ಬದುಕು ಬದಲಿಸುವ ಸ್ಪೂರ್ತಿದಾಯಕ ಕತೆಗಳನ್ನು ಹೊತ್ತ ಪುಸ್ತಕ “ಗಿಪ್ಟೆಡ್ “

September 7, 2021
9:34 PM

ದೈಹಿಕ ಅಸಾಮರ್ಥ್ಯ ದೊಂದಿಗೆ ಅಸಾಧಾರಣ ಬದುಕನ್ನು ಬದುಕುವ ಬದುಕನ್ನು ಸಂಭ್ರಮದಿಂದ ನೋಡುವ ಕಥೆಗಳನ್ನು ಹೊತ್ತಿರುವ ಹೊತ್ತಗೆ ‘ಗಿಪ್ಟೆಡ್’.

ಬದುಕಿನ ಮೇಲೆ ಪ್ರಭಾವ ಬೀರುವ ಈ ಕಥೆಗಳು ನಮ್ಮನ್ನು ಪ್ರೇರೇಪಿಸುತ್ತದೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯ 2016 ನೇ ಸಾಲಿನ ಪುಸ್ತಕ ಬಹುಮಾನ ಪಡೆದ ಕೃತಿಯ ಮೂಲ ಲೇಖಕರು ಸುಧಾ ಮೆನನ್ – ವಿ.ಆರ್ .ಫಿರೋಸ್. ಕನ್ನಡಕ್ಕೆ  ಎ.ಆರ್ ಮಣಿಕಾಂತ್ , ಹ.ಚ. ನಟೇಶ್ ಬಾಬು.

ಇಲ್ಲಿ ಅಭಿವ್ಯಕ್ತಗೊಂಡಿರುವ ಜನರು ನಿಜವಾದ ಹೀರೋಗಳಾಗಿದ್ದಾರೆ. ಎಲ್ಲರಿಗೂ ರೋಲ್ ಮಾಡೆಲ್ ಗಳಾಗಿದ್ದಾರೆ.ಅವರು ಎದುರಿಸಿರುವ ಪರೀಕ್ಷೆಗಳು  ಸಾಧಿಸಿದ ವಿಜಯಗಳಿಂದ ನಾವು ತಿಳಿದುಕೊಳ್ಳುವುದು ಸಾಕಷ್ಟಿದೆ.ಎಲ್ಲಾ ಅಡ್ಡಿ ಆತಂಕಗಳನ್ನು ನಿರಂತರವಾಗಿ ಎದುರಿಸುವ ಅದಮ್ಯ ಚೇತನರನ್ನು ಪುಸ್ತಕವು ಗುರುತಿಸುತ್ತಲೇ ಗಿಪ್ಟೆಡ್ ವ್ಯಕ್ತಿಗಳ ಹಿಂದೆ ನಿಂತು ಅವರ ಪ್ರತಿಭೆ ಹೊರ ಬರಲು ನೆರವಾದ ವ್ಯಕ್ತಿಗಳ ಅಗಾಧ ಶಕ್ತಿಗೆ ಮೆಚ್ಚುಗೆ ಸಲ್ಲಿಸುವ ಕಾರ್ಯವನ್ನು  ಮಾಡುತ್ತದೆ.

ನಾವು ಪ್ರತಿಯೊಬ್ಬರೂ ನಿರ್ದಿಷ್ಟ ಉದ್ದೇಶದೊಂದಿಗೆ ಈ ಜಗತ್ತಿಗೆ ಬಂದಿದ್ದೇವೆ.ಪ್ರತಿಭೆ ಮತ್ತು ಸಾಧಿಸುತ್ತೇನೆ ಎನ್ನುವ ಆತ್ಮವಿಶ್ವಾಸವೇ ಸಾಧನೆಗೆ ಮೂಲ.ನಮ್ಮೊಳಗಿನ ಭಯ ಮತ್ತು ಸಿನಿಕತೆಯನ್ನು ಕಳೆದುಕೊಂಡರೆ ಸಾಕು, ಮನಸ್ಸು ಮುಕ್ತವಾಗುತ್ತದೆ.ಎಲ್ಲರೊಂದಿಗೆ ಬೆರೆಯಲು ಸಾಧ್ಯವಾಗುತ್ತದೆ.ಈ ಪ್ರಪಂಚದಲ್ಲಿ ಸಾಧಿಸಲಾಗದು ಏನೂ ಇಲ್ಲ ಎಂಬುದನ್ನು ಇಲ್ಲಿ ಅಭಿವ್ಯಕ್ತಗೊಂಡಿರುವ ಪ್ರತಿಯೊಬ್ಬರೂ ತೋರಿಸಿಕೊಟ್ಟಿದ್ದಾರೆ.

ನಮ್ಮೊಳಗೆ ಕೌಶಲ್ಯವಿದ್ದರೆ ಅದನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು.ಇಲ್ಲವಾದರೆ ಬಲವಂತವಾಗಿ ಯಾದರೂ ತಂದುಕೊಂಡು ಸಾಧಿಸಬೇಕು.
ಯಾವುದೇ ವಿಷಯಗಳು ತಮ್ಮಷ್ಟಕ್ಕೆ ತಾವು ಘಟಿಸುವುದಕ್ಕೆ ಕಾಯ್ದು ಕೂರದೆ ಯಾವುದಾದರೂ ಒಂದು ವಿಷಯದಲ್ಲಿ ನಂಬಿಕೆಯಿಟ್ಟು ನಮ್ಮ ನಡೆ ಚಿಂತನೆಗಳತ್ತ ಗಮನ ಹರಿಸಿ, ಆ ಚಿಂತನೆಗಳು ಸಾಕಾರಗೊಳ್ಳುವಂತೆ ಮಾಡಬೇಕು. ಆ ನಿಟ್ಟಿನಲ್ಲಿ ಮನಸ್ಸಿನಲ್ಲಿ ಯಾವಾಗಲೂ ಒಂದು ಗುರಿಯಿರಬೇಕು.ಆ ಗುರಿಯನ್ನು ಸಾಧಿಸುವತ್ತ ಗಮನವಿರಬೇಕು.

ನಮ್ಮ ಮೌಲ್ಯಗಳಿಗೆ ಬದ್ಧರಾಗಿರಬೇಕು. ಪ್ರಾಮಾಣಿಕ ಪ್ರಯತ್ನವನ್ನು ಮಾಡಿದಾಗ ದೊರೆತ ಯಶಸ್ಸು ನಿಜವಾದ ತೃಪ್ತಿ  ನೀಡುತ್ತದೆ. ಎಂಬುವುದರಲ್ಲಿ ಇವರ ಪ್ರಾಮಾಣಿಕ ಪ್ರಯತ್ನವಿದೆ. ಯಾವುದಾದರೂ ವಿಷಯ ನಮ್ಮ ಸಮೀಪಕ್ಕೆ ಬಂದಾಗ ಅದನ್ನು ಹೊಸತರ ಆರಂಭವೆಂದುಕೊಳ್ಳಬೇಕು.ಆಗ ಪ್ರತಿಯೊಂದು ಕೆಲಸವೂ ಹರ್ಷದಾಯಕವಾಗುತ್ತದೆ. ಅದರ ಬದಲಿಗೆ ಅಯ್ಯೋ ಇದೇನಿದು ಭಾರ ಎಂದುಕೊಂಡರೆ ಬದುಕಿನ ಯಾನ ಅಲ್ಲಿಗೇ ನಿಲ್ಲುತ್ತದೆ  ಹೊಸತು ಆರಂಭವಾಗುವುದೇ ಇಲ್ಲ. ಎಂದುಕೊಂಡು ಬದುಕಲ್ಲಿ ಭರವಸೆಯನ್ನು ಕಳೆದುಕೊಳ್ಳುವ ಹಂತ ತಲುಪಿದಾಗಲೂ ಮತ್ತೆ ಕನಸುಗಳ ಬೀಜ ಬಿತ್ತಿ ನೀರೆರೆದು ಪೋಷಿಸಿಕೊಂಡು ಸಾಧಿಸಿದವರು.

ಜೀವನದಲ್ಲಿ ಸವಾಲುಗಳು ಎದುರಾದರೆ ಆದನ್ನು ಧೈರ್ಯವಾಗಿ ಎದುರಿಸಿ ಸಮಸ್ಯೆಗಳು ಬಂದಾಗ ಅದನ್ನು ಪರಿಹರಿಸಲು ಪ್ರಯತ್ನಿಸಿದಾಗ ಸವಾಲುಗಳು ಪಾಠವನ್ನು ಕಲಿಸಿಕೊಡುತ್ತದೆ.ಬದುಕಿಗೊಂದು ದಾರಿಯನ್ನು ತೋರುತ್ತದೆ. ಈ ಜಗತ್ತು ನಮ್ಮ ಯಶಸ್ಸನ್ನು ಅಷ್ಟೇ ನೋಡುತ್ತದೆ ನಮ್ಮ ಪದಕಗಳು ಮತ್ತು ಪತ್ರಿಕೆಗಳಲ್ಲಿ ಬಂದಿರುವ ಲೇಖನಗಳನ್ನಷ್ಟೇ ಜನರು ನೋಡುತ್ತಾರೆ.ಆದರೆ ಈ ಸಾಧನೆಗಾಗಿ ನಾವು ಸವೆಸಿದ ಹಾದಿ,ಅಭ್ಯಾಸ ಮತ್ತು ಹಿನ್ನಡೆಗಳು ಯಾರಿಗೂ ಕಾಣಿಸುವುದಿಲ್ಲ ಎಂಬುದನ್ನು ಅರ್ಥೈಸಿಕೊಂಡು, ಆಗಲ್ಲ‌ಎಂದು ಕೂರಬಾರದು ಮನೋ ಸಿಶ್ಚಯವಿದ್ದರೆ ಎಲ್ಲವೂ ಸಾಧ್ಯ. ಎಂಬುದನ್ನು ಸಾಧಿಸಿ ತೋರಿಸಿದವರು ಇವರು. ಗೆಲ್ಲಬೇಕು ಎಂಬ ಹುಮ್ಮನಸ್ಸು ನಮ್ಮ ಜೊತೆಯಾಗಿ ಬಿಟ್ಟರೆ ವಯಸ್ಸು ಮತ್ತು ಆಯಾಸ ನಮ್ಮ ಗಮನಕ್ಕೆ ಬರುವುದಿಲ್ಲ. ನಿಮ್ಮ ದೇಹದ ಯಾವುದೋ ಒಂದು ಭಾಗ ಮಾತ್ರ ಊನವಾಗಿದೆ.ಅದರ ಹೊರತಾಗಿ ನಿಮ್ಮ ದೈಹಿಕ ಸ್ಥಿತಿಗತಿಯಲ್ಲಿ ಯಾವುದೇ ದೋಷವೂ ಇಲ್ಲ. ಹಾಗಾಗಿ ಯಾವುದೇ ಕಾರಣಕ್ಕೂ ಕೀಳರಿಮೆಯಿಂದ ಕಂಗಲಾಗಬೇಡಿ.ಪ್ರತಿಯೊಬ್ಬನೊಳಗೂ ಒಬ್ಬ ಹೀರೋ ಇದ್ದೇ ಇದ್ದಾನೆ.ನಿಮ್ಮೊಳಗೂ ಒಬ್ಬ ಹೀರೋ ಇದ್ದೇ ಇದ್ದಾನೆ. ಎಂಬುದನ್ನು ನೆನಪಲ್ಲಿ ಇಟ್ಟುಕೊಳ್ಳಿ ನಿಮ್ಮ ತಾಕತ್ತು ಏನೆಂಬುದನ್ನು ಸಂದರ್ಭ ಬಂದಾಗ ಈ ಸಮಾಜಕ್ಕೆ ತೋರಿಸಿಕೊಡಿ.ಆತ್ಮವಿಶ್ವಾಸವೊಂದು ಜೊತೆಗಿದ್ದರೆ, ಹೆಳವನೂ ಹಿಮಾಲಯ ಹತ್ತಬಲ್ಲ.
ಆತ್ಮವಿಶ್ವಾಸವೊಂದಿದ್ದರೆ ಒಂದಲ್ಲ,ನೂರು ಸವಾಲುಗಳನ್ನು ಗೆಲ್ಲಬಹುದು ಎಂಬುದನ್ನು ಜಗತ್ತಿಗೆ ಸಾರಿದವರು ಇವರು. ಬದುಕೆಂದರೆ ಹಾಗೆಯೇ ಎಲ್ಲವೂ ಅನಿರೀಕ್ಷಿತ. ಎಲ್ಲ ರೀತಿಯ ಸಂದರ್ಭಗಳೂ ನಮಗೆ ಎದುರಾಗುತ್ತವೆ. ಎಲ್ಲವೂ ದೇವರ ಇಚ್ಛೆಯಂತೆ ಸಾಗುತ್ತದೆ. ಹಾಗೆಂದು ನಾವು ಹಿನ್ನಡೆ ಅಥವಾ ಆಘಾತಗಳಿಂದ ಕುಸಿಯುವ ಅಗತ್ಯವಿಲ್ಲ.ಅವುಗಳಿಂದ ಹೊರಬಂದು ಮುಂದೆ ಸಾಗಬೇಕು ಎಂಬ ದೃಢನಿಶ್ಚಯ ಮಾಡಿಕೊಂಡು ತಮಗಿದ್ದ ವೈಕಲ್ಯತೆಗಳಿಂದ ಎದೆಗುಂದದೆ ತಮ್ಮ ಕನಸುಗಳಿಗೆ ರೆಕ್ಕೆ ಕಟ್ಟಿ ಕನಸುಗಳನ್ನು ನನಸಾಗಿಸಿಕೊಂಡವರು. ಆಕಾಶದಲ್ಲಿಯೇ ಹಾರುವೆನೆಂದು ಭ್ರಮಿಸುತ್ತಿದ್ದವರು ಮತ್ತೆಂದೂ ಏಳದಂತೆ ನೆಲಕ್ಕೆ ಒಗೆಯಲ್ಪಟ್ಟಿದ್ದರೂ ಮತ್ತೆ ಬದುಕನ್ನು ಕಟ್ಟಿಕೊಂಡವರು. ವಾಸ್ತವ ಏನಿದೆ ಎಂಬುದನ್ನು ಅರ್ಥೈಸಿಕೊಂಡು ಅದನ್ನು ಎದುರಿಸಿ ಅದನ್ನು ಮೆಟ್ಟಿ ನಿಲ್ಲಲು ಇರುವ ಅವಕಾಶಗ ಳನ್ನು ಕಂಡುಕೊಂಡು ಬದುಕಿನಲ್ಲಿ ಯಶಸ್ಸನ್ನು  ಕಂಡವರು.

ನಾವು ಈ ಜಗತ್ತಿನಲ್ಲಿ ಕ್ಷಣ ಕಾಲದ ಅತಿಥಿಗಳು. ಬೇರೆಯದೇ ಆದ ಮನಸ್ಥಿತಿಯಲ್ಲಿ ಎಲ್ಲವನ್ನೂ ಕಾಣುವುದನ್ನು ಕಲಿಯಬೇಕು. ನಾವು ನಮ್ಮ ಬಲಹೀನತೆಗಿಂತ ನಮ್ಮ‌ಶಕ್ತಿಯ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ಯಾವುದನ್ನು ಗಳಿಸಲು ಸಾಧ್ಯವಾಗುವುದಿಲ್ಲವೋ ಅದರ ಬಗ್ಗೆ ಚಿಂತಿಸುವುದರ ಬದಲು ಏನು ಉತ್ತಮ ಕಾರ್ಯ ಮಾಡಲು ಸಾಧ್ಯವೋ ಅದನ್ನು ಮಾಡಲು ಯತ್ನಿಸಬೇಕು. ಎಲ್ಲರೂ ಎಲ್ಲವನ್ನೂ ಮಾಡಲು ಸಾಧ್ಯವಿಲ್ಲ. ನೀವು ಶಾಂತಚಿತ್ತರಾಗಿ ಕಾರ್ಯನಿರ್ವಹಿಸಿದರೆ ಬದುಕು ಸುಲಭವಾಗುತ್ತದೆ‌ ಬೇರೊಬ್ಬರು ಏನೋ ನಿಮಗಸಾಧ್ಯವಾದುದನ್ನು ಸಾಧಿಸಿದರೆಂದು ದ್ವೇಷದಿಂದಲೋ ಪೈಪೋಟಿಯಿಂದಲೋ ಕಾರ್ಯಪ್ರವೃತ್ತರಾಗಬೇಡಿ .‌ ನೀವು ಯಾವುದರಲ್ಲಿ ಪರಿಣಿತರೋ ಆ ಕಾರ್ಯವನ್ನು ಶ್ರದ್ಧೆ ಯಿಂದ ಮುಂದುವರೆಸಿ. ಗುಣಾತ್ಮಕ ಚಿಂತನೆ ಮೂಲಕ ಮಾನಸಿಕ ದೃಢತೆ ಸಾಧಿಸಿದರೆ ಧೈಹಿಕ ಕಾಯಿಲೆಗೆ ಪ್ರಕಾಶಮಾನವಾದ ಪರಿಹಾರ ಸಿಗುತ್ತದೆ. ಎಂಬುದನ್ನು ಇವರು ತೋರಿಸಿ ಕೊಟ್ಟಿದ್ದಾರೆ. ಒಟ್ಟಿನಲ್ಲಿ ಹೇಳಬೇಕೆಂದರೆ ಈ ಕೃತಿ ಮಾನವ ಚೇತನದ ಪುಟಿದೇಳಬಲ್ಲ ಗುಣವನ್ನು ಚಿತ್ರಿಸುವ ಒಂದು ಭಾವಗೀತದಂತಿದೆ.

# ಅಪೂರ್ವಚೇತನ್, ಪೆರಂದೋಡಿ

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Rural Mirror Special | Subscribe Our Channel

ಲೇಖಕರ ಪರಿಚಯ​

ಅಪೂರ್ವಚೇತನ್ ಪೆರಂದೋಡಿ

ಶಿಕ್ಷಕಿ

ಇದನ್ನೂ ಓದಿ

ಬೆಳ್ಳಿ ಧರಿಸುವುದು ಎಲ್ಲಾ ರಾಶಿಯವರಿಗೆ ಉತ್ತಮವೇ…? | ಯಾವೆಲ್ಲಾ ರಾಶಿಗಳಿಗಳಿಗೆ ಹಾನಿ..?
March 14, 2025
6:37 AM
by: ದ ರೂರಲ್ ಮಿರರ್.ಕಾಂ
ಸ್ತ್ರೀಯರ ಸಬಲೀಕರಣದ ಹೊಸ ಸವಾಲುಗಳು
March 13, 2025
10:44 PM
by: ಡಾ.ಚಂದ್ರಶೇಖರ ದಾಮ್ಲೆ
ಏಪ್ರಿಲ್‌ನಲ್ಲಿ ಶನಿ ನಕ್ಷತ್ರ ಪ್ರವೇಶದಿಂದ 5 ರಾಶಿಗಳ ಲೈಫ್ ಚೇಂಜ್ ಆಗುವ ಸಾಧ್ಯತೆ‌ |
March 13, 2025
7:00 AM
by: ದ ರೂರಲ್ ಮಿರರ್.ಕಾಂ
ಎಪ್ರಿಲ್‌ನಲ್ಲಿ ಶುಕ್ರನು 9 ರಾಶಿಗಳಲ್ಲಿ ವಿವಿಧ ಪರಿಣಾಮಗಳನ್ನು ಉಂಟುಮಾಡಬಹುದು
March 12, 2025
6:47 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror