ಗೋನಂದಾಜಲ.. ಕೃಷಿಗೆ ಬೇಡ…..! |ದಯವಿಟ್ಟು ನಿಮ್ಮ ಮನೆಯಲ್ಲಿ ಸತ್ತ ಹಸುವನ್ನು ಮಣ್ಣುಮಾಡಿ |

August 13, 2024
11:59 AM
ಎಲ್ಲರೂ ಒಳ್ಳೆಯವರಿರೋಲ್ಲ.. ನಾಳೆ ಊರೂರಲ್ಲಿ ಈ "ಗೋಜಲ" ದ ಹೆಸರಿನ ಬಣ್ಣ ಬಣ್ಣದ ಬಾಟಲಿಯಲ್ಲಿ ಮಾರಾಟ ಶುರುವಾಗಬಹುದು. ಯಥಾ ಪ್ರಕಾರ ಈ ಗೋ ನಂದನ ಜಲಕ್ಕಾಗಿ ಈಗಾಗಲೇ ಅಳಿವಿನ ತುತ್ತ ತುದಿಗೆ ಬಂದಿರುವ ದೇಸಿ ತಳಿ ಹಸುಗಳು ಅಕಾಲ ಮೃತ್ಯು ಗೊಳಗಾಗಿ ಮತ್ತಷ್ಟು ನಾಶ ವಾಗುವುದು ಬೇಡ‌‌‌‌‌‌‌‌.... ಆದ್ದರಿಂದ ಈ ಗೋ ಜಲ ಗಳು ಬೇಡ...

ಗೋನಂದಾಜಲ ಎಂಬ ಗೋ ಆಧಾರಿತ ಸಾವಯವ ದ್ರವ ರೂಪದ ಗೊಬ್ಬರವೊಂದಿದೆ‌ ‌‌‌.ಇದರಲ್ಲಿ ಸತ್ತ ಗೋವುಗಳನ್ನ ವಿವಿಧ ವಸ್ತುಗಳ ಜೊತೆಯಲ್ಲಿ ಸಂಯೋಜಿಸಿ ನೀರಿನಲ್ಲಿ ಕೊಳೆಸಿ ಗೊಬ್ಬರ ತಯಾರಿಸುತ್ತಾರೆ.

Advertisement

ಈ ವಿಚಾರವನ್ನು ಆಧಾರದಲ್ಲಿ ಇಟ್ಟುಕೊಂಡು ಹಿಂದೆ ನಾನೊಂದು ಕಥೆ ಬರೆದಿದ್ದೆ. ಅದರಲ್ಲಿ ನನ್ನ ಭಯ ಏನೆಂದರೆ “ಗೋನಂದಾ ” ಒಂದು ದೊಡ್ಡ ಉದ್ಯಮವಾಗಿ ಬೆಳೆದು ಕಡೆ ಕಡೆಗೆ ಸತ್ತ ಹಸು ಸಿಗದಿದ್ದಾಗ ಜೀವಂತ ಹಸುಗಳನ್ನು ಗೋ ನಂದನಾ ಜಲ ತಯಾರಿಸಲೋಸುಗ ಕೊಂದು ಕೊಳೆಸಿ ಗೊಬ್ಬರ ಮಾಡಬಹುದು ಅಂತ… ಈಗಲೂ ಈ ಭಯ ನನ್ನಲ್ಲಿದೆ…

ಈ ಜಗತ್ತಿನಲ್ಲಿ ಪ್ರಾಣಿ ಪಕ್ಷಿಗಳು ಒಂದು ಸರಪಳಿಯಲ್ಲಿ ಬಂಧವಾಗಿದ್ದವು. ಅಂತೆಯೇ ಹಿಂದೆ ಮನುಷ್ಯ ಸೇರಿದಂತೆ ಎಲ್ಲಾ ಪ್ರಾಣಿ ಪಕ್ಷಿಗಳೂ ಈ ಸರಪಳಿಯ ಕೊಂಡಿಯಲ್ಲಿ ಸೇರ್ಪಡೆಯಾಗಿದ್ದವು. ಯಥೇಚ್ಛವಾಗಿದ್ದ ಹಸುಗಳು (ದೇಸಿ) ಗುಡ್ಡ ಬಯಲಿಗೆ ಮೇಯಲು ಹೋದಾಗ ಅಲ್ಲಿ ಹುಲಿ ಬಾಯಿಗೆ ಆಹಾರವಾಗುತ್ತಿತ್ತು. ಹುಲಿ ತಿಂದು ಬಿಟ್ಟ ಹಸುವಿನ ಶರೀರವನ್ನು ಇನ್ನಿತರ ಪ್ರಾಣಿ ಪಕ್ಷಿಗಳು ತಿನ್ನುತ್ತಿದ್ದವು.

ಮನೆಯಲ್ಲಿ ಸತ್ತ ಹಸುಗಳನ್ನು ಗೋಪಾಲಕರು ಗುಡ್ಡ ಬಯಲಿನಲ್ಲಿ ಬಿಸಾಡುತ್ತಿದ್ದ ಕ್ರಮ ಇತ್ತು. ಆ ಸತ್ತ ಹಸುವನ್ನು “ರಣ ಹದ್ದು” ತಿನ್ನುತ್ತಿತ್ತು.‌ ರಣ ಹದ್ದುಗಳು ನಮ್ಮ ಮಲೆನಾಡಿನಲ್ಲಿ ಓಡಾಡುವ ಕಾಲದಲ್ಲಿ ಈ ಪರಿ ಮಂಗನ ಕಾಟ ಇರಲಿಲ್ಲ.

Advertisement

ಈಗ ಸತ್ತ ಹಸುವನ್ನು ತಿನ್ನಲು ರಣ ಹದ್ದು ಬರೋಲ್ಲ. ಹಾಗೆ ಸತ್ತ ಹಸುವನ್ನು ಬಿಸಾಡಲು ಖಾಲಿ ಜಾಗವೂ ಇಲ್ಲ…!. ಸತ್ತ ಹಸುವನ್ನು ರಣ ಹದ್ದು ಮಾತ್ರ ತಿನ್ನದೇ ಬೇರೆ ಹತ್ತು ಹಲವು ಪ್ರಾಣಿ ಪಕ್ಷಿಗಳು ತಿಂದು ಹಾಕುತ್ತಿದ್ದವು. ಈಗ ಈ ಸರಪಳಿ ಸಂಪೂರ್ಣ ತುಂಡಾಗಿದೆ. ನನ್ನ ಪ್ರಕಾರ ಈ ಕುಣಪ ಜಲ ಅಥವಾ ಗೋನಂದಾ ಜಲ  ಸತ್ತ ಹಸುವಿನಿಂದ ಮಾಡುವುದಕ್ಕಿಂತ ಹಸುವಿನ ಸಗಣಿ ಗೋಮೂತ್ರ ದಿಂದ ಸಾಂಪ್ರದಾಯಿಕ “ಕೊಟ್ಟಿಗೆ ಗೊಬ್ಬರ” ತಯಾರಿಸಿ ಕೃಷಿ ಗೆ ಬಳಸುವುದು ಅತ್ಯುತ್ತಮ. ಈಗ ಉಚಿತವಾಗಿ ಹಂಚಲಾದ ಗೋ ನಂದನಾ ಜಲವೋ ಗೋ ಕೃಪಾಮೃತ ವೋ ಜೀವಾಮೃತವೋ ಮುಂತಾದ ಮಾದರಿಯ ದ್ರವರೂಪದ ಗೊಬ್ಬರ ತಯಾರಿಕೆಯ ಜಟಿಲತೆಗಿಂತ ಸಾಮಾನ್ಯ ಶೈಲಿಯ “ಕೊಟ್ಟಿಗೆ ಗೊಬ್ಬರ” ತಯಾರಿಸುವುದೇ ಸರಿ.

Advertisement

ನಮ್ಮ ಜನ ಎಲ್ಲವನ್ನೂ ತಪ್ಪಾಗಿ ಬಳಸುತ್ತಾರೆ. ನಮ್ಮ ಜನಕ್ಕೆ ಸುಲಭ ವಾಗಿ ದೊರೆಯಬೇಕು. ಈ ಗೋ ಜಲ ಗಳಲ್ಲಿ
ಅಮೃತ ಇದೆ ಎಂಬಂತೆ ಆಯೋಜಕರು ಬಿಂಬಿಸುತ್ತಿದ್ದಾರೆ. ಈ ನಿಸರ್ಗ ವಿಕೋಪ ಮತ್ತು ಅತಿವೃಷ್ಟಿಯಿಂದ ಸತ್ತು ನಾಶವಾದ ಭೂಮಿಯ ಮೇಲ್ಮೈನ ಸೂಕ್ಷ್ಮಾಣು ಜೀವಿಗಳಿಂದ ಬರಡಾದ ಕೃಷಿ ಭೂಮಿಗೆ ಒಂದೋ ಎರಡೋ ಲೀಟರ್ ಈ ಗೋಜಲ ಹಾಕಿಬಿಟ್ಟರೆ ತಕ್ಷಣ ಸಮೃದ್ಧಿಯಾಗೋಲ್ಲ..!.

‌ ಈ ಕಾಲದ ಕೃಷಿ ಭೂಮಿಗೆ ನಾರಿನಂಶದ ಗೊಬ್ಬರ ಬೇಕು. ಈ “ಗೋಜಲ ” ಗಳನ್ನು ಕೃಷಿ ಭೂಮಿಗೆ ಸುರಿದರೆ ಭೂಮಿಯಲ್ಲಿ “ಜಲದ ಸಾರ” ಪಾತಾಳಕ್ಕೆ ಇಳಿದು ಹೋಗುತ್ತದೆ. ಈ ಸೂಕ್ಷ್ಮಾಣು ಜೀವಿಯುಕ್ತ ಜಲವನ್ನು ಮೂರು ಮೂರು ತಿಂಗಳಿಗೆ ರಾಸಾಯನಿಕ ಗೊಬ್ಬರ ಹಾಕೋ ಕೃಷಿಕರ ಕೃಷಿ ಭೂಮಿಯೋ ಅಥವಾ ಈ ಪರಿ ತಿಂಗಳೊಳಗೆ ಇನ್ನೂರು ಮುನ್ನೂರು ಇಂಚು ಮಳೆ ಬೀಳುವ ಈ ಕಾಲದಲ್ಲೋ ಕೃಷಿ ಗೆ ಸುರಿದರೆ ಜಲದ ಸೂಕ್ಷ್ಮಾಣು ಜೀವಿಗಳು ತಕ್ಷಣ ಸತ್ತು ನಾಶವಾಗುತ್ತದೆ. ಯಾವುದೇ ಸಾವಯವ ದ್ರವ ರೂಪದ ಗೊಬ್ಬರ ವನ್ನು ಕೃಷಿಗೆ ಬಳಸಲು ಆ ಕೃಷಿ ಭೂಮಿನ್ನ‌ ಸಾವಯವ ಕೃಷಿ ಗೆ ಘನ‌ ರೂಪದ ಸಗಣಿ ಗೊಬ್ಬರ ಬಳಸಿ ತರಬೇತು ಮಾಡಿಕೊಳ್ಳಬೇಕು. ಅಂತಹ ಭೂಮಿಯಲ್ಲಿ ಮಾತ್ರ ಈ ಗೋ ಜಲಗಳನ್ನು ನಿರಂತರವಾಗಿ ಕೃಷಿ ಭೂಮಿಗೆ ಬಳಸಿ ಅದರಿಂದ ಸ್ವಲ್ಪ ಮಟ್ಟಿಗೆ ಉಪಯೋಗ ಪಡೆಯಬಹುದು. ಆದರೆ ಈ ತಕ್ಷಣ “ಗೋ ಜಲ ” ತಂದು ಡ್ರಂ ಗೆ ಸುರಿದು ಕೃಷಿ ಭೂಮಿಗೆ ಹಾಕಿದರೆ “ಬದನೆಕಾಯಿನೂ ” ಆಗೋಲ್ಲ… ಯಾವ ಪ್ರಯೋಜನವೂ ಆಗದು. ನಾವು ರೈತರು ನಮ್ಮ ಕೃಷಿ ಭೂಮಿ ಯನ್ನು ಮತ್ತು ನಿಸರ್ಗ ವನ್ನು ಚೆನ್ನಾಗಿ ಅರ್ಥ ಮಾಡಿಕೊಂಡರೆ ಇಂತಹ “ಗೋ ಜಲ ” ಗಳ ಪರಿಣಾಮವಾಗಿ ಸಾದ್ಯತೆ ಅರಿವಾಗುತ್ತದೆ.

ಗೋವುಗಳು ಅವುಗಳ ಅಮೃತದಂತಹ ಹಾಲು – ಬೆಣ್ಣೆ- ತುಪ್ಪ – ಮೊಸರು – ಮಜ್ಜಿಗೆ , ಔಷಧೀಯ ಗುಣದ ಗೋ ಮೂತ್ರ ಮತ್ತು ಅಮೂಲ್ಯ ಸಗಣಿಯ ಕಾರಣಕ್ಕೆ ಉಳಿದು ಬೆಳೆದರೆ ಸಾಕು.ಈ ಸತ್ತ ಹಸುಗಳ ಕೊಳೆಸಿ ಗೊಬ್ಬರ ತಯಾರಿಸುವ ವಿಧಾನಕ್ಕಾಗಿ ಹಸುಗಳು ಉಳಿದು ಬಳಕೆಯಾಗುವುದು ಅತ್ಯಂತ ಅಪಾಯಕಾರಿ.ಇದು ಅಮಾನುಷ ಕಾಲ… ಹೆತ್ತ ತಂದೆ ತಾಯಿಗಳನ್ನೇ ಬೀದಿಗೆ ಬಿಡುವ ಕಾಲ . ಈ ಕಾಲದಲ್ಲಿ ಈ ಸತ್ತ ಹಸುವನ್ನು ಬಳಸಿ ಗೊಬ್ಬರ ಮಾಡುವ ಯೋಜನೆ ಬೇಡ.

ಎಲ್ರೂ ಒಳ್ಳೆಯವರಿರೋಲ್ಲ.. ನಾಳೆ ಊರೂರಲ್ಲಿ ಈ “ಗೋಜಲ” ದ ಹೆಸರಿನ ಬಣ್ಣ ಬಣ್ಣದ ಬಾಟಲಿಯಲ್ಲಿ ಮಾರಾಟ ಶುರುವಾಗಬಹುದು. ಯಥಾ ಪ್ರಕಾರ ಈ ಗೋ ನಂದನ ಜಲಕ್ಕಾಗಿ ಈಗಾಗಲೇ ಅಳಿವಿನ ತುತ್ತ ತುದಿಗೆ ಬಂದಿರುವ ದೇಸಿ ತಳಿ ಹಸುಗಳು ಅಕಾಲ ಮೃತ್ಯು ಗೊಳಗಾಗಿ ಮತ್ತಷ್ಟು ನಾಶ ವಾಗುವುದು ಬೇಡ‌‌‌‌‌‌‌‌…. ಆದ್ದರಿಂದ ಈ ಗೋ ಜಲ ಗಳು ಬೇಡ…

ಆತ್ಮೀಯ ಗೋ ಬಂಧುಗಳೇ…, ದಯವಿಟ್ಟು ನಿಮ್ಮ ಮನೆಯಲ್ಲಿ ಸತ್ತ ಹಸುವನ್ನು ಮಣ್ಣುಮಾಡಿ… ಅದು ಈ ಕಾಲಕ್ಕೆ ನ್ಯಾಯಯುತ ಸಂಸ್ಕಾರ.

Advertisement
ಬರಹ :
ಪ್ರಬಂಧ ಅಂಬುತೀರ್ಥ

Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಪ್ರಬಂಧ ಅಂಬುತೀರ್ಥ

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಅಂಬುತೀರ್ಥದ ನಿವಾಸಿ ಪ್ರಬಂಧ. ಬಿ ಎ. ವಿಧ್ಯಾಭ್ಯಾಸ ಮುಗಿಸಿದ ಮೇಲೆ ಕೃಷಿ ಕೆಲಸ. ಕಥೆ , ಪರಿಸರ, ಕೃಷಿ , ವಿಜ್ಞಾನ , ಸಾಮಾಜಿಕ ಮತ್ತು ರಾಜಕೀಯ ವಿಚಾರಗಳ ಲೇಖನ ಬರೆಯುವ ಹವ್ಯಾಸ. ಮಲೆನಾಡು ಗಿಡ್ಡ ಗೋ ತಳಿ ಸಂವರ್ಧನೆ, ಜೀರಿಗೆ ಮೆಣಸಿನಕಾಯಿ ಬೆಳೆಯ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಣೆ. ಮಲೆನಾಡು ಗಿಡ್ಡ ತಳಿ ಹಸುಗಳ ಸೆಗಣಿಯನ್ನು ಮೌಲ್ಯ ವರ್ಧನೆ ಮಾಡಿ ಕೃಷಿ ಸ್ನೇಹಿ ಸೂಕ್ಷ್ಮಾಣು ಜೀವಿಯುಕ್ತ ಸಾವಯವ ಗೊಬ್ಬರ ತಯಾರಿಸಿ ಮಾರಾಟ ಮಾಡುವ ಕೆಲಸವನ್ನೂ ಮಾಡುತ್ತಿದ್ದಾರೆ.

ಇದನ್ನೂ ಓದಿ

ಕಾಡೆಂದರೇನು…? , ಅರಣ್ಯ ಸಚಿವರಿಗೆ ಇದೊಂದು ಮನವಿ..
July 24, 2025
12:43 PM
by: ಪ್ರಬಂಧ ಅಂಬುತೀರ್ಥ
ಹಸುರೆಂಬ ಉಸಿರಿನ ಮಹತ್ವ ಇದು…
July 13, 2025
10:55 PM
by: ಎ ಪಿ ಸದಾಶಿವ ಮರಿಕೆ
ಹಲಸಿನ ಬೀಜದ ಖಾರಾ ಸೇವ್‌ – ನೀವೂ ಮಾಡಿನೋಡಿ
July 13, 2025
10:15 PM
by: The Rural Mirror ಸುದ್ದಿಜಾಲ
ಸಾಮಾಜಿಕ ಕಾರ್ಯಕರ್ತ ಧನಂಜಯ ವಾಗ್ಲೆ ಇನ್ನಿಲ್ಲ | ಅವರು ಬರೆದಿರುವ ಓದಲೇಬೇಕಾದ ಬರಹ ಇಲ್ಲಿದೆ…
July 13, 2025
5:09 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group