ಸಂಪತ್ತಿನಷ್ಟೇ ಸದ್ಭುದ್ಧಿಯೂ ಮುಖ್ಯ – ರಾಘವೇಶ್ವರ ಶ್ರೀ

July 13, 2025
9:37 PM
ಸಮಾಜಕ್ಕೆ, ರಾಷ್ಟ್ರಕ್ಕೆ ವಿಶ್ವಕ್ಕೆ ಬೆಳಕು ನೀಡುವ ವ್ಯವಸ್ಥೆಯನ್ನು ಬೆಳೆಸುವುದು ಇಡೀ ಸಮಾಜದ ಜವಾಬ್ದಾರಿ ಎಂದು ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು.

ಮಕ್ಕಳಿಗೆ ಎಳವೆಯಲ್ಲೇ ಸುಜ್ಞಾನ ನೀಡಿ. ತಂದೆ- ತಾಯಿಗಳನ್ನು ದೇವರಂತೆ ಭಕ್ತಿಯಿಂದ ಕಾಣುವ ಸಂಸ್ಕಾರವನ್ನು ನೀಡುವಂತಾಗಬೇಕು. ಆಗ ಮಾತ್ರ ಸಮಾಜಕ್ಕೆ ಭವಿಷ್ಯ  ಏಕೆಂದರೆ ಸಂಪತ್ತಿನಷ್ಟೇ ಸದ್ಭುದ್ಧಿಯೂ ಮುಖ್ಯ ಎಂದು ರಾಮಚಂದ್ರಾಪುರ ಮಠದ ಶ್ರೀರಾಘವೇಶ್ವರಭಾರತೀ ಸ್ವಾಮೀಜಿ ಹೇಳಿದರು.

Advertisement

ಅವರು ಅಶೋಕೆಯಲ್ಲಿ ಸ್ವಭಾಷಾ ಚಾತುರ್ಮಾಸ್ಯ ವ್ರತದಲ್ಲಿರುವ ಪರಮಪೂಜ್ಯರ 50 ನೇ ವರ್ಧಂತ್ಯುತ್ಸವ ಅಂಗವಾಗಿ ನಡೆದ ಧಾರ್ಮಿಕ ಸಭೆಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಸಮಾಜದ ಪ್ರತಿಯೊಬ್ಬರೂ ಗೋವು, ವಿದ್ಯೆ ಹಾಗೂ ಧರ್ಮರಕ್ಷಣೆಗೆ ಕಂಕಣಬದ್ಧರಾಗಬೇಕು, ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವುದೇ ನಿಜವಾದ ವರ್ಧಂತಿ ಎಂದು ನುಡಿದರು. ಗೋವಿನಲ್ಲಿ ಧರ್ಮ ಅಡಗಿದೆ. ಈಶ್ವರನ ವಾಹನವಾದ ನಂದಿ ಧರ್ಮದ ಪ್ರತೀಕ. ಧರ್ಮ ಸಂಸ್ಕೃತಿ, ಗೋವಿನ ರಕ್ಷಣೆಗೆ ಪಣ ತೊಡೋಣ. ಮುಂದಿನ ಪೀಳಿಗೆಗೆ ಜ್ಞಾನಪರಂಪರೆಯ ಉಡುಗೊರೆ ನೀಡೋಣ. ವರ್ಧಂತಿಯ ರೂಪದಲ್ಲಿ ಇಂಥ ಶಿಕ್ಷಣ ವ್ಯವಸ್ಥೆಯನ್ನು ಬೆಳೆಸುವ ಕಾರ್ಯ ಸದಾ ನಡೆಯಲಿ. ಗೋರಕ್ಷಣೆ, ವಿಶ್ವವಿದ್ಯಾಪೀಠದ ರಕ್ಷಣೆ, ಧರ್ಮದ ಆಚರಣೆಯ ಮೂಲಕ ಅರ್ಥಪೂರ್ಣವಾಗಿ ವರ್ಧಂತಿಯನ್ನು ಆಚರಿಸಿ ಎಂದು ಸಲಹೆ ಮಾಡಿದರು.

ಮುಂದಿನ ದಿನಗಳಲ್ಲಿ ಸಮಾಜಕ್ಕೆ, ರಾಷ್ಟ್ರಕ್ಕೆ ವಿಶ್ವಕ್ಕೆ ಬೆಳಕು ನೀಡುವ ಇಂಥ ವ್ಯವಸ್ಥೆಯನ್ನು ಬೆಳೆಸುವುದು ಇಡೀ ಸಮಾಜದ ಜವಾಬ್ದಾರಿ ಎಂದು ಸೂಚಿಸಿದರು. ನಿಮ್ಮ ಸಂತೋಷ ನಮ್ಮ ಸಂತೋಷ, ನಿಮ್ಮ ತೃಪ್ತಿ ನಮ್ಮ ತೃಪ್ತಿ, ನಿಮ್ಮ ದುಃಖ ನಮ್ಮ ದುಃಖವಾಗಬೇಕು. ಆಗ ಗುರುಶಿಷ್ಯರ ಸಂಬಂಧಕ್ಕೆ ಅರ್ಥ ಬರುತ್ತದೆ ಎಂದು ವಿಶ್ಲೇಷಿಸಿದರು. ಸಂಸಾರದಲ್ಲೂ ವರ್ಧಂತಿ ಬೆಳವಣಿಗೆಯ ಸಂಕೇತ. ಆದರೆ ಪೀಠಾಧಿಪತಿಗಳಾಗಿ ಸಂನ್ಯಾಸ ಸ್ವೀಕರಿಸಿದರೆ ಆಗುವ ಬೆಳವಣಿಗೆ ಅಸಾಧಾರಣ. ಲಕ್ಷ ಲಕ್ಷ ಜನರ ವಿಶ್ವಕುಟುಂಬ ಸನ್ಯಾಸಿಯ ಕುಟುಂಬವಾಗಿ ಮಾರ್ಪಡುತ್ತದೆ. ಆದ್ದರಿಂದ ಇಂಥ ಸ್ಥಾನದಲ್ಲಿ ವರ್ಧಂತಿಗೆ ವಿಶೇಷ ಅರ್ಥವಿದೆ ಎಂದರು.

ಎಲ್ಲರನ್ನೂ ಲೋಕಕ್ಕೆ ಮಾತೆಯೇ ಕರೆ ತರುವುದು; ಲೋಕದಲ್ಲಿ ನಮ್ಮನ್ನು ಬೆಳಗುವಂತೆ ಮಾಡಿದ್ದೂ ಮಾತೆಯರೇ. ಮಾತೆಯರು ವರ್ಧಂತಿಯಂದು ಮಠವನ್ನು ಬೆಳಗುವ ಕಾರ್ಯವನ್ನು ಮಾಡುತ್ತಾ ಬಂದಿದ್ದಾರೆ. ಒಬ್ಬ ಮಾತೆ ಗುರುವನ್ನು ಲೋಕಕ್ಕೆ ನೀಡಿದರೆ, ಲಕ್ಷಾಂತರ ಮಾತೆಯರು ಗುರು ಸಂಕಲ್ಪವನ್ನು ಹೊತ್ತು ಬೆಳೆಸಿ, ಯೋಜನೆಯಾಗಿ ಸಮಾಜಕ್ಕೆ ನೀಡುತ್ತಿದ್ದಾರೆ ಎಂದು ಶ್ಲಾಘಿಸಿದರು.

ಶ್ರೀಮಾತೆ ವಿಜಯಲಕ್ಷ್ಮಿಯವರು ದೀಪಪ್ರಜ್ವಲನ ಮಾಡಿದರು. ಹೊರನಾಡು ಆದಿಶಕ್ತಿ ಅನ್ನಪೂರ್ಣೇಶ್ವರಿ ದೇವಾಲಯದ ಧರ್ಮಕರ್ತೃ ಭೀಮೇಶ್ವರ ಜೋಶಿ ದಂಪತಿ ಸರ್ವಸೇವೆ ನೆರವೇರಿಸಿದರು. 500ಕ್ಕೂ ಹೆಚ್ಚು ಮಾತೆಯರು ಭಾರತೀಭವನದಲ್ಲಿ ಕುಂಕುಮಾರ್ಚನೆ ನೆರವೇರಿಸಿದರೆ, ರಾಜ್ಯದ ಎಲ್ಲೆಡೆ ಶ್ರೀಮಠದ ಅಂಗಸಂಸ್ಥೆಗಳು, ಶಾಖಾಮಠಗಳು, ದೇವಸ್ಥಾನ, ಮಂದಿರಗಳಲ್ಲಿ ಸಾಮೂಹಿಕ ಕುಂಕುಮಾರ್ಚನೆ ನೆರವೇರಿಸಲಾಯಿತು.

ಮಾತೃತ್ವಮ್ ವತಿಯಿಂದ ಕುಂಕುಮಾರ್ಚನೆ ಕಾಣಿಕೆಯನ್ನು ವಾತ್ಸಲ್ಯಧಾರೆಯಾಗಿ 50 ಲಕ್ಷ ರೂಪಾಯಿಗಳ ದೇಣಿಗೆ ಸಮರ್ಪಿಸಲಾಯಿತು. ಜತೆಗೆ ಶ್ರೀಮಠದ ಎಲ್ಲ ಗೋಶಾಲೆಗಳಲ್ಲಿ ಮತ್ತು ಅಂಗಸಂಸ್ಥೆಗಳಲ್ಲಿ ಇರುವ ಗೋವುಗಳಿಗೆ ಗೋಗ್ರಾಸವನ್ನು ನೀಡಲಾಯಿತು. ವೈದಿಕ ವಿಭಾಗದಿಂದ ಅರುಣ ಹವನ, ಆಯುಷ್ಯಸೂಕ್ತ ಹೋಮ, ಅರುಣ ನಮಸ್ಕಾರ, 18 ಲಕ್ಷ ರೂಪಾಯಿ ಸದಾಶಯ ಸಮರ್ಪಣೆ ನಡೆಯಿತು. ಯುವ ಮತ್ತು ವಿದ್ಯಾರ್ಥಿ ವಿಭಾಗದ ವತಿಯಿಂದ ಹವ್ಯಕ ಮಹಾಮಂಡಲದ ವ್ಯಾಪ್ತಿಯ ಎಲ್ಲೆಡೆಗಳಲ್ಲಿ ಸುವರ್ಣ ವೃಕ್ಷ ಯೋಜನೆಯಡಿ 50 ಸಾವಿರ ಸಸಿಗಳನ್ನು ನೆಡಲಾಯಿತು.

ಶ್ರೀಮಠದ ಪ್ರಶಾಸನಾಧಿಕಾರಿ ಸಂತೋಷ್ ಹೆಗಡೆ, ವಿತ್ತಾಧ್ಯಕ್ಷ ಗಣೇಶ್ ಜೆ.ಎಲ್, ಲೋಕಸಂಪರ್ಕಾಧಿಕಾರಿ ಕೆಕ್ಕಾರು ರಾಮಚಂದ್ರ, ಶಾಸನತಂತ್ರ ಅಧ್ಯಕ್ಷ ಮೋಹನ ಭಾಸ್ಕರ ಹೆಗಡೆ, ಹವ್ಯಕ ಮಹಾಮಂಡಲ ಅಧ್ಯಕ್ಷ ಹರಿಪ್ರಸಾದ್ ಪೆರಿಯಾಪ್ಪು, ಪ್ರಧಾನ ಕಾರ್ಯದರ್ಶಿ ಮಹೇಶ್ ಚಟ್ನಳ್ಳಿ, ಮಾತೃಪ್ರಧಾನರಾದ ದೇವಿಕಾ ಶಾಸ್ತ್ರಿ, ಪದಾಧಿಕಾರಿಗಳಾದ ಈಶ್ವರ ಪ್ರಸಾದ್ ಕನ್ಯಾನ, ರುಕ್ಮಾವತಿ ರಾಮಚಂದ್ರ, ಕೃಷ್ಣಮೂರ್ತಿ ಮಾಡಾವು, ಮಾಜಿ ಅಧ್ಯಕ್ಷ ಆರ್.ಎಸ್.ಹೆಗಡೆ ಹರಗಿ, ಮಾತೃತ್ವಮ್ ಅಧ್ಯಕ್ಷೆ ಈಶ್ವರಿ ಬೇರ್ಕಡವು, ಚಾತುರ್ಮಾಸ್ಯ ತಂಡದ ಪ್ರಧಾನ ಸಂಯೋಜಕ ಮಂಜುನಾಥ ಸುವರ್ಣಗದ್ದೆ, ಶ್ರೀಕಾಂತ ಪಂಡಿತ್, ಧರ್ಮಕರ್ಮ ವಿಭಾಗದ ಕೂಟೇಲು ರಾಮಕೃಷ್ಣ ಭಟ್, ವಿವಿವಿ ಗೌರವಾಧ್ಯಕ್ಷ ಡಿ.ಡಿ.ಶರ್ಮಾ, ಆಡಳಿತಾಧಿಕಾರಿ ಡಾ.ಟಿ.ಜಿ.ಪ್ರಸನ್ನ ಕುಮಾರ್, ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ.ಹೆಗಡೆ ಗೋಳಗೋಡು, ಮಹೇಶ್ ಹೆಗಡೆ ಮತ್ತಿತತರು ಉಪಸ್ಥಿತರಿದ್ದರು.  ಗಣೇಶ್ ಜೋಶಿ ಕಾರ್ಯಕ್ರಮ ನಿರೂಪಿಸಿದರು.

Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಗೇರು ಹಣ್ಣಿನಿಂದ ಆದಾಯಕ್ಕೆ ಹೊಸ ದಾರಿ | ಮಾ.11 ರಂದು ICAR–ಗೇರು ಸಂಶೋಧನಾ ನಿರ್ದೇಶನಾಲಯದಲ್ಲಿ ಉದ್ಯಮ–ವಿಜ್ಞಾನಿಗಳ ಸಂವಾದ
February 20, 2026
7:46 AM
by: ದ ರೂರಲ್ ಮಿರರ್.ಕಾಂ
ಪರರನ್ನು ಮೆಟ್ಟಿಲಾಗಿಸಿದ ಸಾಧನೆ ಶಾಶ್ವತವಲ್ಲ: ಆತ್ಮವಂಚನೆಯ ಅಂಧಕಾರದತ್ತ ಕರೆದೊಯ್ಯುವ ಮಾರ್ಗ
February 20, 2026
7:30 AM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
ಹಿರಿಯರ ಪರಿಶ್ರಮದ ಫಲ ಮಕ್ಕಳಿಗೆ ಪರವಾನಗಿ ಆಗಬಾರದು
February 20, 2026
7:20 AM
by: ಡಾ.ಚಂದ್ರಶೇಖರ ದಾಮ್ಲೆ
ವಿಕಸಿತ ಭಾರತಕ್ಕೆ ಕೃತಕ ಬುದ್ಧಿಮತ್ತೆ ಅಡಿಪಾಯ : ಉತ್ಪಾದಕತೆ ಹೆಚ್ಚಳಕ್ಕೆ AI ಸಹಕಾರಿ
February 20, 2026
7:13 AM
by: ಮಿರರ್‌ ಡೆಸ್ಕ್

You cannot copy content of this page - Copyright -The Rural Mirror