ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದ ಪರಿಣಾಮವಾಗಿ ಹೋರ್ಮುಜ್ ಜಲಸಂಧಿ ಮೂಲಕ ಸಾಗುವ ವ್ಯಾಪಾರ ಮಾರ್ಗಗಳಲ್ಲಿ ವ್ಯತ್ಯಯ ಉಂಟಾಗಿದ್ದು, ಭಾರತಕ್ಕೆ ಇಂಧನ ಹಾಗೂ ರಸಗೊಬ್ಬರ ಪೂರೈಕೆ ಮೇಲೆ ಒತ್ತಡ ಹೆಚ್ಚುವ ಸಾಧ್ಯತೆ ಮತ್ತಷ್ಟು ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ದೇಶದ ಇಂಧನ ಮತ್ತು ಗೊಬ್ಬರ ಸರಬರಾಜು ಸ್ಥಿತಿ ಪರಿಶೀಲಿಸಲು ಪ್ರಧಾನಿ ನರೇಂದ್ರ ಮೋದಿ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ.
ಗೊಬ್ಬರ ಸರಬರಾಜಿಗೆ ಯುದ್ಧದ ಹೊಡೆತ : ಭಾರತವು ಜಗತ್ತಿನ ಅತಿ ದೊಡ್ಡ ಯೂರಿಯಾ ಬಳಕೆದಾರ ರಾಷ್ಟ್ರಗಳಲ್ಲಿ ಒಂದಾಗಿದೆ. ಸಾಗಣೆ ಅಡಚಣೆ ಮುಂದುವರಿದರೆ ಖರೀಫ್ ಹಂಗಾಮಿಗೆ ಮುನ್ನ ಗೊಬ್ಬರ ಲಭ್ಯತೆ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಹೋರ್ಮುಜ್ ಪ್ರದೇಶದಲ್ಲಿ ಹಡಗು ಸಂಚಾರ ಕುಂಠಿತಗೊಂಡಿರುವುದು, ಯೂರಿಯಾ ಹಾಗೂ ಎನ್ಪಿಕೆ ಮಿಶ್ರಣ ಗೊಬ್ಬರಗಳ ಆಮದು ವ್ಯವಸ್ಥೆಗೆ ಸವಾಲು ಉಂಟುಮಾಡಬಹುದು ಎನ್ನಲಾಗಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ದರ ಏರಿಕೆ : ಸಂಕಷ್ಟದ ಪರಿಣಾಮವಾಗಿ ಜಾಗತಿಕ ಗೊಬ್ಬರ ಮಾರುಕಟ್ಟೆಯಲ್ಲಿ ಅಸ್ಥಿರತೆ ಹೆಚ್ಚಿದ್ದು, ಕೆಲ ವರದಿಗಳ ಪ್ರಕಾರ ಯೂರಿಯಾ ದರಗಳು ಸುಮಾರು 21% ಏರಿಕೆ ಕಂಡು ಮೂರು ವರ್ಷದ ಗರಿಷ್ಠ ಮಟ್ಟ ತಲುಪಿವೆ. ಗಲ್ಪ್ ರಾಷ್ಟ್ರಗಳು ಸಲ್ಪರ್ ಉತ್ಪಾದನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವುದರಿಂದ, ಜಲಸಂಧಿ ಬಂದ್ ಆಗಿದ್ರೆ ಫಾಸ್ಫೇಟ್ ಗೊಬ್ಬರ ಉತ್ಪಾದನೆಯೂ ಅಡಚಣೆಗೆ ಒಳಗಾಗುವ ಆತಂಕ ಇದೆ.
ಮೋದಿ ಹೈಲೆವಲ್ ಸಭೆ — ಸರಬರಾಜು ಸ್ಥಿರತೆ ಮೇಲೆ ಒತ್ತು : ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪೆಟ್ರೋಲಿಯಂ, ಕ್ರೂಡ್ ಆಯಿಲ್, ನೈಸರ್ಗಿಕ ಅನಿಲ, ವಿದ್ಯುತ್ ಮತ್ತು ಗೊಬ್ಬರ ಕ್ಷೇತ್ರಗಳ ಸ್ಥಿತಿಗತಿಗಳನ್ನು ಸಮಗ್ರವಾಗಿ ಪರಿಶೀಲಿಸಲಾಯಿತು. ದೇಶದಾದ್ಯಂತ ಅಗತ್ಯ ಸಂಪನ್ಮೂಲಗಳ ನಿರಂತರ ಪೂರೈಕೆ, ಲಾಜಿಸ್ಟಿಕ್ಸ್ ವ್ಯವಸ್ಥೆಯ ಸ್ಥಿರತೆ ಮತ್ತು ಪರಿಣಾಮಕಾರಿ ವಿತರಣೆ ಖಚಿತಪಡಿಸಿಕೊಳ್ಳಲು ಸರ್ಕಾರ ಕ್ರಮಗಳ ಬಗ್ಗೆ ಚರ್ಚೆ ನಡೆಸಿದೆ. ಸಭೆಯಲ್ಲಿ ರಾಜನಾಥ್ ಸಿಂಗ್, ಅಮಿತ್ ಶಾ, ನಿರ್ಮಲಾ ಸೀತಾರಾಮನ್, ಶಿವರಾಜ್ ಸಿಂಗ್ ಚೌಹಾಣ್ ಸೇರಿದಂತೆ ಹಿರಿಯ ಸಚಿವರು ಹಾಗೂ ಅಧಿಕಾರಿಗಳು ಭಾಗವಹಿಸಿದ್ದರು.
ಡೀಸೆಲ್ ದರ ಏರಿಕೆ – ಕೃಷಿ ವೆಚ್ಚ ಒತ್ತಡ : ಸಂಘರ್ಷದ ಪರಿಣಾಮವಾಗಿ ಕೈಗಾರಿಕಾ ಡೀಸೆಲ್ ದರದಲ್ಲಿ ಸುಮಾರು 25% ಏರಿಕೆ ದಾಖಲಾಗಿರುವುದು, ಸಾರಿಗೆ ವೆಚ್ಚ ಹಾಗೂ ಕೃಷಿ ಉತ್ಪಾದನಾ ವೆಚ್ಚಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ.
ರೈತರಿಗೆ ಪರಿಣಾಮವಾಗುವ ಅಂಶ : ಗೊಬ್ಬರ ಲಭ್ಯತೆ ತಡವಾಗುವ ಸಾಧ್ಯತೆ ಇದೆ, ಕೃಷಿ ವೆಚ್ಚ ಹೆಚ್ಚಳವಾಗಬಹುದು, ಮಾರುಕಟ್ಟೆ ದರ ಅಸ್ಥಿರತೆ ಸಾಧ್ಯತೆ ಇದೆ, ಆಹಾರ ಬೆಲೆ ಏರಿಕೆ ಸಾಧ್ಯತೆ ಹಾಗೂ ಖಾರೀಫ್ ಹಂಗಾಮಿನ ತಯಾರಿ ಮೇಲೆ ಒತ್ತಡ ಸಾಧ್ಯತೆ ಇದೆ. ಭಾರತದಲ್ಲಿ ಪ್ರಸ್ತುತ ಯೂರಿಯಾ ಸಂಗ್ರಹ ಸ್ವಲ್ಪ ಮಟ್ಟಿಗೆ ಬಫರ್ ಒದಗಿಸಿದರೂ, ಸಂಘರ್ಷ ಮುಂದುವರಿದರೆ ಪರಿಸ್ಥಿತಿ ಗಂಭೀರವಾಗಬಹುದು ಎಂದು ವಿಶ್ಲೇಷಣೆ ಹೇಳುತ್ತದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ
ಹೋರ್ಮುಜ್ ಜಲಸಂಧಿ ಜಾಗತಿಕ ಇಂಧನ ಮತ್ತು ಗೊಬ್ಬರ ಸಾಗಣೆಗೆ ಪ್ರಮುಖ ಮಾರ್ಗವಾಗಿದ್ದು, ಅದರ ಅಡಚಣೆ ಕೃಷಿ ಉತ್ಪಾದನೆ ಹಾಗೂ ಆಹಾರ ಭದ್ರತೆ ಮೇಲೆ ದೂರಗಾಮಿ ಪರಿಣಾಮ ಬೀರುವ ಸಾಧ್ಯತೆ ಇದೆ. ಸರ್ಕಾರ ಪರಿಸ್ಥಿತಿಯನ್ನು ನಿಗಾದಲ್ಲಿ ಇಟ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುತ್ತಿದೆ.
Disruptions in shipping through the Strait of Hormuz amid the West Asia conflict may impact India’s fertiliser and energy supplies. Prime Minister Narendra Modi chaired a high-level meeting to review preparedness and ensure stable logistics and distribution before the kharif season.

