕರಾವಳಿ ಹಾಗೂ ಮಲೆನಾಡ ಜಿಲ್ಲೆಗಳಲ್ಲಿ ಹಿಂದಿನಿಂದಲೂ ವ್ಯಾಪಕವಾಗಿ ಜನ ಜೀವನ ಹಾಗೂ ಕೃಷಿ ಉತ್ಪಾದನೆಗೆ ತನ್ನದೇ ತನ್ನದೇ ಆದ ಕೊಡುಗೆಯನ್ನು ನೀಡಿವೆ. ಇದೊಂದು ರೀತಿ ಮಲೆನಾಡ ಗಿಡ್ಡ ದನ ಕರುಗಳ ತವರೂರೆಂಬಂತೆ ಆಗಿದೆ. ಇಲ್ಲಿನ ಮಳೆ-ಸೆಖೆ-ಛಳಿ ಎಲ್ಲವನ್ನೂ ಸಹಿಸಿಕೊಂಡಿವೆ. ಬೆಟ್ಟಗುಡ್ಡಗಳನ್ನು ಹತ್ತಿಳಿದು ಕಾಡಸೊಪ್ಪು-ತೋಡ ನೀರು ಗಳಿಂದ ಬದುಕಿ,ಶೂನ್ಯ ಬಂಡವಾಳದಿಂದ ಇಲ್ಲಿನ ಮಂದಿಗೆ ಸರಳ ಬದುಕಿನ ಮಾರ್ಗ ತೋರಿವೆ.

ಮಲೆನಾಡಗಿಡ್ಡಗಳಲ್ಲಿ ಹುಟ್ಟುವ ಕಪಿಲಗಳೂ ಸೇರಿದಂತೆ ಗೋವಿನ ಸಂಬಂಧಿತ ಅನೇಕ ಕಥೆಗಳೂ ಸ್ಥಳಪುರಾಣ-ಐತಿಹ್ಯಗಳೂ ಅಲ್ಲಲ್ಲಿ ಜನಮಾನಸದಲ್ಲಿ ಹರಡಿವೆ. ಒಂದು ಕಾಲದಲ್ಲಿ ಜನರ ಸಂಪತ್ತಿನ ಮಾನದಂಡವಾಗಿದ್ದ ಈ ಗೋವುಗಳು ಹಾಲಿನ ಇಳುವರಿಯಿಂದಲೋ, ಏರು ತಗ್ಗಿನ ಅಂಕಣಗಳ ಗದ್ದೆಯಲ್ಲಿ ಗಿಡ್ಡಹೋರಿಗಳು ಹೂಟೆಯ ಉಪಯೋಗದಿಂದಲೋ ಮನುಷ್ಯರ ಕುಲವನ್ನು ಗುರುತಿಸುವಂತೆ ಗುರುತಿಸಲ್ಪಡುತ್ತಿದ್ದವು. ಕಂಬಳ, ಹೂಟೆ, ಹಾಲು ಬೆಣ್ಣೆ ತುಪ್ಪಗಳ ಹೆಚ್ಚಿನ ಉಪಯೋಗವಿದ್ದವರಿಗೆ ಕೋಣ ಎಮ್ಮೆಗಳ ಮೇಲೆ ಆಸಕ್ತಿಯಾದರೆ,ದೈವ ದೇವರ ಕಾರ್ಯದಲ್ಲಿ ಮಲೆನಾಡಗಿಡ್ಡಗಳ ಉತ್ಪನ್ನಗಳ ಬಳಕೆಯೇ ಅನಿವಾರ್ಯವಾದ ಕಾರಣ ಅವುಗಳು ಪೂಜನೀಯವೂ ಆಗಿ ತಮ್ಮದೇ ಆದ ಸ್ಥಾನ ಪಡೆದಿದ್ದವು.

ಸೇರು,ಪಾವು,ಕುಡತೆಯ ಅಳತೆಗಳಲ್ಲಿ ಹಾಲಿನ ಇಳುವರಿಯನ್ನು ನಿರ್ಣಯಿಸಿ,ಅಂತಹ ಹಸುಗಳ ಹೆಣ್ಣುಕರುಗಳ ಗುಣಮಟ್ಟವನ್ನೂ ಮುಂದಾಗಿ ಜನ ಅಂದಾಜಿಸುತ್ತಿದ್ದರು. ವರ್ಷವೂ ಗದ್ದೆ ತೋಟಗಳನ್ನು ಬಿದಿರಮುಳ್ಳಿನ ಬೇಲಿಯಿಂದ ಸುರಕ್ಷಿತಗೊಳಿಸಿ ಬೆಟ್ಟಗುಡ್ಡಗಳಿಗೆ ಜಾನುವಾರುಗಳನ್ನು ಮೇಯಲು ಬಿಟ್ಟು ,ಭತ್ತದ ಹುಲ್ಲು,ಅಕ್ಕಿಯ ತೌಡುಗಳ ಬಳಕೆ ಹಾಗೂ ಅಗತ್ಯಬಿದ್ದರೆ ಹಳ್ಳಿಯ ಪರಿಣತ ನಾಟಿವೈದ್ಯರ ಗಿಡಮೂಲಿಕೆ ಔಷಧಿಗಳ ಸಹಾಯದಿಂದ ಜತನದಿಂದ ಕಾಪಾಡಿಕೊಂಡು ಬಂದ ಜಾನುವಾರುಗಳಿವು. ಹುಲಿ ಚಿರತೆಗಳ ಸಂಖ್ಯೆ ಹೆಚ್ಚಿದ್ದ ಕಾಡಿನ ಪಕ್ಕದ ಊರುಗಳಲ್ಲಿ ಸಾಕಲ್ಪಡುತ್ತಿದ್ದ ಪರಿಸ್ಥಿಯಲ್ಲಿ ಕಾಡಿಗೆ ಮೇಯಲು ಹೋದ ದನಕರುಗಳು ಕಣ್ಮರೆಯಾಗುವುದು, ಮೇಯಲು ಹೋದಾಗ ಗಬ್ಬದ ದನಗಳು ಅಲ್ಲೇ ಕರು ಹಾಕಿ ಕರುವಿನೊಂದಿಗೆ  ಹಿಂದಿರುಗುವುದು.ಗಟ್ಟಿಮುಟ್ಟಾದ ಹೋರಿಗಳು ಗೋ ಮಂದೆಯ ರಕ್ಷಕರಂತೆ ವರ್ತಿಸಿ ಕಾಪಾಡುವುದು,ಸಹಚರ ಗೋವುಗಳು ಅಪಾಯಕ್ಕೆ ಸಿಲುಕಿದಾಗ ಮನೆಗೆ ಬಂದು ಕೂಗಿ ವಿಶಿಷ್ಟವಾದ ಧ್ವನಿಯಿಂದ ಸೂಚನೆಕೊಡುವುದು ಅಥವಾ ಗಂಡಿ ಗುಂಡಿಗಳಿಗೆ ಬಿದ್ದ ಹಸು ಕರುಗಳನ್ನು ಬಿಟ್ಟು ಬರದೆ ಕೂಗಿ ತನ್ನ ಮಾಲೀಕರನ್ನು ಎಚ್ಚರಿಸಿವುದು ಇತ್ಯಾದಿ ಸಂಗತಿಗಳು ಇಲ್ಲಿವರಿಗೆ ಅಂದು ಸಾಮಾನ್ಯ ವಿಚಾರವಾಗಿತ್ತು. ಇಂದಿನವರಿಗೆ ಮೂಕಜೀವಿಗಳ ಆ ಕಥೆಗಳು ಅಚ್ಚರಿಯನ್ನುಂಟು ಮಾಡ್ತವೆ.

ಚಿಕ್ಕ ಮಗು ಬಾಣಂತಿ,ರೋಗಿಗಳು ಇರುವ ಮನೆಯವರಿಗೆ ಹಾಲುಕರೆಯುವ ಹಸುವನ್ನು ಉಚಿತವಾಗಿಯೂ ದನ ಉಳ್ಳವರು ಕೊಡುವುದಿತ್ತು. ಅಥವಾ ಹಾಲನ್ನೂ ಉಚಿತ ಕೊಡ್ತಿದ್ದರು.

ಭೂಮಿಯಿಲ್ಲದ ಮಂದಿ ಹಸುವಿಗೆ ಹುಲ್ಲು ಬೇಕಾದರೆ ತೋಟ ಇದ್ದವರ ತೋಟಗಳಿಂದ ಹೆರೆಸಿ ಕೊಂಡೋಗಲು ಕೊಡುವ ಪರಿಪಾಟವಿತ್ತು. ದನಗಳ ಕೊಟ್ಟಿಗೆಗೆ ಹಾಸಲು ಸೊಪ್ಪು,ತರಗೆಲೆ ಸಂಗ್ರಹ ಮಾಡಿ ಮಳೆಗಾಲದಲ್ಲಿ ಬೆಚ್ಚಗಿರುವಂತೆ ನೋಡಿಕೊಳ್ಳುವುದು, ದನ ಕಾಣೆಯಾದರೆ,ಅನಾರೋಗ್ಯಕ್ಕೆ ಒಳಗಾದರೆ ಹರಕೆ ಹೊತ್ತುಕೊಳ್ತಿದ್ದರು.ದೇವರಿಗೆ ಕರುಗಳನ್ನು ಹರಕೆ ಒಪ್ಪಿಸುವುದು,ಹೋರಿಕರುಗಳನ್ನು ನಂದಿ ಬಿಡುವುದು,ಗೋದಾನ ಕೊಡುವುದು. ಮಾಮೂಲಿ ಸಂಗತಿಯಾಗಿತ್ತು.
ಬೆಳ್ಳಿ,ಕಾಳಿ,ಗೌರಿ,ಗಂಗೆ,ಕಾವೇರಿ,ಕಲ್ಯಾಣಿ ಇತ್ಯಾದಿ ಹಸುಗಳಿಗೆ ನಾಮಕರಣ, ಕಾಳ, ಬೊಳ್ಳ, ಗೆಂದ, ಮೈರ, ಕರಿಯ , ಶಂಭು, ರಾಮ, ಕೃಷ್ಣ ಇತ್ಯಾದಿ ನಾಮಧೇಯಗಳಿಂದ ಹೋರಿಗಳ ಗುರುತು. ಕರು ಜನಿಸಿ ಹತ್ತು ದಿನಗಳ ತನಕ ಹಾಲಿನ ಬಳಕೆ ಇಲ್ಲ. ಹನ್ನೊಂದನೆಯ ದಿವಸ ಗ್ರಾಮದೇವರಿಗೋ ನಾಗನಿಗೋ,ಮನೆದೇವರಿಗೋ ಹಾಲಿನ ಸಮರ್ಪಣೆಯಾದ ನಂತರ ಮನೆಬಳಕೆ. ಕರು ಬಿಡದೆ ದನ ಹಾಲು ಸುರಿಸದು, ಹೆಚ್ಚಿನ ದನಗಳಿಗೆ ಹಾಲುಕರೆವಷ್ಟು ಹೊತ್ತೂ ಕರು ಮುಂದೆಯೇ ನೆಕ್ಕಲು ಸಿಗಬೇಕು. ಇನ್ನು ಕೆಲವರ ಕಾಲಿಗೆ ಹಗ್ಗ ಹಾಕಬೇಕು. ಕರುವಿಗಾಗಿ ಬಿಡುವ ಮೊಲೆಯ ಹಾಲು ಕರೆಯಲು ಬಿಡದ ಹಸುಗಳೂ ಇರ್ತಿದ್ದವು.ಇನ್ನು ಕೆಲವಕ್ಕೆ ಅಕ್ಕಿನುಚ್ಚಿನ ಮಡ್ಡಿ ಹಿಂಡಿ ಇಟ್ಟು ಅದನ್ನು ತಿನ್ನುವಷ್ಟರಲ್ಲಿ ಹಾಲು ಕರೆದುಕೊಳ್ಳಬೇಕು. ಮನೆಯ ಚಿಕ್ಕ ಮಕ್ಕಳಿಗೆ ಚಿನ್ನಾಟವಾಡುವ ಕರುಗಳೆಂದರೆ ಅಚ್ಚುಮೆಚ್ಚು. ದೊಡ್ಡಾದಂತೆ ಮುದ್ದಿನಿಂದ ಸಾಕಿದ ಕರುಗಳನ್ನು ಕೊಟ್ಟರೆ ರಂಪಾಟ.ಇವೆಲ್ಲ ಬಾಲ್ಯದಿಂದಲೂ ದನಕರುಗಳ ಜೊತೆ ಅವಿನಾಭಾವದ ನಂಟನ್ನು ಬೆಳೆಸಿಬಿಟ್ಟಿದ್ದವು.

ಹಿಂದೆ ಕತ್ತೆಕಿರುಬ,ಚಿರತೆಗಳ ಹಾವಳಿಯಿದ್ದಾಗ ಕರುಗಳು ಮನೆಯೊಳಗೆ. ಅಥವಾ ಹಟ್ಟಿಯ ಪಕ್ಕ ಪಂಜರದ ಬಾಗಿಲಿನ ಕೋಣೆ. ಕೊಟ್ಟಿಗೆಯೂ ಬಂದೋಬಸ್ತ್,ಕಾಡುಬಳ್ಳಿಗಳ ಪಡಿಬಾಗಿಲು ಹೀಗೆ ಗೋ ಸಂಪತ್ತಾಗಿ ಕಾಣಲ್ಪಟ್ಟಿತ್ತು.

ಹೀಗೆ ಹಲವಾರು ಸಂಖ್ಯೆಯ ದನಕರುಗಳು,ಮನೆ ಮಂದಿಯ ಹೊಟ್ಟೆ ತಂಪಾಗಿಸಲು ಹಾಲು ಮಜ್ಜಿಗೆಗಳ ತುಪ್ಪ ಇತ್ಯಾದಿಗಳು ಹಾಗೂ ಸತ್ಯನಾರಾಯಣ ಪೂಜೆಗೆ, ಹೋಮ ಹವನ, ಶುಭಾಶುಭಕರ್ಮಗಳಿಗೆ,ದೇವಸ್ಥಾನಗಳಿಗೆ ಇತ್ಯಾದಿ ಅನೇಕ ಉಪಯೋಗಗಳಿಗೆ ನೀಡ್ತಾ, ಮನುಷ್ಯನ ಜನನದಿಂದ ಮರಣದ ತನಕ ನಿತ್ಯವೂ ಮಲೆನಾಡು ಕರಾವಳಿಗರ ಕಾಮಧೇನುವಾಗಿ, ಸಾಕುತಾಯಿಯಾಗಿ ಸಲಹಿದ ಮಲೆನಾಡಗಿಡ್ಡ ಗೋ ಸಂತತಿ ಇಂದು ಅದರ ತವರೂರವರಿಗೇ ನಿಕೃಷ್ಟವಾದಂತೆ ಕಂಡಾಗ ಮನುಷ್ಯನೆಷ್ಟು ಸ್ವಾರ್ಥಿಯೆನಿಸದೇ? ನೀನಾರಿಗಾದೆಯೋ ಎಲೆ ಮಾನವಾ?

ಬರಹ :
ಮುರಲೀಕೃಷ್ಣ.ಕೆ.ಜಿ
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಮುರಲೀಕೃಷ್ಣ ಕೆ ಜಿ

ಕಡಬ ತಾಲೂಕಿನ ಆಲಂತಾಯ ಗ್ರಾಮದ ಮುರಲೀಕೃಷ್ಣ ಕೆ ಜಿ ಅವರು ಕೃಷಿ ಮತ್ತು ಪೌರೋಹಿತ್ಯದ ವೃತ್ತಿಯನ್ನು ಮಾಡುತ್ತಾರೆ. ಹವ್ಯಾಸವಾಗಿ ಉಪನ್ಯಾಸ ಮತ್ತು ಲೇಖನ ಬರೆಯುತ್ತಾರೆ. ವೇದ ಮತ್ತು ಸಂಸ್ಕೃತ ಅಧ್ಯಯನ ಮಾಡಿ ಸಂಸ್ಕೃತದಲ್ಲಿ ಎಂ ಎ ಮಾಡಿದ್ದಾರೆ. ಭಾರತೀಯ ಗೋವಿನ ಬಗ್ಗೆ ಆಸಕ್ತಿಯಿಂದ ಕೆಲಸ ಮಾಡುತ್ತಾರೆ.

Published by
ಮುರಲೀಕೃಷ್ಣ ಕೆ ಜಿ

Recent Posts

ಮಣ್ಣಿಲ್ಲದೇ ಅವಕಾಡೊ ಬೆಳೆ..! ಜೇನು ಸೇರಿಸಿದ ಕೃಷಿ ಈಗ ಹೊಸ ಟ್ರೆಂಡ್

2026 ರಲ್ಲಿ ಹೈಡ್ರೋಪೋನಿಕ್ ಅವಕಾಡೊ ಕೃಷಿ ಮತ್ತು ಜೇನು ಪರಾಗಸ್ಪರ್ಶದ ಸಂಯೋಜನೆ ಹೊಸ…

20 hours ago

ರೇಷ್ಮೆ ಗೂಡಿಗೆ 800 ರೂ.ವರೆಗೆ ಬೆಲೆ | ಚಾಮರಾಜನಗರದಲ್ಲಿ ರೈತರಿಗೆ ಲಾಭದಾಯಕ ಹಾದಿ

ಚಾಮರಾಜನಗರ ಜಿಲ್ಲೆಯಲ್ಲಿ ರೇಷ್ಮೆ ಗೂಡಿಗೆ ಕೆಜಿಗೆ 750ರಿಂದ 800 ರೂಪಾಯಿವರೆಗೆ ಬೆಲೆ ಸಿಗುತ್ತಿದೆ.…

20 hours ago

ಸ್ಥಳೀಯ ಚುನಾವಣೆಗಳಲ್ಲಿ ಇವಿಎಂಗೆ ಬ್ರೇಕ್ | ಬ್ಯಾಲೆಟ್ ಪೇಪರ್ ಮೂಲಕ ಮತದಾನಕ್ಕೆ ಸಚಿವ ಸಂಪುಟ ಹಸಿರು ನಿಶಾನೆ

ಕರ್ನಾಟಕದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಇವಿಎಂ ಬದಲಿಗೆ ಬ್ಯಾಲೆಟ್ ಪೇಪರ್ ಮೂಲಕ ಮತದಾನ…

20 hours ago

ಕೇಂದ್ರವು ಕೇರಳದ ರಬ್ಬರ್ ಕ್ಷೇತ್ರವನ್ನು ದುರ್ಬಲಗೊಳಿಸುತ್ತಿದೆ – ಆರೋಪ

ಕೇಂದ್ರ ಸರ್ಕಾರವು ರಾಜ್ಯದ ರಬ್ಬರ್ ಕೃಷಿಯನ್ನು ಈಶಾನ್ಯಕ್ಕೆ ಸ್ಥಳಾಂತರಿಸುವ ಮೂಲಕ ರಬ್ಬರ್ ಕ್ಷೇತ್ರವನ್ನು…

20 hours ago

ಅಡಿಕೆ ಮಾರುಕಟ್ಟೆ ಸಮೀಕರಣ : ಬೆಲೆ ನಿರ್ಧಾರದ ಹಿಂದಿನ ಅರ್ಥಶಾಸ್ತ್ರ ಮತ್ತು ಮನೋವಿಜ್ಞಾನ

ಅಡಿಕೆ ಮಾರುಕಟ್ಟೆ ಎಂದರೆ ಕೇವಲ ಕೃಷಿ ಉತ್ಪನ್ನಗಳ ವಿನಿಮಯ ಕೇಂದ್ರವಲ್ಲ; ಅದೊಂದು ಸಂಕೀರ್ಣವಾದ…

1 day ago

ಅಡಿಕೆ ಕಳ್ಳಸಾಗಣೆ ಜಾಲಕ್ಕೆ ಮಿಝೋರಂ ಸರ್ಕಾರದ ಬಿಗಿ ಹಿಡಿತ – ಅಡಿಕೆ ಮಾರುಕಟ್ಟೆ ಚೇತರಿಕೆ ಸಾಧ್ಯತೆ

ಮಿಝೋರಂ ಸರ್ಕಾರವು ಅಡಿಕೆ ಕಳ್ಳಸಾಗಣೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಘೋಷಿಸಿದೆ. ಯಾವುದೇ…

1 day ago