ಸುಳ್ಯ ತಾಲೂಕಿನಲ್ಲಿ ಮತ್ತೆ ಧಾರಾಕಾರ ಮಳೆ ಮುಂದುವರಿಯುತ್ತಿದೆ. ಕುಮಾರಧಾರಾ ನದಿ ನೀರಿನ ಮಟ್ಟ ಏರಿಕೆಯಾಗುತ್ತಿದೆ. ಕುಮಾರಧಾರಾ ನದಿ ನೀರಿನ ಮಟ್ಟ ಏರಿಕೆಯಾಗುತ್ತಿದ್ದಂತೆಯೇ ಗ್ರಾಮೀಣ ಭಾಗದ ಹೊಳೆಗಳಲ್ಲೂ ನೀರಿನ ಮಟ್ಟ ಏರಿಕೆಯಾಗಿ ಹಲವು ತೋಟಗಳಿಗೆ ನೀರು ನುಗ್ಗಿದೆ. ಇದೇ ವೇಳೆ ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸುವ ಭಕ್ತಾದಿಗಳಿಗೆ ಎಚ್ಚರಿಕೆ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ.
ಕುಕ್ಕೆ ಸುಬ್ರಹ್ಮಣ್ಯ ಮಾತ್ರವಲ್ಲ ಘಟ್ಟ ಪ್ರದೇಶದಲ್ಲೂ ಭಾರೀ ಮಳೆಯಾಗುತ್ತಿದೆ. ಹೀಗಾಗಿ ಸುಳ್ಯದ ಸುಬ್ರಹ್ಮಣ್ಯ, ಕೊಲ್ಲಮೊಗ್ರ, ಹರಿಹರ, ಬಾಳುಗೋಡು ಮೊದಲಾದ ಕಡೆಗಳಲ್ಲೂ ಹೊಳೆ, ನದಿಯ ನೀರಿನ ಮಟ್ಟ ಏರಿಕೆಯಾಗುತ್ತಿದೆ. ಕುಮಾರಧಾರಾ ನದಿಯಲ್ಲಿ ನೀರು ಏರಿಕೆಯಾಗುತ್ತಿದ್ದಂತೆಯೇ ಉಪನದಿಗಳಲ್ಲೂ ನೀರಿನ ಮಟ್ಟ ಏರಿಕೆಯಾಗುತ್ತದೆ. ಈ ಬಾರಿ ಅದೇ ಪರಿಣಾಮ ಕಂಡುಬಂದಿದೆ. ಹಲವು ಹೊಳೆ, ನದಿಗಳಲ್ಲೂ ನೀರು ಏರಿಕೆಯಾಗುತ್ತಿದೆ. ಈ ರೀತಿಯಾಗುವುದರಿಂದ ಮಣ್ಣು ಸಡಿಲವಾಗಿ ಗುಡ್ಡ ಕುಸಿತಗಳೂ ಸಂಭವಿಸುತ್ತವೆ. ಹೀಗಾಗಿ ಗ್ರಾಮೀಣ ಭಾಗದಲ್ಲಿ ಆತಂಕ ಎದುರಾಗುತ್ತದೆ.

ಸುಳ್ಯ ತಾಲೂಕಿನ ಹಲವು ಕಡೆ ಭಾರಿ ಮಳೆಯಾಗುತ್ತಿದೆ. ಹಲವು ಕಡೆ ತೋಟಗಳಿಗೆ ನೀರು ನುಗ್ಗಿದೆ.#haveyrain #HeavyRains pic.twitter.com/Mk9O5RaD1M
— theruralmirror (@ruralmirror) July 23, 2023
ಇದೇ ಸಂದರ್ಭ ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸುವ ಭಕ್ತಾದಿಗಳಿಗೆ ಮುನ್ನೆಚ್ಚರಿಕಾ ಮಾಹಿತಿಗಳನ್ನು ನೀಡಲಾಗುತ್ತಿದೆ. ನದಿಗೆ ಇಳಿಯದಂತೆ ಹಾಗೂ ನೀರು ಇರುವ ತಗ್ಗು ಪ್ರದೇಶಗಳಿಗೆ ಭಕ್ತಾದಿಗಳು ತೆರಳದಂತೆ ಎಚ್ಚರಿಕೆ ನೀಡಲಾಗುತ್ತಿದೆ. ಕುಮಾರಧಾರಾ ಬಳಿ ಭದ್ರತಾ ಸಿಬಂದಿಗಳನ್ನು ನಿಯೋಜನೆ ಮಾಡಲಾಗಿದೆ.
ಗ್ರಾಮೀಣ ಭಾಗದಲ್ಲಿ ಹಲವು ರಸ್ತೆಗಳು ಸಂಪರ್ಕ ಕಡಿತಗೊಂಡಿವೆ.ಪಂಜದ ಬೊಳ್ಮಲೆ ಬಸ್ತಿಕಾಡು ರಸ್ತೆ ಸಂಪರ್ಕ ಕಡಿತಗೊಂಡಿದೆ.