ಪಶ್ಚಿಮ ಘಟ್ಟದಲ್ಲಿ ಜಲಸ್ಫೋಟ | ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ಥ | 400 ಮಿಮೀಗೂ ಅಧಿಕ ಮಳೆ | ಇನ್ನೂ 5 ದಿನ ಮಳೆ ನಿರೀಕ್ಷೆ | ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭೇಟಿ ಮುಂದೂಡಲು ಮನವಿ |

August 2, 2022
7:00 AM

ಕಳೆದ ಎರಡು ದಿನಗಳಿಂದ ಪಶ್ಚಿಮ ಘಟ್ಟದಲ್ಲಿ ಜಲಸ್ಫೋಟದ ಜೊತೆಗೆ ಮೇಘಸ್ಫೋಟವೂ ಉಂಟಾಗಿದೆ. ಭಾನುವಾರ ತಡರಾತ್ರಿ ಕಲ್ಮಕಾರು ಪ್ರದೇಶದಲ್ಲಿ ಭಾರೀ ಸದ್ದಿನೊಂದಿಗೆ ಜಲಸ್ಫೋಟಗೊಂಡರೆ ಸೋಮವಾರ ರಾತ್ರಿ ಪಶ್ಚಿಮ ಘಟ್ಟದ ತಪ್ಪಲು ಪ್ರದೇಶದಲ್ಲಿ ಮೇಘಸ್ಫೋಟ ಉಂಟಾಗಿತ್ತು. ಸುಮಾರು 400 ಮಿಮೀಗಿಂತಲೂ ಅಧಿಕ ಮಳೆಯಾಗಿದೆ. ಹಲವು ಕಡೆ ಅತಂತ್ರ ಸ್ಥಿತಿ ಕಂಡುಬಂದಿದೆ.

ಕಲ್ಮಕಾರು ಪ್ರದೇಶದಲ್ಲಿ ಭಾನುವಾರ ತಡರಾತ್ರಿ ಮಳೆ ಕಡಿಮೆ ಇತ್ತು. ಆದರೆ ಕಲ್ಮಕಾರು 5ನೇ ಕಾಡು ಎಂಬ ಪ್ರದೇಶದಲ್ಲಿ ಸುಮಾರು 2 ಗಂಟೆ ರಾತ್ರಿಗೆ ಭಾರೀ ಸದ್ದಿನೊಂದಿಗೆ ಪ್ರವಾಹ ಉಂಟಾಗಿತ್ತು. ರಬ್ಬರ್‌ ಎಸ್ಟೇಟ್‌ನ ಕೆಲವು ಭಾಗದಲ್ಲಿ ಮರ ಹಾಗೂ ಕೆಸರು ಮಿಶ್ರಿತ ನೀರಿನೊಂದಿಗೆ ಪ್ರವಾಹವೇ ಬಂದಿತ್ತು, ಆದರೆ ಭೀಕರತೆ ಅರಿವಿಗೆ ಬಂದದ್ದು ಮರುದಿನ ಬೆಳಗ್ಗೆ. ಸುಮಾರು 25 ತೋಟಗಳಿಗೆ ಕೆಸರು ನೀರು ನುಗ್ಗಿ ಹಾನಿಯಾಗಿದೆ. ಕಲ್ಮಕಾರು-ಕೊಲ್ಲಮೊಗ್ರ ಪ್ರದೇಶದಲ್ಲಿ ಅಷ್ಟೊಂದು ಮಳೆ ಇದ್ದರಿಲಿಲ್ಲ. ಪ್ರವಾಹದ ಕಾರಣದಿಂದ ಕಲ್ಮಕಾರು ಪ್ರದೇಶದಲ್ಲಿ ಹಾಗೂ ಇಡ್ಯಡ್ಕ ಪ್ರದೇಶದಲ್ಲಿ 5 ಮನೆಗಳಿಗೆ ಸಂಪರ್ಕ ಸೇತುವೆ ಕಡಿತಗೊಂಡಿದೆ. ಹೀಗಾಗಿ ಸಮಸ್ಯೆಯಾಗಿದೆ.

ಭಾರೀ ಮಳೆಯಿಂದ ಭಯಾನಕ ಸ್ಥಿತಿ ಇತ್ತು. ಇಡ್ಯಡ್ಕ, ಕಲ್ಮಕಾರು ಪ್ರದೇಶದ 5 ಮನೆಗಳಿಗೆ ಸಂಪರ್ಕ ಸೇತುವೆ ಕಡಿತವಾಗಿದೆ. ಪ್ರವಾಹದ ಭೀಕರತೆ ಜನರಿಗೆ ಅರಿವಾಗಲಿಲ್ಲ. ತಡರಾತ್ರಿಯಾದ್ದರಿಂದ ಈ ಬಗ್ಗೆ ಗೊತ್ತಾಗಲಿಲ್ಲ, ಬೆಳಗ್ಗೆ ನೋಡಿದಾಗ ಗಂಭೀರತೆ ತಿಳಿದಿದೆ ಎಂದು ಕೊಲ್ಲಮೊಗ್ರ ಗ್ರಾಮಸ್ಥ, ಸಾಮಾಜಿಕ ಕಾರ್ಯಕರ್ತ ಉದಯ ಕುಮಾರ್‌ ಶಿವಾಲ ಹೇಳಿದ್ದಾರೆ.
ದ.ಕ ಜಿಲ್ಲೆಯ ವಿವಿಧ ಭಾಗಗಳಲ್ಲಿ ಅದರಲ್ಲೂ  ಸುಬ್ರಹ್ಮಣ್ಯ, ಕಲ್ಮಕಾರು, ಕೊಲ್ಲಮೊಗ್ರು,ಹರಿಹರ, ಬಾಳುಗೋಡು ಆಸುಪಾಸಿನ ಕಡೆಗಳಲ್ಲಿ ಭಾರೀ ಮಳೆಯಾಗುತ್ತಿದೆ. ಈ ಭಾಗದಲ್ಲಿ ಮುಂಜಾಗ್ರತಾ ಕ್ರಮವಹಿಸಲು ಎಸ್ ಡಿಆರ್ ಎಪ್ ಹಾಗೂ ಎನ್ ಡಿಆರ್ ಎಪ್ ತಂಡವನ್ನು ಈಗಾಗಲೆ  ಕಳುಹಿಸಿಕೊಡಲಾಗುತ್ತಿದೆ. ಸಂಬಂಧಿಸಿದ ಅಧಿಕಾರಿಗಳಿಗೂ ಕಟ್ಟೆಚ್ಚರ ವಹಿಸಿ ಮುಂಜಾಗ್ರತೆ ಕ್ರಮ ವಹಿಸುವಂತೆ ಸೂಚಿಸಲಾಗಿದೆ. ನೆರೆ ಸಂದರ್ಭ ಸಾರ್ವಜನಿಕರು ಸಹಕರಿಸಿ, ಸುರಕ್ಷತೆ ಕಡೆ ಹೆಚ್ಚಿನ  ಗಮನಹರಿಸಬೇಕು.  ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭೇಟಿ ನೀಡುವ ಭಕ್ತರು ಒಂದೆರಡು ದಿನಗಳು ಕಾದು ಮಳೆ ಕಡಿಮೆಯಾದ ಬಳಿಕ ಕ್ಷೇತ್ರ ಸಂದರ್ಶಿಸುವಂತೆ  ದ.ಕ ಜಿಲ್ಲಾ ಉಸ್ತುವಾರಿ ಸಚಿವ ವಿ.ಸುನಿಲ್ ಕುಮಾರ್ ತಿಳಿಸಿದ್ದಾರೆ.

ಸೋಮವಾರ ಸಂಜೆಯವರೆಗೂ ಹನಿ ಮಳೆ ಇತ್ತು. ಸಂಜೆ 4 ಗಂಟೆ ನಂತರ ಭೀಕರ ಮಳೆ ಆರಂಭವಾಗಿತ್ತು. ಮೇಘಸ್ಫೋಟದ ಮಾದರಿಯಲ್ಲಿ ಮಳೆ ಸುರಿಯಿತು. ಪಶ್ಚಿಮ ಘಟ್ಟದ ತಪ್ಪಲು ಪ್ರದೇಶಗಳಾದ ಕಲ್ಮಕಾರು, ಕೊಲ್ಲಮೊಗ್ರ, ಕಟ್ಟ, ಹರಿಹರ, ಬಾಳುಗೋಡು, ಕಲ್ಲಾಜೆ, ಸುಬ್ರಹ್ಮಣ್ಯ,ಏನೆಕಲ್ಲು ಪ್ರದೇಶದಲ್ಲಿ ಭಾರೀ ಮಳೆ ಸುರಿಯಿತು. ಕುಕ್ಕೆ ಸುಬ್ರಹ್ಮಣ್ಯ ಪ್ರದೇಶದಲ್ಲಿ 250 ಮಿಮೀ ಆಸುಪಾಸಿನಲ್ಲಿ ಮಳೆಯಾದರೆ ಕಲ್ಲಾಜೆ ಪ್ರದೇಶದಲ್ಲಿ 400 ಮಿಮೀಗಿಂತಲೂ ಅಧಿಕ ಮಳೆಯಾಗಿದೆ. ಕೊಲ್ಲಮೊಗ್ರ ಪ್ರದೇಶದಲ್ಲೂ 200 ಮಿಮೀಗಿಂತಲೂ ಅಧಿಕ ಮಳೆಯಾಗಿದೆ. ಮಳೆಯ ಕಾರಣದಿಂದ ಗ್ರಾಮೀಣ ಭಾಗಗಳು ಅಕ್ಷರಶ: ದ್ವೀಪವಾದವು. ಕೃಷಿ ಭೂಮಿಗಳು ಜಲಾವೃತವಾದವು.

ಭಾರೀ ಮಳೆ ದಕ್ಷಿಣ ಕನ್ನಡ ಮಾತ್ರವಲ್ಲ ಕೊಡಗು, ಸಂಪಾಜೆ, ಕರಿಕೆ, ಭಾಗಮಂಡಲ ಪ್ರದೇಶದಲ್ಲೂ ಭಾರೀ ಮಳೆಯಾಗಿದೆ. ಕರಿಕೆ ಭಾಗಮಂಡಲ ರಸ್ತೆಯ ಹಲವು ಕಡೆಗಳಲ್ಲಿ ಭೂಕುಸಿತ ಉಂಟಾಗಿದೆ. ಸಂಪಾಜೆಯಲ್ಲಿ ಭಾರೀ ಮಳೆಗೆ ಮನೆಗಳಿಗೆ ಹಾನಿಯಾಗಿದೆ. ಮಧ್ಯರಾತ್ರಿ ಉಂಟಾದ ಪ್ರವಾಹದಿಂದ ಕೆಲವು ಮನೆಗಳಿಗೂ ನೀರು ನುಗ್ಗಿತ್ತು. ಕೇರಳದ ಹಲವು ಜಿಲ್ಲೆಗಳಲ್ಲೂ ಮಳೆಯಬ್ಬರ ಕಂಡುಬಂದಿದೆ.ಇದೀಗ 7 ಜಿಲ್ಲೆಗಳಲ್ಲಿ ರೆಡ್‌ ಎಲರ್ಟ್‌ ಘೋಷಣೆ ಮಾಡಲಾಗಿದೆ.

ರಾಜ್ಯದಲ್ಲೂ ಉತ್ತಮ ಮಳೆ ನಿರೀಕ್ಷೆ ಮಾಡಲಾಗಿದೆ. ರಾಜ್ಯದಲ್ಲಿ ಮುಂದಿನ ಕೆಲವು ದಿನಗಳ ಕಾಲ ಮತ್ತೆ ಮುಂಗಾರು ಮಳೆ ಅಬ್ಬರಿಸಲಿದೆ. ಆಗಸ್ಟ್ 6 ವರೆಗೆ ರಾಜ್ಯಾದ್ಯಂತ ಭಾರಿ ಮಳೆ ಆಗಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮುಂದಿನ ಐದು ದಿನ ಉಡುಪಿ, ಉತ್ತರ ಕನ್ನಡ, ದಕ್ಷಿಣಕನ್ನಡ ಸೇರಿದಂತೆ ಕೊಡಗು, ಮಡಿಕೇರಿ, ಶಿವಮೊಗ್ಗ, ಚಿಕ್ಕಮಗಳೂರು, ಒಂದು ದಿನ ತುಮಕೂರು ಮತ್ತು ರಾಮನಗರ ಜಿಲ್ಲೆ ‘ಆರೆಂಜ್‌ ಅಲರ್ಟ್‘ ನೀಡಲಾಗಿದೆ. ಉಳಿದ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಎಚ್ಚರಿಕೆ ಕೊಡಲಾಗಿದೆ. ಮುಂದಿನ 48 ಗಂಟೆಯಲ್ಲಿ ಕರಾವಳಿ, ದಕ್ಷಿಣ ಮತ್ತು ಉತ್ತರ ಒಳನಾಡು ಸೇರಿದಂತೆ ರಾಜ್ಯಾದ್ಯಂತ ಭಾರಿಮಳೆ ನಿರೀಕ್ಷೆ ಇದೆ.

 

 

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಎಲೆಯ ಫೋಟೋ ತೆಗೆದರೆ AI ಕೀಟ ಯಾವುದೆಂದು ಹೇಳುತ್ತದೆ…! – 73 ಬೆಳೆಗಳ ಮೇಲೆ ಭಾರತದ ಹೊಸ ಕೃಷಿ ಕಣ್ಗಾವಲು
August 24, 2026
10:24 PM
by: ದ ರೂರಲ್ ಮಿರರ್.ಕಾಂ
ಕರ್ನಾಟಕದ ಕೊಪ್ಪಳ ಹಸು, ಮದಗ್ಯಾಳ ಕುರಿಗೆ ರಾಷ್ಟ್ರೀಯ ಮಾನ್ಯತೆ – ದೇಶದ ಸ್ಥಳೀಯ ಜಾನುವಾರು ತಳಿಗಳ ಸಂಖ್ಯೆ 262ಕ್ಕೆ ಏರಿಕೆ
August 24, 2026
12:44 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 24-08-2026 | ಕರಾವಳಿಯಲ್ಲಿ ಮಳೆ ಮುಂದುವರಿಕೆ – ಕರ್ನಾಟಕದಲ್ಲಿ ಮಳೆ ಪರಿಸ್ಥಿತಿ ಹೇಗೆ..?
August 24, 2026
12:18 PM
by: ದ ರೂರಲ್ ಮಿರರ್.ಕಾಂ
ಉದ್ಯೋಗಗಳಿಲ್ಲವೇ? ಅಥವಾ ಉದ್ಯೋಗಕ್ಕೆ ಬೇಕಾದ ಕೌಶಲ್ಯವಿರುವವರು ಇಲ್ಲವೇ?
August 24, 2026
6:50 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror